Homeಪ್ರಪಂಚಡಿಜಿಟಲ್ ವಸಾಹತೀಕರಣದ ಬಾಹುಗಳಲ್ಲಿ ಬಡಪಾಯಿ ಬಡವ

ಡಿಜಿಟಲ್ ವಸಾಹತೀಕರಣದ ಬಾಹುಗಳಲ್ಲಿ ಬಡಪಾಯಿ ಬಡವ

- Advertisement -
- Advertisement -

ಜಾಗತೀಕರಣವನ್ನು ಅರ್ಥ ಮಾಡಿಸುವಲ್ಲಿ ಖ್ಯಾತ ಲೇಖಕಿ ಅರುಂಧತಿ ರಾಯ್ ನೀಡಿದ್ದ ಉದಾಹರಣೆಯೊಂದು ನನಗೆ ಮತ್ತೆಮತ್ತೆ ನೆನಪಾಗುತ್ತಿದೆ. ರಂಪೆಲ್ ಸ್ಟಿಲ್ಟ್‍ಸ್ಕಿನ್ ಎಂಬಾತ ಕುಳ್ಳನ ವೇಷದಲ್ಲಿ ಬಂದು ರೊಟ್ಟಿ ಕೂಡ ಸರಿಯಾಗಿ ಸುಡಲು ಬಾರದ ಹುಡುಗಿಯೊಬ್ಬಳಿಗೆ ಆಪತ್ಕಾಲದಲ್ಲಿ ಸಹಾಯ ಮಾಡುವ ನೆವದಲ್ಲಿ ಅವಳದ್ದೆಲ್ಲವನ್ನೂ ಒಂದೊಂದಾಗಿ ಕಿತ್ತೊಯ್ಯುವ ಕಥೆಯ ನಿದರ್ಶನ ಅದು. ಈ ಜಾಗತೀಕರಣ ನಮ್ಮ ದೇಶವನ್ನು ಆವರಿಸಿ ಕಾಲು ಶತಮಾನವೇ ಕಳೆದುಹೋಗಿದೆ. ಜಾಗತೀಕರಣವು, ಅಂದು ಚಿಂತಕರು ಊಹಿಸಿದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಅನಾಹುತ ಮಾಡುತ್ತಿರುವುದಕ್ಕೆ ನಾವಿಂದು ಸಾಕ್ಷಿಯಾಗಿದ್ದೇವೆ. ಡಿಜಿಟಲ್ ವಸಾಹತೀಕರಣ ಅನ್ನುವುದು ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣವೆಂಬ ಮೂರು ತಾಯಂದಿರು ಕೂಡಿ ಹೆತ್ತ ರಕ್ಕಸ ಸಂತಾನ. ಡಿಜಿಟಲ್ ವಸಾಹತೀಕರಣವನ್ನು 19ನೆಯ ಶತಮಾನದ ವಸಾಹತೀಕರಣವನ್ನು ಗ್ರಹಿಸಿದ ಪರಿಭಾಷೆಯಲ್ಲಿ ಗ್ರಹಿಸಲಾಗದು. ಏಕೆಂದರೆ ಅಂದಿನ ವಸಾಹತೀಕರಣಕ್ಕಿದ್ದ ಪ್ರಭುತ್ವದ ದಾಹ ಇದಕ್ಕಿಲ್ಲ. ಇದರ ದಾಹ ತೃತೀಯ ಜಗತ್ತಿನ ದೇಶಗಳ ಬಡ, ಕೆಳಮಧ್ಯಮ ಮತ್ತು ಮಧ್ಯಮವರ್ಗದ ನೆತ್ತರು ಹೀರುವುದಷ್ಟೇ! ಸಮುದ್ರ ಮಾರ್ಗದ ಮೂಲಕ ಪಸರಿಸಲು ಶತಮಾನಗಳನ್ನೇ ನುಂಗಿಹಾಕಿದ್ದ ಆ ವಸಾಹತುಶಾಹಿಯಂತೆ ಡಿಜಿಟಲ್ ವಸಾಹತೀಕರಣ ಮಂದಗತಿಯದ್ದಲ್ಲ. ಮಿಂಚಿಗಿಂತಲೂ ಕ್ಷಿಪ್ರ. ಜಾಗತೀಕರಣದ ಕಾಲುಗಳಿಗೆ ಆ ಮಿಂಚಿನ ಓಟ ಕೊಟ್ಟದ್ದು ಇಂಟರ್ನೆಟ್ಟಿನ ಮಹಿಮೆ.
ಡಿಜಿಟಲ್ ವಸಾಹತೀಕರಣದ ಹಿನ್ನೆಲೆಯಲ್ಲಿ ಯೋಚಿಸಿದರೆ ಪ್ರಧಾನಿ ಮೋದಿಯವರ ಪ್ರಪಂಚ ಪರ್ಯಟನೆ, ಅವರು ಜಪಿಸಿದ ಡಿಜಿಟಲ್ ಇಂಡಿಯಾದ ಮಂತ್ರÀ, ನೋಟ್‍ಬ್ಯಾನ್, ಕ್ಯಾಶ್‍ಲೆಸ್ ಇಂಡಿಯಾದ ಬಡಬಡಿಕೆ, ಆಧಾರ್ ಲಿಂಕ್ ಕಡ್ಡಾಯ ಇವುಗಳಿಗೆ ಹೊಸ ಅರ್ಥ ಗೋಚರಿಸತೊಡಗುತ್ತದೆ. ರಾಮಾಯಣ ಕಾಲದಲ್ಲೇ ಇಂಟರ್ನೆಟ್ ಇತ್ತು ಎಂಬ ಬಿಜೆಪಿ ಮಂತ್ರಿವರ್ಯರುಗಳ ಮೂರ್ಖ ನಂಬಿಕೆಗಳಿಂದ ಪ್ರೇರಿತವಾಗಿ ಡಿಜಿಟಲ್ ಇಂಡಿಯಾ ಮಾಡಲು ಹೊರಟದ್ದಲ್ಲ. ಅದು ಡಿಜಿಟಲ್ ವಸಾಹತೀಕರಣ ನೆಲೆಗೊಳಿಸುವ ಭಾಗವಾಗಿ ಎನ್ನುವ ಸತ್ಯ ಅರಿವಾಗತೊಡಗುತ್ತದೆ.
ಮೋದಿ ನೋಟ್‍ಬ್ಯಾನ್ ಘೋಷಿಸಿದಾಗ ಅದು, ಮುಂಬರುವ ಚುನಾವಣೆಗಳನ್ನು ಗೆಲ್ಲುವ ಹುನ್ನಾರ, ಬೃಹತ್ ಬಂಡವಾಳಿಗರ ಬ್ಯಾಡ್‍ಡೆಟ್ ಎಂಬ ಸಾಲಮನ್ನಾದಿಂದ ಬರಿದಾದ ಬ್ಯಾಂಕ್ ತುಂಬುವುದಕ್ಕೆ ಕಂಡುಕೊಂಡ ಯೋಜನೆ ಎಂಬ ಮಾತುಗಳು ಒಂದೆಡೆ ಕೇಳಿಬಂದರೆ, ಮತ್ತೊಂದೆಡೆ ಅವರ ಬೆಂಬಲಿಗರು ಅದು ಕಪ್ಪುಹಣ ನಿಯಂತ್ರಿಸುವ ಬ್ರಹ್ಮಾಸ್ತ್ರ ಎಂದು ಕೊಂಡಾಡಿದರು. ಅಸಲಿಗೆ ಇದೂ ಡಿಜಿಟಲ್ ವಸಾಹತೀಕರಣದ ಯೋಜನೆಯಾಗಿದ್ದು, ದೇಶದ ಕಟ್ಟಕಡೆಯ ಪ್ರಜೆಯ ಪುಟ್ಟಗಂಟಿನ ರೂಪಾಯಿಯನ್ನೂ ತಂದು ಬ್ಯಾಂಕಿನಲ್ಲಿ ಸುರಿಯುವಂತೆ ಮಾಡಿ ಪ್ರತಿಯೊಬ್ಬನನ್ನೂ ಡಿಜಿಟಲ್ ವಸಾಹತೀಕರಣದ ವ್ಯಾಪ್ತಿಗೆ ಒಳಪಡಿಸುವುದೇ ಆಗಿತ್ತು.
ಜಾಗತೀಕರಣ ಮತ್ತು ಡಿಜಿಟಲ್ ವಸಾಹತೀಕರಣಗಳ ಸಾಂಸ್ಥಿಕ ರಚನೆಗಳು ಬಂಡವಾಳಿಗರ ಪರವಾಗಿದ್ದು ಅಮೇರಿಕಾದಂತಹ ದೇಶಗಳ ಹಿತಾಸಕ್ತಿಗಳನ್ನು ರಕ್ಷಿಸುವುದೇ ಅವುಗಳ ಧ್ಯೇಯವಾಗಿರುತ್ತದೆ. ಬಡತನ, ದಾರಿದ್ರ್ಯ, ಅಸಮಾನತೆ, ಪರಿಸರ ನಾಶಗಳನ್ನು ಪ್ರೇರೇಪಿಸುವ ಇವುಗಳು ಆಂತರ್ಯದಲ್ಲಿ ಜನವಿರೋಧಿ, ಜೀವವಿರೋಧಿ, ಶ್ರಮವಿರೋಧಿ ಲಕ್ಷಣಗಳನ್ನು ಒಳಗೊಂಡಿರುತ್ತವೆ.
ತೃತೀಯ ಜಗತ್ತಿನ ದೇಶಗಳ ಯಾವುದೋ ಮೂಲೆಯ ಗಂಡಸೊಬ್ಬನನ್ನು ರೋಮಾಂಚನಗೊಳಿಸಲು ಯಾವ ದನಿಯ, ಯಾವ ಪದಗಳ, ಯಾವ ಅಂಗಗಳ ವೀಡಿಯೋ ಪೂರೈಸಬೇಕಿದೆ ಎನ್ನುವುದರಿಂದ ಹಿಡಿದು ಬೃಹತ್ ಯೋಜನೆಗಳಿಗೆ ಬಂಡವಾಳ ಹೂಡುವವರೆಗಿನ ಕಾರ್ಯಯೋಜನೆಗಳು ಇವುಗಳ ತೆಕ್ಕೆಯಲ್ಲಿರುತ್ತವೆ. ಇದಕ್ಕಾಗಿ ಆ ನಿಶಕ್ತ ದೇಶಕ್ಕೆ ಸಾಲದ ರೂಪದ ಗ್ಲೂಕೋಸ್, ವಿಟಮಿನ್ನುಗಳ ಆಮಿಷವೊಡ್ಡಿ ಡಿಜಿಟಲ್ ವಸಾಹತೀಕರಣಕ್ಕೆ ಅವುಗಳನ್ನು ಎದ್ದುಕೂರಿಸಲಾಗುತ್ತಿದೆ. ಮೊಣಕೈ ಗಂಟಿಗೆ ಬೆಲ್ಲ ಸವರಿ ತಮಾಷೆ ನೋಡುವ ಈ ವಿಚಿತ್ರಕ್ಕೆ ಜಿಯೋ ಸಿಮ್ ಮಾರಾಟವೇ ಒಂದು ಸ್ಪಷ್ಟ ನಿದರ್ಶನ.
ಸಾಲಕ್ಕಾಗಿ ವಿಶ್ವಬ್ಯಾಂಕನ್ನೇ ನೆಚ್ಚಿ ಕೂರಬೇಕಾಗಿಲ್ಲ. ಹಾಗೆ ನೋಡಿದರೆ, ಬಂಡವಾಳಿಗರ ಪರವಾಗಿದ್ದರೂ ಕ್ಷಿಪ್ರ ವಿತರಣಾ ವ್ಯವಸ್ಥೆಯಿಲ್ಲದ ಮಂದಗತಿಯ ವಿಶ್ವಬ್ಯಾಂಕ್ ಎಂದರೆ ಬಂಡವಾಳಿಗರಿಗೆ ಅಷ್ಟೇನೂ ಮೋಹವಿಲ್ಲ. ಹಾಗಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್), ರಪ್ತು ಸಾಲ ನೀಡಿಕೆಯ ಸಂಸ್ಥೆ (ಸಿಇಎ), ವಿಶ್ವವ್ಯಾಪಾರ ಸಂಸ್ಥೆ (ಡಬ್ಲ್ಯೂ.ಟಿ.ಒ) ಮುಂತಾದ ಬೇರೆಬೇರೆ ಹೆಸರಿನ ಆದರೆ ಹೆಚ್ಚೂಕಮ್ಮಿ ಒಂದೇ ಕಾರ್ಯೋದ್ದೇಶದ ಹಲವಾರು ಸಂಸ್ಥೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಎಲ್ಲವೂ ಬಂಡವಾಳಿಗರ ಕೈಗೊಂಬೆಯಂತಾಗಿರುವುದರಿಂದ ಮುಂದೊಂದು ದಿನ ಇವು ಸಾಲ ಪಡೆದ ಸರಕಾರಗಳ ಕೊರಳ ಪಟ್ಟಿ ಹಿಡಿದು ಬಡ್ಡಿ ಸಹಿತ ಸಾಲ ಮರುಪಾವತಿಗೆ ಪಟ್ಟು ಹಿಡಿಯುತ್ತವೆ. ಆಗ ಸರಕಾರಗಳು ಯಾರ ಕತ್ತು ಹಿಸುಕುವ ಅನಿವಾರ್ಯತೆಗೆ ಸಿಲುಕುತ್ತವೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಾಗ ಮಾತ್ರ ಈ ಡಿಜಿಟಲ್ ವಸಾಹತೀಕರಣದ ಕರಾಳತೆ ಗೋಚರವಾಗುತ್ತೆ.
ಹಳೆಯ ನೋಟುಗಳು ಬ್ಯಾನ್ ಆದದ್ದರಿಂದ ಕೈಯಲ್ಲಿ ದಮ್ಮಡಿಯೂ ಇಟ್ಟುಕೊಳ್ಳದಂತೆ ಎಲ್ಲವನ್ನೂ ಬ್ಯಾಂಕ್ ಖಾತೆಗೆ ಜಮೆ ಮಾಡಿದ ಜನ ನೆಟ್ ಬ್ಯಾಂಕಿಂಗು, ಪೇಟಿಎಮ್ಮು, ಆನ್‍ಲೈನ್ ಟ್ರಾನ್ಸ್‍ಫರು, ಕಾರ್ಡ್ ಬಿಲ್ಲಿಂಗ್ ಮೂಲಕ ಜೀವನ ಬಲು ಸುಲಭವಾಗಿದೆ ಎಂಬ ನಿಟ್ಟುಸಿರು ಬಿಡುವ ವೇಳೆಯಲ್ಲೆ, ಜಿಎಸ್‍ಟಿ ತೆರಿಗೆಯು ನಮಗರಿವಿಲ್ಲದೇ ನಮ್ಮ ಬ್ಯಾಂಕ್ ಇಡಗಂಟನ್ನು ಕತ್ತರಿಸುತ್ತಿತ್ತು. ಈ ನಡುವೆ ಕರನಿರಾಕರಣೆ ಎಂಬ ಕೀರಲು ದನಿಯೊಂದು ಹೊರಟಿತ್ತು. ತೆರಿಗೆ ಕಟ್ಟುವ ವಿಧಾನ ನಮ್ಮ ಕೈಲಿಲ್ಲದೆ ತಾನೇತಾನಾಗಿ ಕತ್ತರಿಸಲ್ಪಡುತ್ತಿವಾಗ, ಇದೊಂದು ಮೋಹಕ ಹುಸಿಯಲ್ಲದೆ ಬೇರೇನಾಗಿರಲಿಲ್ಲ.
ಮೇಲ್ನೋಟಕ್ಕೆ ಇದು ದೇಶದೊಳಗೆ ನಡೆಯುತ್ತಿರುವ ಪ್ರಕ್ರಿಯೆಯಂತೆ ಕಂಡರೂ ಇದರ ಚುಕ್ಕಾಣಿ ಇರೋದು ಡಿಜಿಟಲ್ ವಸಾಹತೀಕರಣದ ವಿದೇಶೀ ಹೂಡಿಕೆದಾರರು ಮತ್ತು ಆ ಹೂಡಿಕೆಗೆ ಸಾಲ ಕೊಡುವ ಸಂಸ್ಥೆಗಳ ಕೈಯಲ್ಲಿ! ಅವು ದೇಶವನ್ನು ಯಾವ ಪರಿ ತನ್ನ ಕಬ್ಜಾದಲ್ಲಿಟ್ಟುಕೊಂಡಿವೆ ಎಂದರೆ, ನಮ್ಮ ದೇಶದ ರೈತರ ಉತ್ಪನ್ನಗಳು ಗೋದಾಮುಗಳಲ್ಲಿ ಕೊಳೆಬೀಳುತ್ತಿದ್ದರೂ, ಆಹಾರ ಧಾನ್ಯಗಳನ್ನೂ ಹೊರಗಿನಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸರ್ಕಾರಗಳು ಸಿಲುಕಿವೆ. ಈ ನೆಲದ ಸ್ವಾವಲಂಬನೆಯ ಕಶೇರು ಮೂಳೆಗೇ ಕೊಟ್ಟ ಪ್ರಹಾರ ಇದು.
ದೇಶವಿದೇಶ ಸುತ್ತುತ್ತಾ ಮನಬಂದಂತೆ ಒಪ್ಪಂದಗಳಿಗೆ ಸಹಿ ಹಾಕುತ್ತಿರುವ ನಮ್ಮ ಪ್ರಧಾನಿಗಳು ಡಿಜಿಟಲ್ ವಸಾಹತೀಕರಣವೆಂಬ ಅಗೋಚರ ಆಕ್ಟೋಪಸ್ಸಿನ ಬಾಹುಗಳಿಗೆ ತಳ್ಳುತ್ತಿರೋದನ್ನು ಜನ ಅರ್ಥ ಮಾಡಿಕೊಳ್ಳಲೇಬೇಕಿದೆ. ಹಿಂದುತ್ವವನ್ನು ಮುಂದೆ ಮಾಡಿಕೊಂಡು ಕುರ್ಚಿ ಹಿಡಿದ ಬಿಜೆಪಿಗೆ ಇದು ತಿಳಿಯದ್ದೇನಲ್ಲ. ಆದ್ದರಿಂದಲೇ ಅದು ಹಿಂದೂ-ಮುಸ್ಲಿಂ ಹಗೆ, ದಲಿತವಿರೋಧಿ ವಿಚಾರಗಳನ್ನು ಜೀವಂತವಿರಿಸುತ್ತಾ, ಫಿಟ್ನೆಸ್ ಮಂತ್ರದಂತಹ ಅಸಂಬದ್ಧ, ಅವೈಜ್ಞಾನಿಕ ಹೇಳಿಕೆಗಳ ಮೂಲಕ ಜನರ ಗಮನವನ್ನು ಬೇರೆಡೆ ತಿರುಗಿಸಲು ಯತ್ನಿಸುತ್ತಿದೆ. ತಾನೇ ಸಾಕಿಕೊಂಡಿರುವ ಟ್ರೋಲ್ ಹೈಕಳು ಆ ಕೆಲಸವನ್ನು ಬಲು ನಿಯತ್ತಿನಿಂದ ಮಾಡುತ್ತಿದ್ದಾರೆ. ಮೋದಿ ಸಂಪುಟದ ಸಚಿವರ ಹೊಣೆಯೂ ಇಂತದ್ದಕ್ಕಷ್ಟೇ ಸೀಮಿತವಾಗಿರೋದು ದುರಂತ. ಕೇವಲ ಜನರಿಗಷ್ಟೇ ಅಲ್ಲ ಒಂದು ಧರ್ಮ, ಒಂದು ಬಣ್ಣ, ಒಂದು ಸಂಸ್ಕೃತಿ ಸ್ಥಾಪಿಸುವ ಭ್ರಮೆ ತುಂಬಿಕೊಂಡಿರುವ ಹಿಂದುತ್ವ ಸಂಘಟನೆಗಳನ್ನೂ ಬಿಜೆಪಿ ಯಾಮಾರಿಸುತ್ತಿದೆ.
ಅಂಗಡಿಯೊಂದರ ಮುಂದೆ ನಿಂತು ಪತ್ರಿಕೆ ಓದುವ ಸಾಮಾನ್ಯನೊಬ್ಬ ನೀರವ್ ಮೋದಿ, ಮಲ್ಯಗಳಂತೆ `ಮೋಷಾ’ ಕೂಡಾ ಓಡಿಹೋಗುವುದಿಲ್ಲವೆನ್ನುವುದು ಯಾವ ಖಾತರಿ? ಎಂದು ಪ್ರಶ್ನಿಸುವ ಹಂತಕ್ಕೆ ಬಂದಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ನಾಳೆ ಬಿಜೆಪಿಯ ಉದ್ದೇಶಿತ ಸರ್ವಾಧಿಕಾರವೇ ಪ್ರತಿಷ್ಠಾಪಿತವಾದರು ಡಿಜಿಟಲ್ ವಸಾಹತೀಕರಣದ ದಾಹ ತಣಿಸಲು `ಡಿಜಿಟಲ್ ಇಂಡಿಯಾ’ವನ್ನು `ಕ್ಯಾಶ್‍ಲೆಸ್ ಇಂಡಿಯಾ’ಗೆ ತಿರುಗಿಸಿ ಜನರನ್ನು ಸುಲಿಯುತ್ತಲೇ ಇದ್ದು ಬಿಡಬಹುದೆನ್ನುವುದೂ ಅಷ್ಟು ಸುಲಭವಿಲ್ಲ. ಕೇವಲ ಬಿಜೆಪಿ ಅಂತಲ್ಲ, ಅದನ್ನು ಬಿಟ್ಟು ಬೇರೆ ಯಾವ ಪಕ್ಷ ಅಧಿಕಾರ ಹಿಡಿದರೂ, ಬ್ಯಾಂಕುಗಳು ದಿವಾಳಿಯೆದ್ದು ‘ಬ್ಯಾಂಕ್ ಲೆಸ್ ಇಂಡಿಯಾ’ ಆಗುವವರೆಗಷ್ಟೇ ಈ ಆಟ. ಯಾಕೆಂದರೆ ಗದ್ದುಗೆ ಮೇಲೆ ಸರ್ವಾಧಿಕಾರಿಯೇ ಕೂತಿದ್ದರು, ಅವನ ಜುಟ್ಟು ಹಿಡಿದು ನಿಯಂತ್ರಿಸುವುದು ಈ ನವ ವಸಾಹತೀಕರಣವೇ!
ಆದರೆ ಕ್ಯಾಶ್‍ಲೆಸ್ ಇಂಡಿಯಾದಿಂದ ಬ್ಯಾಂಕ್‍ಲೆಸ್ ಹಂತಕ್ಕೆ ತಲುಪುವ ನಡುವಿನ ಜನರ ಜೀವನವಿದೆಯೆಲ್ಲ ಅದು ಘನಘೋರವಾಗಿರಲಿದೆ. ಪ್ರಜ್ಞಾವಂತರ ಆತಂಕವಿರೋದು ಈ ವಿಚಾರಕ್ಕೆ. 1971ರಿಂದ 1990ರ ಅವಧಿಯಲ್ಲಿ ರಾಷ್ಟ್ರೀಯ ಹಣಕಾಸು ವ್ಯವಹಾರಗಳ ಸಂರಚನೆಯೇ ನೈಜ ಆರ್ಥಿಕತೆಯಿಂದ ಸಟ್ಟಾ ಮಾರುಕಟ್ಟೆಗೆ ವರ್ಗಾಯಿಸಲ್ಪಟ್ಟ ಹಿನ್ನೆಲೆಯಲ್ಲಿ ಭಾರತದ ನೈಜ ಆರ್ಥಿಕತೆಯ ವ್ಯವಹಾರಗಳ ಪ್ರಮಾಣವು ಶೇ.90 ರಿಂದ ಶೇ.10 ಹಾಗೂ ಶೇ.5ಕ್ಕೆ ಇಳಿದಿತ್ತು. ಕಾರಣವೇನೆಂದರೆ, ಎರಡನೇ ಮಹಾಯುದ್ಧದ ನಂತರ ಜಾಗತಿಕ ಬ್ಯಾಂಕರ್ ಆಗಿ ಮೆರೆದಾಡಲು ಶುರು ಮಾಡಿದ ವಿಶ್ವದ ದೊಡ್ಡಣ್ಣ ಅಮೇರಿಕಾದಿಂದ ಸಾಲ ಪಡೆದ ದೇಶಗಳಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಉಲ್ಬಣಿಸಿತ್ತು. ಆಗ ಅಮೇರಿಕಾದ ಅಧ್ಯಕ್ಷ ನಿಕ್ಸನ್ ಆಡಳಿತವು ಈ ವ್ಯವಸ್ಥೆಯನ್ನು ಅನೂರ್ಜಿತಗೊಳಿಸಿ ದೊಡ್ಡ ಅನಿಯಂತ್ರಿತ ಬಂಡವಾಳ ಹರಿವಿಗೆ ದಾರಿಮಾಡಿಕೊಟ್ಟಿತ್ತು.
ಇದರಿಂದಾಗಿ, ಶೋಚನೀಯ ಸ್ಥಿತಿಯಲ್ಲಿದ್ದ ತೃತೀಯ ಜಗತ್ತಿನ ಕೂಸುಗಳಾದ ಭಾರತದಂತಹ ಬಡ ರಾಷ್ಟ್ರಗಳು ಅನಿವಾರ್ಯವಾಗಿ ಜಾಗತೀಕರಣವನ್ನು ಬರಮಾಡಿಕೊಂಡವು. ಪರಿಣಾಮವಾಗಿ ದೇಶದ ಸಿರಿವಂತರು ಇನ್ನಷ್ಟು ಕೊಬ್ಬುತ್ತಾ ಹೋದರೆ, ಕೆಳ ಮಧ್ಯಮವರ್ಗವು ಮಧ್ಯಮವರ್ಗಕ್ಕೆ ಭಡ್ತಿ ಪಡೆಯಿತು. ಇನ್ನು ಬಡತನ ರೇಖೆಗಿಂತ ಕೆಳಗಿದ್ದ ಜನರು ಹೊಟ್ಟೆ, ಬಟ್ಟೆ, ತಲೆ ಮೇಲಿನ ಸೂರು ಪಡೆದು ನಿಟ್ಟುಸಿರು ಬಿಟ್ಟರು. ದಲಿತ ದಮನಿತರೂ ಶಿಕ್ಷಣ ಪಡೆದು ತಮ್ಮ ಅವಮಾನಕರ ಬದುಕಿನಿಂದ ಆಚೆಗೆ ಇಣುಕುವ ಪ್ರಯತ್ನ ಮಾಡಲು ಸಾಧ್ಯವಾಯಿತು. ಆದರೆ ಈಗ ಡಿಜಿಟಲ್ ವಸಾಹತೀಕರಣವು ಕೊಡುವ ಸಣ್ಣಕೈಯನ್ನು ಸ್ತಬ್ಧಗೊಳಿಸಿ ಕಿತ್ತುಕೊಳ್ಳುವ ದೊಡ್ಡ ಕೈನ ಕರಾಮತ್ತು ಶುರು ಮಾಡಿಕೊಂಡಿದೆ. ಇನ್ನೂ ಸಿಂಪಲ್ಲಾಗಿ ಹೇಳಬೇಕೆಂದರೆ, ಡಿಜಿಟಲ್ ವಸಾಹತಿಕರಣವು ಜನರ ಕೈಗೆ ಸುಲಭವಾಗಿ ಸ್ಮಾರ್ಟ್‍ಫೋನ್, ಇಂಟರ್ನೆಟ್ ಸಿಗುವಂತೆ ಮಾಡಿತು. ಜನ ಖುಷಿಪಟ್ಟರು. ಈಗ ಆ ಸ್ಮಾರ್ಟ್‍ಫೋನ್ ಮೂಲಕವೇ ಜನರ ಸುಲಿಗೆ ಮಾಡಲು ಮುಂದಾಗಿದೆ.
ನವ ಉದಾರವಾದದ ಜನಕನೆಂದು ಖ್ಯಾತಿಪಡೆದ ಆಡಂಸ್ಮಿತ್‍ನ ಚಿಂತನೆಗಳು ಅವನೇ ಗುರುತಿಸಿದ ವ್ಯತಿರಿಕ್ತ ಪರಿಣಾಮಗಳಿಗಿಂತಲೂ ಎಷ್ಟೋಪಟ್ಟು ಭೀಕರವಾದವುಗಳೆಂದು ಸಾಬೀತಾಗತೊಡಗಿದೆ. ರಷ್ಯಾದ ನಿಕೋಲೋಯ್ ಗೊಗೋಲ್ ‘ದ ಓವರ್ ಕೋಟ್’ ಕಾದಂಬರಿ ಬರೆಯುವ ಕಾಲಕ್ಕೆ ರಷ್ಯಾದ ಬಡ ಜನತೆಯ ಪಾಡು ಹೇಗಿತ್ತೆಂದರೆ, ಒಂದು ಬೆಚ್ಚನೆಯ ಕೋಟ್ ಹೊಲಿಸಲೂ ಹಣವಿಲ್ಲದೆ ಹೆಪ್ಪುಗಟ್ಟಿಸುವ ಚಳಿ ತಡೆಯಲು ಮೈಲುಗಟ್ಟಲೆ ಓಡುತ್ತಿದ್ದರಂತೆ. ಓಡಲು ತಾಕತ್ತಿಲ್ಲದವರು ಸಾವನ್ನು ಆಲಂಗಿಸಬೇಕಿತ್ತು! ಇಂದು ನಮ್ಮ ಸ್ಥಿತಿಯೂ ಭಿನ್ನವಾಗಿಲ್ಲ. ಅರುಂಧತಿ ರಾಯ್ ಹೇಳುವ ರಂಪೆಲ್ ಸ್ಟಿಲ್ ಸ್ಕಿನ್ ಎಂಬ ಕುಳ್ಳನ ನಿಜರೂಪವನ್ನು ಅರಿತು, ತೀವ್ರ ಪ್ರತಿರೋಧ ತೋರುವುದರಲ್ಲೇ ಜನರ ಅಳಿವು-ಉಳಿವು ಅಡಗಿದೆ.

– ಕಾದಂಬಿನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...