Homeಚಳವಳಿಮಳೆಗಾಗಿ ಪರ್ಜನ್ಯ ಜಪ, ಹೋಮ, ಪೂಜೆಗೆ ಆದೇಶ: ಈ ತಲೆಕೆಟ್ಟ ಸರ್ಕಾರಕ್ಕೆ ಬುದ್ದಿ ಬರುವುದಿಲ್ಲ

ಮಳೆಗಾಗಿ ಪರ್ಜನ್ಯ ಜಪ, ಹೋಮ, ಪೂಜೆಗೆ ಆದೇಶ: ಈ ತಲೆಕೆಟ್ಟ ಸರ್ಕಾರಕ್ಕೆ ಬುದ್ದಿ ಬರುವುದಿಲ್ಲ

- Advertisement -
- Advertisement -

| ನಾನುಗೌರಿ ಡೆಸ್ಕ್ |

ಒಂದು ಕಡೆ ಗಣಿಗಾರಿಕೆ ನಡೆಸಲು ಸಮೃದ್ಧ ಜಮೀನನ್ನು ಅರ್ಪಿಸುವುದು. ಸುಂದರ ಕಾಡು ಕಡಿದು ಅಭಿವೃದ್ದಿ ಎನ್ನುವುದು. ಮರ ಉರುಳಿಸಿ ರಸ್ತೆ ಮಾಡುವುದು. ಕೊನೆಗೆ ಮಳೆ ಬರುತ್ತಿಲ್ಲ ಹಾಗಾಗಿ ಸಕಾಲದಲ್ಲಿ ಮಳೆ ಬರಲೆಂದು ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ನಡೆಸುವಂತೆ ಸುತ್ತೋಲೆ ಹೊರಡಿಸುವುದು. ಡೌಟೇ ಬೇಡ ಈ ಸರ್ಕಾರಕ್ಕೆ ಸಂಪೂರ್ಣ ತೆಲೆಕೆಟ್ಟು ಹೋಗಿದೆ.

ಮೇ 31ರಂದು ಕರ್ನಾಟಕ ರಾಜ್ಯ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿದೆ. ರಾಜ್ಯದಲ್ಲಿ ಸಕಾಲದಲ್ಲಿ ಮಳೆ ಬೆಳೆಯಾಗದೇ, ರಾಜ್ಯದ ಜನತೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಅಭಾವ ಉಂಟಾಗಿದೆ. ಹಾಗಾಗಿ ಆರ್ಥಿಕವಾಗಿ ಸದೃಢವಾಗಿರುವ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಅಭಿಷೇಕ, ಪರ್ಜನ್ಯ ಜಪ, ಹೋಮದೊಂದಿಗೆ ಮೇ 6 ರಂದು ಬ್ರಾಹ್ಮೀ ಮೂಹೂರ್ತದೊಂದಿಗೆ ವಿಶೇಷ ಪೂಜೆಗಳನ್ನು ನಡೆಸಲು ಆದೇಶಿಸಿದೆ. 10,001/- ರೂಗಳು ವೆಚ್ಚ ಮೀರದಂತೆ ಆಯಾಯಾ ದೇವಾಲಯಗಳ ನಿಧಿಯಿಂದ ಭರಿಸಲು ಅನುಮತಿ ಸಹ ನೀಡಿದೆ

ದೇವರು ಧರ್ಮಗಳನ್ನು ನಂಬುವು ಮತ್ತು ಪಾಲಿಸುವ, ಪೂಜಿಸುವ ಹಕ್ಕನ್ನು ನಮ್ಮ ಸಂವಿಧಾನ ಎಲ್ಲರಿಗೂ ನೀಡಿದೆ. ಆದರೆ ಅದು ಖಾಸಗಿ ಹಕ್ಕಾಗಿದ್ದು ಖಾಸಗಿ ಸ್ಥಳಗಳಲ್ಲಿ ಯಾರು ಎಷ್ಟು ಬೇಕಾದರೂ ಹೋಮ ಪೂಜೆ ಮಾಡಿದರೆ ನಮಗೇನು ತೊಂದರೆಯಿಲ್ಲ. ಆದರೆ ಚುನಾಯಿತ ಸರ್ಕಾರವೊಂದು, ಸರ್ಕಾರಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಈ ರೀತಿಯ ಆಚರಣೆ ಮಾಡಲು ಆದೇಶ ನೀಡಿರುವುದು ಎಲ್ಲಾ ವಿಧಗಳಿಂದಲೂ ಒಪ್ಪುವಂತಹದಲ್ಲ. ಇದು ಮೌಡ್ಯದ ಪರಮಾವಧಿ ಮಾತ್ರವಲ್ಲ ಇದರಿಂದ ಮಳೆ ಬರದಿರುವುದಕ್ಕೆ ವೈಜ್ಞಾನಿಕ ಕಾರಣಗಳನ್ನು ಮರೆಮಾಚಿ ಜನರನ್ನು ದಿಕ್ಕುತಪ್ಪಿಸುವ ಹುನ್ನಾರವೂ ಇದರಿಂದ ಅಡಗಿದೆ.

ಜನರು ಹಲವು ಊರಿನಲ್ಲಿ ಅವರ ನಂಬಿಕೆಗನುಗುಣವಾಗಿ ಈ ರೀತಿ ಮಳೆಗಾಗಿ ಪ್ರಾರ್ಥಿಸುವುದು ಸಾಮಾನ್ಯ. ಹೆಚ್ಚು ಖರ್ಚಿಲ್ಲದೇ ತಮಗೆ ಗೊತ್ತಿರುವ ವಿಧಾನಗಳಲ್ಲಿ ಅವರು ಪೂಜೆ ಮಾಡುತ್ತಾರೆ. ಹೀಗಿರುವಾಗ ಮತ್ತೆ ಸರ್ಕಾರ ದೊಡ್ಡ ಮಟ್ಟದಲ್ಲಿ ಈ ರೀತಿ ಪೂಜೆಗೆ ಆದೇಶ ನೀಡುವುದು ಸರಿಯಲ್ಲ. ಅದೇ ಹಣದಿಂದ ಕೆರೆ ಹೂಳೆತ್ತಲು ಬಳಸಿದರೆ ಒಂದಷ್ಟು ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಹುದು ಎಂಬ ಸಾಮಾನ್ಯ ಜ್ಞಾನವೂ ನಮ್ಮ ಸರ್ಕಾರಕ್ಕಿಲ್ಲ.

ಇಷ್ಟೆಲ್ಲಾ ಅವಾಂತರುಗಳು ನಡೆಯುತ್ತಿದ್ದರೆ ಅದರ ಬಗ್ಗೆ ವಿರೋಧ ಪಕ್ಷ ಚಕಾರವನ್ನೇನು ಎತ್ತಿಲ್ಲ. ಅವರಿಗೆ ಸದಾ ಸರ್ಕಾರ ಬೀಳಿಸುವ ಚಿಂತೆ ಬಿಟ್ಟರೆ ಮತ್ತೇನಿಲ್ಲ. ಇದರಿಂದ ನಲುಗುವವರು ಮತ್ತೆ ಬಡವರು, ರೈತರೇ ಆಗಿರುವುದು ದೊಡ್ಡ ದುರಂತ.

ಹೌದು ಇಂದು ಕಾಲಕಾಲಕ್ಕೆ ಸರಿಯಾಗಿ ಮಳೆ ಬೆಳೆ ಆಗುತ್ತಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳು ಮುಖಕ್ಕೆ ಹೊಡೆದಂತೆ ರಾಚುತ್ತಿವೆ. ಕಾಡುಗಳ ನಾಶ, ಮಿತಿ ಮೀರಿದ ಪರಿಸರ ಮಾಲಿನ್ಯದಿಂದ ಉಂಟಾಗುತ್ತಿರುವ ಹವಾಮಾನ ವೈಪರಿತ್ಯ ಕಾರಣದಿಂದ ಮಳೆಯಾಗುತ್ತಿಲ್ಲ. ಇದಕ್ಕೆ ಪರಿಹಾರಗಳು ಸಹ ಅಲ್ಲೆ ಇವೆ. ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದು, ಕಾಡುಗಳನ್ನು ಸಂರಕ್ಷಿಸುವುದು, ಮಾಲಿನ್ಯ ಉಂಟು ಮಾಡುತ್ತಿರುವ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಕಡಿವಾಣ ಹಾಕುವುದು, ನೀರಿನ ಮಿತ ಬಳಕೆ ಮತ್ತು ಜಲಸಂರಕ್ಷಣೆಯ ಪಾಠಗಳನ್ನು ಜಾರಿಗೊಳಿಸುವುದು, ವೈಜ್ಞಾನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಇತ್ಯಾದಿ

ಈ ಮೇಲಿನ ವಿಧಾನಗಳನ್ನು ಜಾರಿಗೊಳಿಸುವ ಹೊಣೆಯು ಪ್ರತಿಯೊಬ್ಬರ ಕರ್ತವ್ಯವಾಗಿದ್ದರೂ ಅದರ ಪ್ರಧಾನ ಜವಾಬ್ದಾರಿ ಸರ್ಕಾರದ್ದೆ. ಒಂದು ಕಡೆ ದೊಡ್ಡ ಬಂಡವಾಳಶಾಹಿಗಳು ಮಿತಿಮೀರಿದ ಪರಿಸರ ನಾಶ ಮಾಡುತ್ತಿದ್ದರೆ ಅವರಿಗೆ ಕಡಿವಾಣ ಹಾಕುವ ಬದಲು ಸರ್ಕಾರ ಅವರಿಗೆ ತೆರಿಗೆ ವಿನಾಯಿತಿ, ಹೆಚ್ಚಿನ ಸಾಲ ಸೌಲಭ್ಯ, ಕಡಿಮೆ ಬೆಲೆಗೆ ಭೂಮಿ, ನೀರು ಮತ್ತು ವಿದ್ಯುತ್ ನೀಡಿ ಮತ್ತಷ್ಟು ಕೊಬ್ಬಿಸುತ್ತಿದೆ. ನಮ್ಮ ನಾಡಿನ ಜೀವನಾಡಿಯಾದ ಪಶ್ಚಿಮ ಘಟ್ಟಗಳು ದಿನೇ ದಿನೇ ಬರಿದಾಗುತ್ತಿದೆ. ಇದನ್ನು ತಡೆಗಟ್ಟಬೇಕಾದ ಸರ್ಕಾರ ಪೂಜೆ ಮಾಡಿ ಮಳೆ ತರಲು ಮುಂದಾಗಿರುವುದು ನಮ್ಮೆಲ್ಲರ ದುರಂತವಾಗಿದೆ.

ಅಂದ ಮಾತ್ರಕ್ಕೆ ನಾವು ರಸ್ತೆ ಕಟ್ಟುವುದರ, ದೊಡ್ಡ ಬಿಲ್ಡಿಂಗ್ ಕಟ್ಟುವುದನ್ನು, ಅಭಿವೃದ್ಧಿಯನ್ನು ವಿರೋಧಿಸುತ್ತಿದ್ದೇವೆ ಅಂತ ಅಲ್ಲ. ಬದಲಿಗೆ ಆ ಅಭಿವೃದ್ಧಿ ಜನಕ್ಕೆ, ಪರಿಸರಕ್ಕೆ ಧಕ್ಕೆ ತರುವಂತೆ ಇರಬಾರದು. ಪರಿಸರ ಸ್ನೇಹಿ ಅಭಿವೃದ್ದಿ ಮಾದರಿಯನ್ನು ಬೆಂಬಲಿಸಬೇಕು..

ಇನ್ನೊಂದು ಕಡೆ ಮಳೆಗಾಗಿ ಮೋಡ ಬಿತ್ತನೆ ಮಾಡಲು 91ಕೋಟಿ ರೂಗಳ ಅನುದಾನಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಮೋಡ ಬಿತ್ತನೆ ಎಂಬುದು ಬರಗಾಲದಲ್ಲಿಯೂ ಒಂದಷ್ಟು ದುಡ್ಡು ಮಾಡಿಕೊಳ್ಳಲು ಸಚಿವರಿಗೆ, ಅಧಿಕಾರಿಗಳಿಗೆ ಇನ್ನೊಂದು ಮಾರ್ಗವೇ ಹೊರತು ಈ ಮೋಡ ಬಿತ್ತನೆಯಿಂದ ಮಳೆ ಬಂದ ಉದಾಹರಣೆ ಮಾತ್ರ ಇಲ್ಲ.

ಹೆಸರಾಂತ ಪತ್ರಕರ್ತ ಪಿ ಸಾಯಿನಾಥ್‍ರವರು ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎಂಬ ಪುಸ್ತಕ ಬರೆದು ದುರಂತಗಳನ್ನು ಎಳೆ ಎಳೆಯಾಗಿ ವಿವರಿಸಿದ್ದರು. ಆದರೇನು ಮಾಡುವುದು ಬಹುಶಃ ಹೀಗಿನ ಸರ್ಕಾರದ ಯಾವೊಬ್ಬರು ಅದನ್ನು ಓದಿರುವುದಿಲ್ಲ. ಅಷ್ಟು ಮಾತ್ರವಲ್ಲ ಪ್ರತಿ ವಾರ ಪರಿಸರ ಉಳಿಸಿಕೊಳ್ಳುವ ಸರಳ ವಿಧಾನಗಳ ಬಗ್ಗೆ ನಮ್ಮ ನಾಗೇಶ್ ಹೆಗಡೆಯವರು ಲೇಖನ, ಪತ್ರ ಬರೆಯುತ್ತಿರುತ್ತಾರೆ. ನಮ್ಮ ದುರಾದೃಷ್ಟವೋ ಎನೋ ಇವರ್ಯಾರು ಅದನ್ನು ಸಹ ಓದಿದಂತೆ ಕಾಣುವುದಿಲ್ಲ. ಓದಿದರೆ ಇಂತಹ ಪ್ಲಾಪ್ ಶೋ ಮಾಡಲು ಮುಂದಾಗುತ್ತಿರಲಿಲ್ಲ.

ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಮೌಡ್ಯ ನಿಷೇಧ ಕಾಯ್ದೆ ತರಲು ಹೊರಟಾಗ ವಿರೋಧಿಸಿದರು ಇವರೆ ಇರಬೇಕು. ಪಾಪಾ ಅಂತಹ ಸಿದ್ದರಾಮಯ್ಯನವರು ಸಹ ಈಗ ಮೌನವಾಗಿರುವುದು ದುರಂತದ ಮೇಲೆ ದುರಂತ ಎನ್ನಬಹುದು. ಈಗ ಜನರೆ ಎಚ್ಚೆತ್ತುಕೊಂಡು ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ, ಇಂತಹ ಗಿಮಿಕ್ ಮಾಡುವುದು ಬಿಟ್ಟು ಸರಿಯಾಗಿ ಕೆಲಸ ಮಾಡುವಂತೆ ಸರ್ಕಾರನ್ನು ಆಗ್ರಹಿಸಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...