Homeಅಂಕಣಗಳುಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

ಸರ್ವಾಧಿಕಾರದ ಕೆಲವು ಗುಣಲಕ್ಷಣಗಳು!

- Advertisement -
- Advertisement -

ನಿಖಿಲ್ ಕೊಲ್ಫೆ |
ಪ್ರಪಂಚದ ಆಗಿಹೋದ ಮತ್ತು ಈಗಿರುವ ಬಹುತೇಕ ಎಲ್ಲಾ ಸರ್ವಾಧಿಕಾರಿಗಳ ವೈಯಕ್ತಿಕ ಸ್ವಭಾವ ಹಾಗೂ ಗುಣಲಕ್ಷಣಗಳಲ್ಲಿ ಅನೇಕ ಸಾಮ್ಯಗಳಿವೆ. ಅವುಗಳಲ್ಲಿ ಮುಖ್ಯವಾದದ್ದೆಂದರೆ ನಾರ್ಸಿಸಿಸಮ್ ಅಂದರೆ ತಮ್ಮನ್ನೇ ತಾವು ಮೋಹಿಸುವ ಪ್ರವೃತ್ತಿ. ಗ್ರೀಕ್ ಪುರಾಣದಲ್ಲಿ ಬರುವ ನಾರ್ಸಿಸಸ್ ಒಬ್ಬ ಬೇಟೆಗಾರ. ಸುಂದರನಾಗಿದ್ದ ಆತ ಒಂದು ತಿಳಿಯಾದ ಕೊಳದಲ್ಲಿ ತನ್ನ ಮುಖವನ್ನು ನೋಡಿ ಪ್ರತಿಬಿಂಬದಲ್ಲಿ ಮೋಹಗೊಳ್ಳುತ್ತಾನೆ. ಸರ್ವಾಧಿಕಾರಿಗಳು ಅದೇ ರೀತಿ ವರ್ತಿಸುತ್ತಾರೆ.
ತಮ್ಮನ್ನು ತಾವು ಧೀರರು, ಬಲಶಾಲಿಗಳು, ಬುದ್ಧಿವಂತರು ಎಂದು ಬಿಂಬಿಸಲು ಬಯಸುತ್ತಾರೆ. ಇಡೀ ಪ್ರಪಂಚದಲ್ಲಿ ತಾನೇ ಅತ್ಯಂತ ಮುಖ್ಯ ವ್ಯಕ್ತಿ; ಅದು ತಮ್ಮ ಸುತ್ತಲೇ ತಿರುಗುತ್ತದೆ ಎಂಬ ಭ್ರಮೆ ಅವರಲ್ಲಿರುತ್ತದೆ. ಅವರು ಮಿಲಿಟರಿ ಸಮವಸ್ತ್ರ, ಅತ್ಯುತ್ತಮ ಸೂಟುಬೂಟು ಧರಿಸುತ್ತಾರೆ. ಸರಳತೆ ಅವರಲ್ಲಿಲ್ಲ!
ಇದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಅವರು ಯಾವತ್ತೂ ಎತ್ತರದ ವೇದಿಕೆಗಳಲ್ಲಿ ಇರುತ್ತಾರೆ. ಹಿಂದೆ ಅವರದ್ದೇ ಭಾರೀ ಚಿತ್ರಗಳಿರುತ್ತವೆ. ಮಾಧ್ಯಮಗಳಲ್ಲಿ ಅವರದ್ದೇ ವ್ಯಕ್ತಿಕೇಂದ್ರಿತ ಪ್ರಚಾರ ಇರುತ್ತದೆ. ಇರಾಕಿನಲ್ಲಿ ಸದ್ದಾಂ ಹುಸೇನ್ ಅಧಿಕಾರದಲ್ಲಿ ಇದ್ದಾಗ ಎಲ್ಲೆಲ್ಲೂ, ಸಾರ್ವಜನಿಕ ಸ್ಥಳಗಳಲ್ಲಿ ಅತನ ಪ್ರತಿಮೆಗಳು, ಭಾವಚಿತ್ರಗಳು, ಕಟೌಟುಗಳು ರಾರಾಜಿಸುತ್ತಿದ್ದವು. ದಿನಪತ್ರಿಕೆಗಳಲ್ಲಿ ಪ್ರತೀದಿನ ಮುಖಪುಟದಲ್ಲಿ ಆತನ ಫೋಟೋ ಕಡ್ಡಾಯ. ಟಿವಿ ರೇಡಿಯೋಗಳಲ್ಲಿ ಮೊದಲ ಸುದ್ದಿ ಅತನದ್ದೇ ಅಗಿರಬೇಕು. ಹಿಟ್ಲರ್ ಕೂಡಾ ಇದಕ್ಕೆ ಹೊರತಲ್ಲ!
ಕೆಲವು ಅಧ್ಯಯನಗಳ ಪ್ರಕಾರ ಸಾಮಾನ್ಯವಾಗಿ ಸರ್ವಾಧಿಕಾರಿಗಳು ವರ್ಚಸ್ವಿಗಳೂ, ಆತ್ಮವಿಶ್ವಾಸ ಹೊಂದಿರುವವರೂ ಆಗಿರುತ್ತಾರೆ. ಅವರು ಹಿಟ್ಲರ್‍ನಂತೆ ಉತ್ತಮ ಭಾಷಣಕಾರರಾಗಿರುತ್ತಾರೆ. ಅದರೆ, ಅವರ ಭಾಷಣಗಳಲ್ಲಿ ಹುರುಳಿರುವುದಿಲ್ಲ! ಅಡಿದ್ದನ್ನೇ ಭಾವನಾತ್ಮಕವಾಗಿ ಆಡಿ ಜನರನ್ನು ಉದ್ರೇಕಿಸುವಂತಿರುತ್ತವೆ. ಘೋಷಣೆಗಳೇ ಅವರ ಬಂಡವಾಳ. ಯಾವಾಗಲೂ ಭಾವನಾತ್ಮಕ ವಿಷಯಗಳನ್ನೇ ಕೆಣಕುತ್ತಾರೆ. ಸರ್ವಾಧಿಕಾರಿಗಳು ಸುಳ್ಳುಹೇಳುವುದರಲ್ಲಿ ನಿಷ್ಣಾತರಾಗಿರುತ್ತಾರೆ.
ಅವರು ಹೆಚ್ಚಾಗಿ ಉಗಾಂಡದ ಇದಿ ಅಮೀನನಂತೆ ಕ್ರೂರಿಗಳಾಗಿರುತ್ತಾರೆ. ಭಾವನಾತ್ಮಕ ಮಾತುಗಳನ್ನೇ ಆಡಿದರೂ ಅವರು ಮಾತ್ರ ಭಾವನಾತ್ಕಕವಾಗಿರುವುದಿಲ್ಲ. ಅವರು ಧೈರ್ಯಶಾಲಿಗಳ ಪೋಸು ಕೊಟ್ಟರೂ, ಕೆಲವರು ನಿಜವಾಗಿಯೂ ಧೈರ್ಯಶಾಲಿಗಳಾಗಿಯೇ ಇದ್ದರೂ, ಇನ್ನು ಕೆಲವರು ಸ್ವಭಾವತಃ ಪುಕ್ಕಲುಗಳಾಗಿರುತ್ತಾರೆ. ಯಾರಾದರೂ ತಮ್ಮನ್ನು ಕೊಲ್ಲಬಹುದು, ತಾನು ಅಧಿಕಾರ ಕಳೆದುಕೊಳ್ಳಬಹುದು ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಅದಕ್ಕಾಗಿ ಸ್ವಲ್ಪ ಸಂಶಯ ಬಂದರೂ ವಿರೋಧಿಗಳನ್ನು ದಮನಿಸುತ್ತಾರೆ. ಲಿಬಿಯಾದ ಸರ್ವಾಧಿಕಾರಿಯಾಗಿದ್ದ ಮುಹಮ್ಮದ್ ಗಡ್ಡಾಫಿ ಹೆಚ್ಚಾಗಿ ರಾಜಧಾನಿ ಟ್ರಿಪೋಲಿಯಲ್ಲಿ ವಾಸವಿರದೆ, ಮರುಭೂಮಿಗಳ ಗುಪ್ತಸ್ಥಳಗಳ ಟೆಂಟ್ ಕ್ಯಾಂಪ್‍ಗಳಲ್ಲಿ ವಾಸವಿದ್ದುದನ್ನು ಗಮನಿಸಬಹುದು.
ಸರ್ವಾಧಿಕಾರಿಗಳು ಆರಂಭದಲ್ಲಿ ಜನಪ್ರಿಯರೇ ಆಗಿರುತ್ತಾರೆ. ಹಿಂದಿನ ಆಡಳಿತಗಳ ವೈಫಲ್ಯಗಳಿಂದ ಅಸಮಾಧಾನ ಹೊಂದಿದ ಜನರು ಭವಿಷ್ಯದ ಆಶಾವಾದದಿಂದ ಇಂತವರನ್ನು ಬೆಂಬಲಿಸುತ್ತಾರೆ. ಅವರಾದರೋ ಹಿಂದಿನವರನ್ನು ನಿರಂತರ ದೂರುತ್ತಾ, ಎಲ್ಲದಕ್ಕೂ ಹಿಂದಿನವರೇ ಕಾರಣ ಎಂದು ನಂಬಿಸುತ್ತಾರೆ. ಇರಾಕಿನ ಸದ್ದಾಂ ಹುಸೇನ್ ಕೇವಲ ಸೇನೆಯ ಜನರಲ್ ಅಗಿದ್ದಾತ. 1979ರಲ್ಲಿ ಅಧ್ಯಕ್ಷ ಮಹಮ್ಮದ್ ಹಸನ್ ಅಲ್ ಬಖ್ರ್ ನಿಧನ ಹೊಂದಿದಾಗ ಜನರಲ್ಲಿ ಅಸಮಾಧಾನವಿತ್ತು. ಅದನ್ನೇ ಬಂಡವಾಳ ಮಾಡಿಕೊಂಡು ಸದ್ದಾಂ ಆದ್ಯಕ್ಷನಾದಾಗ, ಬಾತ್ ಪಕ್ಷ ಆತನನ್ನು ಬೆಂಬಲಿಸಿತ್ತು. ಜನರೂ ಖುಷಿಯನ್ನೇ ಪಟ್ಟಿದ್ದರು. ಅದಕ್ಕೆ ಅನುಗುಣವಾಗಿ ಸದ್ದಾಂ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡದ್ದೂ ಹೌದು.
ಹಿಟ್ಲರ್ ಕೂಡಾ ನೇರವಾಗಿ ಅಧಿಕಾರ ಕಸಿದುಕೊಂಡು ಸರ್ವಾಧಿಕಾರಿಯಾದವನಲ್ಲ. ಚುನಾವಣೆಯಲ್ಲಿ ಅವನ ಪಕ್ಷ ಎರಡನೇ ಸ್ಥಾನ ಗಳಿಸಿತ್ತು. ಆತನನ್ನು ಅಧ್ಯಕ್ಷ ಪೌಲ್ ವೊನ್ ಲಿಂಡೆನ್‍ಬರ್ಗ್ ಅವರು ಚಾನ್ಸಲರ್ ಆಗಿ ನೇಮಿಸಿದ್ದರು. ನಂತರ ಆತ ಅಧ್ಯಕ್ಷ ಮತ್ತು ಚಾನ್ಸಲರ್ ಎರಡೂ ಅಧಿಕಾರ ಇರುವ ಫ್ಯುರರ್ ಎಂದು ಘೋಷಿಸಿಕೊಂಡಾಗ ಬಹುತೇಕ ಜರ್ಮನರು ಅತ ವಿಶ್ವಗುರು ಆಗುವನೆಂದೇ ನಂಬಿ ಬೆಂಬಲಿಸಿದ್ದರು. ಯಾಕೆಂದರೆ, ಮೊದಲ ಮಹಾಯುದ್ಧದ ಸೋಲಿನಿಂದ ತತ್ತರಿಸಿತ್ತು. ಅರ್ಥಿಕತೆ ಹದಗೆಟ್ಟಿತ್ತು. ನಿರುದ್ಯೋಗ ತಾಂಡವವಾಡುತ್ತಿತ್ತು.
ಎಲ್ಲಾ ಸರ್ವಾಧಿಕಾರಿಗಳು ತಮಗೆ ಯಾವುದೇ ವಿರೋಧ ಇರಬಾರದೆಂದು ಬಯಸುತ್ತಾರೆ. ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಅವರಿಗೆ ನಂಬಿಕೆಯೇ ಇರುವುದಿಲ್ಲ. ಸಂಸತ್ತಿನಂತಹ ಯಾವುದೇ ಚುನಾಯಿತ ನಿಯಂತ್ರಕ ಸಂಸ್ಥೆಯನ್ನು ಅವರು ಕಡೆಗಣಿಸುತ್ತಾರೆ. ಅಂತಹ ಸಂಸ್ಥೆಗಳಲ್ಲಿ ತಮ್ಮ ಭಟ್ಟಂಗಿಗಳೇ ಆಯಕಟ್ಟಿನ ಸ್ಥಾನಗಳಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ. ಹಿಟ್ಲರ್ ಕೂಡಾ ಜರ್ಮನ್ ಸಂಸತ್ತನ್ನು ವಿಸರ್ಜಿಸಿದ್ದ. ತನ್ನ ಸುತ್ತ ಗೊಬೆಲ್ಸ್, ಹಿಮ್ಲರ್ ಮುಂತಾದ ಭಟ್ಟಂಗಿಗಳನ್ನು ಇಟ್ಟುಕೊಂಡಿದ್ದ.
ಒಂದು ಸರಕಾರ ನಡೆಯಲು ಹಲವಾರು ಸಂಸ್ಥೆಗಳು ಇರಲೇಬೇಕಾಗುತ್ತದೆ. ಬ್ಯಾಂಕಿಂಗ್, ಕೈಗಾರಿಕೆ, ಕೃಷಿ, ಅರೋಗ್ಯ, ಗೃಹ, ರಕ್ಷಣೆ ಹೀಗೆ ಆಡಳಿತ ಯಂತ್ರವನ್ನು ಮುನ್ನಡೆಸಲು ಅಧಿಕಾರಶಾಹಿ ಇದ್ದೇ ಇರುತ್ತದೆ. ಹೆಸರಿಗಾದರೂ ಚುನಾವಣೆಗಳು ನಡೆಯಬೇಕು. ಕೆಲವು ದೇಶಗಳಲ್ಲಿ ನಕಲಿ ಚುನಾವಣೆಗಳೇ ನಡೆಯುತ್ತವೆ. ಈ ಹೊತ್ತಿನಲ್ಲಿ ಯುಎಸ್‍ಎಯಲ್ಲಿ ಭಾರತದ ರಾಯಭಾರಿಯಾಗಿದ್ದ ಹಿರಿಯ ರಾಜತಾಂತ್ರಿಕ ಅಬಿದ್ ಹುಸೇನ್ ಅವರು ಕೆಲವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಆಫ್ರಿಕಾದ ದೇಶವೊಂದರಲ್ಲಿ ನಡೆಯುವ ಚುನಾವಣೆಗಳ ಕುರಿತು ಉದಾಹರಣೆಯಾಗಿ ಹೇಳಿದ ಜೋಕೊಂದು ನೆನಪಿಗೆ ಬರುತ್ತದೆ.
ಒಬ್ಬ ವ್ಯಕ್ತಿ ಅಧ್ಯಕ್ಷರ ವಿರುದ್ಧವಾಗಿ ಮತ ಚಲಾಯಿಸಿ ಮನೆಗೆ ಬರುತ್ತಾನೆ. ಹೆಂಡತಿ ಕೇಳಿದಾಗ ತಾನು ವಿರುದ್ಧ ಮತ ಚಲಾಯಿಸಿದ ವಿಷಯ ಹೇಳುತ್ತಾನೆ. ಆಕೆ ಕಂಗಾಲಾಗುತ್ತಾಳೆ. “ನಿಮಗೆ ಬುದ್ದಿ ಇಲ್ಲವೆ?! ನೀವು ವಿರುದ್ಧ ಮತ ಚಲಾಯಿಸಿದ್ದು, ಸರಕಾರಕ್ಕೆ ಗೊತ್ತಾಗುತ್ತದೆ. ನಾಳೆ ನೀವು ಕೆಲಸ ಕಳಕೊಳ್ಳಬಹುದು. ಜೈಲಿಗೂ ಹೋಗಬಹುದು. ನಮ್ಮ ಮಗನಿಗೆ ಆಡಳಿತ ಪಕ್ಷದ ಗೂಂಡಾಗಳು ಹೊಡೆಯಬಹುದು. ಮಗಳನ್ನು ಅತ್ಯಾಚಾರ ಮಾಡಲೂಬಹುದು. ಈಗಲೇ ಹೋಗಿ ಮತ ಬದಲಿಸಿ ಬನ್ನಿ!” ಎಂದು ಅಂಗಲಾಚುತ್ತಾಳೆ. ಅತನಿಗೆ ಸರಿಯೆನಿಸಿ ಮತಗಟ್ಟೆಗೆ ದೌಡಾಯಿಸಿ ಅಧಿಕಾರಿಗಳಲ್ಲಿ ಹೇಳುತ್ತಾನೆ- “ಸ್ವಾಮಿ ನಾನು ತಪ್ಪಾಗಿ ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದ್ದೇನೆ. ಅದನ್ನು ಅವರ ಪರವಾಗಿ ಸರಿಪಡಿಸಬೇಕು”. ಅಗ ಅಧಿಕಾರಿಗಳು ಹೇಳುತ್ತಾರೆ- “ ನಿನಗೇನೂ ಭಯ ಬೇಡ. ನಾವು ಈಗಾಗಲೇ ನಿನ್ನ ಮತವನ್ನು ಅಧ್ಯಕ್ಷರ ಪರ ತಿದ್ದಿ ಆಗಿದೆ!” ನಮ್ಮಲ್ಲೂ ಇಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ಹಲವರಿಗೆ ಆತಂಕ ಇರುವುದು ಯಾಕೆ ಎಂದು ಅರ್ಥವಾಯಿತೆ!?
ಈ ಕಾರಣದಿಂದಾಗಿ ಸರ್ವಾಧಿಕಾರಿಗಳು ಯಾವತ್ತೂ ಅಯಕಟ್ಟಿನ ಸ್ಥಾನಗಳಲ್ಲಿ ತಮ್ಮವರನ್ನೇ ನೇಮಿಸಲು ಯತ್ನಿಸುತ್ತಾರೆ. ಅವರು ಭಟ್ಟಂಗಿಗಳು, ಎದುರಾಡದ ಕೈಗೊಂಬೆಗಳೇ ಅಗಿರುತ್ತಾರೆ. ಎದುರಾಡಿದರೆ ರಾಜೀನಾಮೆ ಕೊಡಬೇಕಾದೀತು! ಈ ಕಾರಣದಿಂದಲೇ ಸರ್ವಾಧಿಕಾರಿಯ ತಪ್ಪನ್ನು ಯಾರೂ ಬೆಟ್ಟುಮಾಡಲು ಹೋಗುವುದಿಲ್ಲ- ತನ್ನ ತಪ್ಪುಗಳನ್ನು ತಿಳಿದುಕೊಳ್ಳದ ಆತ ದೇಶವನ್ನೇ ವಿನಾಶಕ್ಕೆ ತಳ್ಳಿ ತಾನೂ ನಾಶವಾಗುವ ತನಕ!
ಸರ್ವಾಧಿಕಾರದಲ್ಲಿ ನ್ಯಾಯಾಂಗ ವ್ಯವಸ್ಥೆಯ ಅಧಿಕಾರಗಳನ್ನು ಮೊಟಕುಗೊಳಿಸಲಾಗುತ್ತದೆ. ನ್ಯಾಯಾಧೀಶ ಹುದ್ದೆಗಳಿಗೂ ಕೈಗೊಂಬೆಗಳನ್ನೇ ಹಿಂಬಾಗಿಲಿನಿಂದ ನುಸುಳಿಸುವ ಪ್ರಯತ್ನಗಳು ನಡೆಯುತ್ತವೆ. ತೀರ್ಪುಗಳು ವಿವಾದಾತ್ಮಕವಾಗಿ ಇದ್ದರೂ ಪ್ರಶ್ನಿಸುವಂತಿಲ್ಲ. ತೀರ್ಪುಗಳು ಪ್ರತಿಕೂಲವಾಗಿದ್ದಾಗ ನ್ಯಾಯಾಲಯಗಳನ್ನೇ ಧಿಕ್ಕರಿಸುವ, ಅಷ್ಟೇ ಏಕೆ ಸಂವಿಧಾನಗಳನ್ನೇ, ಧಿಕ್ಕರಿಸುವ ಪ್ರವೃತ್ತಿ ಅಧಿಕಾರಸ್ಥರ ಕೃಪಾಕಟಾಕ್ಷದಿಂದಲೇ ಬೆಳೆಯುತ್ತದೆ.
ಇನ್ನೊಂದು ಪ್ರವೃತ್ತಿ ಎಂದರೆ, ಸೇನೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಹಸ್ತಕ್ಷೇಪ. ಯಾವುದೇ ಸರ್ವಾಧಿಕಾರ ಅವುಗಳನ್ನು ನಿಯಂತ್ರಿಸದೇ ಉಳಿಯುವುದು ಕಷ್ಟ. ಒಂದು ದೇಶಕ್ಕಾಗಿ ಹೋರಾಡಬೇಕಾದ ಸೇನೆಯು ಒಬ್ಬ ವ್ಯಕ್ತಿ ಅಥವಾ ಸರಕಾರಕ್ಕಾಗಿ ಹೋರಾಡುತ್ತಿದೆ ಎಂಬಂತೆ ಬಿಂಬಿಸುವುದು! ಸೈನ್ಯದ ಸಾಧನೆಗಳನ್ನು ತನ್ನ ಸಾಧನೆ ಎಂದು ಕೊಚ್ಚಿಕೊಳ್ಳುವುದು!
ಕಳೆದ ಸಂಚಿಕೆಗಳಲ್ಲಿ ಮತ್ತು ಇಲ್ಲಿ ಕೇವಲ ಪರಿಚಯಾತ್ಮಕವಾಗಿ ವಿವರಿಸಲಾದ ಗುಣಲಕ್ಷಣಗಳನ್ನು ಮುಂದೆ ಒಂದೊಂದಾಗಿ ಸೂಕ್ಷ್ಮವಾಗಿ ಮತ್ತು ಉದಾಹರಣೆ ಸಹಿತ ಪರಿಶೀಲಿಸುವ ಮೊದಲು ಮತ್ತಷ್ಟು ಗುಣ ಲಕ್ಷಣಗಳನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಅದೇ ಹೊತ್ತಿಗೆ ಈ ಗುಣಲಕ್ಷಣಗಳು ನಮ್ಮಲ್ಲಿಯೂ ಕಾಣುತ್ತಿವೆಯೇ ಎಂಬುದನ್ನು ಓದುಗರು ಪರಿಶೀಲಿಸಬೇಕು. ಒಂದುವೇಳೆ ಅದು ಹೌದಾದಲ್ಲಿ ನಾವು ತಕ್ಷಣ ಎಚ್ಚರಗೊಳ್ಳಬೇಕಾದ ಅಗತ್ಯವಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...