ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಮತ್ತು ಕೇಂದ್ರದ ಸಹಾಯಕ ಗೃಹಸಚಿವ ಅಜಯ್ ಮಿಶ್ರಾ ಅವರ ಭೇಟಿಯನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಒಂಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರು ರೈತರ ಹತ್ಯೆಯಾಗಿದ್ದು, ನಂತರ ನಡೆದ ರೈತರ ಪ್ರತಿರೋಧದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಹತ್ತು ಪ್ರಮುಖ ಅಂಶಗಳು
1. ಕೇಂದ್ರ ಸಹಾಯಕ ಗೃಹ ಸಚಿವರ ಬೆಂಗಾವಲು ಪಡೆಯ ಎರಡು ಎಸ್ಯುವಿಗಳು ಪ್ರತಿಭಟಿಸುತ್ತಿದ್ದ ರೈತರ ಮೇಲೆ ಹರಿದಿವೆ. ಇದರಿಂದ ನಾಲ್ವರು ರೈತರು ಹುತಾತ್ಮರಾಗಿದ್ದಾರೆ. ಆಕ್ರೋಶಗೊಂಡ ರೈತರು ಎರಡು ಎಸ್ಯುವಿಗಳನ್ನು ತಡೆದು ನಿಲ್ಲಿಸಿ, ಅವುಗಳಿಗೆ ಬೆಂಕಿ ಹಂಚಿದ್ದಾರೆ ಎನ್ನಲಾಗಿದೆ. ಈ ಎಸ್ಯುವಿಗಳಲ್ಲಿ ಇದ್ದ ನಾಲ್ವರು ಮೃತಪಟ್ಟಿದ್ದಾರೆ ಎಂದು ಲಖಿಂಪುರ್-ಖೇರಿ ಜಿಲ್ಲಾ ದಂಡಾಧಿಕಾರಿ ಅರವಿಂದ ಕುಮಾರ್ ಚೌರಾಸಿಯಾ ತಿಳಿಸಿದ್ದಾರೆ.
2. ಸಚಿವ ಅಜಯ್ ಮಿಶ್ರಾ ಅವರ ಮಗನಾದ ಆಶೀಶ್ ಮಿಶ್ರಾ ಅವರೇ ಒಂದು ಎಸ್ಯುವಿ ಚಾಲನೆ ಮಾಡುತ್ತಿದ್ದ ಎಂದು ರೈತರು ಆರೋಪಿಸಿದ್ದು, ಸಚಿವರು ರೈತರ ಆರೋಪವನ್ನು ಹಲ್ಲಗಳೆದಿದ್ದಾರೆ. ವಾಹನ ಹರಿದು ಮೂವರು ಸಾವನ್ನಪ್ಪಿದರೆ ಆಶಿಷ್ ಮಿಶ್ರಾ ಓರ್ವ ರೈತನನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ವರದಿಗಳಾಗಿವೆ.
ಇದನ್ನೂ ಓದಿರಿ: ಲಖಿಂಪುರ್ ಖೇರಿಯಲ್ಲಿ ರೈತರ ಹತ್ಯೆ: ಸಚಿವರ ಮೇಲೆ ಕೊಲೆ ಪ್ರಕರಣ ದಾಖಲಿಸಲು ಎಸ್ಕೆಎಂ ಒತ್ತಾಯ
3. “ಕೆಲವು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಕಪ್ಪು ಭಾವುಟವನ್ನು ತೋರಿಸುತ್ತಾ, ಕಲ್ಲುಗಳನ್ನು ಎಸೆದರು, ಇದು ಗಲಭೆಗೆ ತಿರುಗಿ, ಇಬ್ಬರು ರೈತರು ಕಾರಿನ ಅಡಿ ಬಂದು ಸಾವನ್ನಪ್ಪಿದರು. ಮೂವರು ಬಿಜೆಪಿ ಕಾರ್ಯಕರ್ತರು ಹಾಗೂ ಕಾರಿನ ಚಾಲಕನನ್ನು ಹೊಡೆದು ಸಾಯಿಸಲಾಯಿತು” ಎಂದು ಸಚಿವರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
4. “ಸಚಿವರಿಗೆ ಘೇರಾವ್ ಹಾಕಲು ರೈತರು ಉದ್ದೇಶಿಸಿದ್ದರು. ಘೇರಾವ್ ಕೊನೆಗೊಂಡ ನಂತರ ಹೆಚ್ಚಿನ ರೈತರು ಹಿಂತಿರುಗಿದ್ದರು. ಈ ವೇಳೆ ಮೂರು ಬೆಂಗಾವಲು ವಾಹನಗಳು ರೈತರ ಮೇಲೆ ನುಗ್ಗಿದವು. ಒಬ್ಬ ರೈತ ಸ್ಥಳದಲ್ಲೇ ಮೃತಪಟ್ಟರೆ, ಮತ್ತೆ ಕೆಲವರು ಆಸ್ಪತ್ರೆಯಲ್ಲಿ ಮೃತಪಟ್ಟರು” ಎಂದು ರೈತ ನಾಯಕ ದರ್ಶನ್ ಪಾಲ್ ಹೇಳಿದ್ದಾರೆ.
5. ವಾಹನಗಳು ನುಗ್ಗಿದ್ದರಿಂದ ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ರೈತ ಒಕ್ಕೂಟದ ಭಾಗವಾದ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ತೇಜೇಂದ್ರ ಎಸ್.ವಿರಾಕ್ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರೈತ ಒಕ್ಕೂಟ ತಿಳಿಸಿದೆ.
6. ರೈತರು ಈ ಇಬ್ಬರು ಸಚಿವರ ಭೇಟಿಯನ್ನು ವಿರೋಧಿಸಿ ಒಂದೆಡೆ ಸೇರಿದ್ದರು. ಇತ್ತೀಚೆಗೆ ರೈತರ ಹೋರಾಟದ ಕುರಿತು ಸಚಿವ ಮಿಶ್ರಾ ಅವಹೇಳನಕಾರಿಯಾಗಿ ಮಾತನಾಡಿದ್ದು ರೈತರ ಪ್ರತಿಭಟನೆಗೆ ಕಾರಣವಾಗಿತ್ತು. ಕೃಷಿ ಕಾಯ್ದೆಗಳ ಕುರಿತು ಪ್ರತಿಭಟನೆಯನ್ನು ಸಚಿವರು ಕೇವಲವಾಗಿ ಕಂಡಿದ್ದರು. ಇದು ರೈತ ಸಮುದಾಯಕ್ಕೆ ಬೇಸರ ತಂದಿತ್ತು.
ಕೇಂದ್ರ ಸಚಿವ ಅಜಯ್ ಮಿಶ್ರಾ ಭೇಟಿಯನ್ನು ವಿರೋಧಿಸಿ ಉತ್ತರ ಪ್ರದೇಶದ ಲಿಖಿಮ್ಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹತ್ತಿಸಿ ನಾಲ್ವರು ರೈತರನ್ನು ಹತ್ಯೆ ಮಾಡಲಾಗಿದೆ. ಮಿಶ್ರಾ ಅವರ ಪುತ್ರ ಹಾಗೂ ಆತನ ಗೂಂಡಾಗಳು ಮೂವರು ರೈತರ ಮೇಲೆ ವಾಹನ ಹತ್ತಿಸಿದ್ದಾರೆ. ಒಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸಂಯುಕ್ತಾ ಕಿಸಾನ್ ಮೋರ್ಚಾ ಹೇಳಿದೆ.
ಭಾನುವಾರ ನಡೆದ ಘಟನೆಗೆ ಸಂಬಂಧಿಸಿದಂತೆ ವರ್ಚ್ಯೂವಲ್ ವೇದಿಕೆ ಮೂಲಕ ಪತ್ರಿಕಾಗೋಷ್ಠಿ ನಡೆಸಿರುವ ಸಂಯುಕ್ತಾ ಕಿಸಾನ್ ಮೋರ್ಚಾ, ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಬಿಡುಗಡೆ ಮಾಡಿದೆ.
ಘಟನಾ ಸ್ಥಳದಲ್ಲಿದ್ದ ಸೀತಾಪುರದ ರಿಚಾ ಸಿಂಗ್, “ಮಿಶ್ರಾ ಇಳಿಯಲಿರುವ ಹೆಲಿಪ್ಯಾಡ್ ಬಳಿ ರೈತರು ಸೇರಿದ್ದರು ಮತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಸಚಿವರಿಗೆ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದ್ದರು. ಮಿಶ್ರಾ ಬಂದಿಳಿದು ಕಾರ್ಯಕ್ರಮಕ್ಕೆ ತೆರಳಿದರು. ನಾವು ಅವರನ್ನು ಹಿಂಬಾಲಿಸಲಿಲ್ಲ. ನಮ್ಮ ಪ್ರತಿಭಟನೆಯನ್ನು ಹೆಲಿಪ್ಯಾಡ್ನಲ್ಲೇ ಮುಂದುವರಿಸಿದೆವು. ಕೆಲವರು ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಚಿವರು ಹೋದ ಬಳಿಕವೂ ನಮ್ಮ ಘೋಷಣೆಗಳನ್ನು ಕೂಗಿದೆವು. ನಂತರ ನಮ್ಮ ದಾರಿಯಲ್ಲಿ ನಾವು ನಡೆದೆವು” ಎಂದಿದ್ದಾರೆ.
ಗುಂಡಿನ ದಾಳಿ ಹಾಗೂ ಹತ್ಯೆ ನಡೆದಾಗ ಸ್ಥಳದಲ್ಲಿದ್ದ ರಿಚಾ ಸಿಂಗ್ ಜೊತೆ ಇದ್ದ ಗುರುಮ್ನೀತ್ ಮಂಗತ್ ಅವರೂ ಹೇಳಿಕೆ ನೀಡಿದ್ದು, “ಸಚಿವರು ಹೋದ ಬಳಿಕ ರೈತರು ಚದುರಿದರು. ಆ ವೇಳೆಗೆ ಸಚಿವರ ಮಗ ಆಶೀಶ್ ಮಿಶ್ರಾ, ಆತನ ಸಹೋದರ ಹಾಗೂ ಕೆಲವು ಗೂಂಡಾಗಳು ಮೂರು ಕಾರುಗಳಲ್ಲಿ ಸುಮಾರು 3.15ರ ವೇಳೆಗೆ ಬಂದರು. ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದರು. ರೈತರ ಮೇಲೆ ನುಗ್ಗಿಸಿದರು. ಜೊತೆಗೆ ರೈತರ ಮೇಲೆ ಬಂದೂಕಿನ ಮಳೆಗರೆದರು. ಹತ್ತಿರದಲ್ಲಿದ್ದ ರೈತನಿಗೆ ಗುಂಡು ತಾಕಿ, ಆತ ಮೃತಪಟ್ಟ” ಎಂದು ಹೇಳಿದ್ದಾರೆ.
7. ಶಾಂತಿಯನ್ನು ಕಾಪಾಡಿಕೊಳ್ಳಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರು ಮನವಿ ಮಾಡಿದ್ದಾರೆ. ಘಟನೆಯನ್ನು ‘ಆಕಸ್ಮಿಕ’ ಎಂದು ಕರೆದಿರುವ ಅವರು, “ಘಟನೆಯ ಕಾರಣಗಳನ್ನು ತನಿಖೆ ಮಾಡಲಾಗುವುದು. ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಎಲ್ಲರೂ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಕೋರುತ್ತೇನೆ” ಎಂದಿದ್ದಾರೆ.
8. ಘಟನೆ ನಡೆದ ಲಿಖಿಂಪುರ್ ಪ್ರಾಂತ್ಯದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
9. ರೈತ ನಾಯಕ ನರೇಶ್ ಟಿಕಾಯತ್ ಅವರು ಭಾನುವಾರ ರಾತ್ರಿ ಸಿಸೋಲಿಯಲ್ಲಿ ತುರ್ತು ಸಭೆಯನ್ನು ಕರೆದಿದ್ದರು. ಮಾನವ ಹಕ್ಕುಗಳ ಹೋರಾಟಗಾರ ಚಂದ್ರಶೇಖರ್ ಆಜಾದ್ ಮತ್ತು ಇವರ ಭೀಮ್ ಆರ್ಮಿ ಲಿಖಿಂಪುರ್ ಖೇರಿಗೆ ದಾವಿಸುತ್ತಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
10. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ರಣದೀಪ್ ಸರ್ಜೇವಾಲಾ, ಕಪೀಲ್ ಸಿಬಾಲ್ ಮೊದಲಾದವರು ಘಟನೆಯನ್ನು ಖಂಡಿಸಿದ್ದಾರೆ. ಕೊಲೆಯಾದ ರೈತರ ಕುಟುಂಬಗಳನ್ನು ಭೇಟಿಯಾಗಲು ಹೊರಟಿದ್ದ ಕಾಂಗ್ರೆಸ್ನ ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಲಾಯಿತು ಮತ್ತು ಲಖಿಂಪುರ್ ಖೇರಿಗೆ ಪ್ರವೇಶಿಸಲು ಬಿಡಲಿಲ್ಲ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಲಖಿಂಪುರ್ ಖೇರಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿರಿ: ಲಖಿಂಪುರ್ ಖೇರಿಯಲ್ಲಿ ಬೆಂಗಾವಲು ವಾಹನ ಹರಿಸಿ ರೈತರ ಹತ್ಯೆ- ಭುಗಿಲೆದ್ದ ಹಿಂಸಾಚಾರ