ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಕನ್ಯಾಕುಮಾರಿಯಿಂದ ಆರಂಭಗೊಂಡಿದೆ. ದೇಶದ ಬಹುದೊಡ್ಡ ಪಾದಾಯಾತ್ರೆಯು ಕಾಂಗ್ರೆಸ್ ಪಕ್ಷಕ್ಕೆ ಸಂಜೀಜಿವಿಯಾಗಿದ್ದು, ನಾವು ಮತ್ತೆ ಪುಟಿದೆದ್ದು ಬರುತ್ತೇವೆ. ಈ ಯಾತ್ರೆಯು ಬಿಜೆಪಿಯನ್ನು ಅಲ್ಲಾಡಿಸಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ರವರು ಭಾರತದ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸುವ ಮೂಲಕ ಪಾದಯಾತ್ರೆ ಆರಂಭಗೊಂಡಿದೆ. 113 ಭಾರತ್ ಯಾತ್ರಿಗಳೊಂದಿಗೆ ಪಾದಯಾತ್ರೆ ಆರಂಭಿಸಿರುವ ರಾಹುಲ್ ಗಾಂಧಿ ಆತ್ಮಹತ್ಯೆ ಮಾಡಿಕೊಂಡ ನೀಟ್ ಆಕಾಂಕ್ಷಿ ಅನಿತಾರವರ ತಂದೆ ಮತ್ತು ಸಹೋದರನನ್ನು ಭೇಟಿ ಮಾಡಿ ಸಂತಾಪ ಸೂಚಿಸಿದ್ದಾರೆ.
ಇಂದು ಭಾರತವು ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ದೇಶ ಇಂದು ದುರಂತದತ್ತ ಸಾಗುತ್ತಿದೆ. ಬೆರಳೆಣಿಕೆಯಷ್ಟು ದೊಡ್ಡ ಉದ್ಯಮಿಗಳು ಇಡೀ ದೇಶವನ್ನು ನಿಯಂತ್ರಿಸುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವನ್ನು ಈಸ್ಟ್ ಇಂಡಿಯಾ ಕಂಪನಿ ನಿಯಂತ್ರಿಸುತ್ತಿತ್ತು. ಇಂದು ಇಡೀ ಭಾರತವನ್ನು 3-4 ದೊಡ್ಡ ಕಂಪನಿಗಳು ನಿಯಂತ್ರಿಸುತ್ತಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ಭಾರತದ ತ್ರಿವರ್ಣ ಧ್ವಜ ಪ್ರತಿಯೊಂದು ರಾಜ್ಯ ಮತ್ತು ಭಾಷೆಗೆ ಸೇರಿದೆ. ಆದರೆ ಇಂದು ತ್ರಿವರ್ಣ ಧ್ವಜವು ಧರ್ಮ, ಭಾಷೆಯ ಆಧಾರದ ಮೇಲೆ ಭಾರತವನ್ನು ವಿಭಜಿಸುತ್ತಿರುವ ಬಿಜೆಪಿ ಮತ್ತು ಆರ್ಎಸ್ಎಸ್ನ ದಾಳಿಗೆ ಒಳಗಾಗುತ್ತಿದೆ. ನಾವು ಆಯ್ಕೆ ಮಾಡಿಕೊಂಡ ಧರ್ಮವನ್ನು ಆಚರಿಸುವಂತೆ ನಮ್ಮತ್ರಿವರ್ಣ ಧ್ವಜ ಹೇಳುತ್ತದೆ. ಆದರೆ ಇಂದು ಹಾಗೆ ಹೇಳುವ ಧ್ವಜ ದಾಳಿಗೆ ಒಳಗಾಗಿದೆ” ಎಂದಿದ್ದಾರೆ.
“ಬಿಜೆಪಿಯವರು ಸಿಬಿಐ, ಇಡಿ ಹಾಗೂ ಐಟಿ ಬಳಸಿ ಪ್ರತಿಪಕ್ಷಗಳನ್ನು ಹೆದರಿಸಬಹುದು ಎಂದು ಭಾವಿಸುತ್ತಾರೆ. ಸಮಸ್ಯೆಯೆಂದರೆ ಅವರು ಭಾರತೀಯರನ್ನು ಅರ್ಥಮಾಡಿಕೊಂಡಿಲ್ಲ. ಒಬ್ಬ ವಿಪಕ್ಷ ನಾಯಕನೂ ಬಿಜೆಪಿಗೆ ಹೆದರುವುದಿಲ್ಲ”ಎಂದು ರಾಹುಲ್ ಗಾಂಧಿ ಹೇಳಿದರು.
LIVE: Launch of the #BharatJodoYatra | Kanyakumari | Tamil Nadu https://t.co/jleOIeqQuF
— Rahul Gandhi (@RahulGandhi) September 7, 2022
ಐಕ್ಯ ಭಾರತದ ಉದ್ದೇಶದೊಂದಿಗೆ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೆ ಬರೋಬ್ಬರಿ 3,570 ಕಿ.ಮೀ ಹೆಜ್ಜೆಹಾಕುವ ಭಾರತ್ ಜೋಡೋ ಯಾತ್ರೆಯನ್ನು (ಭಾರತ ಐಕ್ಯತಾ ಯಾತ್ರೆ) ಸೆಪ್ಟಂಬರ್ 07ರಿಂದ ಆರಂಭವಾಗಿದ್ದು, ಸುಮಾರು 148 ದಿನಗಳ ನಡೆಯಲಿದೆ. ಈ ಯಾತ್ರೆಗೆ ಉತ್ತಮ ಸ್ಪಂದನೆ ದೊರೆತಿದ್ದು ಕಾಂಗ್ರೆಸ್ ಮಾತ್ರವಲ್ಲದೆ ಇತರ ಪಕ್ಷಗಳ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರ ಸಹ ಬೆಂಬಲ ಘೋಷಿಸಿದ್ದಾರೆ.
4 ತಿಂಗಳುಗಳ ಕಾಲ ನಡೆಯುವ ಸುಧೀರ್ಘ ಪಾದಯಾತ್ರೆಯಲ್ಲಿ ಪ್ರತಿ ದಿನ 25 ಕಿ.ಮೀ ನಡೆಯುವ ಗುರಿ ಹೊಂದಲಾಗಿದ್ದು, 12 ರಾಜ್ಯಗಳು ಮತ್ತು 02 ಕೇಂದ್ರಾಡಳಿತ ಪ್ರದೇಶಗಳನ್ನು ಯಾತ್ರೆ ತಲುಪಲಿದೆ. ಕರ್ನಾಟಕದಲ್ಲಿ 21 ದಿನಗಳ ಕಾಲ ಯಾತ್ರೆ ನಡೆಯಲಿದ್ದು, ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸ್ವಾಗತಿಸಿ ರಾಯಚೂರು ಜಿಲ್ಲೆ ನಂತರ ತೆಲಂಗಾಣಕ್ಕೆ ಕಳಿಸಿಕೊಡಲಾಗುತ್ತದೆ ಎನ್ನಲಾಗಿದೆ.
“ಈ ಯಾತ್ರೆ ನನಗೆ ತಪಸ್ಸು ಇದ್ದಂತೆ. ಭಾರತವನ್ನು ಒಟ್ಟುಗೂಡಿಸುವುದು ಧೀರ್ಘಾವಧಿ ಹೋರಾಟ ಎಂಬುದು ನನಗೆ ತಿಳಿದಿದೆ ಮತ್ತು ಅದಕ್ಕೆ ನಾನು ತಯಾರಾಗಿದ್ದೇನೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
“ಹೆಜ್ಜೆಗಳು ಜೊತೆಗೂಡಲಿ, ದೇಶ ಒಂದಾಗಲಿ” ಎಂಬ ಟ್ಯಾಗ್ಲೈನ್ನೊಂದಿಗೆ ನಡೆಯುವ ಈ ಯಾತ್ರೆಯ ಹಲವು ಕಾರ್ಯಕ್ರಮಗಳಿಗೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರ ಜೊತೆಗೂಡಲಿದ್ದಾರೆ ಎನ್ನಲಾಗಿದೆ.
ಯಾತ್ರೆಯು ತಿರುವಂತನಪುರಂ, ಕೊಚ್ಚಿ, ನಿಲಾಂಬುರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕಾರಾಬಾದ್, ನಾಂದೇಡ್, ಜಾಲಗೂನ್, ಇಂದೋರ್, ಕೋಟಾ, ದುಸ್ಸಾ, ಅಲ್ವರ್, ಬುಲಂದಶಹರ್, ದೆಹಲಿ, ಅಂಬಾಲ, ಜಮ್ಮುಗಳಲ್ಲಿ ಬಹಿರಂಗ ಸಮಾವೇಶಗಳನ್ನು ನಡೆಸುವುದರ ಜೊತೆಗೆ ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಯಾತ್ರೆಯ ಸಮಾರೋಪ ನಡೆಯಲಿದೆ.
3500 ಕಿಲೋಮೀಟರ್ಗಳು, ಲಕ್ಷಾಂತರ ಜನ ಒಂದೇ ಗುರಿಯೊಂದಿಗೆ ಭಾರತವನ್ನು ಒಂದುಗೂಡಿಸಲು ಜೊತೆಯಾಗಿ ಹೆಜ್ಜೆ ಹಾಕಲಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 'ಭಾರತ್ ಜೋಡೋ ಯಾತ್ರೆ'ಯ ಮಾರ್ಗ ನಕ್ಷೆ.#BharatJodoYatra pic.twitter.com/SGoTlHNED2
— Karnataka Congress (@INCKarnataka) August 25, 2022
ಪಾದಯಾತ್ರೆಗೆ ವಿವಿಧ ಪಕ್ಷದ ಮುಖಂಡರ ಬೆಂಬಲ
ಹಿರಿಯ ಚಿಂತಕ, ರಾಜಕೀಯ ತಜ್ಞ, ಸ್ವರಾಜ್ಯ ಇಂಡಿಯಾ ಪಕ್ಷ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರಾಗಿರುವ ಯೋಗೇಂದ್ರ ಯಾದವ್, ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತರಾದ ಅರುಣಾ ರಾಯ್, ಕನ್ನಡದ ಮಹತ್ವದ ಲೇಖಕರು, ಚಿಂತಕರು ಮತ್ತು ಹೋರಾಟಗಾರರಾದ ದೇವನೂರ ಮಹದೇವ, ಭಾಷಾ ತಜ್ಞರು ಮತ್ತು ಸಾಂಸ್ಕೃತಿಕ ಚಿಂತಕರಾದ ಜಿ.ಎನ್ ದೇವಿಯವರು ಭಾರತ್ ಜೋಡೊ ಯಾತ್ರೆ ಜೊತೆ ಕೈಜೋಡಿಸಿದ್ದಾರೆ.
ಅಲ್ಲದೆ ಸಫಾಯಿ ಕರ್ಮಚಾರಿಗಳ ಪರ ಹೋರಾಟ ನಡೆಸಿದ ಬೆಜವಾಡ ವಿಲ್ಸನ್, ಗಾಂಧಿ ಶಾಂತಿ ಪ್ರತಿಷ್ಠಾನದ ಪಿ.ವಿ ರಾಜಗೋಪಾಲ್, ನಿವೃತ್ತ ಐಎಎಸ್ ಅಧಿಕಾರಿ ಶಾರದ್ ಬೆಹರ್, ಮಹಿಳಾವಾದಿ ಹೋರಾಟಗಾರ್ತಿ ಸೈದಾ ಹಮೀದ್, ಆರ್ಟಿಐ ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ಸೇರಿದಂತೆ ಹಲವರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ರಾಹುಲ್ ಜೊತೆ 100 ಪಾದಯಾತ್ರಿಗಳು ಆರಂಭದಿಂದ ಅಂತ್ಯದವರೆಗೂ ಹೆಜ್ಜೆ ಹಾಕಲಿದ್ದಾರೆ. ಅವರನ್ನು ಭಾರತ್ ಯಾತ್ರಿಗಳು ಎಂದು ಕರೆಯಲಾಗುತ್ತದೆ. ಅಲ್ಲದೆ ಈ ಯಾತ್ರೆ ಯಾವ ರಾಜ್ಯಗಳನ್ನು ತಲುಪುದಿಲ್ಲವೋ ಅಂತಹ ರಾಜ್ಯಗಳಿಂದ ತಲಾ 100 ಜನ ಅತಿಥಿ ಪಾದಯಾತ್ರಿಗಳು ಸಹ ಸೇರಿಕೊಳ್ಳಲಿದ್ದಾರೆ. ಅಲ್ಲದೆ ಪ್ರತಿ ರಾಜ್ಯದ 100 ಪಾದಯಾತ್ರಿಗಳು ಆಯಾ ರಾಜ್ಯದಲ್ಲಿ ಯಾತ್ರೆ ನಡೆಯುವ ಸಂದರ್ಭದಲ್ಲಿ ಜೊತೆಗಿರುತ್ತಾರೆ. ಒಟ್ಟಾರೆಯಾಗಿ ಸ್ಥಳೀಯ ಜನರು, ಹೋರಾಟಗಾರರ ಜೊತೆಗೆ 300 ಜನ ಪಾದಯಾತ್ರಿಗಳು ಪ್ರತಿ ದಿನ ನಡೆಯಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ದೇಶದಲ್ಲಿ ದ್ವೇಷ ಹರಡಲಾಗುತ್ತಿದೆ. ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನವನ್ನ ಅಪಮಾನಿಸಲಾಗುತ್ತಿದೆ. ಇದನ್ನು ವಿರೋಧಿಸುತ್ತಾ ಆರ್ಥಿಕ ಅಸಮಾನತೆ ನಿವಾರಣೆಗಾಗಿ, ಸಾಮಾಜಿಕ ದ್ರುವೀಕರಣ ತಪ್ಪಿಸಲು ಭಾರತವನ್ನು ಐಕ್ಯ ದೇಶವನ್ನಾಗಿ ಕಟ್ಟಲು ಭಾರತ್ ಜೋಡೋ ಯಾತ್ರೆ ನಡೆಸಲಾಗುತ್ತಿದೆ ಎಂದು ಸಂಸದರಾದ ಜೈರಾಂ ರಮೇಶ್ ತಿಳಿಸಿದ್ದಾರೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಅಥವಾ ರಾಹುಲ್ ಗಾಂಧಿಯವರ ಪಾದಯಾತ್ರೆಯಲ್ಲ ಬದಲಿಗೆ ದೇಶದ ಒಳಿತಿಗಾಗಿ ನಡೆಯುತ್ತಿರುವ ಸರ್ವರ ಯಾತ್ರೆ ಎಂದು ಅವರು ಹೇಳಿದ್ದಾರೆ.
150 ಸಂಘಟನೆಗಳು ಬೆಂಬಲ
ಭಾರತ್ ಜೋಡೋ ಯಾತ್ರೆಗೆ ವಿವಿಧ ಪಕ್ಷಗಳು ಸೇರಿದಂತೆ 150 ಸಂಘಟನೆಗಳು, ವ್ಯಕ್ತಿಗಳು ಬೆಂಬಲ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಸಮಾಜದ ವಿವಿಧ ವರ್ಗದ ಜನ ದೇಶದ ಉಳಿವಿಗಾಗಿ ಜೊತೆಗೂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ; ಬೆಂಗಳೂರು ವಿ.ವಿ ಕ್ಯಾಂಪಸ್ನೊಳಗೆ ದೇವಸ್ಥಾನ ನಿರ್ಮಾಣದ ವಿರುದ್ಧ ಭಾರಿ ಪ್ರತಿಭಟನೆ


