ದೇಶದ ಆಳುವ ಸರಕಾರಗಳು ನವ ಉದಾರವಾದಿ ನೀತಿಗಳ ಏಜೆಂಟರಂತೆ, ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಜನಗಳು ದಿವಾಳಿ ಆಗುತ್ತಿದ್ದು, ದೇಶದ ಮುಖ್ಯ ವಾಹಿನಿ ಮಾಧ್ಯಮಗಳ ದೊಡ್ಡ ವಿಭಾಗವೂ ಇದಕ್ಕೆ ಬೆಂಬಲ ನೀಡುತ್ತಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್’ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ತಮನ್ ಸೇನ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸಿಐಟಿಯು ಅಖಿಲ ಭಾರತ ಸಮ್ಮೇಳನ ಬೆಂಗಳೂರಿನ ಅರಮನೆ ಮೈದಾನದ, ‘ರಂಜನ ನಿರುಲಾ ಮತ್ತು ರಘುನಾಥ್ ಸಿಂಗ್’ ವೇದಿಕೆಯಲ್ಲಿ ನಡೆಯುತ್ತಿದ್ದು, ಸಮ್ಮೇಳನದ ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮ ಬುಧವಾರ ನೆರವೇರಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ತಪನ್ ಸೇನ್, “ದೇಶದ ಆಳುವ ಸರಕಾರಗಳು ನವ ಉದಾರವಾದಿ ನೀತಿಗಳ ಏಜೆಂಟರಂತೆ ವರ್ತಿಸುತ್ತಾ, ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಜನರು ದಿವಾಳಿಯಾಗುತ್ತಿದ್ದಾರೆ. ಸರ್ಕಾರದ ಈ ನಡೆಗೆ ದೇಶದ ಮುಖ್ಯ ವಾಹಿನಿ ಮಾಧ್ಯಮಗಳ ದೊಡ್ಡ ವಿಭಾಗ ಕೂಡಾ ಬೆಂಬಲ ನೀಡುತ್ತಿದೆ” ಎಂದು ಅವರು ಹೇಳಿದರು.
ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಳ್ಳುತ್ತಾ, ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಸರಕಾರದ ವಿಷಕಾರಿ ನೀತಿಗಳ ಪರಿಣಾಮಗಳ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ ಎಂದು ಅವರು ಹೇಳಿದರು.
“ಆಳುವ ಸರ್ಕಾರವು ಜನರ ಒಗ್ಗಟ್ಟನ್ನು ಮುರಿಯುವ ವಿಭಜನಕಾರಿ ನೀತಿಗಳನ್ನು ಹೇರುತ್ತಾ ಸಮಾಜದ ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡಹುತ್ತಿದೆ. ದೇಶದ ಹಿತಾಸಕ್ತಿಗೆ ಮತ್ತು ದುಡಿಯುವ ವರ್ಗದ ಹಿತಗಳಿಗೆ ವಿರುದ್ಧವಾಗಿ ಇಂತಹ ಕ್ರಿಮಿನಲ್ ದಾಳಿಗಳನ್ನು ನಡೆಸುತ್ತಿರುವ ಸರಕಾರವನ್ನು ರೈತ-ಕಾರ್ಮಿಕ ಐಕ್ಯ ಚಳುವಳಿಯ ಮೂಲಕ ಅಧಿಕಾರದಿಂದ ಕಿತ್ತೆಸೆಯಲಾಗುವುದು” ಎಂದು ತಿಳಿಸಿದ ತಪನ್ ಸೇನ್ ಪ್ರತಿಜ್ಞೆ ಮಾಡಿದರು.
“ಈ ನಿಟ್ಟಿನಲ್ಲಿ ಕಾರ್ಮಿಕ ಹೋರಾಟಗಳನ್ನು ಬಲಪಡಿಸುವ ಕುರಿತು ಸಿಐಟಿಯು ಸಂಘಟನೆಯ 17 ನೇ ಅಖಿಲ ಭಾರತ ಸಮ್ಮೇಳನವು ಗಂಭೀರವಾಗಿ ಚರ್ಚಿಸಲಿದೆ. ದೇಶದ ಹತ್ತು ಪ್ರಮುಖ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಒಂದುಗೂಡಿ ಕಾರ್ಮಿಕರ ಹಕ್ಕುಗಳು, ರೈತರ ಹಕ್ಕುಗಳು ಮಾತ್ರವಲ್ಲ. ದೇಶದ ರಕ್ಷಣೆಗಾಗಿ ದೇಶವಿರೋಧಿ ಕುತಂತ್ರಗಳ ವಿರುದ್ಧ ಹೋರಾಟ ರೂಪಿಸಲಿವೆ” ಎಂದು ಅವರು ಹೇಳಿದರು.
“ಇತ್ತೀಚಿನ ಎರಡು ದಿನಗಳ ದೇಶವ್ಯಾಪಿ ಯಶಸ್ವಿ ಮುಷ್ಕರ ಈ ಹೋರಾಟದ ಭಾಗವಾಗಿದೆ. ನಾಲ್ಕು ವರ್ಷಗಳ ಹೋರಾಟದ ಅನುಭವವು, ವಿದ್ಯುತ್, ಕಲ್ಲಿದ್ದಲು ಸೇರಿದಂತೆ ಹಲವು ಕ್ಷೇತ್ರದಲ್ಲಿ ಸರಕಾರದ ಧೋರಣೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದು ತೋರಿಸಿಕೊಟ್ಟಿದೆ. ನವ ಉದಾರೀಕರಣ ನೀತಿಗಳ ಸವಾಲು ಕೇವಲ ಕಾರ್ಮಿಕ ವರ್ಗಕ್ಕೆ ಮಾತ್ರ ಸೀಮಿತವಲ್ಲ. ಇದು ಇಡೀ ಮನುಕುಲದ ಮುಂದಿನ ಸವಾಲಾಗಿದ್ದು, ಪ್ರಜಾಸತ್ತಾತ್ಮಕ ಸಮಾಜಕ್ಕೆ ಮಾರಕ” ಎಂದು ಅವರು ಪ್ರತಿಪಾದಿಸಿದರು.
“ಕೆಲವು ಸ್ವದೇಶಿ ಮತ್ತು ವಿದೇಶಿ ಕಾರ್ಪೋರೇಟ್ ಹಿತರಕ್ಷಣೆಗಾಗಿ, ವಿಶಾಲ ಜನ ಸಮುದಾಯಗಳ ಜನರ ಹಿತ ಬಲಿ ಕೊಡಲಾಗುತ್ತಿದೆ. ದೇಶದ ಕಾರ್ಮಿಕ ಚಳುವಳಿಯ ಸರಕಾರವು ದೇಶವನ್ನು ಮಾರಲು ಅವಕಾಶ ನೀಡಲಾಗದು” ಎಂದು ತಪನ್ ಸೇನ್ ಹೇಳಿದರು.
ಉದ್ಘಾಟನಾ ಸಮಾರಂಭದ ಸಭೆಯಲ್ಲಿ ಮಾತನಾಡಿದ ಸಿಐಟಿಯು ಅಖಿಲ ಭಾರತ ಅಧ್ಯಕ್ಷೆ ಡಾ. ಕೆ. ಹೇಮಲತಾ,“ಭಾರತದಲ್ಲಿ ಹೆಚ್ಚುತ್ತಿರುವ ಅಸಮಾನತೆ, ಸಂಪತ್ತಿನ ಕೇಂದ್ರೀಕರಣ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ವರ್ಗದ ಐಕ್ಯ ಹೋರಾಟವನ್ನು ಬಲಗೊಳಿಸಲಾಗುವುದು” ಎಂದು ಹೇಳಿದರು.
ಕೇಂದ್ರ ಸರ್ಕಾರ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ: ಐಎನ್ಟಿಯುಸಿ
ಐಎನ್ಟಿಯುಸಿ ಮುಖಂಡ ಚಂದ್ರಶೇಖರನ್ ಮಾತನಾಡಿ, “ಕೇಂದ್ರ ಸರ್ಕಾರ ದೇಶದ ಅರ್ಥ ವ್ಯವಸ್ಥೆಗೆ ಭಾರಿ ಹಾನಿಯುಂಟು ಮಾಡಿದ್ದು, ಪ್ರತಿಯೊಂದು ಸಮುದಾಯವನ್ನು ವಿಭಜಿಸುತ್ತಿದೆ. ಈ ಹಿಂದಿನ ಸರ್ಕಾರಗಳು ಮಾಡಿದ ಯೋಜನೆಗಳನ್ನು ಸ್ಥಗಿತಗೊಳಿಸಿದೆ” ಎಂದು ಹೇಳಿದರು.
ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳಿಂದ ಕಾರ್ಮಿಕ ವರ್ಗ ಇಂದು ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ದೇಶವನ್ನು ಕೋಮುವಾದ ಆವರಿಸಿದೆ. ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಇದ್ದ 26 ಕಾನೂನುಗಳನ್ನು ಬದಲಾವಣೆ ಮಾಡಿ ನಾಲ್ಕು ನೀತಿ ಸಂಹಿತೆಗಳನ್ನಾಗಿ ಮಾಡಲಾಗಿದೆ. ಇದರಿಂದ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ದೇಶವಿರೋಧಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಟೀಕಿಸಿದರು.
ನಿರುದ್ಯೋಗದ ಪ್ರಮಾಣ ದಿನೇದಿನೇ ಏರಿಕೆ ಕಂಡಿದೆ: ಎಐಟಿಯುಸಿ
ಎಐಟಿಯುಸಿಯ ಅಮರ್ಜಿತ್ ಕೌರ್ ಮಾತನಾಡಿ, ದೇಶದಲ್ಲಿ ಇಂದಿನ ಪರಿಸ್ಥಿತಿ ತುಂಬಾ ವಿಷಮವಾಗಿದ್ದು, ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ದಿನಗೂಲಿ ನೌಕರರು ಉದ್ಯೋಗ ಸಿಗದೆ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ನಿರುದ್ಯೋಗದ ಪ್ರಮಾಣ ದಿನೇದಿನೇ ಏರಿಕೆ ಕಂಡಿದೆ. ಹಾಗಿದ್ದರೂ ಕೇಂದ್ರ ಸರ್ಕಾರ ಖಾಸಗೀಕರಣದ ಹಾದಿಯನ್ನು ಕೈಬಿಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.