ದೇಶದ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರನ್ನು “ಎರಡನೇ ದರ್ಜೆಯ” ಪ್ರಜೆಗಳನ್ನಾಗಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರ ಆರೋಪಿಸಿದ್ದು, ಅವರ ಹಕ್ಕುಗಳು ಮತ್ತು ಆಸ್ತಿಗಳನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಮುಸ್ಲಿಮರನ್ನು ‘ಎರಡನೇ ದರ್ಜೆಯ’ ಪ್ರಜೆ
ಲೋಕಸಭೆಯಲ್ಲಿ ‘ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ’ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ಅಸಮಾನತೆಯನ್ನು ಬೆಳೆಸುವ ಮತ್ತು ತಳ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಮುಸ್ಲಿಮರನ್ನು ‘ಎರಡನೇ ದರ್ಜೆಯ’ ಪ್ರಜೆ
“ಈ ಸಂವಿಧಾನವು ನಮ್ಮ ರಕ್ಷಾಕವಚ, ನಮ್ಮ ಭದ್ರತೆ, ಇದು ನಮಗೆ ಅಗತ್ಯವಿರುವಾಗ ಶಕ್ತಿಯನ್ನು ನೀಡುತ್ತದೆ. ಸಂವಿಧಾನವು ತುಳಿತಕ್ಕೊಳಗಾದ, ನಿರ್ಲಕ್ಷಿಸಲ್ಪಟ್ಟ, ದಮನಕ್ಕೊಳಗಾದ ಮತ್ತು ವಂಚಿತರ ಹಕ್ಕುಗಳ ನಿಜವಾದ ಕಾವಲುಗಾರ. ನಮ್ಮಂತಹ ಜನರಿಗೆ ಮತ್ತು ದೇಶದ ದುರ್ಬಲರಿಗೆ, ವಿಶೇಷವಾಗಿ ಪಿಡಿಎ (ಪಿಚ್ಡೆ, ದಲಿತ ಮತ್ತು ಅಲ್ಪಸಂಖ್ಯಾತ) ಸಮುದಾಯಗಳು ಸಂವಿಧಾನವನ್ನು ಉಳಿಸುವುದು ಅವರ ಜೀವನ್ಮರಣದ ವಿಷಯವಾಗಿದೆ,” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸರ್ಕಾರವು ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿರುವ ಅವರು, ಅವರ ಹಕ್ಕುಗಳು ಮತ್ತು ಆಸ್ತಿಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. “20 ಕೋಟಿಗೂ ಹೆಚ್ಚು ಜನರು, ವಿಶೇಷವಾಗಿ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲಾಗುತ್ತಿದೆ. ಅವರ ವಿರುದ್ಧದ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಅವರ ಆಸ್ತಿಗಳನ್ನು ಲೂಟಿ ಮಾಡಲಾಗುತ್ತಿದೆ, ಮನೆಗಳನ್ನು ಕೆಡವಲಾಗುತ್ತಿದೆ ಮತ್ತು ಆಡಳಿತಾತ್ಮಕ ಸಹಾಯದಿಂದ ಪೂಜಾ ಸ್ಥಳಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ” ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಜಾತಿ ಗಣತಿಯ ಕರೆಯನ್ನು ಪುನರುಚ್ಚರಿಸಿದ ಅವರು, ಸಾಮಾಜಿಕ ಅಂತರವನ್ನು ಕಡಿಮೆ ಮಾಡಲು ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸಲು ಇದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ. ಜಾತಿ ಗಣತಿಯು ಜಾತಿ ವಿಭಜನೆ ಮಾಡುವುದಿಲ್ಲ, ಬದಲಾಗಿ ಅವುಗಳನ್ನು ಕಡಿಮೆ ಮಾಡುತ್ತದೆ. ಇದು ದೀರ್ಘಕಾಲದಿಂದ ವಂಚಿತರಾದವರಿಗೆ ಹಕ್ಕುಗಳು ಮತ್ತು ಸಮಾನತೆಯನ್ನು ಖಾತರಿಪಡಿಸುತ್ತದೆ ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿಯು ಅತ್ಯಂತ ಮಹತ್ವದ ಸಾಧನವಾಗಿದ್ದು, ಆದರೆ ಅದನ್ನು ಹೊರಗುತ್ತಿಗೆ ಮತ್ತು ಗುತ್ತಿಗೆ ಆಧಾರಿತ ಉದ್ಯೋಗಗಳ ಮೂಲಕ ದುರ್ಬಲಗೊಳಿಸಲಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ದೇಶದ ಆರ್ಥಿಕ ಅಸಮಾನತೆಯ ವಿಷಯದ ಬಗ್ಗೆ ಮತ್ತು ಹಿಂದುಳಿದವರ ದುಃಸ್ಥಿತಿಯನ್ನು ಎತ್ತಿ ತೋರಿಸಿದ ಅಖಿಲೇಶ್ ಅವರು, “140 ಕೋಟಿ ಜನರಲ್ಲಿ, 82 ಕೋಟಿ ಜನರು ತಮ್ಮ ಉಳಿವಿಗಾಗಿ ಸರ್ಕಾರಿ ಪಡಿತರವನ್ನು ಅವಲಂಬಿಸಿದ್ದಾರೆ. ದೇಶವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಹೆಮ್ಮೆಪಡುತ್ತಿದ್ದೇವೆ, ಆದರೆ ವಾಸ್ತವವು ಸಂಪೂರ್ಣವಾಗಿ ವಿಭಿನ್ನವಾಗಿದೆ. ರಾಷ್ಟ್ರದ ಮೂರನೇ ಎರಡರಷ್ಟು ಸಂಪತ್ತು ಕೆಲವರ ಕೈಯಲ್ಲಿ ಕೇಂದ್ರೀಕೃತವಾಗಿದೆ. ಸರಕಾರಕ್ಕೆ ಧೈರ್ಯವಿದ್ದರೆ ಬಡತನ ರೇಖೆಗಿಂತ ಕೆಳಗಿರುವವರ ತಲಾ ಆದಾಯವನ್ನು ಬಹಿರಂಗಪಡಿಸಬೇಕು’’ ಎಂದರು.
ಸರ್ಕಾರ ಭಯ ಮತ್ತು ಆಡಳಿತದ ಅತಿರೇಕದ ಮೂಲಕ ಚುನಾವಣೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. “ಉತ್ತರ ಪ್ರದೇಶ ಚುನಾವಣೆಯ ಸಂದರ್ಭದಲ್ಲಿ (ಇತ್ತೀಚಿನ ಒಂಬತ್ತು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಗಳು), ಅನೇಕರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಯಿತು. ಮಹಿಳೆಯರಿಗೆ ಬೆದರಿಕೆ ಹಾಕಲಾಯಿತು ಮತ್ತು ಪೊಲೀಸ್ ಅಧಿಕಾರಿಗಳು ಬಹಿರಂಗವಾಗಿ ರಿವಾಲ್ವರ್ಗಳೊಂದಿಗೆ ಅವರನ್ನು ಬೆದರಿಸಿದರು. ಆದರೂ, ಆ ಧೀರ ಮಹಿಳೆಯರು ಬೆದರಿಕೆಯನ್ನು ಧಿಕ್ಕರಿಸಿ ಮತ ಚಲಾಯಿಸಿದರು. ಇದು ನಾವು ವಾಸಿಸುತ್ತಿರುವ ಪ್ರಜಾಪ್ರಭುತ್ವವೆ?” ಅವರು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವದ ತತ್ವಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಎಚ್ಚರಿಕೆ ನೀಡಿದ ಅವರು, “ಈ ವ್ಯವಸ್ಥೆಯು ಸರ್ವಾಧಿಕಾರದತ್ತ ವೇಗವಾಗಿ ಸಾಗುತ್ತಿದೆ. ಹಿಟ್ಲರ್ ಕೂಡ ದಬ್ಬಾಳಿಕೆಯನ್ನು ಸ್ಥಾಪಿಸಲು ಚುನಾಯಿತರಾದ ನಂತರ ಸಂವಿಧಾನವನ್ನು ತಿದ್ದುಪಡಿ ಮಾಡಿದ್ದ. ನಮ್ಮ ಸರ್ಕಾರವು ಅದೇ ಹಾದಿಯಲ್ಲಿ ಸಾಗುತ್ತಿದೆ” ಎಂದು ಅವರು ಹೇಳಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಸರ್ಕಾರ ಜಾರಿ ಮಾಡಿರುವ ಅಗ್ನಿಪಥ್ ಯೋಜನೆಯನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ | VVPAT ಸ್ಲಿಪ್ಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ


