ಕೇಂದ್ರ ತನಿಖಾ ದಳ (ಸಿಬಿಐ) ತಮ್ಮ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ, ವಲಯಾರ್ನಲ್ಲಿ ಮೃತಪಟ್ಟ ಬಾಲಕಿಯರ ಪೋಷಕರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಬಾಲಕಿಯರ ಸಾವಿನ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆಯೂ ಅವರು ನ್ಯಾಯಾಲಯವನ್ನು ಕೋರಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ಕೋರಿ ನ್ಯಾಯಾಲಯ ಸಿಬಿಐಗೆ ನೋಟಿಸ್ ನೀಡಿದೆ.
ಸಿಬಿಐ ನಡೆಸಿದ ಹೆಚ್ಚಿನ ತನಿಖೆಯಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಪಕ್ಷಪಾತದ ಮತ್ತು ಕೇವಲ ಬಾಹ್ಯ ಪರಿಗಣನೆಯ ತನಿಖೆ ನಡೆಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ಸಿಬಿಐಗೆ ಸ್ಪಷ್ಟತೆಯಿಲ್ಲ ಎಂದು ಹೇಳಿದ್ದಾರೆ.
ಆರೋಪಿಗಳಾದ ಪ್ರದೀಪ್, ಮಧು ಅಲಿಯಾಸ್ ಕುಟ್ಟಿ ಮಧು ಮತ್ತು ಶಂಕಿತ ಜಾನ್ ಪ್ರವೀಣ್ ಅವರ ಅನುಮಾನಾಸ್ಪದ ಸಾವಿನ ಬಗ್ಗೆಯೂ ಯಾವುದೇ ತನಿಖೆ ನಡೆದಿಲ್ಲ ಎಂದು ಪೋಷಕರು ಹೇಳಿದ್ದಾರೆ.
ಜಾನ್ ಪ್ರವೀಣ್ ಅವರ ಮರಣೋತ್ತರ ಪರೀಕ್ಷೆಯಲ್ಲಿ ದೇಹದ ಪ್ರಮುಖ ಭಾಗಗಳಲ್ಲಿ ಗಂಭೀರವಾದ ಗಾಯಗಳು ಕಂಡುಬಂದಿವೆ, ಅದರಲ್ಲಿ ಛೇದಿತ ಗಾಯಗಳೂ ಸೇರಿವೆ ಎಂದಿದ್ದಾರೆ.
ಅರ್ಜಿದಾರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ, ತಾರ್ಕಿಕ ಆಧಾರದ ಮೇಲೆ ಅಲ್ಲ. ಕೆಲವು ಸಾಕ್ಷಿಗಳ ಹೇಳಿಕೆಗಳು ವಿಶ್ವಾಸಾರ್ಹತೆ ಇಲ್ಲದ ಕಾರಣ, ತನಿಖಾಧಿಕಾರಿಯು ಅರ್ಜಿದಾರೇ ಅಪರಾಧಗಳು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಅರ್ಜಿದಾರರು ಮತ್ತು ಆರೋಪಿಗಳ ನಡುವೆ ಸಂಬಂಧ ಕಲ್ಪಿಸಲಾಗಿದೆ. ಸಿಬಿಐ ಈ ಘೋರ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಿ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ತನಿಖೆ ವೇಳೆ ಕೆಲವೊಂದು ಅಂಶಗಳನ್ನು ಉಲ್ಲೇಖಿಸಿದೆ ಎಂದು ಹೇಳಿದ್ದಾರೆ.
ಏನಿದು ವಲಯಾರ್ ಸಹೋದರಿಯರ ಸಾವು?
ಕೇರಳದ ಪಾಲಕ್ಕಾಡ್ ಜಿಲ್ಲೆಯ ವಲಯಾರ್ ಪ್ರದೇಶದ 13 ಮತ್ತು 9 ವರ್ಷದ ಇಬ್ಬರು ಆದಿವಾಸಿ ಸಹೋದರಿಯರ ಅನುಮಾನಾಸ್ಪದ ಸಾವು ಪ್ರಕರಣವನ್ನು ‘ವಲಯಾರ್ ಸಹೋದರಿಯರ ಸಾವು’ ಎಂದು ಹೇಳಲಾಗುತ್ತದೆ.
ಈ ಪ್ರಕರಣದಲ್ಲಿ 13 ವರ್ಷದ ಬಾಲಕಿ ಜನವರಿ 13, 2017 ರಂದು ಆಕೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದಾಗಿ ಎರಡು ತಿಂಗಳ ಬಳಿಕ, ಅಂದರೆ ಮಾರ್ಚ್ 14ರಂದು 9 ವರ್ಷದ ಆಕೆಯ ತಂಗಿ ಕೂಡ ಅದೇ ಜಾಗದಲ್ಲಿ, ಅದೇ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಶವಪರೀಕ್ಷೆಯ ವರದಿಗಳು ಇಬ್ಬರೂ ಹುಡುಗಿಯರು ಸಾಯುವ ಮುನ್ನ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ದೃಢಪಡಿಸಿತ್ತು. ಈ ವಿಷಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು ಮತ್ತು ಬಾಲಕಿಯರಿಗೆ ನ್ಯಾಯಕ್ಕಾಗಿ ವ್ಯಾಪಕ ಪ್ರತಿಭಟನೆಗಳು ನಡೆದಿತ್ತು.
ಆರಂಭದಲ್ಲಿ, ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸಿ, ದೀರ್ಘಕಾಲದ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಂಡ ನಂತರ ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.
ಒಬ್ಬ ಬಾಲಾಪರಾಧಿ ಸೇರಿದಂತೆ ಐವರ ಮೇಲೆ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಿದ್ದರು.
ಆದಾಗ್ಯೂ, 2019 ರಲ್ಲಿ, ಪಾಲಕ್ಕಾಡ್ನ ವಿಶೇಷ ಪೋಕ್ಸೊ ನ್ಯಾಯಾಲಯವು ಸಾಕಷ್ಟು ಸಾಕ್ಷ್ಯಗಳು ಇಲ್ಲ ಎಂದು ಉಲ್ಲೇಖಿಸಿ, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದು ಸಾರ್ವಜನಿಕರಲ್ಲಿ ಮತ್ತೆ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು.
ಸಾರ್ವಜನಿಕರ ಆಕ್ರೋಶ, ಸಂತ್ರಸ್ತ ಬಾಲಕಿಯರ ತಾಯಿ ಮತ್ತು ಕೇರಳ ಸರ್ಕಾರದ ಮೇಲ್ಮನವಿಗಳ ಕಾರಣ, ಕೇರಳ ಹೈಕೋರ್ಟ್ ಪ್ರಕರಣದಲ್ಲಿ ಮಧ್ಯಪ್ರವೇಶಿಸಿತ್ತು. ಜನವರಿ 2021ರಲ್ಲಿ, ಪ್ರಕರಣದ ಮರುವಿಚಾರಣೆಗೆ ಆದೇಶಿಸಿತ್ತು. ನಂತರ ಮಾರ್ಚ್ 2021ರಲ್ಲಿ, ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಯನ್ನು ವಹಿಸಿಕೊಳ್ಳುವಂತೆ ನಿರ್ದೇಶಿಸಿತ್ತು.
ಸಿಬಿಐನ ಆರಂಭಿಕ ತನಿಖೆಯು ಪೊಲೀಸರು ಹೇಳಿದ್ದನ್ನೇ ಹೇಳಿತ್ತು. ಡಿಸೆಂಬರ್ 2021ರಲ್ಲಿ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಹುಡುಗಿಯರು ದೀರ್ಘಕಾಲದ ಲೈಂಗಿಕ ದೌರ್ಜನ್ಯ ಎದುರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿತ್ತು. ಆದಾಗ್ಯೂ, ಸಂತ್ರಸ್ತರ ತಾಯಿ ಇದನ್ನು ಪ್ರಶ್ನಿಸಿದ್ದರು. ಕೊಲೆ ಆರೋಪ ಮಾಡಿದ್ದರು. ಆಗಸ್ಟ್ 2022ರಲ್ಲಿ, ಪಾಲಕ್ಕಾಡ್ ಪೋಕ್ಸೊ ನ್ಯಾಯಾಲಯ ಸಿಬಿಐನ ಆರೋಪಪಟ್ಟಿಯನ್ನು ತಿರಸ್ಕರಿಸಿ, ಮರುತನಿಖೆಗೆ ಆದೇಶಿಸಿತ್ತು.
ಪ್ರಕರಣದ ಪ್ರಸ್ತುತ ಸ್ಥಿತಿ (ಮಾರ್ಚ್ 25, 2025 ರಂತೆ)
ಜನವರಿ 2025 : ಸಿಬಿಐ ಪೂರಕ ಆರೋಪಪಟ್ಟಿ ಸಲ್ಲಿಸಿತ್ತು. ಗಮನಾರ್ಹವಾಗಿ ಬಾಲಕಿಯರ ಪೋಷಕರನ್ನೇ ಆರೋಪಿಗಳೆಂದು ಹೆಸರಿಸಿತ್ತು. ಅವರ ಮೇಲೆ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಮರೆಮಾಚಿದ ಆರೋಪ ಹೊರಿಸಿ ಎರ್ನಾಕುಲಂನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ನಂತರ ಸಿಬಿಐ ಕೋರಿಕೆಯ ಮೇರೆಗೆ ಪ್ರಕರಣವನ್ನು 2024ರಲ್ಲಿ ಪಾಲಕ್ಕಾಡ್ ಪೋಕ್ಸೊ ನ್ಯಾಯಾಲಯದಿಂದ ವರ್ಗಾಯಿಸಲಾಯಿತು.
ಫೆಬ್ರವರಿ 2025 : ಸಿಬಿಐನ ಹಿಂದಿನ ತನಿಖಾ ವರದಿಯು ಬಾಲಕಿಯರ ಸಾವು ಆತ್ಮಹತ್ಯೆ ಎಂಬುವುದನ್ನು ಸಮರ್ಥಿಸಿಕೊಂಡಿತ್ತು. ಬಾಲಕಿಯರ ಶವ ದೊರೆತ ಸ್ಥಳದ ಪರಿಶೀಲನೆ ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಕೊಲೆ ಆರೋಪ ತಳ್ಳಿಹಾಕಿತ್ತು. ವೈದ್ಯಕೀಯ ಮಂಡಳಿ ಮತ್ತು ವಿಧಿವಿಜ್ಞಾನ ತಜ್ಞರು ಇದನ್ನು ಬೆಂಬಲಿಸಿದ್ದರು. ಆದಾಗ್ಯೂ, ಈ ವರದಿಯನ್ನು ಬಾಲಕಿಯ ಪೋಷಕರು ಮತ್ತು ಹೋರಾಟಗಾರರು ವಿರೋಧಿಸಿದ್ದಾರೆ.
ಪ್ರಸ್ತುತ ಪ್ರಕರಣವು ಎರ್ನಾಕುಲಂನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಪೋಷಕರನ್ನು ಆರೋಪಿಗಳಾಗಿ ಹೆಸರಿಸಿರುವುದು ಪ್ರಕರಣದ ಸಂಕೀರ್ಣತೆಯನ್ನು ಹೆಚ್ಚಿಸಿದೆ ಮತ್ತು 2022ರಲ್ಲಿ ಆದೇಶಿಸಲಾದ ಮರುತನಿಖೆ ಇನ್ನೂ ಪ್ರಗತಿಯಲ್ಲಿದೆ.
ಸಂತ್ರಸ್ತರ ತಾಯಿ ಸೇರಿದಂತೆ ನ್ಯಾಯಕ್ಕಾಗಿ ಹೋರಾಡುತ್ತಿರುವ ‘ವಲಯಾರ್ ನೀದಿ ಸಮರ ಸಮಿದಿ’ 2019 ಮತ್ತು 2023 ರ ನಡುವೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ವ್ಯಕ್ತಿಗಳ (ಇಬ್ಬರು ಆರೋಪಿಗಳು ಮತ್ತು ಒಬ್ಬ ಶಂಕಿತ) ಅನುಮಾನಾಸ್ಪದ ಸಾವುಗಳನ್ನು ಗಮನದಲ್ಲಿಟ್ಟುಕೊಂಡು, ಸಮಗ್ರ ತನಿಖೆಗೆ ಒತ್ತಾಯಿಸುತ್ತಲೇ ಇದೆ. ಇವರೆಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.
ಇಂದಿನವರೆಗೆ, ಅಂದರೆ ಮಾರ್ಚ್ 25, 2025ರವರೆಗೂ ಈ ಪ್ರಕರಣ ಇತ್ಯರ್ಥವಾಗದೆ ಉಳಿದಿದೆ. ಸಿಬಿಐನ ಮರುತನಿಖೆ ಮುಂದುವರೆದಿದ್ದು, ನ್ಯಾಯಾಲಯ ಇನ್ನೂ ಅಂತಿಮ ತೀರ್ಪು ನೀಡಿಲ್ಲ. ವ್ಯವಸ್ಥಿತ ವೈಫಲ್ಯಗಳು ಮತ್ತು ಮುಚ್ಚಿಹಾಕುವಿಕೆಯ ಆರೋಪಗಳ ನಡುವೆಯೂ, ಪ್ರಕರಣದ ಸತ್ಯ ಬಹಿರಂಗವಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಜನರು ಆಗ್ರಹಿಸುತ್ತಲೇ ಇದ್ದಾರೆ.
‘ಭೂ ಜಿಹಾದ್’ ಆರೋಪ: ಭೋಪಾಲ್ನ ಮೂರು ಅಂತಸ್ತಿನ ಮಸೀದಿ ಕೆಡವಲು ಹಿಂದುತ್ವ ಗುಂಪುಗಳ ಒತ್ತಾಯ


