ಗುವಾಹಾಟಿ: ಅಸ್ಸಾಂನಲ್ಲಿ ಹೆಚ್ಚುತ್ತಿರುವ ಮಾನವೀಯ ದುರಂತಕ್ಕೆ ಕೇಂದ್ರ ಸರ್ಕಾರ ತಕ್ಷಣ ಧ್ವನಿ ನೀಡಬೇಕು. ಧುಬ್ರಿ ಮತ್ತು ಗೋಲ್ಪಾರಾ ಜಿಲ್ಲೆಗಳಲ್ಲಿ ನಡೆದ ತೆರವು ಕಾರ್ಯಾಚರಣೆಗಳಿಂದ ಸಾವಿರಾರು ಮುಸ್ಲಿಂ ಕುಟುಂಬಗಳು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಎಂದು ಜಮಿಯತ್ ಉಲಮಾ-ಎ-ಹಿಂದ್ (JUH) ನ ಸತ್ಯಶೋಧನಾ ವರದಿಯು ಬಹಿರಂಗಪಡಿಸಿದೆ. ಇದು ‘ಮಾನವೀಯ ಮತ್ತು ಸಾಂವಿಧಾನಿಕ ಬಿಕ್ಕಟ್ಟು’ ಎಂದು JUH ಬಣ್ಣಿಸಿದ್ದು, ತಕ್ಷಣದ ಕೇಂದ್ರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದೆ.
JUH ಅಧ್ಯಕ್ಷ ಮೌಲಾನಾ ಮಹ್ಮದ್ ಮದನಿ ಅವರಿಗೆ ಸಲ್ಲಿಸಲಾದ ವರದಿಯು ಅಸ್ಸಾಂ ಪರಿಸ್ಥಿತಿಯನ್ನು ‘ಅಮಾನವೀಯ’ ಮತ್ತು ಇದು ವಸಾಹತುಶಾಹಿ ಕಾಲದ ಮುತ್ತಿಗೆಯ ದಮನಕಾರಿ ಸ್ವರೂಪವನ್ನು ನೆನಪಿಸುತ್ತದೆ ಎಂದು ವಿವರಿಸಿದೆ.
ಅಸ್ಸಾಂನಲ್ಲಿ ಆಘಾತಕಾರಿ ಪೊಲೀಸ್ ದೌರ್ಜನ್ಯ: ಜುಲೈ 17ರಂದು ಗೋಲ್ಪಾರಾ ಜಿಲ್ಲೆಯ ಅಶುಡುಬಿ ಗ್ರಾಮದಲ್ಲಿ ಹಸಿವಿನಿಂದ ಬಳಲುತ್ತಿದ್ದ, ನಿರಾಯುಧ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, 17 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಜುಲೈ 12ರ ತೆರವು ಕಾರ್ಯಾಚರಣೆಯಿಂದ ನಿರಾಶ್ರಿತನಾಗಿದ್ದ ಈ ಬಾಲಕ, ಆಹಾರಕ್ಕಾಗಿ ಪ್ರತಿಭಟಿಸುತ್ತಿದ್ದಾಗ ಗುಂಡೇಟಿಗೆ ಬಲಿಯಾಗಿದ್ದಾನೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ‘ಇದು ಮಾರಣಾಂತಿಕ ಮತ್ತು ಸಂಪೂರ್ಣ ಅಸಮರ್ಥನೀಯ ಪ್ರತಿಕ್ರಿಯೆ’ ಎಂದು JUH ವರದಿ ಹೇಳಿದೆ.

ಆಘಾತಕಾರಿ ವರದಿ: ಅಸ್ಸಾಂನಲ್ಲಿ ಭಾರೀ ಸ್ಥಳಾಂತರದ ಜೊತೆಗೆ ಪರಿಹಾರ ಕಾರ್ಯಾಚರಣೆಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಧುಬ್ರಿ ಜಿಲ್ಲೆಯ ಚರಕಾತ್ರಾ, ಸಂತೋಷಪುರ ಮತ್ತು ಚರವಬಕ್ರಾ ಗ್ರಾಮಗಳಿಂದ 5,700 ನೋಂದಾಯಿತ ಮತದಾರರು ಸೇರಿದಂತೆ 20,000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು JUH ವರದಿ ತಿಳಿಸಿದೆ. ಬ್ರಹ್ಮಪುತ್ರ ನದಿಯ ಮರಳದಿಬ್ಬಗಳಲ್ಲಿ ಶುದ್ಧ ನೀರು, ಆಶ್ರಯ, ಮತ್ತು ನೈರ್ಮಲ್ಯವಿಲ್ಲದೆ ಲಕ್ಷಾಂತರ ಜನರು ಪರದಾಡುತ್ತಿದ್ದಾರೆ. ಈ ಪ್ರದೇಶಗಳ ಮೇಲೆ ಅಸ್ಸಾಂ ಸರ್ಕಾರವು ನಿರ್ದಯವಾಗಿ ಮುತ್ತಿಗೆಯನ್ನು ಹೇರಿದೆ ಎಂದು ನಿಯೋಗ ಗಂಭೀರ ಆರೋಪ ಮಾಡಿದೆ. ಕೈಪಂಪ್ಗಳು, ಶೌಚಾಲಯಗಳನ್ನು ನಾಶಪಡಿಸಿದ್ದು ಮಾತ್ರವಲ್ಲದೆ, ಪರಿಹಾರ ತಲುಪಿಸುತ್ತಿದ್ದ ಎನ್ಜಿಒಗಳು ಮತ್ತು ಜಮಿಯತ್ ತಂಡಕ್ಕೂ ಪ್ರವೇಶ ನಿರಾಕರಿಸಲಾಗಿದೆ ಎಂದು ವರದಿ ಹೇಳಿದೆ.

ಸೌರಶಕ್ತಿ ಯೋಜನೆ ನೆಪದಲ್ಲಿ ಕಾರ್ಪೊರೇಟ್ ಬೆಂಬಲಿತ ಭೂಕಬಳಿಕೆ!: ಜಮಿಯತ್ನ ವರದಿಯ ಪ್ರಕಾರ, ಈ ಕಾರ್ಯಾಚರಣೆಗಳ ನಿಜವಾದ ಉದ್ದೇಶ ‘ಬಡ ಮುಸ್ಲಿಮರನ್ನು ಸ್ಥಳಾಂತರಿಸುವುದು ಮತ್ತು ಭೂಮಿಯನ್ನು ಕಬಳಿಸುವುದು’ ಮಾತ್ರವಾಗಿದೆ. ಈ ಸ್ಥಳಾಂತರವು ಪರಿಸರ ಅಥವಾ ಅಭಿವೃದ್ಧಿಯ ಉದ್ದೇಶದಿಂದ ನಡೆಯುತ್ತಿಲ್ಲವೆಂದು ಅದು ಹೇಳಿದೆ. ‘ಮತದಾರರ ಗುರುತಿನ ಚೀಟಿಗಳು ಮತ್ತು ಭೂ ದಾಖಲೆಗಳನ್ನು ಹೊಂದಿರುವ ಭಾರತೀಯ ನಾಗರಿಕರಿಗೆ ವಿದೇಶಿಯರು ಎಂದು ಹಣೆಪಟ್ಟಿ ಕಟ್ಟಿ ಅಸ್ಸಾಂನ ಮುಸ್ಲಿಮರನ್ನು ಅಮಾನವೀಯಗೊಳಿಸುವ ಮತ್ತು ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ದೊಡ್ಡ ಅಭಿಯಾನದ ಭಾಗವಾಗಿ ಈ ಸ್ಥಳಾಂತರ ನಡೆಯುತ್ತಿದೆ ಎಂದು JUH ವರದಿ ತೀವ್ರವಾಗಿ ಖಂಡಿಸಿದೆ.
JUH ವರದಿಯ ತುರ್ತು ಬೇಡಿಕೆಗಳು:
ಜಮಿಯತ್ ಉಲಮಾ-ಎ-ಹಿಂದ್ (JUH) ಕೇಂದ್ರ ಸರ್ಕಾರಕ್ಕೆ ಈ ಕೆಳಗಿನ ನಿರ್ಣಾಯಕ ಬೇಡಿಕೆಗಳನ್ನು ಮುಂದಿಟ್ಟಿದೆ:
*ಅಸ್ಸಾಂ ಬಿಕ್ಕಟ್ಟಿಗೆ ಕೇಂದ್ರದ ತಕ್ಷಣದ ಮಧ್ಯಪ್ರವೇಶಕ್ಕೆ ಆಗ್ರಹ
*ಸ್ಥಳಾಂತರಗೊಂಡ ಕುಟುಂಬಗಳಿಗೆ ತಕ್ಷಣದ ಮಾನವೀಯ ನೆರವು ಒದಗಿಸುವುದು
*ನೆರವು ಸಂಸ್ಥೆಗಳು ಮತ್ತು ಪತ್ರಕರ್ತರಿಗೆ ತಕ್ಷಣ ಪ್ರವೇಶ ರಸ್ತೆಗಳನ್ನು ಪುನಃ ತೆರೆಯುವುದು
*ಜುಲೈ 17ರ ಗುಂಡಿನ ದಾಳಿಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ನ್ಯಾಯಾಂಗ ಕ್ರಮ ಜರುಗಿಸುವುದು
*ಮೃತಪಟ್ಟವರ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದು
*ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಪರ್ಯಾಯ ಭೂಮಿಯಲ್ಲಿ ಸಂಪೂರ್ಣ ಪುನರ್ವಸತಿ ಕಲ್ಪಿಸುವುದು
*ಎಲ್ಲಾ ಮುಂದಿನ ತೆರವು ಕಾರ್ಯಾಚರಣೆಗಳನ್ನು ತಕ್ಷಣ ನಿಲ್ಲಿಸಿ ಮತ್ತು ‘ಬಾಂಗ್ಲಾದೇಶಿ’ ಎಂಬ ತಪ್ಪು ಹಣೆಪಟ್ಟಿಯನ್ನು ಹಿಂತೆಗೆದುಕೊಳ್ಳುವುದು
*ತೆರವು ಕಾರ್ಯಾಚರಣೆಗಳು ಮತ್ತು ಪೊಲೀಸ್ ಅತಿರೇಕಗಳ ಬಗ್ಗೆ ಸಮಗ್ರ ನ್ಯಾಯಾಂಗ ವಿಚಾರಣೆಗೆ ಆದೇಶಿಸುವುದು
JUH ಪ್ರಧಾನ ಕಾರ್ಯದರ್ಶಿ ಮೌಲಾನಾ ಹಕೀಮುದ್ದೀನ್ ಖಾಸ್ಮಿ ನೇತೃತ್ವದ ನಿಯೋಗವು ಅಸ್ಸಾಂನ ಮುಸ್ಲಿಮರ ವಿರುದ್ಧದ ‘ಉದ್ದೇಶಿತ ಅಭಿಯಾನ’ವನ್ನು ಖಂಡಿಸಿದೆ. ಈ ವಿಷಯವನ್ನು ರಾಷ್ಟ್ರೀಯ ವೇದಿಕೆಗಳು, ನ್ಯಾಯಾಂಗ ಮತ್ತು ನಾಗರಿಕ ಸಮಾಜಕ್ಕೆ ಕೊಂಡೊಯ್ಯಲು ಜಮಿಯತ್ ತಂಡ ದೃಢ ಪ್ರತಿಜ್ಞೆ ಮಾಡಿದೆ. ‘ಇದು ಸ್ಥಳೀಯ ದುರಂತವಲ್ಲ, ರಾಷ್ಟ್ರೀಯ ತುರ್ತುಸ್ಥಿತಿ. ನ್ಯಾಯ ದೊರೆಯುವವರೆಗೂ ನಾವು ಹೋರಾಡುತ್ತೇವೆ’ ಎಂದು JUH ಪ್ರತಿನಿಧಿಯೊಬ್ಬರು ಘೋಷಿಸಿದ್ದಾರೆ.
UAPA ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಬಾಂಬೆ ಹೈಕೋರ್ಟ್; ಕಾನೂನು ಹೋರಾಟಕ್ಕೆ ಭಾರಿ ಹಿನ್ನಡೆ


