Homeಕರ್ನಾಟಕಜಸ್ಟೀಸ್ ನಾಗಮೋಹನ್ ದಾಸ್ ವರದಿ ಅಂಗೀಕರಿಸುವಂತೆ ‌ʼಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರʼ ಸಭೆಯಲ್ಲಿ ಏಕ ನಿರ್ಣಯ

ಜಸ್ಟೀಸ್ ನಾಗಮೋಹನ್ ದಾಸ್ ವರದಿ ಅಂಗೀಕರಿಸುವಂತೆ ‌ʼಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರʼ ಸಭೆಯಲ್ಲಿ ಏಕ ನಿರ್ಣಯ

- Advertisement -
- Advertisement -

ಬೆಂಗಳೂರು: ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ಜಾರಿ ಸಂಬಂಧ ಜಸ್ಟೀಸ್ ನಾಗಮೋಹನ್ ಅವರು ಸರ್ಕಾರಕ್ಕೆ ನೀಡಿರುವ ವರದಿಯನ್ನು ಆಗಸ್ಟ್ 16ರ ಸಭೆಯಲ್ಲಿ ಸರ್ಕಾರ ಅಂಗೀಕರಿಸಿ ಜಾರಿಗೊಳಿಸಬೇಕು ಎಂದು ‌ʼಸಾಮಾಜಿಕ ನ್ಯಾಯಕ್ಕಾಗಿ ಸಮಾನ ಮನಸ್ಕರುʼ ಸಭೆಯಲ್ಲಿ ಏಕ ನಿರ್ಣಯ ಕೈಗೊಳ್ಳಲಾಯಿತು.

ಬೆಂಗಳೂರಿನ ಶಾಸಕರ ಭವನದಲ್ಲಿ ಬುಧವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಹಿರಿಯ ಸಾಹಿತಿಗಳು, ಚಿಂತಕರು, ಶಿಕ್ಷಣ ತಜ್ಞರು, ದಲಿತ ಚಳವಳಿಯ ಮುಖಂಡರು, ಪ್ರಾಧ್ಯಾಪಕರು, ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿ ಸಂಘಟನೆಗಳ ನಾಯಕರು ಹಾಗೂ ಒಳಮೀಸಲಾತಿ ಪರ ಹೋರಾಟಗಾರರು ಭಾಗವಹಿಸಿದ್ದರು.

ನಾಗಮೋಹನ್ ದಾಸ್ ವರದಿಯಲ್ಲಿ ತಾಂತ್ರಿಕವಾಗಿ ಸಮಸ್ಯೆ ಇದ್ದರೂ ತಾತ್ವಿಕವಾಗಿ ಸರಿ ಇದೆ: ಕೋಟಿಗಾನಹಳ್ಳಿ ರಾಮಯ್ಯ

ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ಸಮಿತಿ ನೀಡಿರುವ ಪರಿಶಿಷ್ಟ ಜಾತಿ (ಎಸ್‌ಸಿ) ಒಳಮೀಸಲಾತಿ ವರದಿಯಲ್ಲಿ ತಾಂತ್ರಿಕವಾಗಿ ಏನೇ ಸಮಸ್ಯೆ ಇದ್ದರೂ, ಅದು ತಾತ್ವಿಕವಾಗಿ ಸರಿ ಇದೆ ಎಂದು ಹಿರಿಯ ಸಾಹಿತಿಗಳಾದ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಒಳಮೀಸಲಾತಿ ಜಾರಿ ಕುರಿತು ಬೆಂಗಳೂರಿನ ಶಾಸಕರ ಭವನದಲ್ಲಿ ಬುಧವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಇಂತಹದ್ದೊಂದು ಚಾರಿತ್ರಿಕ ಸಂದರ್ಭದಲ್ಲಿ ನಾಗರಿಕ ಸಮಾಜಕ್ಕೆ ಪ್ರತಿಕ್ರಿಯಿಸಬೇಕಾದ ಹೊಣೆಗಾರಿಕೆ ಇದೆ. ಈ ಬಗ್ಗೆ ಪರ-ವಿರೋಧ ಇದೆ ಎನ್ನುವ ಬಗ್ಗೆ ನನಗೆ ಒಮ್ಮತ. ಒಳಮೀಸಲಾತಿ ಕುರಿತು ನಮಗೆ ಖಚಿತವಾದ ನಿಲುವು ಇರಬೇಕು. ಆದ್ದರಿಂದ, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು. “ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸುಟ್ಟು ಪ್ರತಿಭಟನೆ ಮಾಡುವುದನ್ನು ನೋಡುತ್ತಿದ್ದರೆ ದುರಾದೃಷ್ಟ ಎನಿಸುತ್ತದೆ. ನಮ್ಮ ಸಂವಿಧಾನದ ಆಶಯವೇ ಭ್ರಾತೃತ್ವ; ಅದಕ್ಕೂ ನಮಗೂ ಸಂಬಂಧ ಇಲ್ಲವೇನೋ ಎಂಬ ಮನಸ್ಥಿತಿಯನ್ನು ನಾನು ಕಾಣುತ್ತಿದ್ದೇನೆ. ಎಲ್ಲ ಪಕ್ಷಗಳ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ನಾಟಕ ಆಡುತ್ತಿದ್ದಾರೆ. ವರದಿ ಜಾರಿಗೆ ವಿಳಂಬಕ್ಕಾಗಿಯೂ ಕೆಲಸ ನಡೆಯುತ್ತಿದೆ” ಎಂದರು.

“ಒಳಮೀಸಲಾತಿ ಆಶಯದಲ್ಲಿ ತಪ್ಪಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಜನಸಂಖ್ಯೆಯ ಆಧಾರದಲ್ಲಿ ಸವಲತ್ತು ತೆಗೆದುಕೊಳ್ಳಬೇಕು ಎಂಬ ವಾದ ಸರಿ ಇದೆ. ಆದರೆ, ಅದು ಸಜಾತೀಯವಾಗಿಲ್ಲ. ನಾವು ಸಂಖ್ಯೆಯನ್ನೇ ನೋಡುವುದಾದರೆ, ಇದರಲ್ಲಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಬಾಬಾ ಸಾಹೇಬ ಅಂಬೇಡ್ಕರ್ ಅವರೂ ಕೂಡ ಇದರ ಬಗ್ಗೆ ಮಾತನಾಡಿದ್ದಾರೆ. ಜಸ್ಟೀಸ್ ನಾಗಮೋಹನ್ ದಾಸ್ ಕೂಡ, ʼನಾವು ಊಟ ಮಾಡುವಾಗ, ಉಣ್ಣದೇ ಇರುವವರ ತಟ್ಟೆಗೂ ತುತ್ತು ಹೋಗಬೇಕುʼ ಎಂದು ಹೇಳಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಲು ಯಾವ ಕಾನೂನು ಬೇಕಾಗಿಲ್ಲ. ನಮ್ಮ ಸಮುದಾಯಗಳನ್ನು ದತ್ತಾಂಶಕ್ಕೆ ಇಳಿಸಿರುವುದು ಸರಿಯಾದ ಕ್ರಮವಲ್ಲ. ವೈಯಕ್ತಿಕವಾಗಿ ನನ್ನ ಅಭಿಪ್ರಾಯದಲ್ಲಿ, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಇದರಲ್ಲಿ ತಾಂತ್ರಿಕವಾಗಿ ಏನೇ ತಪ್ಪುಗಳಿದ್ದರೂ, ತಾತ್ವಿಕವಾಗಿ ಸರಿ ಇದೆ” ಎಂದು ಅವರು ಒಳಮೀಸಲಾತಿ ಜಾರಿಗೆ ಒತ್ತಾಯಿಸಿದ್ದರು.

ಪ್ರಸ್ತಾವಿಕ ಮಾತುಗಳನ್ನಾಡಿದ ಡಾ. ರವಿಕುಮಾರ್ ಬಾಗಿ, “ಒಳಮೀಸಲಾತಿ ಸಂಬಂಧ ಈವರೆಗೆ ಆಗಿರುವ ಜಸ್ಟೀಸ್ ಸದಾಶಿವ ಹಾಗೂ ಮಾಧುಸ್ವಾಮಿ ವರದಿಗೆ ಹೋಲಿಸಿದರೆ, ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿ ಬಹುತೇಕರಿಗೆ ಒಪ್ಪಿತವಾಗಿದೆ. ಆದ್ದರಿಂದ, ಕೂಡಲೇ ಒಳಮೀಸಲಾತಿ ಜಾರಿ ಮಾಡಬೇಕು. ಆ ಮೂಲಕ ತಳ ಸಮುದಾಯಗಳಿಗೆ ಹಾಗೂ ವಂಚಿತ ಸಮುದಾಯಗಳಿಗೆ ಅವಕಾಶ ಕಲ್ಪಿಸಿಕೊಡಬೇಕು” ಎಂದು ಹೇಳಿದರು.

“ಅಲಕ್ಷಿತ ಸಮುದಾಯಗಳ ನೋವು ಏನು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ನಮ್ಮ ನೋವು ಅವರಿಗೆ ಗೊತ್ತಿರುವುದರಿಂದ ಸಮುದಾಯದ ಮುಖಂಡರ ಸಭೆ ಕರೆದು ಒಮ್ಮತದಿಂದ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಲು ಸಮಾನಮನಸ್ಕರ ಸಭೆ ಕರೆದಿದ್ದೇವೆ. ಯಾರಿಗೆ ಹೆಚ್ಚಿನ ಅನ್ಯಾಯ ಆಗಿದೆಯೋ ಅವರಿಗೆ ಸ್ವಲ್ಪ ಹೆಚ್ಚಿನ ಪಾಲು ಸಿಗಲಿ, ಇದೇ ಸಾಮಾಜಿಕ ನ್ಯಾಯ. ಇದನ್ನು ಪ್ರತಿಪಾದಿಸುವುದೇ ನಿಜವಾದ ಅಂಬೇಡ್ಕರ್ ವಾದ. ಈ ನಡೆಯುತ್ತಿರುವ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.

“ಒಳಮೀಸಲಾತಿ ಜಾರಿಗೆ ಯಾವ ರೀತಿಯ ಒತ್ತಡ ಹೇರಬಹುದೋ ಅದರ ದಾರಿಗಳನ್ನು ನಾವು ಹುಡುಕಬೇಕು. ಆ ಕೆಲಸವನ್ನು ಈಗಾಗಲೇ ಹಲವರು ಮಾಡುತ್ತಿದ್ದಾರೆ. ಆದರೆ, ಒಳಮೀಸಲಾತಿ ಜಾರಿ ಆಗಲೇಬೇಕು ಎಂಬ ಕಾರಣಕ್ಕೆ ನಾವು ಕೆಲಸ ಮಾಡಬೇಕು. ನಾವೆಲ್ಲರೂ ಹಂಚಿ ಉಣ್ಣುವುದಕ್ಕೆ ತಯಾರಿದ್ದ ಮೇಲೆ ಸ್ವಲ್ಪ ವ್ಯತ್ಯಾಸಗಳಾಗಬಹುದು. ವರದಿಯಲ್ಲಿ ಸಮಸ್ಯೆಗಳನ್ನು ಮುಂದೆ ಸರಿಪಡಿಸಿಕೊಳ್ಳೋಣ, ಸರ್ಕಾರ ಕೂಡಲೇ ವರದಿಯನ್ನು ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.

ಚಿಂತಕರಾದ ಪ್ರೊ. ಸಿ.ಜಿ. ಲಕ್ಷ್ಮಿಪತಿ ಮಾತನಾಡಿ, “ಜಸ್ಟೀಸ್ ನಾಗಮೋಹನ್ ದಾಸ್ ಅವರು ಸಾಕಷ್ಟು ದತ್ತಾಂಶ ಸಂಗ್ರಹಿಸಿ ವರದಿ ತಯಾರಿಸಿದ್ದಾರೆ. ಯಾವುದೇ ಸಮೀಕ್ಷೆಗಳು ಶೇಕಡ ನೂರರಷ್ಟು ಸರಿ ಇರುವುದಿಲ್ಲ. ವರದಿ ವಿರೋಧಿಸುತ್ತಿರುವವರು ಊಹಾತ್ಮಕ ವಿಚಾರಗಳನ್ನು ಕೈಬಿಡಬೇಕು, ವರದಿಯಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಇದೆ” ಎಂದರು.

“ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳೂ ಒಗ್ಗಟ್ಟಿನಿಂದ ಒಳಮೀಸಲಾತಿ ಜಾರಿಗೆ ಒತ್ತಾಯಿಸಬೇಕು. ಏಕೆಂದರೆ, ಇದೇ ಸಂದರ್ಭವನ್ನು ಬಳಸಿಕೊಂಡು ಕೋಮುವಾದಿ ಶಕ್ತಿಗಳು ದಲಿತ ಹಾಗೂ ತಳ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕ ಪ್ರಚಾರ ನಡೆಸಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ನಾವೂ ಕೂಡ ಒಂದಷ್ಟು ಕೆಲಸ ಮಾಡಬೇಕು. ಒಳಮೀಸಲಾತಿ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ನಾವು ಟ್ರೆಂಡ್ ಸೃಷ್ಟಿಸಬೇಕು. ನಮ್ಮ ತಂತ್ರ ಮೇಲುಗೈ ಸಾಧಿಸಿದರೆ ವರದಿ ಜಾರಿಗೆ ವಿರೋಧಿಸುತ್ತಿರುವವರನ್ನು ನಿಯಂತ್ರಣಕ್ಕೆ ತರಬಹುದು” ಎಂದು ಸಲಹೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಹುಲಿಕುಂಟೆ ಮೂರ್ತಿ, “ಈ ಸಭೆಯಲ್ಲಿ ಹೊಲೆಯರು, ಮಾದಿಗರು, ಒಕ್ಕಲಿಗರು, ಲಂಬಾಣಿ ಮತ್ತು ಭೋವಿ ಸೇರಿದಂತೆ ಎಲ್ಲ ಸಮುದಾಯದವರೂ ಇದ್ದಾರೆ. ನಾವೆಲ್ಲರೂ ದಲಿತ ಚಳವಳಿ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದೇವೆ. ಒಳಮೀಸಲಾತಿ ವಿವಾದವನ್ನು ಮುಂದಿಟ್ಟುಕೊಂಡು ಸಮುದಾಯಗಳನ್ನು ಒಡೆಯುವುದಕ್ಕೆ ಕೋಮುವಾದಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಅದಕ್ಕಾಗಿ ನಮ್ಮಲ್ಲೇ ಕೆಲವರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಭುತ್ವ ಯಾವಾಗ ಬದಲಾಗುತ್ತದೆ ಎಂಬುದನ್ನು ನಾವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಒಂದು ಒತ್ತಡದ ಗುಂಪಾಗಿ ನಾವು ಇಲ್ಲಿ ಸೇರಿದ್ದೇವೆ. 16ರಂದು ಸರ್ಕಾರ ಸಭೆ ನಡೆಸಲಿದೆ, ಅದಕ್ಕೆ ನಾವು ಸಾಕಷ್ಟು ಒತ್ತಡ ಹೇರಬೇಕಾಗಿದೆ” ಎಂದರು.

ಶಿಕ್ಷಣ ತಜ್ಞರಾದ ಬಿ. ಶ್ರೀಪಾದ್ ಭಟ್ ಮಾತನಾಡಿ, “ಕುಂಬಾರರ ಅನುಸೂಯಮ್ಮ ಅವರಿಗೆ ಆದ ಅನ್ಯಾಯದ ವಿರುದ್ಧ ದಲಿತ ಸಮುದಾಯ ಜಾತಿ ನೋಡದೆ ಹೋರಾಟ ಮಾಡಿತ್ತು. ಆದರೆ, ಸಮುದಾಯದೊಳಗಿನ ಅಪನಂಬಿಕೆ ಸರಿಯಲ್ಲ. ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆ ಜಾರಿ ಆಗಿಯೇ ಆಗುತ್ತದೆ. ಆದರೆ, ಮೊದಲು ಸಮುದಾಯಗಳ ಒಳಗಿನ ಅಪನಂಬಿಕೆಯನ್ನು ದೂರ ಮಾಡುವ ಕೆಲಸವನ್ನು ನಾವು ಮಾಡಲೇಬೇಕು. ಅದರ ನೇತೃತ್ವವನ್ನು ಸಮುದಾಯದ ಹಿರಿಯರು ವಹಿಸಿಕೊಳ್ಳಬೇಕು; ಒಂದು ಸಮಿತಿ ರಚನೆ ಆಗಬೇಕು” ಎಂದು ಸಲಹೆ ನೀಡಿದರು.

“ಪರಿಶಿಷ್ಟ ಜಾತಿಯೊಳಗಿನ ಅತಿ ಹಿಂದುಳಿದ ವರ್ಗದವರಿಗೂ ಪಾಲು ಸಿಗಬೇಕು. ವರದಿಯ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಎಸ್‌ಸಿ- ಎಸ್‌ಟಿ ಆಯೋಗ ಇದೆ. ಆದರೆ, ಅದಕ್ಕೆ ಈವರೆಗೆ ಅಧ್ಯಕ್ಷರ ನೇಮಕ ಆಗಿಲ್ಲ. ನೋಡಲ್ ಏಜೆನ್ಸಿಯಾಗಿ ಅದಕ್ಕೆ ಎಲ್ಲ ಸಾಂವಿಧಾನಿಕ ಅಧಿಕಾರವಿದೆ. ಬಹಿರಂಗವಾಗಿ ವರದಿಯನ್ನು ಸುಟ್ಟು ಟೀಕೆ ಮಾಡುವುದರಿಂದ ಮತ್ತಷ್ಟು ಅಪನಂಬಿಕೆ ಹುಟ್ಟುತ್ತದೆ. ಇದಕ್ಕಾಗಿ ನಾವೆಲ್ಲರೂ ರಾಜ್ಯದಾದ್ಯಂತ ಹೋರಾಡಿ ಕೆಲಸ ಮಾಡಬೇಕಿದೆ” ಎಂದು ಶ್ರೀಪಾದ್ ಭಟ್ ಹೇಳಿದರು.

ಹಿರಿಯ ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆ ಮಾತನಾಡಿ, “ಒಳಮೀಸಲಾತಿ ಮಾತ್ರವೇ ಸಮುದಾಯಗಳ ನಡುವೆ ಒಗ್ಗಟ್ಟು ತರುವುದಕ್ಕೆ ಸಾಧ್ಯ ಎಂದು ನಾವೆಲ್ಲರೂ ಹಿಂದಿನಿಂದಲೂ ಪ್ರತಿಪಾದಿಸಿದ್ದೇವೆ. ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ವರದಿಯೇ ಅಂತಿಮವಲ್ಲ. ಅದರಲ್ಲಿ ಸುಧಾರಿಸಬೇಕಾದ ಸಾಕಷ್ಟು ಅಂಶಗಳೂ ಇವೆ. ಆದರೆ, ಈವರೆಗೆ ಆಗಿರುವ ವರದಿಗಳಲ್ಲಿ ನಾಗಮೋಹನ್ ದಾಸ್ ವರದಿ ಬಹಳಷ್ಟು ಉತ್ತಮವಾಗಿದೆ. ಆದ್ದರಿಂದ, ಈ ವರದಿಯನ್ನು ನಾವು ಒಪ್ಪಿಕೊಳ್ಳಬಹುದು. ಸದಾಶಿವ ಹಾಗೂ ಮಾಧುಸ್ವಾಮಿ ವರದಿಗಳು ಸಾಕಷ್ಟು ಅವೈಜ್ಞಾನಿಕವಾಗಿ ಇದ್ದವು. ಆ ಸಾಲಿನಲ್ಲಿ ಇದನ್ನು ತೆಗೆದುಹಾಕುವಂತಹ ವರದಿ ಖಂಡಿತ ಅಲ್ಲ” ಎಂದರು. “ವರದಿಯಲ್ಲಿರುವ ಕೊರತೆಗಳನ್ನು ಸಾಕಷ್ಟು ಪಟ್ಟಿ ಮಾಡಬಹುದು, ಅದನ್ನು ಸರ್ಕಾರದ ಗಮನಕ್ಕೆ ತಂದು ಶಿಫಾರಸುಗಳನ್ನು ನೀಡೋಣ. ಸದಾಶಿವ ಆಯೋಗದ ವರದಿ ಬೇಡವೇ ಬೇಡ ಎಂಬ ಕೂಗು ಬಂದಿತ್ತು. ಆದರೆ, ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಸುಧಾರಣೆ ಬೇಕಿದ್ದರೆ ಕಾಲಮಿತಿಯೊಳಗೆ ಮಾಡಿಕೊಳ್ಳಬಹುದು. ಆದರೆ, ವರದಿ ಮಾತ್ರ ತಕ್ಷಣದಿಂದಲೇ ಜಾರಿ ಆಗಲೇಬೇಕು. ಜಾರಿ ಮುಂದೂಡಿದರೆ ಇಡೀ ಸಮುದಾಯಕ್ಕೆ ಅನ್ಯಾಯ ಮಾಡಿದಂತೆ ಆಗುತ್ತದೆ” ಎಂದರು.

ಪತ್ರಕರ್ತರಾದ ಡಾ. ವಾಸು ಮಾತನಾಡಿ, “ಒಳಮೀಸಲಾತಿ ಜಾರಿ ವಿಳಂಬ ಆಗಿರುವುದರಿಂದ ಇದೀಗ ಭಾವನಾತ್ಮಕ ವಿಷಯವಾಗಿದೆ; ಸಮುದಾಯದೊಳಗೆ ಅಪನಂಬಿಕೆ ಉಂಟಾಗಿದೆ. ಇನ್ನೂ ತಡವಾದರೆ ಅಪನಂಬಿಕೆ ಮತ್ತಷ್ಟು ಸ್ಫೋಟ ಆಗಲಿದೆ. ನಾನು ವರದಿಯನ್ನು ಸಂಪೂರ್ಣ ಓದಿದ್ದು, ಬಹುತೇಕ ನ್ಯಾಯಬದ್ಧವಾಗಿದೆ. ಸಮುದಾಯದೊಳಗಿನ ಆತಂಕ ಹಾಗೂ ಆಕ್ರೋಶವನ್ನು ನಾವು ಮತ್ತು ಸರ್ಕಾರ ಅರ್ಥ ಮಾಡಿಕೊಳ್ಳಬೇಕು” ಎಂದರು. “ಶನಿವಾರದ ಒಳಗೆ ಸರ್ಕಾರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಇಂದಿರಾ ಸಾಹನಿ ವರದಿ ಬಳಿಕ ಹಿಂದುಳಿದ ವರ್ಗಗಳ ಆಯೋಗಕ್ಕೆ ಮಾತ್ರ ಶಿಫಾರಸು ಮಾಡುವ ಅವಕಾಶ ಇದೆ. ಅದನ್ನು ಬದಲಾವಣೆ ಮಾಡುವ ಅವಕಾಶ ಯಾವಾಗಲೂ ಇದೆ. ಮುಂದೆ ನಮ್ಮ ಬೇಡಿಕೆ ಇದೇ ಆಗಿರಬೇಕು. ಶೋಷಿತ ಸಮುದಾಯಗಳ ನಡುವಿನ ಬಿರುಕು ಶಮನಕ್ಕೆ ಇದು ಸಕಾಲ. ಇಲ್ಲಿತನಕ ದಲಿತ ಸಮುದಾಯಗಳು ಬಹಳ ವಿವೇಕದಿಂದ ನಡೆದುಕೊಂಡಿವೆ. ಬಲಾಢ್ಯ ಜಾತಿಗಳಂತೆ ನಡೆದುಕೊಳ್ಳುವಂತೆ ವರ್ತಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಾತುಕತೆ ಇರಬಹುದು ಅಷ್ಟೇ. ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ, ನಾವು ಸಂಬಂಧಪಟ್ಟ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತನಾಡಬೇಕಿದೆ” ಎಂದರು.

ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, “ನಾಗಮೋಹನ್ ದಾಸ್ ಆಯೋಗದ ವರದಿ ಸರ್ಕಾರದ ಕೈಗೆ ಹೋಗಿರುವುದೇ ಚಾರಿತ್ರಿಕವಾದುದು, ಅದನ್ನು ನಾವೆಲ್ಲರೂ ಒಪ್ಪಿಕೊಂಡು ಪೋಷಿಸಬೇಕು; ಸಾಯಿಸಬಾರದು. ಪೋಷಣೆ ಮಾಡುತ್ತಲೇ ಅದರಲ್ಲಿರುವ ಸಣ್ಣಪುಟ್ಟ ಲೋಪದೋಷಗಳ ನಿವಾರಣೆ ಮಾಡಬೇಕು. ಸಮಸ್ಯೆಗಳಿದ್ದರೆ ಅದನ್ನು ಮುಂದಿನ ದಿನಗಳಲ್ಲಿ ಆಯೋಗ ರಚಿಸುವ ಮೂಲಕ ಪರಿಹರಿಸಬಹುದು” ಎಂದು ಕಿವಿಮಾತು ಹೇಳಿದರು. ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮಾವಳ್ಳಿ ಶಂಕರ್ ಮಾತನಾಡಿ, “ನಾಗಮೋಹನ್ ದಾಸ್ ಆಯೋಗ ನೀಡಿರುವ ಪ್ರವರ್ಗ ʼಎʼ- ʼಬಿʼ ಹಾಗೆಯೇ ಉಳಿಸಿಕೊಳ್ಳಬೇಕು. ʼಇʼ ಅಲ್ಲಿರುವ ಎಕೆ- ಎಡಿ ಅನ್ನು ʼಸಿʼ ಗೆ ವರ್ಗಾವಣೆ ಮಾಡಿದರೆ ಅಸಮಾಧಾನ ಶಮನ ಆಗುತ್ತದೆ. ಉಳಿದಂತೆ, ನಾವು ಏನೇ ಮಾತನಾಡಿದರೂ ಅದು ಕೇವಲ ಮಾತುಗಳಾಗಿ ಮಾತ್ರ ಉಳಿಯುತ್ತದೆ” ಎಂದರು.

ಪ್ರೊ. ಎಸ್. ಗೋವಿಂದಯ್ಯ ಮಾತನಾಡಿ, “ಎಪ್ಪತ್ತರ ದಶಕದ ದಲಿತ ಚಳವಳಿಯಲ್ಲೇ ನಾವೆಲ್ಲರೂ ಸಾಂಸ್ಕೃತಿಕ ದಿಕ್ಕಲ್ಲಿ ನಡೆಯುತ್ತಿದ್ದೆವು. ಅಲ್ಲಿಂದಾಚೆಗೆ ಸಾಂಸ್ಕೃತಿಕ ವಿಚಾರ ನಮ್ಮದಲ್ಲ ಎನ್ನುವಂತೆ ದಲಿತ ನಾಯಕರು ಅಂದುಕೊಂಡ ಬಳಿಕವೇ ಸಾಕಷ್ಟು ಬಿರುಕು ಮೂಡಿದೆ. 90ರ ದಶಕದ ಬಳಿಕ ಪ್ರಜ್ಞಾಪೂರ್ವಕವಾಗಿ ನಾವು ಸಾಂಸ್ಕೃತಿಕತೆಯನ್ನು ಜೀವಂತವಾಗಿ ಇಟ್ಟಿದ್ದರೆ ಇಂದು ಒಳಮೀಸಲಾತಿ ಸಮಸ್ಯೆಯೇ ಬರುತ್ತಿರಲಿಲ್ಲ. 70ರ ದಶಕದಲ್ಲಿ ದಲಿತ ಮತ್ತು ದಲಿತೇತರ ಎಂಬುದೇ ಇರಲಿಲ್ಲ. ಕುಂಬಾರರ ಪರವಾಗಿ ದಲಿತ ಸಮುದಾಯ ಪಾದಯಾತ್ರೆ ಮಾಡಿ ಸರ್ಕಾರದ ವಿರುದ್ಧ ಚಳವಳಿ ಮಾಡಿತ್ತು. ಆ ಬದ್ಧತೆಯನ್ನು ನಮ್ಮ ಹೋರಾಟಗಾರರು ಎನಿಸಿಕೊಂಡವರು ಪಾಲಿಸಿದಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ” ಎಂದರು.

“ಇದೊಂದು ಐತಿಹಾಸಿಕ ಸಭೆಯಾಗಿದೆ, ಏಕೆಂದರೆ, ಕರ್ನಾಟಕದ ಜಾತ್ಯತೀತ ನೆಲೆ, ವಚನ ಚಳವಳಿಯ ಮುಂದುವರಿದ ಭಾಗವೇ ದಲಿತ ಚಳವಳಿ. ಈ ಪರಿಜ್ಞಾನ ಉಳಿಸಿಕೊಂಡಿದ್ದರೆ ಈಗಿನ ಸಮಸ್ಯೆ ಬರುತ್ತಿರಲಿಲ್ಲ. ಇಂದು ಹೊಲೆಯರು- ಮಾದಿಗರು ಬೀದಿ ಜಗಳಕ್ಕೆ ನಿಂತಿದ್ದಾರೆ. ಅವರಿಗೆ ಬುದ್ಧಿ ಹೇಳುವ ದಲಿತೇತರ ಪ್ರಜ್ಞಾವಂತರು ಮುಂದೆ ಬರುತ್ತಿಲ್ಲ. ನಮಗೆ ಇರುವುದು ಇನ್ನು ಕೇವಲ ಮೂರು ದಿನ, 16ಕ್ಕೆ ಅಂತಿಮ ತೀರ್ಮಾನ ಆಗುತ್ತದೆ. ಒಂದು ವೇಳೆ ಸಂಪುಟ ಉಪ ಸಮಿತಿಗೆ ಕಳುಹಿಸಿದರೆ ಸಾಮಾಜಿಕ ನ್ಯಾಯಕ್ಕೆ ಎಸಗುವ ದೊಡ್ಡ ದ್ರೋಹವಾಗುತ್ತದೆ” ಎಂದರು.

ಸಭೆಯಲ್ಲಿ ಮಾವಳ್ಳಿ ಶಂಕರ್, ಕೆ. ರಾಮಯ್ಯ, ಪ್ರೊ ಎಸ್. ಗೋವಿಂದಯ್ಯ, ಪ್ರೊ ದೊರೆರಾಜು, ಡಾ. ರವಿಕುಮಾರ್ ನೀಹ, ರೂಮಿ ಹರೀಶ್, ಶಿವಸುಂದರ್, ಅಗ್ರಹಾರ ಕೃಷ್ಣಮೂರ್ತಿ, ಡಿ. ಉಮಾಪತಿ, ಪ್ರೊ ಬಿ. ಸಿ. ಬಸವರಾಜ್, ಶ್ರೀಪಾದ್ ಭಟ್, ಲೇಖಾ ಅಡವಿ, ಹನುಮಂತೇಗೌಡ, ಹರ್ಷಕುಮಾರ್ ಕುಗ್ವೆ, ಡಾ. ಹುಲಿಕುಂಟೆ ಮೂರ್ತಿ, ವಿಕಾಸ್ ಆರ್ ಮೌರ್ಯ, ಸಿ. ಜಿ ಲಕ್ಷ್ಮಿಪತಿ, ವಿ. ಎಲ್ ನರಸಿಂಹಮೂರ್ತಿ, ಜನಾರ್ಧನ ಕೆಸರಗದ್ದೆ, ರವಿಕುಮಾರ್ ಬಾಗಿ, ಚಂದ್ರು ತರಹುಣಿಸೆ, ರುದ್ರುಪುನೀತ್, ಡಾಮಿನಿಕ್, ಭೀಮಾಶಂಕರ್, ಸರೋವರ್ ಬೆಂಕಿಕೆರೆ, ನರಸಿಂಹಪ್ಪ ವಿಜಯ್ ಕುಮಾರ್, ಸಿದ್ದಪ್ಪ ಮೂಲ್ಗೆ ಮುಂತಾದವರು ಉಪಸ್ಥಿತರಿದ್ದರು.

ಗೋಮಾಂಸ ವ್ಯಾಪಾರಿಗಳ ಮುಷ್ಕರ: ಗೋ ರಕ್ಷಕರಿಂದ ಅತಂತ್ರಗೊಂಡ ಮಹಾರಾಷ್ಟ್ರದ ಜಾನುವಾರು ವ್ಯಾಪಾರ, ಕ್ರಮಕ್ಕೆ ಮುಂದಾದ ಸರಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...