ನವೆಂಬರ್ ಮಾಸ ಮುಗಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ‘ಈ ಹಿಂದೆ’ ಮಾಡಿಕೊಂಡ ಒಪ್ಪಂದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನಿಡಿ, ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿಲಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆ ನಡೆದು ಈಗ ತಣ್ಣಗಾಗಿದೆ.
ಸಚಿವ ಸಂಪುಟ ಪುನರ್ರಚನೆ ಆಗುತ್ತದೆ ಎಂಬ ಸುದ್ದಿ ಬೆನ್ನಲ್ಲೇ ಹಲವು ಶಾಸಕರು ಮಂತ್ರಿ ಸ್ಥಾನಕ್ಕಾಗಿ ಮತ್ತು ತಮ್ಮ ಸ್ಥಾನ ಉಳಿಸಿಕೊಳ್ಳಲು ಹತ್ತಾರು ಮಂತ್ರಿಗಳು ದೆಹಲಿಗೆ ಮ್ಯಾರಥನ್ ಕೂಡ ನಡೆಸಿದ್ದಾರೆ. ಆದರೆ, ಇದೇ ಶನಿವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಟ್ಟಿಗೆ ‘ಉಪಹಾರ’ ಸೇವಿಸುವ ಮೂಲಕ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತು ಸಂಪುಟ ಪುನರ್ರಚನೆ ಚರ್ಚೆಗೆ ಅಲ್ಪ ವಿರಾಮ ಬಿದ್ದಿದೆ. “ಹೈಕಮಾಂಡ್ ಸೂಚನೆಯಂತೆ ನಾವಿಬ್ಬರೂ ಮುಂದುವರಿಯುತ್ತೇವೆ” ಎಂದು ಉಭಯ ನಾಯಕರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಂದರೆ, ಮುಖ್ಯಮಂತ್ರಿ ಬದಲಾವಣೆ ಸಂಘರ್ಷಕ್ಕೀಗ ‘ಕದನ ವಿರಾಮ’ ಸಿಕ್ಕಿದೆ. ಸಿಎಂ ಬದಲಾವಣೆ ವಿಚಾರವಂತೂ ‘ಬೂದಿ ಮುಚ್ಚಿದ ಕೆಂಡ’ದಂತಿದೆ.
ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ಉಪಹಾರದ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿವಾದ ಇನ್ನೇನು ಮುಗಿದೇ ಹೋಯಿತು ಎನ್ನುವ ಹೊತ್ತಿಗೆ, ಮತ್ತೊಂದು ಅಚ್ಚರಿ ಹೆಸರು ಮುನ್ನೆಲೆಗೆ ಬಂದಿದೆ. ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿಯಾಗಿರುವ ‘ಹಿರಿಯ ಕಾಂಗ್ರೆಸ್ ನಾಯಕ’ರೊಬ್ಬರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಷಯ ಈಗ ಚರ್ಚೆಯಾಗುತ್ತಿದೆ.
ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ?
ರಾಜ್ಯ ರಾಜಕೀಯ ಇತಿಹಾಸದಲ್ಲಿ ಈವರೆಗೆ ದಲಿತ (ಪರಿಶಿಷ್ಟ ಜಾತಿ ಮತ್ತು ಪಂಗಡ) ಸಮುದಾಯದವರೊಬ್ಬರು ಮುಖ್ಯಮಂತ್ರಿಯಾಗಿಲ್ಲ. ಸಿಎಂ ಹುದ್ದೆಯ ಚರ್ಚೆ ಆದಾಗಲೆಲ್ಲಾ ಈ ರಾಜ್ಯದ ಪ್ರಭಾವಿ ಜಾತಿಗಳೇ ಮುಂಚೂಣಿಯಲ್ಲಿರುತ್ತವೆ. ಆದರೆ, ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಕುರ್ಚಿ ಬದಲಾವಣೆ ಚರ್ಚೆಯಲ್ಲಿ ‘ದಲಿತ ಮುಖ್ಯಮಂತ್ರಿ’ ಕೂಗು ಜೋರಾಗೇ ಕೇಳಿಬರುತ್ತಿದೆ. ಪರಿಶಿಷ್ಠ ಸಮುದಾಯದ ಶಾಸಕರು ಸಹ ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಡಾ. ಜಿ.ಪರಮೇಶ್ವರ್ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸತೀಶ್ ಜಾರಕಿಹೊಳಿ ಹೆಸರುಗಳು ದಲಿತ ಮುಖ್ಯಮಂತ್ರಿ ಚರ್ಚೆಯ ಮುಂಚೂಣಿಯಲ್ಲಿವೆ. ಉಳಿದ ದಲಿತ ನಾಯಕರಿಗೆ ಹೋಲಿಸಿದರೆ ಹಾಗೂ ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ಪರಮೇಶ್ವರ್ ಮತ್ತು ಸತೀಶ್ ಹೆಸರನ್ನು ಹೈಕಮಾಂಡ್ ಒಪ್ಪಲ್ಲ ಎನ್ನಲಾಗುತ್ತಿದೆ. 2028ರ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್ ಹೈಕಕಮಾಂಡ್ ನಾಯಕರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿ ಪಟ್ಟಕ್ಕೇರಿಸುವ ಇಂಗಿತ ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ.
ಖರ್ಗೆ ಆಯ್ಕೆಗೆ ಕಾರಣಗಳೇನು?
ಕಳೆದ ಐದು ದಶಕಗಳಿಂದ ರಾಜಕಾರಣದಲ್ಲಿರುವ ಖರ್ಗೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಪ್ರಭಾವಿ ಎನಿಸಿದ್ದಾರೆ. ‘ಕ್ಲೀನ್ ಇಮೇಜ್’ ಜೊತೆಗೆ ರಾಜಕೀಯ ಚಾಕಚಕ್ಯತೆಯೂ ಇದೆ. ಬಿಜೆಪಿ ಮತ್ತು ಸಂಘಪರಿವಾರವನ್ನು ರಾಜಕೀಯವಾಗಿ ಎದುರಿಸುವ ಎದೆಗಾರಿಕೆ ಜೊತೆಗೆ, ಕಳೆದ 12 ವರ್ಷಗಳಿಂದ ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ಸಾಕಷ್ಟು ಇಕ್ಕಟ್ಟಿಗೂ ಸಿಲುಕಿಸಿದ್ದಾರೆ. ಇದೇ ಕಾರಣಕ್ಕೆ ಬಹಳ ವರ್ಷಗಳ ನಂತರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ರಾಜ್ಯ ರಾಜಕಾರಣದಲ್ಲಿದ್ದಾಗಲೇ ಮುಖ್ಯಮಂತ್ರಿ ರೇಸ್ನಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಲವು ಭಾರಿ ಉನ್ನತ ಸ್ಥಾನ ಸ್ವಲ್ಪದರಲ್ಲೇ ಕೈತಪ್ಪಿದೆ. ಇದೀಗ, ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಪ್ರಭಾವಿಯಾಗಿರುವ ಖರ್ಗೆ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾದರೆ ದಲಿತರ ಮತಗಳ ಕ್ರೋಢೀಕರಣದ ಜೊತೆಗೆ, ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿರುವ ಬಣ ಬಡಿದಾಟವೂ ಶಮನಾಗಲಿದೆ ಎಂಬ ಲೆಕ್ಕಾಚಾರ ಹೈಕಮಾಂಡ್ನದ್ದು ಎಂಬ ಚರ್ಚೆಯಿದೆ.
ಒಂದು ವೇಳೆ, ಮುಖ್ಯಮಂತ್ರಿ ಬದಲಾವಣೆ ಮಾಡುವುದೇ ಆದರೆ, ದಲಿತ ಸಮುದಾಯದವರೊಬ್ಬರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವುದೇ ಆದರೆ, ಕಾಂಗ್ರೆಸ್ ಹೈಕಮಾಂಡ್ನ ಮೊದಲ ಆಯ್ಕೆ ಖರ್ಗೆ ಎನ್ನಲಾಗುತ್ತಿದೆ. ಆದರೆ, ಹೈಕಮಾಂಡ್ ನಾಯಕರ ಬೇಡಿಕೆಯನ್ನು ಖರ್ಗೆ ಸುಲಭಕ್ಕೆ ಒಪ್ಪಿಲ್ಲ ಎಂಬ ಮಾತುಗಳಿದ್ದು, ಅವರನ್ನು ಮನವೊಲಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಆಗಬೇಕೆಂಬ ಹಠದಿಂದ ಹಿನ್ನಡೆಯಾಯಿತೇ?
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದುಕೊಂಡಿತು. ಬಿಜೆಪಿಗಿದ್ದ ಆಡಳಿತ ವಿರೋಧಿ ಅಲೆಯ ಜೊತೆಗೆ, ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಅವರ ಪಕ್ಷ ಸಂಘಟನೆ ಮತ್ತು ಚುನಾವಣಾ ಪ್ರಚಾರವೂ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ನೆರವಾಗಿತ್ತು. ಫಲಿತಾಂಶ ಬಂದ ಹಲವಾರು ದಿನಗಳ ಹಗ್ಗಜಗ್ಗಾಟದ ಬಳಿಕ ಕೊನೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ತಲಾ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಎಂಬ ಒಪ್ಪಂದವಾಗಿದೆ ಎಂಬ ಸುದ್ದಿಯೂ ಇತ್ತು. ಆದರೆ, ಇಬ್ಬರೂ ನಾಯಕರು ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಆದರೆ, ಉಭಯ ನಾಯಕರ ಆಪ್ತರು ಮಾತ್ರ ಈ ಬಗ್ಗೆ ಆಗಾಗ್ಗೆ ವೇದಿಕೆಗಳ ಮೇಲೆ ಅಧಿಕಾರ ಹಂಚಿಕೆ ಸೂತ್ರದ ಕುರಿತು ಮಾತನಾಡಿದ್ದುಂಟು.
ಸರ್ಕಾರ ಎರಡೂವರೆ ವರ್ಷ ಪೂರೈಸುತ್ತಿದ್ದಂತೆಯೇ ಮುಖ್ಯಮಂತ್ರಿಯಾಗಲು ಡಿಕೆ ಶಿವಕುಮಾರ್ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಖುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಸಹ ದೆಹಲಿಯಲ್ಲಿ ಕುಳಿತು ಅಷ್ಟೇ ಪ್ರಮಾಣದಲ್ಲಿ ಕಾರ್ಯತಂತ್ರ ಮಾಡಿದ್ದಾರೆ. ಈ ಒಟ್ಟಾರೆ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿಯಾಗಬೇಕೆಂಬ ಡಿ.ಕೆ. ಶಿವಕುಮಾರ್ ಒತ್ತಡವೇ ಅವರಿಗೆ ನಕಾರಾತ್ಮಕವಾಗಿ ತಿರುಗಿದೆ ಎನ್ನಲಾಗುತ್ತದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡುವುದೇ ಆದರೆ, ಖರ್ಗೆ ಅವರನ್ನೇ ಆಯ್ಕೆ ಮಾಡುವ ಮೂಲಕ ಉಭಯ ನಾಯಕರ ಬಾಯಿ ಮುಚ್ಚಿಸಲು ಹೈಕಮಾಂಡ್ ಉಪಾಯ ಮಾಡಿದೆ ಎನ್ನಲಾಗುತ್ತಿದೆ.


