ಫೇಸ್ಬುಕ್ ಇಂಡಿಯಾದ ಸಾರ್ವಜನಿಕ ನೀತಿ ನಿರ್ದೇಶಕರಾದ ಅಂಖಿದಾಸ್ ಭಾನುವಾರ ರಾತ್ರಿ ದೆಹಲಿ ಪೊಲೀಸ್ ಸೈಬರ್ ಸೆಲ್ಗೆ ಲಿಖಿತ ದೂರು ಸಲ್ಲಿಸಿದ್ದು, ಆನ್ಲೈನ್ ನಲ್ಲಿ ಹಲವಾರು ಜನರು ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಎಫ್ಐಆರ್ ಇನ್ನೂ ನೋಂದಣಿಯಾಗಿಲ್ಲ. ದೂರು ಸ್ವೀಕರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತೀಯ ರಾಜಕೀಯದೊಂದಿಗೆ ಫೇಸ್ಬುಕ್ ದ್ವೇಷ-ಭಾಷಣ ನಿಯಮಗಳಲ್ಲಿ ಘರ್ಷಣೆ – ವಿವಾದಾತ್ಮಕ ರಾಜಕಾರಣಿಯನ್ನು ನಿಷೇಧಿಸುವ ಕ್ರಮವನ್ನು ಕಂಪನಿಯ ಕಾರ್ಯನಿರ್ವಾಹಕ ವಿರೋಧಿಸಿದ್ದಾರೆ” ಎಂಬ ಶೀರ್ಷಿಕೆಯಲ್ಲಿ ಅಮೆರಿಕಾ ಮೂಲದ ವಾಲ್ ಸ್ಟ್ರೀಟ್ ಜರ್ನಲ್ ವಿಶೇಷ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬೆದರಿಕೆಗಳು ಬಂದಿವೆ ಎಂದು ಅಂಖಿದಾಸ್ (49) ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಉಲ್ಲಂಘನೆಗಳಿಗೆ ಶಿಕ್ಷೆ ನೀಡುವುದು ಭಾರತದಲ್ಲಿ ಕಂಪನಿಯ ವ್ಯವಹಾರದ ಭವಿಷ್ಯವನ್ನು ಹಾನಿಗೊಳಿಸುತ್ತದೆ ಎಂದು ಅಂಖಿದಾಸ್ ಹೇಳಿರುವುದಾಗಿ ಜರ್ನಲ್ ವರದಿ ಮಾಡಿತ್ತು.
ಡಬ್ಲ್ಯುಎಸ್ಜೆ ಲೇಖನವನ್ನು ಭಾರತದಲ್ಲಿ ತಪ್ಪಾಗಿ ಪ್ರಕಟಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಗ್ರಹಿಸಿದ ರಿತಿಯೇ ಇದಕ್ಕೆಲ್ಲಾ ಕಾರಣ. ತನಗೆ ಜೀವ ಬೆದರಿಕೆಗಳನ್ನು ಕಳುಹಿಸಿದ ಜನರ ಫೇಸ್ಬುಕ್ ಮತ್ತು ಟ್ವಿಟರ್ ಖಾತೆಗಳನ್ನು ದಾಸ್ ಸಲ್ಲಿಸಿದ ನಾಲ್ಕು ಪುಟಗಳ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
“ಯಾರೊಬ್ಬರ ರಾಜಕೀಯ ಸ್ಥಾನ ಅಥವಾ ಪಕ್ಷದ ಸಂಬಂಧವನ್ನು ಪರಿಗಣಿಸದೆ ನಾವು ಈ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸುತ್ತೇವೆ. ಹಿಂಸಾಚಾರವನ್ನು ಪ್ರಚೋದಿಸುವ ದ್ವೇಷದ ಮಾತು ಮತ್ತು ವಿಷಯವನ್ನು ನಾವು ನಿಷೇಧಿಸುತ್ತೇವೆ. ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ನಮಗೆ ತಿಳಿದಿದ್ದರೂ, ನಾವು ಜಾರಿಗೊಳಿಸುವಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ. ನ್ಯಾಯ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಪ್ರಕ್ರಿಯೆಯ ನಿಯಮಿತ ಲೆಕ್ಕಪರಿಶೋಧನೆಯನ್ನು ನಡೆಸುತ್ತೇವೆ” ಎಂದು ಫೇಸ್ಬುಕ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಮತ್ತು ಆರ್ಎಸ್ಎಸ್ ಫೇಸ್ಬುಕ್ ಅನ್ನು ನಿಯಂತ್ರಿಸುತ್ತಿದ್ದಾರೆ: ರಾಹುಲ್ ಗಾಂಧಿ