Homeಮುಖಪುಟಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ

ಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ

'ಹಿಂದೂ-ಮುಸ್ಲಿಮ್ ಗಲಭೆ ನಡೆದರೆ ಎಬಿವಿಪಿ ಆ ಸ್ಥಳಕ್ಕೆ ಹಾಜರಾಗುತ್ತಿತ್ತು. ಆದರೆ ದಲಿತರ ಮೇಲೆ ಮೇಲುಜಾತಿಯ ಹಿಂದೂಗಳು ದೌರ್ಜನ್ಯ ನಡೆಸಿದರೆ ಎಬಿವಿಪಿ ಅಲ್ಲಿಗೆ ಬರುತ್ತಲೇ ಇರಲಿಲ್ಲ’ ಎನ್ನುತ್ತಾರೆ ಚಂದ್ರಶೇಖರ್.

- Advertisement -
- Advertisement -

ಈಗ ಎಲ್ಲೆಡೆ ಚಂದ್ರಶೇಖರ್ ಆಜಾದ್ ಎಂಬ ಯುವಕನದ್ದೇ ಸದ್ದು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಏರಿ ಮೂರು ತಿಂಗಳೂ ಆಗಿಲ್ಲ; ಆಗಲೇ ಅಲ್ಲಿನ ಮುಖ್ಯಮಂತ್ರಿಗೆ ಮುಖಭಂಗ ಮಾಡಿರುವ ಚಂದ್ರಶೇಖರ್ ಯೋಗಿಯ ನಿದ್ದೆಕೆಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ದೇಶದಾದ್ಯಂತ ಪ್ರಗತಿಪರರಲ್ಲಿ ಸಂಚಲನ ಮೂಡಿಸಿರುವ ಚಂದ್ರಶೇಖರ್ ಯುವಜನತೆಯಲ್ಲಿ ರೋಮಾಂಚನ ಸೃಷ್ಟಿಸಿದ್ದಾರೆ.

ತನ್ನ ಯೌವನವನ್ನು ಡೆಹರಾಡೂನ್‌ನಲ್ಲಿ ಕಳೆದ ಚಂದ್ರಶೇಖರ್ 2013ರ ಹೊತ್ತಿಗೆ ಕಾನೂನು ಪದವಿ ಪಡೆದು ವಕೀಲನಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ ಅದೇ ಹೊತ್ತಿಗೆ ಅವರ ತಂದೆ ಗೋವರ್ಧನ್ ದಾಸ್ ಅವರಲ್ಲಿ ಕ್ಯಾನ್ಸರ್ ರೋಗ ಕಾಣಿಸಿಕೊಂಡಿತು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ದಾಸ್ ಅವರು ತಮ್ಮ ವೃತ್ತಿಯ ನಿಮಿತ್ತ ಬೇರೆಬೇರೆ ಕಡೆ ಸೇವೆ ಸಲ್ಲಿಸಿದ್ದರಿಂದ ಅವರ ಅರಿವಿಗೆ ಬಾರದಂತೆ ತಂದೆ ಮತ್ತು ಮಗನ ನಡುವೆ ಅಂತರ ಬೆಳೆದಿತ್ತು. ಆದರೆ ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡಿಸುವಾಗ ಅವರಿಬ್ಬರೂ ಹತ್ತಿರವಾದರು. ದಲಿತರಾದ ದಾಸ್ ಅವರು ಜಾತಿಕಾರಣಕ್ಕೆ ತಮಗಾದ ಅವಮಾನಗಳನ್ನು ತಮ್ಮ ಪುತ್ರನಿಗೆ ವಿವರಿಸಿದರು. ಅವರು ಶಾಲೆಯ ಮುಖ್ಯಸ್ಥರಾಗಿದ್ದರೂ ಶಾಲಾ ಸಿಬ್ಬಂದಿ ಅವರಿಗೆ ಪ್ರತ್ಯೇಕವಾಗಿ ಕುಡಿಯುವ ನೀರು ಇಡುತ್ತಿದ್ದರು. ಸಭೆಗಳಲ್ಲಿ ಅವಮಾನ ಮಾಡುತ್ತಿದ್ದರು. ಇಂತಹ ನೂರಾರು ಪ್ರಕರಣಗಳನ್ನು ಅವರು ನೆನಪು ಮಾಡಿಕೊಂಡರು. ಚಂದ್ರಶೇಖರ್ ಅವರಿಗೆ ಇಂತಹ ಅವಮಾನಗಳು ಆಗಿರದಿದ್ದರೂ ತಂದೆಯ ಬದುಕು ಅವರ ಕಣ್ಣು ತೆರೆಸಿತು. ದಾಸ್ ಅವರು ತೀರಿಕೊಂಡ ನಂತರ ತನ್ನ ಜನರಿಗೆ ಏನನ್ನಾದರೂ ಮಾಡಬೇಕು ಎಂದು ನಿರ್ಧರಿಸಿದ ಚಂದ್ರಶೇಖರ್ ಶಹರನಪುರ್ ಜಿಲ್ಲೆಯಲ್ಲಿರುವ ತನ್ನ ಮೂಲ ಊರಾದ ಚುತ್ಮಲಪುರಕ್ಕೆ ಹಿಂದಿರುಗಿದರು. ಚುತ್ಮಲಪುರ್ ಹೆಚ್ಚಾಗಿ ದಲಿತರು ಮತ್ತು ಮುಸಲ್ಮಾನರು ಇರುವ ಊರು. ಅಲ್ಲಿ ತನ್ನ ಹಲವು ದಲಿತ ಮಿತ್ರರನ್ನು ಜೊತೆಹಾಕಿಕೊಂಡ ಚಂದ್ರಶೇಖರ್ ಎರಡು ವರ್ಷಗಳ ಹಿಂದೆ ‘ಭೀಮ್‌ಆರ್ಮಿ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು. ಇದರ ಉದ್ದೇಶ ಜಾತಿ ದೌರ್ಜನ್ಯವನ್ನು ವಿರೋಧಿಸುವುದು.

ಭೀಮಸೇನೆ ಎಲ್ಲರ ಗಮನಕ್ಕೆ ಬಂದದ್ದು ಹೋದ ವರ್ಷ. ಶಹರನಪುರ್ ಹತ್ತಿರದಲ್ಲೇ ಇರುವ ಘರ್ಕೊಲಿ ಎಂಬ ಹಳ್ಳಿಯಲ್ಲಿ ದಲಿತ ಯುವಕರು ಅಂಬೇಡ್ಕರ್ ಪ್ರತಿಮೆಯ ಹತ್ತಿರ ‘ದಿ ಗ್ರೇಟ್ ಚಮ್ಮಾರ್ ಡಾ. ಭೀಮ್‌ರಾವ್ ಅಂಬೇಡ್ಕರ್ ಗ್ರಾಮ ಘರ್ಕೊಲಿ’ ಎಂಬ ಬೋರ್ಡ್ ಹಾಕಿದರು. ಇದು ಅದೇ ಹಳ್ಳಿಯ ಥಾಕೂರರನ್ನು ಕೆರಳಿಸಿತು. “ಚಮ್ಮಾರನೊಬ್ಬ ಅದು ಹೇಗೆ ‘ಗ್ರೇಟ್ ಆಗಲು ಸಾಧ್ಯ’ ಎಂದು ವಾದಿಸಿದ ಥಾಕೂರರು ಮೊದಲು ಆ ಬೋರ್ಡ್ ಕಿತ್ತುಹಾಕಬೇಕೆಂದು ತಾಕೀತು ಮಾಡಿದರು. ಅದಕ್ಕೆ ಬಗ್ಗದ ದಲಿತ ಯುವಕರು “ನಾವು ಅದನ್ನು ನಮಗೆ ಸೇರಿರುವ ಖಾಸಗಿ ಭೂಮಿಯಲ್ಲಿ ಹಾಕಿಕೊಂಡಿದ್ದೇವೆ. ನಿಮ್ಮದೇನು ರಗಳೆ” ಎಂದರು. ಥಾಕೂರರು ಪೊಲೀಸರಿಗೆ ದೂರು ಸಲ್ಲಿಸಿದರು. ಈ ಪ್ರಕರಣದ ಇತ್ಯರ್ಥಕ್ಕೆ ಡಿವೈಎಸ್ಪಿ ಆನಂದ್ ಪಾಂಡೆ ಬಂದ. ಆತ ಬ್ರಾಹ್ಮಣ. ಥಾಕೂರರ ಜೊತೆ ಕೈಜೋಡಿಸಿದ ಪೊಲೀಸಪ್ಪ ಆ ಬೋರ್ಡ್‌ಗೆ ಕಪ್ಪು ಬಣ್ಣ ಬಳಿಸಿದ. ಅದಾದ ಕೆಲ ಗಂಟೆಗಳಲ್ಲಿ ಅದ್ಯಾರೋ ಅಂಬೇಡ್ಕರ್ ಅವರ ಪ್ರತಿಮೆಗೂ ಕಪ್ಪು ಬಣ್ಣ ಬಳಿದರು. ಇದು ದಲಿತರನ್ನು ಕೆರಳಿಸಿತು. ಅವರಲ್ಲಿ ಒಬ್ಬ ಭೀಮಸೇನೆಗೆ ಫೋನ್ ಮಾಡಿದ. ತಮ್ಮ ಪಂಚಾಯತಿಯನ್ನು ವಿರೋಧಿಸಿದ ದಲಿತರನ್ನು ಬಡಿಯಲು ಪೊಲೀಸರು ಸಜ್ಜಾಗುತ್ತಿದ್ದಂತೆ ಹತ್ತಾರು ಮೋಟಾರ್ ಬೈಕ್‌ಗಳನ್ನೇರಿ ದೊಡ್ಡ ಗುಂಪೊಂದು “ಜೈ ಭೀಮ್’ ಎಂದು ಕೂಗುತ್ತಾ ಹಾಜರಾಯಿತು. ಅದರ ನೇತೃತ್ವ ವಹಿಸಿದ್ದವ ಬಿಳಿ ಶರ್ಟ್, ಕಪ್ಪು ಪ್ಯಾಂಟ್, ಕೊರಳ ಸುತ್ತ ನೀಲಿ ಸ್ಕಾರ್ಫ್ ಕಟ್ಟಿಕೊಂಡಿದ್ದ ಅಂದವಾದ ಯುವಕ. ಅವರೇ ಚಂದ್ರಶೇಖರ್ ಆಜಾದ್. ಅವತ್ತು ದಲಿತರ ಮತ್ತು ಪೊಲೀಸರ ನಡುವೆ ನಡೆದ ಚಕಮಕಿಯಲ್ಲಿ ಡಿವೈಎಸ್ಪಿ ಸಾಹೇಬನಿಗೂ ಲಾತಾ ಬಿದ್ದು ಪೊಲೀಸರೆಲ್ಲ ಓಡಿಹೋದರು.

ಆನಂತರ ಚಂದ್ರಶೇಖರರನ್ನು ಪೊಲೀಸರು ಬಂಧಿಸಿದರಲ್ಲದೆ ಅವರ ವಿರುದ್ಧ ರಾಷ್ಟ್ರೀಯ ರಕ್ಷಣಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಮುಂದಾದರು. ದಲಿತರ ಪರ ಹೋರಾಡಿದ್ದಕ್ಕೆ ರಾಷ್ಟ್ರೀಯ ರಕ್ಷಣಾ ಕಾಯ್ದೆಯಡಿ ಕ್ರಮವೇ ಎಂದು ವಿರೋಧಿಸಿದ ಪ್ರಜ್ಞಾವಂತರು ಚಂದ್ರಶೇಖರ್ ಪರವಾಗಿ ದೊಡ್ಡ ರ್‍ಯಾಲಿಯನ್ನು ನಡೆಸಿದರು. ಪೊಲೀಸರು ತೆಪ್ಪಗಾಗಿ ಚಂದ್ರಶೇಖರ ಅವರನ್ನು ಬಿಡುಗಡೆ ಮಾಡಿದರು. ಈ ಪ್ರಕರಣದ ನಂತರ ಭೀಮ ಸೇನೆ ಇನ್ನೂ ದೊಡ್ಡದಾಯಿತು. ಚಂದ್ರಶೇಖರ್ ಪ್ರಕಾರ ಇವತ್ತು ಭೀಮಸೇನೆಯಲ್ಲಿ 40,000 ಯುವಕರು ಇದ್ದಾರಲ್ಲದೆ, ಇತರೆ ಏಳು ರಾಜ್ಯಗಳಲ್ಲಿ ಅದರ ವಿಭಾಗಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಭೀಮ ಸೇನೆಯು ಇಂದು ದಲಿತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತಿದ್ದು ತಮ್ಮ ಮೇಲೆ ದೌರ್ಜನ್ಯ ಎಸಗುವವರನ್ನು ವಿರೋಧಿಸುವ ಛಲ ಸೃಷ್ಟಿ ಮಾಡಿದೆ.

ವಿಚಿತ್ರವೆಂದರೆ ಚಂದ್ರಶೇಖರ್ ವಿದ್ಯಾರ್ಥಿಯಾಗಿದ್ದಾಗ ಸಂಘ ಪರಿವಾರದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆಯಲ್ಲಿದ್ದವರು. ಆಗ ಅವರಿಗೆ ಆರೆಸ್ಸೆಸ್‌ನ ಅಸಲಿಯತ್ತು ಅರ್ಥವಾಯಿತು. “ಹಿಂದೂ-ಮುಸ್ಲಿಮ್ ಗಲಭೆ ನಡೆದರೆ ಎಬಿವಿಪಿ ಆ ಸ್ಥಳಕ್ಕೆ ಹಾಜರಾಗುತ್ತಿತ್ತು. ಆದರೆ ದಲಿತರ ಮೇಲೆ ಮೇಲುಜಾತಿಯ ಹಿಂದೂಗಳು ದೌರ್ಜನ್ಯ ನಡೆಸಿದರೆ ಎಬಿವಿಪಿ ಅಲ್ಲಿಗೆ ಬರುತ್ತಲೇ ಇರಲಿಲ್ಲ’ ಎನ್ನುತ್ತಾರೆ ಚಂದ್ರಶೇಖರ್. ಆಗ ಅಂಬೇಡ್ಕರ್ ಬರಹಗಳನ್ನು ಓದಲಾರಂಭಿಸಿದ ಚಂದ್ರಶೇಖರ್ ಭೀಮ ಸೇನೆ ಸ್ಥಾಪಿಸಿ ತನ್ನ ಸಮುದಾಯದ ಏಳಿಗೆಗೆ ದುಡಿಯಲು ನಿರ್ಧರಿಸಿದರು. ಅವರ ಭೀಮಸೇನೆ ಇವತ್ತು ಶಹರನಪುರದಲ್ಲಿ ಹಲವಾರು ‘ಶಾಲೆ’ಗಳನ್ನು ನಡೆಸುತ್ತದೆ. ಅದಕ್ಕೆ ಭೀಮ್ ಪಾಠಾಶಾಲಾ ಎಂದು ಕರೆಯಲಾಗುತ್ತದೆ. ಅಲ್ಲಿ ಕಾಲೇಜು ಮುಗಿಸಿರುವ ದಲಿತ ಯುವಕರು ಶಾಲೆಗಳಲ್ಲಿ ಓದುತ್ತಿರುವ ದಲಿತ ಮಕ್ಕಳಿಗೆ ಪ್ರತಿದಿನ ಪಾಠ ಹೇಳಿಕೊಡುತ್ತಾರೆ. ಹಾಗೆಯೇ ಹಿರಿಯ ದಲಿತ ಅಧಿಕಾರಿಗಳು ಯುವ ದಲಿತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ಕೊಡುತ್ತಾರೆ.

ನೀಲಿ ಆಗಸದಲ್ಲಿ ಚಂದ್ರಶೇಖರ್ ಆಜಾದ್ ಎಂಬ ಇನ್ನೊಂದು ನಕ್ಷತ್ರ ಪ್ರಜ್ವಲಿಸಲಾರಂಭಿಸಿದೆ. ರೋಹಿತ್ ವೇಮುಲ, ಕನ್ಹಯ್ಯ ಕುಮಾರ್, ಉಮರ್‌ ಖಾಲಿದ್, ಶೆಹ್ಲಾ ರಶೀದ್ ಮತ್ತು ಚಂದ್ರಶೇಖರ್ ಎಂಬ ಈ ನಕ್ಷತ್ರಗಳು ಎಲ್ಲರಲ್ಲಿ ಭರವಸೆ ಮೂಡಿಸುತ್ತಿವೆ.

  • ಗೌರಿ ಲಂಕೇಶ್

ಮೇ, 31 2017.


ಇದನ್ನೂ ಓದಿ: ನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...