Homeಮುಖಪುಟದಿಕ್ಕೆಟ್ಟ ಕಾಲದ ನಿಜದನಿ ನವಮಾಧ್ಯಮ; ಇಂದು ಕಾವಲು ಕಾಯುತ್ತಿರುವ ಮಾಧ್ಯಮಗಳು ಯಾವುವು?

ದಿಕ್ಕೆಟ್ಟ ಕಾಲದ ನಿಜದನಿ ನವಮಾಧ್ಯಮ; ಇಂದು ಕಾವಲು ಕಾಯುತ್ತಿರುವ ಮಾಧ್ಯಮಗಳು ಯಾವುವು?

- Advertisement -
- Advertisement -

ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎನ್ನಲಾಗುತ್ತದೆ. ಅದನ್ನು ಕಾವಲು ನಾಯಿಗೂ ಹೋಲಿಸಲಾಗುತ್ತದೆ. ಅಂದರೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಅದರ ಆಶಯಗಳನ್ನು ಸದಾ ಎತ್ತಿಹಿಡಿಯುವುದು, ನಮ್ಮ ಆತ್ಮಸಾಕ್ಷಿಯನ್ನು ಸದಾ ಎಚ್ಚರ ಸ್ಥಿತಿಯಲ್ಲಿರುವಂತೆ ಕಾಯುವುದಕ್ಕಾಗಿ ಈ ರೂಪಕಗಳನ್ನು ಬಳಸಲಾಗುತ್ತದೆ. ಸರ್ಕಾರ, ಆಡಳಿತದ ಸಂದರ್ಭ ಬಂದಾಗ ಸದಾ ಪ್ರಶ್ನಿಸುವ ವಿರೋಧ ಪಕ್ಷವೇ ಆಗಿರುತ್ತದೆ.

ಆಡಳಿತ ವ್ಯವಸ್ಥೆಯನ್ನು ಸದಾ ಪ್ರಶ್ನಿಸಿ, ಸಮಾಜದಲ್ಲಿರುವ ಅಂಕುಡೊಂಕುಗಳನ್ನು ಪರಾಮರ್ಶಿಸಿ-ತಿದ್ದಿ, ಅನ್ಯಾಯಕ್ಕೊಳಗಾದ ಅತೀ ಸಾಮಾನ್ಯನ ಧ್ವನಿಗೆ ವೇದಿಕೆ ಕೊಡುವುದು ಮಾಧ್ಯಮಗಳ ಕೆಲಸವಾಗಬೇಕು. ಆದರೆ ಕಳೆದ ಹತ್ತು ವರ್ಷಗಳಿಂದ ಮುಖ್ಯವಾಹಿನಿ ಎನಿಸಿಕೊಂಡಿರುವ ಮಾಧ್ಯಮಗಳು ಇದ್ಯಾವುದನ್ನು ಮಾಡದೆ ಅಧಿಕಾರಸ್ಥರ ಪರವಾಗಿ, ಅವರ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ದಲ್ಲಾಳಿಗಳ ರೀತಿ ವರ್ತಿಸುತ್ತಿವೆ ಎಂಬ ಚರ್ಚೆ ವ್ಯಾಪಕವಾಯಿತು. ಈ ಹಿಂದೆಯೂ ಸರ್ಕಾರಗಳ ಪರವಾಗಿ ಒಂದಷ್ಟು ಮಾಧ್ಯಮಗಳು ಕೆಲಸ ಮಾಡುತ್ತಾ ಬಂದಿರುವ ನಿದರ್ಶನಗಳು ಇವೆಯಾದರೂ, ಕಳೆದ ಐದಾರು ವರ್ಷಗಳಲ್ಲಿ ಭಾರತದ ಹೆಚ್ಚಿನ ಮುಖ್ಯವಾಹಿನಿ ಮಾಧ್ಯಮಗಳು ಒಂದು ನಿರ್ದಿಷ್ಟ ರಾಜಕೀಯ ಗುಂಪಿನ, ಆಳುವ ಸರ್ಕಾರದ ಮತ್ತು ಅವರ ಜನವಿರೋಧಿ ನೀತಿಗಳ ಸಮರ್ಥಕರಾಗಿ ಬದಲಾಗಿರುವುದು ದುರಂತ.

ದೇಶದಲ್ಲಿ ಇಂಟರ್‌ನೆಟ್ ಸುಲಭವಾಗಿ ತಲುಪಿದ್ದರಿಂದ ಉಂಟಾದ ಬದಲಾವಣೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಹೆಚ್ಚು ಕ್ರಿಯಾಶೀಲರಾದರು. ಆದರೆ ಅಲ್ಲಿಯೂ ಬಹುಸಂಖ್ಯಾತವಾದಿ ಧೋರಣೆಯ ಪ್ರಭುತ್ವ ಹಿಡಿತ ಸಾಧಿಸಲು ಮುಂದಾಯ್ತು. ತನ್ನ ಅಪರಿಮಿತ ಸಂಪನ್ಮೂಲಗಳ ಮೂಲಕ ಟ್ರಾಲ್ ಸೇನೆಗಳನ್ನು ಸೃಷ್ಟಿಸಿತು. ಈ ಟ್ರಾಲ್ ಸೇನೆಯ ಧ್ವನಿಗಳೇ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಂಕಥನಗಳಾಗಿ ಮುಖ್ಯವಾಹಿನಿಯ ಮಾಧ್ಯಮಗಳಿಗೂ ವಿಸ್ತರಿಸಿದವು.

ನ್ಯಾಯಪರ, ಜನಪರ ದನಿಗಳಾಗಬೇಕಿದ್ದ ಮಾಧ್ಯಮಗಳು ಪಕ್ಷಪಾತಿಗಳಾದಾಗ ಭರವಸೆಯಾಗಿ ಕಂಡಿದ್ದು ಪರ್ಯಾಯ ಮಾಧ್ಯಮಗಳಾಗಿ ತಲೆ ಎತ್ತಿದ ಸಣ್ಣ ಸುದ್ದಿಮನೆಗಳು. ತನ್ನತನವನ್ನೇ ಮರೆತ ಮಾಧ್ಯಮವನ್ನೂ ಎಚ್ಚರಿಸುತ್ತಾ, ಅಧಿಕಾರವನ್ನು ಪ್ರಶ್ನಿಸಿದ ಈ ಮಾಧ್ಯಮಗಳು ಪತ್ರಿಕೋದ್ಯೋಗ ಮೇಲಿನ ಭರವಸೆಯನ್ನು ಮತ್ತೆ ಚಿಗುರಿಸಿದವು. ದೇಶದ ಬಹುಮುಖ್ಯ ಹಗರಣಗಳನ್ನು ಬಯಲಿಗೆಳೆಯುವ ಮೂಲಕ ಅಧಿಕಾರ ಕೇಂದ್ರದಲ್ಲಿರುವ ವ್ಯಕ್ತಿಗಳ ಬಣ್ಣ ಬಯಲು ಮಾಡಿದರು.

ಡಿಜಿಟಲ್ ಮಾಧ್ಯಮ ಕಲ್ಪಿಸಿದ ಹೊಸ ಸಾಧ್ಯತೆಗಳಿಂದಾಗಿ ವೃತ್ತಿಪರತೆ, ಬದ್ಧತೆ ಇದ್ದ ಹತ್ತಾರು ಪತ್ರಕರ್ತರು, ವೃತ್ತಿ ಆಸಕ್ತ ಗುಂಪುಗಳು ವಿಭಿನ್ನ ಡಿಜಿಟಲ್ ವೇದಿಕೆಗಳ ಮೂಲಕ ತಮ್ಮ ಪತ್ರಿಕೋದ್ಯೋಗದ ಹೊಸ ಆಯಾಮಗಳನ್ನು ಅನ್ವೇಷಿಸುತ್ತಾ ವೃತ್ತಿಬದ್ಧತೆಯನ್ನು ಎತ್ತಿ ಹಿಡಿದಿದ್ದಾರೆ.

PC : EditIndia-blogger

ಅಕ್ಷರ ಮಾಧ್ಯಮದ ಸಾಧ್ಯತೆ ದೃಶ್ಯಗಳಿಗೆ, ಆಡಿಯೋ ರೂಪಕ್ಕೆ ಹಿಗ್ಗಿಸಿ, ಪರಿಣಾಮಕಾರಿ ಜನರಿಗೆ ವಾಸ್ತವಾಂಶಗಳನ್ನು ತಲುಪಿಸುತ್ತಿರುವುದರಿಂದಲೇ ಈ ಹೊಸ ಕಾಲದ ಮಾಧ್ಯಮಗಳು ಹೆಚ್ಚು ಗಮನಸೆಳೆಯುತ್ತಿವೆ.

ವಿಡಿಯೋ ವಿಶ್ಲೇಷಣೆಗಳು, ಕ್ರಿಯಾಶೀಲ ಗ್ರಾಫಿಕ್‌ಗಳು, ನೇರ ಪ್ರಸಾರಗಳು, ಟಿವಿ ಮತ್ತು ಪತ್ರಿಕೆಗಳಿದ್ದ ಮಿತಿಗಳನ್ನು ಸೃಜನಶೀಲವಾಗಿ ಬಳಸಿಕೊಂಡು ಪ್ರಭಾವಿಯಾಗಿ ಬೆಳೆದು ನಿಂತಿವೆ. ಹಾಗಾಗಿ ಅಧಿಕಾರಸ್ಥರ ಹಂಗಿಲ್ಲದೆ, ಓದುಗನ ಪ್ರೀತಿ, ಆಶ್ರಯದಿಂದ ಗಟ್ಟಿಯಾಗಿ ನಿಲ್ಲುತ್ತಿವೆ.

“ಹೆಚ್ಚಿನ ಮುಖ್ಯವಾಹಿನಿ ಮಾಧ್ಯಮಗಳು ಪ್ರಭುತ್ವದ ಪರವಾಗಿ ಮಾತನಾಡಲು ಕಾರಣ ಜಾಹಿರಾತುಗಳೇ ಕಾರಣ. ಈ ಜಾಹಿರಾತಿನ ಮುಖಾಂತರ ಅವುಗಳು ತಮ್ಮ ಆರ್ಥಿಕ ಸ್ಥಿತಿಗಳನ್ನು ನಿಭಾಯಿಸಬೇಕಾಗುತ್ತದೆ. ಅಂತಹ ಸಂಧರ್ಭದಲ್ಲಿ ಪ್ರಶ್ನೆ ಮಾಡಿದರೆ ತಮಗೆ ಸಿಕ್ಕುವ ನಿಧಿಗಳು ಇಲ್ಲದಾಗುವ ಭಯವಿರುತ್ತದೆ. ವೆಬ್ ಸುದ್ದಿ ಪೋರ್ಟಲ್‌ಗಳಿಗೆ ಕಳೆದ ಮೂರು ನಾಲ್ಕು ವರ್ಷಗಳಿಂದ ಓದುಗನೇ ಹಣಕೊಟ್ಟು ಸುದ್ದಿಯನ್ನು ಓದುವಂತಹ ಅಥವಾ ತಾನು ಓದುವ ಸುದ್ದಿ ತಾಣಗಳಿಗೆ ಹಣ ನೀಡಿ ಚಂದಾದಾರರಾಗುವ ಮಾದರಿಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ಖಾಸಗಿ ಜಾಹಿರಾತಿನದ್ದೋ, ಸರ್ಕಾರಿ ಜಾಹಿರಾತಿನದ್ದೋ ಹಂಗಿರುವುದಿಲ್ಲ. ಇವುಗಳಲ್ಲಿ ಓದುಗನೇ ತಾನು ಓದುತ್ತಿರುವ ಸುದ್ದಿಗೆ ಹಣ ಪಾವತಿಸುತ್ತಾನೆ. ಇದೊಂದು ಯಶಸ್ವಿ ಪ್ರಯೋಗವು ಆಗಿದೆ” ಎಂದು ಡಿಜಿಪಬ್ ಅಧ್ಯಕ್ಷೆ ಮತ್ತು ದ ನ್ಯೂಸ್‌ಮಿನಿಟ್ ಸಂಸ್ಥಾಪಕಿ ಧನ್ಯಾ ರಾಜೇಂದ್ರನ್ ಹೇಳುತ್ತಾರೆ.

ದಿ ನ್ಯೂಸ್ ಮಿನಿಟ್ ದಕ್ಷಿಣ ಭಾರತದ ಪ್ರಮುಖ ಡಿಜಿಟಲ್ ಸುದ್ದಿ ಸಂಸ್ಥೆ. ಹಲವು ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಾ, ಪ್ರಯೋಗಿಸುತ್ತಾ, ಈ ಸುದ್ದಿಸಂಸ್ಥೆಯನ್ನು ಯಶಸ್ವಿಯಾಗಿ ಕಟ್ಟಿ ನಿಲ್ಲಿಸಿದ ಹೆಗ್ಗಳಿಕೆ ಧನ್ಯಾ ಅವರದ್ದು. ಈಗ ಇವರಂಥೇ ವಿಭಿನ್ನವಾಗಿ ಪತ್ರಿಕೋದ್ಯೋಗದಲ್ಲಿ ಸಕ್ರಿಯರಾಗಿರುವ ’ಆಲ್ಟ್ ನ್ಯೂಸ್, ’ದಿ ವೈರ್, ’ಆರ್ಟಿಕಲ್ 14’, ’ನ್ಯೂಸ್ ಕ್ಲಿಕ್, ’ಕೋಬ್ರಾ ಪೋಸ್ಟ್’, ’ನ್ಯೂಸ್ ಲಾಂಡ್ರಿ, ’ಸ್ಕ್ರಾಲ್, ’ಬೂಮ್‌ಲೈವ್, ’ಹೆಚ್‌ಡಬ್ಲ್ಯು ನ್ಯೂಸ್, ’ದಿ ಕ್ವಿಂಟ್ ಸೇರಿ ಡಿಜಿಪಬ್ ಎನ್ನುವ ಒಕ್ಕೂಟ ಕಟ್ಟಿಕೊಂಡಿವೆ. ಇದೂ ಕೂಡ ಹೊಸ ಕಾಲದ ಮಾಧ್ಯಮರಂಗದ ವಿಶಿಷ್ಟ ಪ್ರಯೋಗ.

ಸಾಂಪ್ರದಾಯಿಕ ಮುಖ್ಯವಾಹಿನಿ ಎಂದು ಕರಸಿಕೊಳ್ಳುತ್ತಿರುವ ಮಾಧ್ಯಮಗಳು ಸಮಾಜವನ್ನು ಹಿಂದಕ್ಕೆ ತಳ್ಳುತ್ತಿರುವಾಗ ಈ ನವಮಾಧ್ಯಮಗಳು ಸಮಾಜದಲ್ಲಿ ಪರಿವರ್ತನೆ ಮೂಡಿಸುತ್ತಾ ಉತ್ತಮವಾದ ಕೆಲಸವನ್ನು ಮಾಡುತ್ತಿವೆ. “ವಿಶೇಷವಾಗಿ ಎಲ್ಲ ಭಾಷೆಗಳ ಟಿವಿಗಳಲ್ಲಿ ಹರಡುತ್ತಿರುವ ಸುಳ್ಳುಗಳ ವಿರುದ್ಧ ನೈಜ ಸುದ್ದಿಯನ್ನು ಕಟ್ಟಿಕೊಡಲು ಈ ಸ್ವತಂತ್ರ ಮಾಧ್ಯಮಗಳಿಗೆ ಸಾಧ್ಯವಾಗಿದೆ. ಪ್ರಸ್ತುತ ಡಿಜಿಟಲ್ ಸುದ್ದಿ ತಾಣಗಳ ರೀಚ್ ಈ ಟಿವಿಗಳಿಗಿಂತಲೂ ಕಡಿಮೆಯಿದ್ದರೂ ತಮ್ಮ ಪರಿಧಿಯೊಳಗೆ ಪರಿಣಾಮಕಾರಿಯಾಗಿ ಆ ಸುಳ್ಳುಗಳನ್ನು ಹೊಡೆದುರುಳಿಸುತ್ತಿವೆ” ಎನ್ನುತ್ತಾರೆ ಧನ್ಯಾ ರಾಜೇಂದ್ರನ್.

ಸಿಎಎ ಪ್ರತಿಭಟನೆ ಸಮಯದಲ್ಲಿ, ಕೊರೊನಾ ಸಮಯದಲ್ಲಿ ಹಾಗೂ ಪ್ರಸ್ತುತ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಸಾಂಪ್ರದಾಯಿಕ ಮುಖ್ಯವಾಹಿಯ ಹಲವು ಮಾಧ್ಯಮಗಳು ಸುಳ್ಳುಗಳನ್ನು ಸತ್ಯದ ತಲೆಮೇಲೆ ಹೊಡೆದಂತೆ ಅತಿರಂಜಿತವಾಗಿ ಕಟ್ಟಿಕೊಡುವುದನ್ನು ನಾವು ನೋಡುತ್ತಲೇ ಇದ್ದೇವೆ. ಇಂತಹ ಸಂದರ್ಭದಲ್ಲಿ ಅದನ್ನು ಸಮರ್ಥವಾಗಿ ಎದುರಿಸಿದ ಮತ್ತೊಂದು ಆನ್ಲೈನ್ ಪತ್ರಿಕೆ ದಿ ಕ್ವಿಂಟ್. ಪತ್ರಕರ್ತೆ ಅರ್ಪಿತ ಹೇಳುವಂತೆ, “ಕೆಲವೇ ಕೆಲವು ಟಿವಿ ಮಾಧ್ಯಮಗಳಷ್ಟೇ ಸುದ್ದಿಗಳ ಸತ್ಯಾಸತ್ಯತೆಯನ್ನು ಹುಡುಕಿ ಅವುಗಳನ್ನು ಸುದ್ದಿ ಮಾಡುತ್ತಿದೆ. ಉಳಿದಂತೆ ಹೆಚ್ಚಿನ ಟಿವಿ ಮಾಧ್ಯಮಗಳು ಭ್ರಷ್ಟ ಮಾಧ್ಯಮಗಳೇ ಆಗಿವೆ. ಹಾಗಾಗಿ ಜನರ ಪರವಾಗಿ ಸತ್ಯವನ್ನು ಹೇಳಲು ಹಾಗೂ ಅದನ್ನು ಇನ್ನೂ ಹೆಚ್ಚಿನ ಜನರಿಗೆ ತಲುಪಿಸಲು ಈ ಪರ್ಯಾಯ ಮಾಧ್ಯಮಗಳು ಹೆಚ್ಚಿನ ಶ್ರಮ ಹಾಕಬೇಕಾಗಿದೆ” ಎನ್ನುತ್ತ್ತಾರೆ.

ಈ ಪರ್ಯಾಯ ಡಿಜಿಟಲ್ ಮಾಧ್ಯಮದ ಸ್ಪೇಸ್‌ನಲ್ಲಿ ಬಹಳ ದಿಟ್ಟತನದಿಂದ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆ ದಿ ವೈರ್. ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ಸುದೀರ್ಘ ಅನುಭವವಿದ್ದ ಸಿದ್ದಾರ್ಥ್ ವರದರಾಜನ್ ದ ವೈರ್‌ನ ಸಂಸ್ಥಾಪಕ ಸಂಪಾದಕರು. “ಮುಖ್ಯವಾಹಿನಿ ಮಾಧ್ಯಮಗಳ ಎಲ್ಲಾ ಸುಳ್ಳುಗಳನ್ನು ಒಡೆಯಲು ಹಾಗೂ ಅದನ್ನು ಜನರಿಗೆ ತಲುಪಿಸಲು ನಮಗೆ 2020 ರಲ್ಲಿ ಸಾಧ್ಯವಾಗಿದೆ. ಈ ಮುಖ್ಯವಾಹಿನಿ ಕೊಡುವಂತಹ ಸುಳ್ಳಗಳ ವಿರುದ್ದ ನಮಗೆ ವಸ್ತುನಿಷ್ಠವಾದ, ಸತ್ಯದ ಪರವಾದ, ಪ್ರಾಮಾಣಿಕತೆಯ ವಿಷಯಗಳನ್ನು ತಲುಪಿಸಲು ಸಾಧ್ಯವಾಗಿದೆ. ಓದುಗರು ಈ ಪೋರ್ಟಲ್‌ಗಳ  ಸುದ್ದಿಗಳನ್ನು ಆರ್ಥಿಕವಾಗಿ ಬೆಂಬಲಿಸಲು ಸಾಧ್ಯವಾದರೆ ಇದು ಇನ್ನಷ್ಟು ಗಟ್ಟಿಯಾಗಲು ಸಾಧ್ಯ” ಎಂದು ಹೇಳುತ್ತಾರೆ.

ದಿ ವೈರ್ ಅಮಿತ್ ಶಾ ಪುತ್ರ ಜೇ ಶಾ ಗಳಿಕೆ ಕುರಿತು ಪ್ರಕಟಿಸಿದ ತನಿಖಾ ವರದಿ ಅಧಿಕಾರಸ್ಥರನ್ನು ಅಲುಗಾಡಿಸಿತ್ತು. ಇಂಥ ಹಲವು ತನಿಖಾ ವರದಿಗಳನ್ನು ಪ್ರಕಟಿಸಿದ ದಿ ವೈರ್ ಮಾದರಿ ಸುದ್ದಿಸಂಸ್ಥೆಯಾಗಿ ಬೆಳೆದಿದೆ.

ಸುದ್ದಿ-ವಿಶ್ಲೇಷಣೆಗಳನ್ನು ನೀಡುತ್ತಾ, ಸಾಂಸ್ಕೃತಿಕ ಎಲ್ಲ ಆಗುಹೋಗುಗಳನ್ನು ವರದಿ ಮಾಡುವ ದಿ ಸ್ಕ್ರಾಲ್‌ನದ್ದು ಇನ್ನೊಂದು ಬಗೆಯ ಪತ್ರಿಕೋದ್ಯೋಗ. ಒಂದು ಬಗೆಯ ಚರ್ಚೆಗಳನ್ನು ಸ್ಥಾಪಿಸುತ್ತಿರುವಾಗ, ವೈವಿಧ್ಯತೆಯ ಸಂಕಥನವನ್ನು, ಬಹುತ್ವದ ಪ್ರಜ್ಞೆಯನ್ನು ಜೀವಂತವಾಗಿಡುವ ಬದ್ಧತೆಯೊಂದಿಗೆ ಸ್ಕ್ರಾಲ್ ಕಾರ್ಯನಿರ್ವಹಿಸುತ್ತಿದೆ. ಅದೇ ಅದರ ವೈಶಿಷ್ಟ್ಯತೆ ಮತ್ತು ಅನನ್ಯತೆ.

ಇಂಗ್ಲಿಷ್‌ನಲ್ಲಿ ದಶಕದಿಂದಲೂ ಈ ಪ್ರಯತ್ನಗಳು ಅನೇಕ ಭಾಷಿಕ ಪ್ರಯೋಗಗಳಿಗೆ ಸ್ಫೂರ್ತಿಯಾಯಿತು. ಸಣ್ಣ ಪ್ರಮಾಣದ ಹೂಡಿಕೆ, ಸಣ್ಣ ಪ್ರಮಾಣದ ಸಿಬ್ಬಂದಿಯೊಂದಿಗೆ ಸುದ್ದಿಮನೆ ನಡೆಸುವ ಸಾಧ್ಯತೆಯೇ ದೊಡ್ಡ ಅವಕಾಶವಾಗಿ ಕಾಣಿಸಿಕೊಂಡಿತು.

ವಾರ್ತಾಭಾರತಿ ವೆಬ್ ಪೋರ್ಟಲ್ ಉಸ್ತುವಾರಿವಹಿಸಿಕೊಂಡಿರುವ ಮೊಹಮ್ಮದ್ ಅವರು ಹೇಳುವಂತೆ, “ಕಳೆದ ನಾಲ್ಕೈದು ವರ್ಷಗಳಿಂದ ಈ ಪರ್ಯಾಯ ಮಾಧ್ಯಮಗಳು ಸಾಮಾಜಿಕವಾಗಿ ಪರಿಣಾಮ ಬೀರುತ್ತಿದೆ. ಇಂಗ್ಲಿಷ್‌ನಲ್ಲಿ ನ್ಯೂಸ್‌ಲಾಂಡ್ರಿ ತರಹದ ಡಿಜಿಟಲ್ ಸುದ್ದಿ ತಾಣಗಳು ಓದುಗರಿಂದ ಹಣಪಡೆದು ಸುದ್ದಿಗಳನ್ನು ನೀಡುತ್ತಿವೆ. ಇದೇ ರೀತಿಯಲ್ಲಿ ಕನ್ನಡದಲ್ಲೂ ಸಾಧ್ಯವಾದರೆ, ವೆಬ್‌ಸೈಟ್‌ಗಳು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಹೇಳುತ್ತಾರೆ.

“ಹಾಗೆ ನೋಡಿದರೆ ಸಾಮಾಜಿಕ ಜಾಲತಾಣದಲ್ಲಿ ಕೂಡಾ ಪ್ರಭುತ್ವದ ಪರವಾಗಿರುವವರು, ಅದನ್ನು ಪ್ರಚಾರ ಮಾಡುವವರ ಸಂಖ್ಯೆ ತುಂಬಾ ಹೆಚ್ಚಿನ ಸಂಖ್ಯೆಯಲ್ಲೇ ಇದೆ ಎನ್ನುತ್ತಾರೆ” ಕನ್ನಡದ ಜನಪ್ರಿಯ ವೆಬ್‌ಸೈಟ್ ವಾರ್ತಾಭಾರತಿಯ ಸಂಪಾದಕರರಾದ ಅಬ್ದುಲ್ ಸಲಾಂ ಪುತ್ತಿಗೆ. ವಾರ್ತಾಭಾರತಿಯ ಮುದ್ರಣ ದಿನಪತ್ರಿಕೆಗಿಂತಲೂ ವೆಬ್ ಹೆಚ್ಚು ಜನಪ್ರಿಯ ಮತ್ತು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಿದೆ ಎಂಬ ಮಾತು ಪತ್ರಿಕಾವಲಯದಲ್ಲಿದೆ. “ಧ್ವನಿ ಇಲ್ಲದವರಿಗೆ ಈ ಸಾಮಾಜಿಕ ಜಾಲತಾಣ ಒಂದು ಒಳ್ಳೆಯ ಅವಕಾಶವಾಗಿದೆ. ಭಾರಿ ಬಂಡವಾಳವಿಲ್ಲದೆ ತಮ್ಮ ವಿಚಾರಗಳನ್ನು ತಲುಪಿಸಬಹುದಾಗಿದೆ. ವಿಷಯಗಳ ಗುಣಮಟ್ಟವನ್ನು ಕಾಪಾಡುತ್ತಾ, ಗಂಭೀರವಾದ ಸುದ್ದಿಗಳನ್ನು ಕೊಟ್ಟರೆ ಖಂಡಿತಾ ಅದಕ್ಕೆ ಜನಪ್ರಿಯತೆ ಸಿಗುತ್ತದೆ” ಎಂದು ಅವರು ಹೇಳುತ್ತಾರೆ.

ಯಾರದೇ ಹಂಗಿಲ್ಲದೆ ಕಾರ್ಯನಿರ್ವಹಿಸುತ್ತಿರುವುದರಿಂದ ಮುಖ್ಯವಾಹಿನಿಯ ಮಾಧ್ಯಮಗಳು ನೀಡುವ ವಿಜೃಂಭಿಸುವ ಸುದ್ದಿಗಳಿಗಿಂತಲೂ ವಸ್ತುನಿಷ್ಠವಾಗಿ, ಸುದ್ದಿಗಳನ್ನು ಸುದ್ದಿಗಳನ್ನಾಗಿಯಷ್ಟೇ ಈ ಪರ್ಯಾಯ ಮಾಧ್ಯಮಗಳು ನೀಡುತ್ತದೆ ಎನ್ನುತ್ತಾರೆ ಜನಶಕ್ತಿ ಮೀಡಿಯಾದ ಕೋರ್ ಕಮಿಟಿ ಸದಸ್ಯ ಗುರುರಾಜ್ ದೇಸಾಯಿ.

“ಜನರಿಗೂ ತಮ್ಮ ಪರವಾಗಿರುವ ಮಾಧ್ಯಮಗಳು ಯಾವುದೆಂದು ತಿಳಿಯುತ್ತಿದೆ. ಈ ಮಾಧ್ಯಮಗಳನ್ನು ಪರ್ಯಾಯ ಮಾಧ್ಯಮಗಳು ಎಂದು ಹೇಳುವುದಕ್ಕಿಂತ ಅದನ್ನು ಜನರ ಮಾಧ್ಯಮ ಎಂದೂ ಹೇಳಬಹುದು” ಎಂದು ಅವರು ಹೇಳುತ್ತಾರೆ.

ಸರ್ಕಾರದ ಹಾಗೂ ಉಳ್ಳವರ ಪರವಾಗಿ ಧ್ವನಿಯಾಗಿರುವ ಮುಖ್ಯವಾಹಿನಿಗಳ ಸುಳ್ಳುಗಳನ್ನು ಒಡೆಯುತ್ತಿರುವ ಡಿಜಿಟಲ್ ಮಾಧ್ಯಮಗಳನ್ನು ಅಂಕುಶದಲ್ಲಿಡಲು ಸರ್ಕಾರ ಪ್ರಯತ್ನಿಸುತ್ತಿದೆ. ಟಿವಿ ಮಾಧ್ಯಮಗಳನ್ನು ಕೇಂದ್ರ ಸರ್ಕಾರವು ಈಗಾಲೇ ತನ್ನ ಅಂಕುಶದಲ್ಲಿಟ್ಟದೆ. ಅದೇ ರೀತಿ ತನ್ನ ವಿರುದ್ದವಾಗಿರುವ ಡಿಜಿಟಲ್ ಮಾಧ್ಯಮಗಳನ್ನು ಕೂಡಾ ತನ್ನ ತಾಳಕ್ಕೆ ತಕ್ಕಂತೆ ಕುಣಿಸುವುದಕ್ಕೆ ಪ್ರಯತ್ನಿಸುತ್ತಿದೆ. ಅದಕ್ಕಾಗಿಯೆ ಡಿಜಿಟಲ್ ಮಾಧ್ಯಮಗಳನ್ನು ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ತಂದಿದೆ. ಆದರೆ ವೆಬ್ಪೋರ್ಟಲ್‌ಗಳನ್ನು ವಿದೇಶದಲ್ಲಿ ಕೂಡಾ ನೋಂದಣಿ ಮಾಡಬಹುದಾಗಿದೆ.

ಇಂಟರ್ನೆಟ್ ಎಂಬುವುದು ದೊಡ್ಡದೊಂದು ಜಾಲವೇ ಆಗಿರುವುದರಿಂದ ಅದನ್ನು ಅಷ್ಟು ಸುಲಭದಲ್ಲಿ ನಿಯಂತ್ರಿಸಲು ಸಾಧ್ಯವಾಗುವುತ್ತಿಲ್ಲ. ಹಾಗಾಗಿಯೆ ಅದನ್ನು ನಿಯಂತ್ರಿಸುವ ಸಮರ್ಪಕವಾದ ಕಾನೂನುಗಳನ್ನು ತರಲು ಸಾಧ್ಯವಾಗಿಲ್ಲ.

‘ಪ್ರಸ್ತುತ ಡಿಜಿಟಲ್ ಮಾಧ್ಯಮಗಳನ್ನು ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ತಂದಿರುವುದು, ಈ ಮಾಧ್ಯಮಗಳನ್ನು ನಿಯಂತ್ರಿಸಲು ಹೊಟಿರುವ ಮೊದಲನೇ ಹೆಜ್ಜೆಯಾಗಿದೆ” ಎಂದು ಧನ್ಯಾ ರಾಜೇಂದ್ರನ್ ಅಭಿಪ್ರಾಯ ಪಡುತ್ತಾರೆ.

ಹಲವು ಡಿಜಿಟಲ್ ಮಾತ್ರ ಮಾಧ್ಯಮಗಳು ಸರ್ಕಾರವನ್ನು ಸಮರ್ಪಕವಾಗಿ ಪ್ರಶ್ನಿಸುತ್ತಾ, ಮಾಧ್ಯಮ ಧರ್ಮವನ್ನು ಎತ್ತಿಹಿಡಿದು ಜನರ ನಡುವೆ ಮಾಧ್ಯಮಗಳ ಬಗ್ಗೆ ವಿಶ್ವಾಸವನ್ನು ಇನ್ನೂ ಉಳಿಸಿಕೊಂಡಿದೆ. ಆದರೆ ದಾರಿ ಇನ್ನೂ ದೂರವಿದೆ. ಇಂದಿನ ಸಂದರ್ಭದಲ್ಲಿ ಆ ದಾರಿ ಕಲ್ಲುಮುಳ್ಳಿನ ದಾರಿಯಾಗಿದೆ.


ಇದನ್ನೂ ಓದಿ: ಆನ್ಲೈನ್ ಸುದ್ದಿ ಮಾಧ್ಯಮ, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕೇಂದ್ರದ ನಿಯಂತ್ರಣಕ್ಕೆ- ಆದೇಶ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...