ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ರವರ ನಾರ್ತ್ ಅವೆನ್ಯೂ ಹೈ-ಸೆಕ್ಯುರಿಟಿ ಪ್ರದೇಶದಲ್ಲಿನ ನಿವಾಸವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಮನ ಹೆಸರಲ್ಲಿ ಭೂ ದಂಧೆ ನಡೆಯುತ್ತಿದ್ದು ಇದರಲ್ಲಿ ಲ್ಯಾಂಡ್ ಮಾಫಿಯಾ ಭಾಗಿಯಾಗಿದೆ ಎಂಬ ಗಂಭೀರ ಆರೋಪವನ್ನು ಅವರು ಭಾನುವಾರ ಮಾಡಿದ್ದರು. 2 ಕೋಟಿ ರೂ. ಗೆ ಒಂದು ಜಮೀನು ಖರೀದಿಯಾಗುತ್ತದೆ. ಕೇವಲ 5 ನಿಮಿಷಗಳ ನಂತರ ಚಂಪತ್ರಾಯ ನೇತೃತ್ವದಲ್ಲಿ ರಾಮಜನ್ಮಭೂಮಿ ಟ್ರಸ್ಟ್ ಅದೇ ಜಮೀನನ್ನು 18.5 ಕೋಟಿ ರೂ.ಗಳಿಗೆ ಖರೀದಿಸಿದೆ ಎಂದು ಸಂಜಯ್ಸಿಂಗ್ ದಾಖಲೆಗಳ ಸಮೇತ ಅಪಾದನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿಯೇ ತನ್ನ ಮನೆ ಮೇಲೆ ದಾಳಿಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಮ ಜನ್ಮಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಸಂಜಯ್ ಸಿಂಗ್ ಪತ್ರಿಕಾಗೋಷ್ಠಿ ನಡೆಸಿ, ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಅಲ್ಲದೇ ಈ ವಿಷಯದಲ್ಲಿ ಸಿಬಿಐ ತನಿಖೆಗೆ ಆಗ್ರಹಿಸಿದ್ದರು.
“ಈ ರೀತಿಯ ದಾಳಿಗಳಿಗೆ ನಾನು ಹೆದರುವುದಿಲ್ಲ ಮತ್ತು ಪ್ರಭು ಶ್ರೀ ರಾಮ್ ಹೆಸರಿನಲ್ಲಿ ನಡೆಯುತ್ತಿರುವ ಈ ಹಗರಣವನ್ನು ಬಹಿರಂಗಪಡಿಸುವುದನ್ನು ಮುಂದುವರಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಸಂಸದರ ಮನೆಯ ನೇಮ್ ಪ್ಲೇಟ್ ಅನ್ನು ಕಿತ್ತುಹಾಕುವ ಪ್ರಯತ್ನ ಮಾಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ನವದೆಹಲಿ) ದೀಪಕ್ ಯಾದವ್ ಹೇಳಿದ್ದಾರೆ. ಈ ಸಂಬಂಧ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಯಾರಿಗೂ ದೈಹಿಕ ಗಾಯವಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಮ ಜನ್ಮಭೂಮಿ ಟ್ರಸ್ಟ್ನಿಂದ ಭೂ ದಂಧೆ: ರಾಮನ ಹೆಸರಲ್ಲಿ ಲೂಟಿ ಎಂದ AAP, SP