Homeಮುಖಪುಟಮಂಡ್ಯದಲ್ಲಿ ಅಮಾನವೀಯ ಜಾತಿ ದೌರ್ಜನ್ಯ: ದಲಿತ ಯುವಕನ ಮೇಲೆ ಹಲ್ಲೆ, ಹಸುವಿಗೆ ಕಟ್ಟಿ ಮೆರವಣಿಗೆ

ಮಂಡ್ಯದಲ್ಲಿ ಅಮಾನವೀಯ ಜಾತಿ ದೌರ್ಜನ್ಯ: ದಲಿತ ಯುವಕನ ಮೇಲೆ ಹಲ್ಲೆ, ಹಸುವಿಗೆ ಕಟ್ಟಿ ಮೆರವಣಿಗೆ

ಈ ಪ್ರಕರಣದಲ್ಲಿ ಸಂತ್ರಸ್ತನನ್ನೇ ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ನೀಡಲಾಗಿದೆ. ಆ ನಂತರ ರಾಜೀ ಮಾಡಿಸಲಾಗಿದೆ. ಆದರೆ ಸಂತ್ರಸ್ತ ದೂರು ನೀಡಿ ವಾರವಾದರೂ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ.

- Advertisement -
- Advertisement -

ಹಸು ಕೊಳ್ಳಲು ಬಂದಿದ್ದ ದಲಿತ ಯುವಕನ ಮೇಲೆ ಕಳ್ಳತನದ ಆರೋಪ ಹೊರಿಸಿ, ಥಳಿಸಿ, ಹಸುವಿಗೆ ಕಟ್ಟಿ ಮೆರವಣಿಗೆ ನಡೆಸಿರುವ ಅಮಾನವೀಯ ಜಾತಿ ದೌರ್ಜನ್ಯದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದಲಿತ ಯುವಕನನ್ನು ಹಸುವಿಗೆ ಕಟ್ಟಿ ಮೆರವಣಿಗೆ ನಡೆಸಿರುವ ವೀಡಿಯೋ ವೈರಲ್ ಆಗಿದ್ದು, ವಾರದ ನಂತರ ಘಟನೆ ಬೆಳಕಿಗೆ ಬಂದಿದೆ. ಮಳವಳ್ಳಿ ತಾಲ್ಲೂಕಿನ ಹಣಕೊಳ ಗ್ರಾಮದ ಸುರೇಶ್ ವರ್ಧನ್ (32) ಹಲ್ಲೆಗೊಳಗಾದ ಯುವಕ. ಆರೋಪಿಗಳಾದ ದುಗ್ಗನಹಳ್ಳಿಯ ರಾಜು, ಹಣಕೊಳ ಗ್ರಾಮದ ಸುಂದರಮ್ಮ, ಮಳವಳ್ಳಿಯ ಮಲ್ಲಯ್ಯ ಮತ್ತು ಗಿರೀಶ್ ಎಂಬುವವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂನೊಂದಿಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಲಕ್ಷ್ಮಿ ನಾರಾಯಣ್ “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ವಾಸ್ತವವಾಗಿ ನಡೆದಿದ್ದೇನು?

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಕೊರೊನಾ ತಂದೊಡ್ಡಿದ ಸಂಕಷ್ಟದಿಂದಾಗಿ ತನ್ನ ಹಳ್ಳಿಗೆ ಮರಳಿದ್ದರು. ಹಳ್ಳಿಯಲ್ಲಿಯೇ ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸಬೇಕೆಂದುಕೊಂಡಿದ್ದರು. ಪರಿಚಯಸ್ಥರೊಬ್ಬರಿಂದ ಹಸು ಮಾರಾಟ ಮಾಡುತ್ತಿದ್ದ ರಾಜು ಅವರ ಪರಿಚಯವಾಗಿ, ಅವರ ಹತ್ತಿರ ಹಸು ಕೊಳ್ಳಲು ಮುಂದಾಗಿದ್ದರು. ಈ ಕುರಿತು ಸುರೇಶ್ ನಾನುಗೌರಿ ಜೊತೆ ತಮಗಾದ ಅನ್ಯಾಯವನ್ನು ಹಂಚಿಕೊಂಡಿದ್ದಾರೆ.

ಹಲ್ಲೆಗೊಳಗಾಗಿದ್ದ ಸುರೇಶ್ ಅವರು ವಿವರಿಸುವಂತೆ, ‘ಹಸು ವ್ಯಾಪಾರಿ ದುಗ್ಗನಹಳ್ಳಿ ರಾಜು, ಜೆರ್ಸಿ ಹಸುವೊಂದು ದಿನಕ್ಕೆ 15 ಲೀಟರ್ ಹಾಲು ಕೊಡುತ್ತದೆ ಎಂದು ನಂಬಿಸಿ 44 ಸಾವಿರ ರೂಗಳಿಗೆ ಹಸುವನ್ನು ಮಾರಿದ್ದರು. ಹದಿನೈದು ದಿನಗಳಾದರೂ ಹಸು ದಿನಕ್ಕೆ 3 ಲೀಟರ್ ಅಷ್ಟೇ ಹಾಲು ಕೊಡುತ್ತಿದ್ದರಿಂದ ರಾಜು ಅವರಿಗೆ ಫೋನ್ ಮಾಡಿ ಮೋಸ ಮಾಡಿದ್ದೀರಿ ಎಂದು ಬೇಸರ ತೋಡಿಕೊಂಡಿದ್ದೆ. ನಂತರ ರಾಜು ಇನ್ನೊಂದು ಹಸುವನ್ನು ಕಡಿಮೆ ಬೆಲೆಗೆ ನೀಡುವುದಾಗಿ ತಿಳಿಸಿ 14 ಸಾವಿರ ರೂಗಳಿಗೆ ಗೊಡ್ಡು ಹಸುವನ್ನು ನನಗೆ ಮಾರಿದ್ದರು. ಪಶುವೈದ್ಯರಿಗೆ ಹಸುವನ್ನು ತೋರಿಸಿದಾಗ ಹಸು ಕರು ಹಾಕುವುದಿಲ್ಲ ಎಂಬುದು ತಿಳಿಯಿತು. ಎರೆಡೆರಡು ಬಾರಿ ಮೋಸ ಮಾಡಿದ್ದ ರಾಜು ಅವರ ಬಗ್ಗೆ ಅವರ ಪರಿಚಯಸ್ಥರಿಗೆ ತಿಳಿಸಿದ್ದೆ. ಈ ಎಲ್ಲಾ ಘಟನೆಗಳ ನಂತರ ರಾಜು ಅಕ್ಟೋಬರ್ 12ನೇ ತಾರೀಖಿನಂದು ಊರಿಗೆ ಬಂದು ಇನ್ನೊಂದು ಹಸುವನ್ನು ಹೊಡೆದುಕೊಂಡು ಹೋಗಲು ತಿಳಿಸಿದ್ದರು.

ಅದರಂತೆ ನನ್ನ ಸ್ನೇಹಿತನೊಂದಿಗೆ ಅಕ್ಟೋಬರ್ 12ನೇ ತಾರೀಖಿನಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಅವರ ಮನೆಯ ಹತ್ತಿರ ಹೋಗಿದ್ದೆ. ಆದರೆ ರಾಜು ಅವರ ಮನೆಯಲ್ಲಿ ಯಾರು ಇರಲಿಲ್ಲ. ರಾಜು ಅವರು ಗದ್ದೆಯ ಬಳಿ ಇದ್ದಾರೆ ಎಂದು ಅವರ ಮನೆಯ ಹತ್ತಿರದ ಸಂಬಂಧಿಗಳೊಬ್ಬರು ತಿಳಿಸಿದರು. ಹೇಗೂ ಹಸು ಹೊಡೆದುಕೊಂಡು ಹೋಗಲು ತಿಳಿಸಿದ್ದರಿಂದ ಅವರ ಮನೆಯಲ್ಲಿದ್ದ ಹಸುವನ್ನು ಹೊಡೆದುಕೊಂಡು ರಾಜು ಅವರಿದ್ದ ಗದ್ದೆಯ ಬಳಿಗೆ ಹೊರಟಿದ್ದೆ. ನನ್ನ ಸ್ನೇಹಿತ ಹಿಂದೆ ಗಾಡಿಯಲ್ಲಿ ಬರುತ್ತಿದ್ದ. ಆದರೆ ರಾಜು ಅವರ ಗದ್ದೆಗೆ ಹೋಗುವ ಮೊದಲೇ ಅವರು ಪೂರ್ವ ನಿಯೋಜಿತವಾಗಿ ಕಳ್ಳ, ಕಳ್ಳ ಎಂದು ಕೂಗುತ್ತಾ ರಾಜು ಮತ್ತವರ ಸ್ನೇಹಿತರು ನನ್ನನ್ನು ಸುತ್ತುವರೆದು ಹಸು ಕದಿಯುತ್ತಿದ್ದಾನೆ ಎಂದು ಆರೋಪಿಸಿ ಥಳಿಸಿದರು. ನನ್ನ ಕೈಕಾಲುಗಳನ್ನು ಕಟ್ಟಿ ಬಾವಿಗೆ ಎಸೆದು ಕೊಲ್ಲಲು ಪ್ರಯತ್ನಿಸಿದಾಗ, ರಾಜು ಅವರನ್ನು ಕಾಲಿಡಿದುಕೊಂಡು ಸಾಯಿಸಬೇಡಿ ಎಂದು ಬೇಡಿಕೊಂಡೆ. ಆಗ ಜಾತಿನಿಂದನೆ ಮಾಡಿ ನನ್ನ ಕೈಗಳನ್ನು ಹಸುವಿನ ಹಗ್ಗಕ್ಕೆ ಕಟ್ಟಿ ಮೆರವಣಿಗೆ ಮಾಡಿದರು. ಇದನ್ನೆಲ್ಲಾ ಅಲ್ಲಿದ್ದವರು ವೀಡಿಯೋ ಮಾಡುತ್ತಿದ್ದರು. ನಂತರ ನನ್ನನ್ನು ಅವರೇ ಕಳ್ಳನೆಂದು ಪೊಲೀಸರಿಗೆ ಒಪ್ಪಿಸಿದರು. ನಂತರ ರಾಜು ಅವರು ತನ್ನ ಸ್ನೇಹಿತರೊಂದಿಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ರಾಜಿ ಸಂಧಾನ ನಡೆದು ಕೊನೆಗೆ ನನ್ನನ್ನು ಬಿಡುಗಡೆ ಮಾಡಿದರು ಎಂದು ಸುರೇಶ್ ಇಡೀ ಘಟನೆಯನ್ನು ವಿವರಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ರಾಜು ಮತ್ತವರ ಸ್ನೇಹಿತರು ಮಾಡಿದ್ದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, ಆ ವೀಡಿಯೋದಿಂದಾಗಿ ನನ್ನ ಇಡೀ ಕುಟುಂಬ ಊರಿನಲ್ಲಿ ತಲೆತಗ್ಗಿಸುವಂತಾಯಿತು. ಮಾಡಿಲ್ಲದ ತಪ್ಪಿಗೆ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ನೋವು ಅನುಭವಿಸಿದೆ. ನಿಜವಾಗಿಯೂ ನಡೆದದ್ದೇನು ಎಂಬುದನ್ನು ನನ್ನ ಸಂಬಂಧಿಕರು ಹಾಗೂ ನಮ್ಮ ಸಮುದಾಯದ ಮುಖಂಡರಿಗೆ ವಿವರಿಸಿದೆ. ಆಗ ನಮ್ಮ ಸಮುದಾಯದ ಹಿರಿಯರ ಸಲಹೆ ಮೇರೆಗೆ ಸ್ನೇಹಿತರೊಟ್ಟಿಗೆ ಸೇರಿ ಪೊಲೀಸ್ ಠಾಣೆಯಲ್ಲಿ ರಾಜು ಮತ್ತು ಅವರ ಸ್ನೇಹಿತರ ವಿರುದ್ಧ ದೂರು ನೀಡಿದ್ದೇನೆ ಎಂದು ಸುರೇಶ್ ತಿಳಿಸಿದರು.

”ಪೊಲೀಸ್‌ ಠಾಣೆಗೆ ದೂರು ದಾಖಲಿಸಲು ಹೋದಾಗ ಸಬ್ ಇನ್ಸ್‌ಪೆಕ್ಟರ್ ರವಿಕುಮಾರ್‌ ಕೂಡ ಆರೋಪಿಗಳ ಪರವಾಗಿ ಮಾತನಾಡಿದ್ದು, ನೀನು ದೂರು ದಾಖಲಿಸುವುದಾದರೆ, ನಿನ್ನ ಮೇಲೆ ಕಳ್ಳತನದ ಆರೋಪ ಹೊರಿಸಿ ದೂರು ದಾಖಲಿಸುತ್ತೇನೆ ಎಂದು ಹೆದರಿಸಿದರು. ನಂತರ ನಮ್ಮ ಸಮುದಾಯದವರ ಸಹಾಯದೊಂದಿಗೆ ಡಿವೈಎಸ್‌ಪಿ ಅವರನ್ನು ಸಂಪರ್ಕಿಸಿ, ಆದ ಘಟನೆಯನ್ನು ವಿವರಿಸಿದ ನಂತರ, ವಿಡಿಯೋ ವೈರಲ್ ಆಗಿರುವುದು ಕೆಲ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರವಷ್ಟೇ ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಂಡರು” ಎಂದು ಸುರೇಶ್ ತಿಳಿಸಿದ್ದಾರೆ.

‘ನಾನು ಮಾಡದ ತಪ್ಪಿಗೆ ನನ್ನ ಮಕ್ಕಳು ತಲೆ ತಗ್ಗಿಸುವಂತಾಗದಿರಲಿ. ಜಾತಿ ಹೆಸರನಲ್ಲಿ ನಡೆಯುತ್ತಿರುವ ಈ ಕ್ರೌರ್ಯ ಇಲ್ಲಿಗೆ ಕೊನೆಗೊಳ್ಳಲಿ. ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಿ’ ಎನ್ನುವ ಸುರೇಶ್ ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಮಳವಳ್ಳಿಯ ನಿವೃತ್ತ ಪ್ರಾಂಶುಪಾಲರಾದ ಎಂ.ವಿ ಕೃಷ್ಣರವರು, “ಮಳವಳ್ಳಿ ತಾಲ್ಲೂಕಿನ ಹಳ್ಳಿಗಳಲ್ಲಿ ಇಂದಿಗೂ ಪರಿಶಿಷ್ಟ ಸಮುದಾಯದ ಜನರಿಗೆ ಕ್ಷೌರ ಮಾಡುವುದಿಲ್ಲ, ಹೋಟೆಲ್‌ಗಳಲ್ಲಿ ಪ್ರತ್ಯೇಕವಾಗಿ ಪೇಪರ್ ಲೋಟಗಳಲ್ಲಿ ಟೀ ಕೊಡುವ ಸಂಸ್ಕೃತಿ ಇದೆ. ಈ ಕುರಿತು ಹಲವು ಹೋರಾಟಗಳನ್ನು ನಡೆಸಿದ್ದೇವೆ. ಪರಿಸ್ಥಿತಿ ಇಂದಿಗೂ ಹೀಗೆ ಮುಂದುವರೆದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ ಸಂತ್ರಸ್ತನನ್ನೇ ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ನೀಡಲಾಗಿದೆ. ಆ ನಂತರ ರಾಜೀ ಮಾಡಿಸಲಾಗಿದೆ. ಆದರೆ ಸಂತ್ರಸ್ತ ದೂರು ನೀಡಿ ವಾರವಾದರೂ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತೇವೆ. ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.

ಈ ದೇಶದಲ್ಲಿ ವ್ಯಕ್ತಿಯೊಬ್ಬ ದಲಿತ ಎಂಬ ಕಾರಣಕ್ಕೆ ಅವನ ಮೇಲೆ ದೌರ್ಜನ್ಯ ಎಸಗುವುದು, ದಲಿತ ಮಹಿಳೆ ಎಂಬ ಕಾರಣಕ್ಕೆ ಅತ್ಯಾಚಾರ ಎಸಗುವುದು, ಜಾತಿಯ ಹೆಸರಿನಲ್ಲಿ ಅವಹೇಳನ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಇಡೀ ಕುಟುಂಬಗಳ ಮೇಲೆ ಹಲ್ಲೆ ನಡೆಸುವುದು ತೀರಾ ಸಾಮಾನ್ಯ ಎನ್ನುವಂತಾಗಿದೆ. ಆರೋಪಿಗಳಿಗೆ ಶಿಕ್ಷೆಯಾಗದಿರುವುದು ಇಂತಹ ಘಟನೆಗಳು ಕೊನೆಗೊಳ್ಳದಿರಲು ಒಂದು ಕಾರಣವಾಗಿದೆ. ಈ ಬಗ್ಗೆ ಸರ್ಕಾರಗಳು ಕಣ್ಣಿದ್ದು ಕುರುಡರಂತೆ, ಕಿವಿಯಿದ್ದು ಕಿವುಡರಂತೆ ವರ್ತಿಸುತ್ತಿರುವುದು ಏಕೆ? ನೊಂದ ಜನರೇ ಕಾನೂನು ಕೈಗೆತ್ತುಕೊಳ್ಳುವ ಮೊದಲು ಸರ್ಕಾರಗಳು ಎಚ್ಚೆತ್ತುಕೊಳ್ಳಲಿ. ಈ ರೀತಿಯ ಜಾತಿ ದೌರ್ಜನ್ಯಗಳಿಗೆ ಕೊನೆ ಹಾಡಲಿ..


ಇದನ್ನೂ ಓದಿ: ದಲಿತ ಕುಟುಂಬದ ಮೇಲೆ ಹಲ್ಲೆ, ಜಾತಿನಿಂದನೆ – ಪ್ರಕರಣ ದಾಖಲಾದರೂ ನಿಲ್ಲದ ದೌರ್ಜನ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...