Homeಕರ್ನಾಟಕಮುಸ್ಲಾಪುರ ಮದ್ಯದಂಗಡಿ ಪ್ರಕರಣ; ಬಂಧನ ಭೀತಿಯಲ್ಲಿ ಊರು ತೊರೆದ ಗ್ರಾಮಸ್ಥರು!

ಮುಸ್ಲಾಪುರ ಮದ್ಯದಂಗಡಿ ಪ್ರಕರಣ; ಬಂಧನ ಭೀತಿಯಲ್ಲಿ ಊರು ತೊರೆದ ಗ್ರಾಮಸ್ಥರು!

ಗ್ರಾಮದಲ್ಲಿ ತೆರೆದ ಬಾರ್‌ ಮುಚ್ಚುವಂತೆ ಮಹಿಳೆಯರು ಪ್ರಶ್ನಿಸಿದಾಗ ಗಲಾಟೆ ನಡೆದಿದೆ. 41 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದೂ ಆರೋಪಿಸಲಾಗಿದೆ.

- Advertisement -
- Advertisement -

ಕಡೂರು ತಾಲ್ಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಬಾರ್‌ ತೆರೆದಿದ್ದಕ್ಕೆ ಆಕ್ರೋಶಗೊಂಡ ಗ್ರಾಮದ ಮಹಿಳೆಯರು ನವೆಂಬರ್‌‌ 12ರಂದು ಬಾರ್‌ಗೆ ನುಗ್ಗಿ ಪೀಠೋಪಕರಣಗಳನ್ನೆಲ್ಲ ಮುರಿದುಹಾಕಿದ ಸುದ್ದಿ, ವೀಡಿಯೋ ಸಾಮಾಜಿಕ ಜಾಲತಾಣವೂ ಸೇರಿದಂತೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಮುಸ್ಲಾಪುರ ನಾಲ್ಕೈದು ಸಮುದಾಯಗಳ ಸುಮಾರು 150 ಮನೆಗಳಿರುವ ಪುಟ್ಟ ಗ್ರಾಮ. ಕೃಷಿ ಭೂಮಿಯಲ್ಲಿ ಕೂಲಿ ಮಾಡುವುದು ಇಲ್ಲಿನ ಬಹುತೇಕ ಜನರ ಬದುಕಾಗಿತ್ತು. ಹೀಗೆ ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಊರಿನಲ್ಲಿ ಹೋಟೆಲ್‌ ಹೆಸರಿನಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಒಂದನ್ನು ಆರಂಭ ಮಾಡಲಾಯಿತು.
ಆರಂಭದಿಂದಲೇ ಇದಕ್ಕೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಬಾರ್‌ ಇರುವ ಸಮೀಪದಲ್ಲಿಯೇ ಹೈಸ್ಕೂಲ್‌ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ಗಳಿದ್ದು, ಹತ್ತಿರದಲ್ಲಿಯೇ ಮದಗದಕೆರೆ ಹಾಗೂ ಚಾನೆಲ್‌ ಇದೆ. ಗ್ರಾಮದಲ್ಲಿ ಬಾರ್‌ ತೆರೆದರೆ ಕೂಲಿ ಕಾರ್ಮಿಕರು ದುಡಿದ ಹಣವನ್ನು ಕುಡಿಯುವುದಕ್ಕೆ ವ್ಯಯಿಸುತ್ತಾರೆ ಎನ್ನುವ ಮಹಿಳೆಯರು, ನಮ್ಮೂರಿನ ಸ್ವಾಸ್ಥ್ಯಕ್ಕಾಗಿ ನಮ್ಮೂರಿನಲ್ಲಿ ಬಾರ್‌ ಬೇಡ ಎಂದು ಅಲವತ್ತುಕೊಂಡಿದ್ದರು.
ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿಯಿಂದಲೂ ಬಾರ್‌ ಅಂಡ್‌ ರೆಸ್ಟೋರೆಂಟ್‌ ತೆರೆಯದಂತೆ ನಿರ್ಣಯ ಹೊರಡಿಸಿದ್ದಾಗಲೂ ಕಳ್ಳದಾರಿಯಿಂದ ಬಾರ್‌ ತೆರೆಯಲು ಪ್ರಯತ್ನಿಸಲಾಗಿದೆ ಎಂದು ದೂರಲಾಗಿದೆ. ಹೋಟೆಲ್‌ ಮಾಡುತ್ತೇವೆ ಎಂದು ಪರವಾನಗಿ ಪಡೆದು ಅಕ್ರಮವಾಗಿ ಬಾರ್‌ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಕಳೆದ ಒಂದು ತಿಂಗಳಿನಿಂದ ಸತತ ಪ್ರತಿಭಟನೆ ನಡೆಸುತ್ತಾ ಬಂದಿದ್ದರು. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗೂ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು.

“ಈ ನಡುವೆ ಬಾರ್‌ ಓಪನ್‌ ಮಾಡಿದ್ದನ್ನು ವಿರೋಧಿಸಿ ಮೂವರು ಮಹಿಳೆಯರು ಇದನ್ನು ಪ್ರಶ್ನಿಸಿ ಬಾರ್ ಒಳಗೆ ಹೋಗಿದ್ದರು. ಆ ಸಮಯದಲ್ಲಿ ಬಾರ್‌ನಲ್ಲಿದ್ದವರು ಕುಡಿದ ಅಮಲಿನಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆಯರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿ, ಕಿರುಕುಳ ನೀಡಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮದ ಮಹಿಳೆಯರು ಹಾಗೂ ಪುರುಷರು ಬಾರ್‌ಗೆ ನುಗ್ಗಿ ಪೀಠೋಪಕರಣಗಳನ್ನು ಮುರಿದುಹಾಕಿದ್ದರು. ನಂತರದಲ್ಲಿ ಕಿರುಕುಳಕ್ಕೊಳಗಾಗಿದ್ದ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು” ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿರಿ: ಅಡಿ ಇಡದಿರಿ ಗುಡಿಯೊಳಗೆ…! ದೇವಸ್ಥಾನ ಪ್ರವೇಶ ನಿಷೇಧ ಮತ್ತು ವಿರೋಧ

“ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯರನ್ನು ವಿಚಾರಣೆಗಾಗಿ ಭಾನುವಾರ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿತ್ತು. ಮಾರನೇ ದಿನ ಆರು ಗಂಟೆಗೆ ಗ್ರಾಮಕ್ಕೆ ಬಂದ ಪಿಎಸ್‌ಐ ರಮ್ಯಾ ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಮನೆಯೊಂದರ ಮೇಲಿನ ಹೆಂಚುಗಳನ್ನು ಒಡೆದುಹಾಕಿ, ಮನೆಯೊಳಗೆ ಬಾಗಿಲು ಮುರಿದು,  ನುಗ್ಗಿ ಮೂರು ಮಂದಿ ಮಹಿಳೆಯರು ಸೇರಿದಂತೆ ಐದು ಜನರನ್ನು ಪೊಲೀಸ್‌ ಠಾಣೆಗೆ ಎಳೆದೊಯ್ದರು” ಎಂದು ಗ್ರಾಮದ ಹಲವು ಮುಖಂಡರು ಆರೋಪಿಸಿದ್ದರು. ಈ ಕುರಿತಂತೆ ವಿಡಿಯೊ ಕೂಡ ವೈರಲ್‌ ಆಗಿತ್ತು. ಬಾಗಿಲು ಹಾಗೂ ಹೆಂಚು ದ್ವಂಸ ಆಗಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿತ್ತು.

ಗ್ರಾಮಸ್ಥರೆಲ್ಲರೂ ಕೂಡಿ ಕಡೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬಾರ್‌ ಮಾಲೀಕರು ಕೂಡ ಬಾರ್‌ನಲ್ಲಿ ನಡೆದಿದ್ದರ ಬಗ್ಗೆ ಪ್ರತಿದೂರು ನೀಡಿದ್ದರು. ಬಾರ್‌ ಮಾಲೀಕರ ದೂರಿನ ಆಧಾರದಲ್ಲಿ 41 ಜನರ ಮೇಲೆ ಎಫ್‌ಐಆರ್‌ ದಾಖಲಾಗಿದ್ದು ಐಪಿಸಿ ಸೆಕ್ಷನ್ 143, 144, 147, 148, 323, 324, 504, 506, 447, 427, 114, 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ನಂತರ ಮುಸ್ಲಾಪುರ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದ್ದು, ಪ್ರಕರಣದಲ್ಲಿ ಭಾಗಿಯಾದ 41 ಆರೋಪಿಗಳಲ್ಲಿ 17 ಮಹಿಳೆಯರಿದ್ದಾರೆ. ಐವರನ್ನು ಈಗಾಗಲೇ ಬಂಧಿಸಲಾಗಿದ್ದು, ಬಂಧನಕ್ಕೆ ಹೆದರಿ ಇನ್ನುಳಿದವರು ಊರು ತೊರೆದಿದ್ದಾರೆ ಎಂದು ‘ನಾನುಗೌರಿ.ಕಾಂ’ಗೆ ತಿಳಿದುಬಂದಿದೆ.

“ಕೃಷಿ ಚಟುವಟಿಕೆಗಳು ನಡೆಯಬೇಕಿದೆ. ಜನರು ಪೊಲೀಸರಿಗೆ ಹೆದರಿ ಊರು ಬಿಟ್ಟು ಹೋಗಿದ್ದಾರೆ. ಹೋರಾಟ ಹಿಂಸೆಗೆ ತಿರುಗಿದ್ದು ವಿಷಾದನೀಯ. ಸ್ಥಳೀಯ ಜನರ ಆಗ್ರಹಕ್ಕೆ ಬೆಲೆ ಇಲ್ಲದಿದ್ದಾಗ, ಈ ಘಟನೆ ನಡೆದಿದೆ” ಎನ್ನುತ್ತಾರೆ ಗ್ರಾಮದ ಕೆಲವು ಮುಖಂಡರು.

ಜನರ ವಿರುದ್ಧವಾಗಿ ಹೋಟೆಲ್‌ ಪರವಾನಗಿ ಬಳಸಿಕೊಂಡು ತೆರೆಯಲಾಗಿರುವ ಬಾರ್‌ನಲ್ಲಿ ಐದು ಜನರ ಸಹಭಾಗಿತ್ವವಿದ್ದು, ಅದರಲ್ಲಿ ಒಬ್ಬರು ಸರ್ಕಾರಿ ಅಧಿಕಾರಿಯೊಬ್ಬರ ಪತ್ನಿಯು ಇದ್ದಾರೆ ಎಂಬ ಆರೋಪಗಳಿವೆ. ಇದೇನೇ ಇರಲಿ, ನಮ್ಮೂರಿಗೆ ಬಾರ್‌ ಬೇಡ, ಊರಿನಲ್ಲಿ ಬಾರ್‌ ತೆರೆದರೆ ಇಡೀ ಊರಿನ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ದುಡಿವ ಮಹಿಳೆಯರು ಸತತ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾಗಲೂ, ಈ ಮಹಿಳೆಯರ ಅಳಲನ್ನು ಕೇಳದ ಸರ್ಕಾರವು ಜನವಿರೋಧಿಯಾಗಿದೆ ಎಂಬುದು ಜನರ ಅಭಿಪ್ರಾಯ.

ಕುಡಿತದಿಂದಾಗಿ ಮುಂದಾಗಬಹುದಾದ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಅಪಾಯವನ್ನು ಲೆಕ್ಕಿಸದೇ ಗ್ರಾಮದ ಮಹಿಳೆಯರು ಇಟ್ಟಿರುವ ಹೆಜ್ಜೆಗೆ ಪರ ವಿರೋಧದ ಅಭಿಪ್ರಾಯಗಳು ಬಂದಿವೆ. ದಾಳಿಗೆ ಪ್ರತಿದಾಳಿ ಎಂದು ಕೆಲವರು ಸಮರ್ಥಿಸಿದ್ದಾರೆ. ಕಾನೂನು ವಿರೋಧಿಯಾಗಿ ದಾಳಿ ಮಾಡಬಾರದಿತ್ತು ಎಂಬ ಅಭಿಪ್ರಾಯಗಳನ್ನು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪೊಲೀಸರು ದಾಳಿ ಮಾಡಿ ಮನೆಯ ಬಾಗಿಲು, ಹೆಂಚು ಒಡೆದಿದ್ದಾರೆ ಎಂಬುದಕ್ಕೂ ಟೀಕೆಗಳು ವ್ಯಕ್ತವಾಗಿವೆ. ಆದರೆ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿರಿ: ಬಾಗಲೂರು ಗ್ರಾಪಂ: ದಲಿತ ಅಧ್ಯಕ್ಷೆ ಕುಳಿತ ಕುರ್ಚಿ ಗೋಮೂತ್ರದಿಂದ ಶುದ್ಧೀಕರಣ: ಬಿಜೆಪಿ ದೂರು

ಪಿಎಸ್‌ಐ ರಮ್ಯಾ ಹೇಳುವುದೇನು?

ನಾನುಗೌರಿ.ಕಾಂ ಜೊತೆ ಮಾತನಾಡಿದ ಕಡೂರು ಪಿಎಸ್‌ಐ ರಮ್ಯಾ, “ಐದು ಜನರನ್ನು ಬಂಧಿಸಲಾಗಿದೆ. ಉಳಿದವರು ಸಿಕ್ಕಿಲ್ಲ. ಪೊಲೀಸರು ದೌರ್ಜನ್ಯ ಎಸಗಿಲ್ಲ. ಯಾರದೇ ಮನೆಯ ಬಾಗಿಲು, ಹೆಂಚನ್ನು ನಾವು ಒಡೆದಿಲ್ಲ. ಪೊಲೀಸರ ಮೇಲೆ ಆರೋಪ ಹೊರಿಸಲು ಮಾಡಿರುವ ಸಂಚಿನ ಕುರಿತು ಮಾತನಾಡಿರುವ ಆಡಿಯೊ ನಮಗೆ ಲಭ್ಯವಾಗಿದೆ” ಎಂದರು.

ಪಿಎಸ್‌ಐ ರಮ್ಯಾ

“ಬಾಗಿಲನ್ನು ಎತ್ತಿದರೆ ಅದಾಗಿಯೇ ತೆರೆದುಕೊಳ್ಳುತ್ತದೆ. ಇದರ ವಿಡಿಯೊವನ್ನು ಜೆಸಿಬಿ ಮಂಜ ಮಾಡಿ, ಎಂಟು ಹತ್ತು ಹೆಂಚು ಒಡೆದು ಹಾಕಿ ಘಟನೆಯನ್ನು ಪೊಲೀಸರ ಮೇಲೆ ರೂಪಿಸಲಾಗಿದೆ” ಎಂದು ಇಬ್ಬರು ವ್ಯಕ್ತಿಗಳು ಮಾತನಾಡಿರುವ ಆಡಿಯೊದಲ್ಲಿನ ಸಾರಾಂಶ. ಆದರೆ ಆ ಆಡಿಯೊದಲ್ಲಿ ಮಾತನಾಡಿದವರು ಯಾರೆಂಬ ಮಾಹಿತಿ ಸಿಕ್ಕಿಲ್ಲ. ಉದ್ದೇಶಪೂರ್ವಕವಾಗಿಯೇ ಈ ಆಡಿಯೊವನ್ನು ಮಾಡಿ ಹರಿಬಿಡಲಾಗಿದೆಯೇ, ಪೊಲೀಸರಿಂದ ದೌರ್ಜನ್ಯವಾಗಿಲ್ಲವೆ ಎಂಬುದು ತನಿಖೆಗಳಿಂದ ತಿಳಿಯಬೇಕಿದೆ.

“ಹೆಂಚು ತೆಗೆದು ಒಳಗೆ ನುಗ್ಗುವಷ್ಟು ಕ್ರೂರಿಗಳು ನಮ್ಮಲ್ಲಿ ಯಾರೂ ಇಲ್ಲ. ಬಾರ್ ಇರಬೇಕೋ, ಬೇಡವೋ ಎಂಬುದನ್ನು ಸಂಬಂಧಪಟ್ಟವರು ನಿರ್ಧರಿಸುತ್ತಾರೆ. ಹಲ್ಲೆ ನಡೆಸಿದ್ದಾರೆಂದು ದೂರು ಬಂದಿದೆ. ಸಾಕ್ಷ್ಯಾಧಾರಗಳಿವೆ. ಪ್ರಕರಣ ದಾಖಲಿಸಿದ್ದೇವೆ. ಬಾರ್‌ ಪರವಾಗಿ ಪೊಲೀಸರು ನಿಲ್ಲಲು ಆ ಬಾರ್‌‌ ನನ್ನದೂ ಅಲ್ಲ, ನಮ್ಮಪ್ಪನ್ನದ್ದೂ ಅಲ್ಲ. ಯಾವನೋ ಬಾರ್‌ ಮಾಡಿಕೊಂಡಿದ್ದಾನೆ. ಅದಕ್ಕೂ ನನಗೂ ಸಂಬಂಧವಿಲ್ಲ. ಜನರು ಬಾರ್‌ ವಿರುದ್ಧ ಹೋರಾಟ ಮಾಡಿದಾಗ ನಾವು ರಕ್ಷಣೆ ನೀಡಿದ್ದೇವೆ. ಒಂದು ವಾರ ಬಂದೋಬಸ್ತ್‌ ಮಾಡಿದ್ದೇವೆ. ಬಾರ್‌ ಪರವಾಗಿದ್ದರೆ ನಾವು ಅಂದೇ ಪ್ರಕರಣ ದಾಖಲು ಮಾಡಬಹುದಿಲ್ಲತ್ತ?” ಎಂದು ಕೇಳುತ್ತಾರೆ ಪಿಎಸ್‌ಐ ರಮ್ಯಾ.

“ಡಿಸಿಗೆ ಮನವಿ ಕೊಡಿ, ಅಲ್ಲಿ ಪರಿಹಾರ ಸಿಗುತ್ತೆ. ಇಲ್ಲಿ ಪ್ರತಿಭಟನೆ ನಡೆಸಿದರೆ ಪರಿಹಾರ ಆಗಲ್ಲ ಎಂದು ನಾವೇ ಸಲಹೆ ನೀಡಿದ್ದೇವೆ. ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಬಾರ್‌ ಕಾನೂನಾತ್ಮಕವಾಗಿ ಇದೆ ಅನಿಸುತ್ತೆ. ಯಾವುದೇ ಕ್ರಮಗಳನ್ನು ಸಂಬಂಧಪಟ್ಟವರು ಜರುಗಿಸಿಲ್ಲ. ಈಗ‌ ಹೋಟೆಲ್ ತೆರೆದಿದ್ದಾರೆ. ಜನರು ದಾಳಿ ಮಾಡಿದ್ದಾರೆ. ಪೊಲೀಸ್‌ ಅರೆಸ್ಟ್‌ ಮಾಡಿದ್ದನ್ನೇ ದೌರ್ಜನ್ಯ ಎನ್ನಲು ಆಗುತ್ತದೆಯೇ? ಪ್ರಕರಣ ದಾಖಲಾದ ಮೇಲೆ ಬಂಧನದ ಭೀತಿಯಲ್ಲಿ ಕೆಲವರು ತಪ್ಪಿಸಿಕೊಂಡಿದ್ದಾರೆ. ಅಂದು ಬಂಧಿಸಲು ಹೋದಾಗ ಬಾಗಿಲು ಬಡಿದಿದ್ದೇವೆ. ಅವರೇ ಡೋರ್‌ ಓಪನ್‌ ಮಾಡಿದ್ದಾರೆ. ಮರು ಮಾತನಾಡದೆ ನಮ್ಮೊಂದಿಗೆ ಬಂದಿದ್ದಾರೆ. ಡೋರ್‌ ಆಗಲಿ, ಹೆಂಚು ಒಡೆದು, ಬಾಗಿಲು ಒಡೆದು ಒಳಗೆ ಹೋಗುವಷ್ಟು ನಾವು ಕ್ರೂರಿಗಳಲ್ಲ” ಎಂಬುದು ಪಿಎಸ್‌ಐ ಪ್ರತಿಕ್ರಿಯೆ.

“ಬಾರ್‌‌ನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಈ ರೀತಿಯ ಗಲಾಟೆಯಾಗಿದೆ ಎಂದು ದೂರು ನೀಡಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರನ್ನು ನೀವು ಬಂದಿಸಿದ್ದೀರಾ?” ಎಂದು ಪ್ರಶ್ನಿಸಿದಾಗ, “ದೌರ್ಜನ್ಯಕ್ಕೆ ಒಳಗಾಗಿದವರು ಬಾರ್‌ ಕೆಲಸಗಾರರು ಎಂಬುದಕ್ಕೆ ಸಾಕ್ಷಿಗಳಿವೆ. ಆದರೆ ಬಾರ್‌ನವರಿಂದ ಆಗಿದೆ ಎನ್ನಲಾದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಸಿಕ್ಕಿರುವ ಸಾಕ್ಷಿಗಳ ಮೇಲೆ ಕ್ರಮ ಜರುಗಿಸಲಾಗಿದೆ” ಎಂದು ಪಿಎಸ್‌ಐ ತಿಳಿಸಿದರು.


ಇದನ್ನೂ ಓದಿರಿ: ಮಂಗಳೂರಿನಲ್ಲಿ ಮತೀಯ ಗೂಂಡಾಗಿರಿ: ಅನ್ಯಧರ್ಮದ ಗೆಳತಿಯನ್ನು ಡ್ರಾಪ್ ಮಾಡುತ್ತಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...