Homeಮುಖಪುಟ'ಬಾಡಿ ಶೇಮಿಂಗ್' ಪ್ರಶ್ನೆ ಕೇಳಿದ ಪತ್ರಕರ್ತನನ್ನು ತರಾಟೆಗೆ ತೆಗೆದುಕೊಂಡ ನಟಿ ಗೌರಿ ಕಿಶನ್ : ಸಾಮಾಜಿಕ...

‘ಬಾಡಿ ಶೇಮಿಂಗ್’ ಪ್ರಶ್ನೆ ಕೇಳಿದ ಪತ್ರಕರ್ತನನ್ನು ತರಾಟೆಗೆ ತೆಗೆದುಕೊಂಡ ನಟಿ ಗೌರಿ ಕಿಶನ್ : ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ

- Advertisement -
- Advertisement -

ಬಾಡಿ ಶೇಮಿಂಗ್ (ದೇಹಾಕೃತಿಯನ್ನು ಹಿಯಾಳಿಸುವ) ಮತ್ತು ಲೈಂಗಿಕ ಉದ್ದೇಶವನ್ನು ಹೊಂದಿರುವ ಪ್ರಶ್ನೆ ಕೇಳಿದ ಯೂಟ್ಯೂಬ್ ಪತ್ರಕರ್ತನನ್ನು ನಟಿ ಗೌರಿ ಕಿಶನ್ ತೀವ್ರ ತರಾಟೆ ತೆಗೆದುಕೊಂಡ ಘಟನೆ ನವೆಂಬರ್ 6ರಂದು ಚೆನ್ನೈನಲ್ಲಿ ನಡೆದಿದೆ.

ಗೌರಿ ಮತ್ತು ಪತ್ರಕರ್ತರ ನಡುವಿನ ವಾಗ್ವಾದ, ಗೌರಿ ಪುರುಷ ಪತ್ರಕರ್ತರನ್ನು ಏಕಾಂಗಿಯಾಗಿ ಮತ್ತು ಧೈರ್ಯವಾಗಿ ಎದುರಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಗೌರಿಯ ನಡೆಗೆ ವ್ಯಾಪಕ ಬೆಂಬಲ ಮತ್ತು ಪ್ರಶಂಸೆ ವ್ಯಕ್ತವಾಗಿದೆ.

ತಮಿಳಿನ ’96’, ‘ಸೂರರೈ ಪೊಟ್ರು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಗೌರಿ ಕಿಶನ್, ತಮ್ಮ ಮುಂಬರುವ ಚಿತ್ರ ‘ಅದರ್ಸ್’ನ ಪ್ರಚಾರ ಪತ್ರಿಕಾಗೋಷ್ಠಿಯಲ್ಲಿ ತನ್ನ ಸಹ ನಟ ಆದಿತ್ಯ ಮಾಧವನ್ ಜೊತೆ ಕುಳಿತಿದ್ದರು. ಮಾಧವನ್ ಪತ್ರಕರ್ತರ ಜೊತೆ ಮಾತನಾಡುವಾಗ, ಯೂಟ್ಯೂಬ್ ಪತ್ರಕರ್ತ ಆರ್‌.ಎಸ್‌ ಕಾರ್ತಿಕ್ ಎಂಬವರು ಗೌರಿಯ ತೂಕದ ಬಗ್ಗೆ ಮಾಧವನ್ ಅವರಿಗೆ ಪ್ರಶ್ನೆ ಹಾಕಿದ್ದಾರೆ.

“ಚಿತ್ರದಲ್ಲಿ ನೀವು ಗೌರಿಯನ್ನು ಎತ್ತುತ್ತೀರಾ.. ಆಕೆಯ ತೂಕ ಎಷ್ಟು?” ಎಂದು ಪತ್ರಕರ್ತ ಕಾರ್ತಿಕ್ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಕೋಪಗೊಂಡ ಗೌರಿ, ಮಾಧವನ್ ಅವರಿಂದ ಮೈಕ್ ತೆಗೆದುಕೊಂಡು ಪತ್ರಕರ್ತನಿಗೆ ತಿರುಗೇಟು ನೀಡಿದ್ದಾರೆ.

“ಇದು ಅಗೌರವ, ನನ್ನ ದೇಹವನ್ನು ನೀವು ಲೈಂಗಿಕೀಕರಿಸುತ್ತಿದ್ದೀರಿ. ಇದು ಪತ್ರಿಕೋದ್ಯಮವಲ್ಲ, ಅವಮಾನ” ಎಂದು ಗೌರಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತ “ನಾನು ತಮಾಷೆಯಾಗಿ ಕೇಳಿದ್ದು” ಎಂದಿದ್ದಾರೆ.

ಈ ವೇಳೆ “ತಮಾಷೆ ಎಂದು ಮಹಿಳೆಯ ದೇಹದ ಬಗ್ಗೆ ಮಾತಾಡುವುದು ಸರಿಯಲ್ಲ. ಇದು ನಿಮ್ಮ ವೃತ್ತಿಗೆ ಕಳಂಕ” ಎಂದು ಗೌರಿ ತಿರುಗೇಟು ಕೊಟ್ಟಿದ್ದಾರೆ. ಆಗ ಇತರ ಪತ್ರಕರ್ತರು ಜೋರಾಗಿ ಕೂಗಿ ಗೌರಿಯ ಧ್ವನಿ ಅಡಗಿಸಲು ನೋಡಿದ್ದಾರೆ. ಆದರೆ, ಗೌರಿ ಧೈರ್ಯದಿಂದ ಅವರನ್ನು ಎದುರಿಸಿದ್ದಾರೆ.

ಅಲ್ಲದೆ, “ನೀವು (ಕಾರ್ತಿಕ್) ಈ ಹಿಂದಿನ ಸಂದರ್ಶನದಲ್ಲೂ ನನ್ನ ದೇಹದ ಕುರಿತು ಇದೇ ರೀತಿಯ ಪ್ರಶ್ನೆ ಕೇಳಿದ್ದೀರಿ. ಇದು ಬಾಡಿ ಶೇಮಿಂಗ್ ಪ್ರಶ್ನೆ” ಎಂದು ಗೌರಿ ಹೇಳಿದ್ದಾರೆ.

ವರದಿಗಳ ಪ್ರಕಾರ, ‘ವೇರೆ ಲೆವೆಲ್ ಸಿನಿಮಾ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಕಾರ್ತಿಕ್, ಚೆನ್ನೈ ಪತ್ರಿಕಾಗೋಷ್ಠಿಗಿಂತ ಎರಡ್ಮೂರು ದಿನ ಮೊದಲು, ಗೌರಿಯ ದೇಹಾಕೃತಿಯ ಅಥವಾ ತೂಕದ ಬಗ್ಗೆ ಆದಿತ್ಯ ಮಾಧವನ್ ಅವರಿಗೆ ಪ್ರಶ್ನಿಸಿದ್ದರು. “ಆಕೆಯ ತೂಕ ಎಷ್ಟು? ಎತ್ತುವುದು ಕಷ್ಟವಾಗಿತ್ತೇ? ತುಸು ಭಾರದವಳು ಎಂದು ಅನಿಸಿತೇ?” ಎಂದು ಕೇಳಿದ್ದರು.

ಗೌರಿಯ ಪ್ರತಿಕ್ರಿಯೆಗೆ ಕೋಪಗೊಂಡ ಕಾರ್ತಿಕ್, “ನನ್ನ ಪ್ರಶ್ನೆಯಲ್ಲಿ ಏನು ತಪ್ಪಿತ್ತು? ಇವು ನಿಯಮಿತವಾಗಿ ಕೇಳಲಾಗುವ ಪ್ರಶ್ನೆಗಳು” ಎಂದಿದ್ದಾರೆ. ಗೌರಿಯನ್ನು ‘ಆ ಹುಡುಗಿ’ ಎಂದು ಅಗೌರವದಿಂದ ಉಲ್ಲೇಖಿಸುತ್ತಾ, ಕಾರ್ತಿಕ್ ಆಕೆಯ ಮುಂದೆ ನಿರ್ದೇಶಕರಿಗೆ ದೂರು ನೀಡಿದ್ದಾರೆ. “ನಾನು ಅವಳ ತೂಕ ಕೇಳಿದಾಗ, ಅವಳು ನನ್ನ ತೂಕ ಕೇಳುತ್ತಾಳೆ. ನಾನು ನಟನೇ?” ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ಗೌರಿಯನ್ನು ಮತ್ತಷ್ಟು ಕೀಳಾಗಿ ಟೀಕಿಸಿದ ಕಾರ್ತಿಕ್, “ಅವಳಿಗೆ ತಮಿಳು ಅರ್ಥವಾಗುವುದಿಲ್ಲ. ನನ್ನ ಪ್ರಶ್ನೆ ತುಂಬಾ ಆಸಕ್ತಿದಾಯಕವಾಗಿತ್ತು. ನಾನು 25 ವರ್ಷದಿಂದ ವರದಿಗಾರಿಕೆ ಮಾಡುತ್ತಿದ್ದೇನೆ. ಸಿನಿಮಾ ನೋಡುವ ಪ್ರೇಕ್ಷಕರ ದೃಷ್ಠಿಕೋನದಲ್ಲಿ ನಾನು ಪ್ರಶ್ನೆ ಕೇಳಿದೆ” ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ಕಾರ್ತಿಕ್‌ನನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಗೌರಿ ನಿನ್ನ ತೂಕದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಏಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಕಾರ್ತಿಕ್‌ಗೆ ಕೇಳಿದ್ದಾರೆ. ಒಂದು ಕ್ಷಣ ಪತ್ರಿಕಾಗೋಷ್ಠಿಯಲ್ಲಿದ್ದ ಹಲವು ಪುರುಷರು ಗೌರಿಯ ವಿರುದ್ದ ಕೂಗಾಡಿ, ಆಕೆಯನ್ನು ಬೆದರಿಸಲು ನೋಡಿದ್ದಾರೆ. ಈ ವೇಳೆ ಪತ್ರಿಕಾಗೋಷ್ಠಿಯಲ್ಲಿದ್ದ ನಿರ್ದೇಶಕ ಅಬಿನ್ ಹರಿಹರನ್ ಗೌರಿಯ ಪರ ನಿಲ್ಲದೆ ಕಾರ್ತಿಕ್‌ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.

“ಪುರುಷರಿಂದ ತುಂಬಿದ್ದ ಕೋಣೆಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಏಕಾಂಗಿಯಾಗಿ ಬಿಟ್ಟ ಗೌರಿ, “ಮೊದಲನೆಯದಾಗಿ, ನೀವು ಕೇಳಿದ್ದು ಬಾಡಿ ಶೇಮಿಂಗ್ ಪ್ರಶ್ನೆ. ಇಲ್ಲಿ ನನ್ನ ಹೊರತು ಬೇರೆ ಯಾವುದೇ ಮಹಿಳೆ ಇಲ್ಲ. ನಾನು ಮಹಿಳೆ ಎಂಬ ಕಾರಣಕ್ಕಾಗಿ ನನ್ನನ್ನು ಗುರಿಯಾಗಿಸಲಾಗುತ್ತಿದೆ. ಪ್ರತಿಯೊಬ್ಬ ಮಹಿಳೆಗೂ ವಿಭಿನ್ನ ದೇಹಕಾರವಿದೆ. ನನಗೆ ಯಾವ ಸಮಸ್ಯೆಗಳಿವೆ ಎಂದು ನಿಮಗೆ ತಿಳಿದಿದೆಯೇ? ನನಗೆ ಹಾರ್ಮೋನುಗಳ ಸಮಸ್ಯೆಗಳಿವೆಯೇ ಎಂದು ನಿಮಗೆ ಗೊತ್ತಿದೆಯೇ? ನಾನು ಹಿರೋಯಿನ್ ಆಗಿದ್ದರೆ ನನ್ನ ಸೈಝ್ ಝೀರೋ ಆಗಿರಬೇಕೇ? ನನ್ನ ತೂಕವನ್ನು ತಿಳಿದುಕೊಂಡು ನೀವು ಏನು ಮಾಡುತ್ತೀರಿ? ಅದು ಚಿತ್ರಕ್ಕೆ ಅಪ್ರಸ್ತುತ” ಎಂದು ತನ್ನ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಇಷ್ಟಾದರು ಸುಮ್ಮನಾಗದ ಕಾರ್ತಿಕ್, “ನೀನು ನಿನ್ನ ತೂಕ ಮತ್ತು ಎತ್ತರ ಎರಡೂ ಸರಿಯಾಗಿ ಹೊಂದಾಣಿಕೆಯಾಗುತ್ತಿದೆ ಎಂದು ಹೇಳುತ್ತಿದ್ದೀಯಾ?” ಎಂದು ಪ್ರಶ್ನಿಸಿ ಮತ್ತಷ್ಟು ಅವಮಾನಿಸಿದ್ದಾರೆ. ಇದಕ್ಕೆ ತೀವ್ರ ಕೋಪಗೊಂಡ ಗೌರಿ, “ಹೀರೋಯಿನ್ ಆಯ್ಕೆ ನಿರ್ದೇಶಕರಿಗೆ ಬಿಟ್ಟಿದ್ದು, ಅದನ್ನು ಪ್ರಶ್ನಿಸಲು ನೀವು ಯಾರು?” ಎಂದು ಕೇಳಿದ್ದಾರೆ.

ಆಗ ಕಾರ್ತಿಕ್, “ತೂಕ ಕಡಿಮೆ ಮಾಡಿಕೊಳ್ಳುತ್ತೇನೆ ಎಂದು ಹೇಳು. ನೀನು ಮಾಡುತ್ತಿರುವುದು ತಪ್ಪು” ಎಂದಿದ್ದಾರೆ.

ಈ ವೇಳೆ ಮಧ್ಯ ಪ್ರವೇಶಿಸಿದ ವ್ಯಕ್ತಿಯೊಬ್ಬ. ಓಕೆ, ಓಕೆ.. ಸಿನಿಮಾ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗೌರಿ, ಏನು ಓಕೆ..? ಅವನು (ಕಾರ್ತಿಕ್) ನನ್ನ ಮೇಲೆ ಕೂಗಾಡುತ್ತಿದ್ದಾನೆ. ನನಗೆ ಅಡ್ಡಿಪಡಿಸುತ್ತಲೇ ಇದ್ದಾನೆ. ನನಗೂ ಒಂದು ದೃಷ್ಟಿಕೋನವಿದೆ. ಇಲ್ಲಿ ಪತ್ರಿಕೆಗಳಿಗೆ ಗೌರವ ಸಲ್ಲಿಸುತ್ತಾ, ನಾನು ಸಾಮಾನ್ಯೀಕರಿಸುತ್ತಿಲ್ಲ. ಆದರೆ, ಬಾಡಿ ಶೇಮಿಂಗ್ ಅನ್ನು ಏಕೆ ಸಾಮಾನ್ಯೀಕರಿಸಲಾಗುತ್ತಿದೆ? ಹೀರೋಯಿನ್‌ಗೇ ಏಕೆ ಈ ಪ್ರಶ್ನೆಯನ್ನು ಕೇಳುತ್ತಾರೆ? ನೀವು ಹೀರೋಗೆ ಇದೇ ಪ್ರಶ್ನೆಯನ್ನು ಕೇಳುತ್ತೀರಾ?” ಎಂದಿದ್ದಾರೆ.

“ನಾನು ಚಿತ್ರದಲ್ಲಿ ಮಾಡಿರುವ ಪಾತ್ರಗಳ ಬಗ್ಗೆ ಯಾವುದೇ ಪ್ರಶ್ನೆ ಕೇಳುತ್ತಿಲ್ಲ. ಅವರು (ಕಾರ್ತಿಕ್ ) ನನ್ನ ತೂಕದ ಬಗ್ಗೆ ಮಾತ್ರ ಪ್ರಶ್ನೆ ಮಾಡುತ್ತಿದ್ದಾರೆ. ಇದು ಹೇಗೆ ಸರಿಯಾಗುತ್ತದೆ? ನೀವು ನನ್ನ ತೂಕದ ಬಗ್ಗೆ ಪರೋಕ್ಷವಾಗಿ ನಾಯಕ ನಟನಿಗೆ ಪ್ರಶ್ನೆ ಕೇಳಿದ್ದೀರಿ. ಇದು ತಪ್ಪು ಮತ್ತು ಮೂರ್ಖತನದ ಪ್ರಶ್ನೆ. ನೀವು ಮಹಿಳಾ ಪಾತ್ರವನ್ನು ಲೈಂಗಿಕವಾಗಿ ಬಳಸುತ್ತಿದ್ದೀರಿ. ಇದು ಪತ್ರಿಕೋದ್ಯಮವಲ್ಲ, ನೀವು ಮಾಡುತ್ತಿರುವುದು ನಿಮ್ಮ ವೃತ್ತಿಗೆ ಅವಮಾನ” ಎಂದು ಖಾರವಾಗಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿದ್ದ ಪುರುಷರೆಲ್ಲರೂ ಗೌರಿಯನ್ನು ಅವಮಾನಿಸಿ ಏರು ಧ್ವನಿಯಲ್ಲಿ ಮಾತನಾಡಿದ್ದರೂ, ಆಕೆಯ ಚಿತ್ರದ ಸಹನಟ ಮತ್ತು ನಿರ್ದೇಶಕ ಆಕೆಯ ಪರ ನಿಂತಿಲ್ಲ. ಆದರೆ, ಇತರ ಕಲಾವಿದರು ಮತ್ತು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಗೌರಿಗೆ ಬೆಂಬಲ ಮತ್ತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜನಪ್ರಿಯ ಹಿನ್ನೆಲೆ ಗಾಯಕಿ ಚಿನ್ಮಯಿ ಪತ್ರಿಕಾಗೋಷ್ಠಿಯಲ್ಲಿ ನಡೆದ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಗೌರಿ ‘ಅದ್ಭುತ ಕೆಲಸ’ ಮಾಡಿದ್ದಾರೆ ಎಂದು ಹೇಳಿದ್ದಾರೆ.

“ನೀವು ಅಗೌರವಯುತ ಮತ್ತು ಅನಗತ್ಯ ಪ್ರಶ್ನೆಯನ್ನು ಖಂಡಿಸಿದ ಕ್ಷಣ, ಒಂದು ಗುಂಪು ಗಟ್ಟಿಯಾಗಿ ಕೂಗಿ ತಡೆಯುತ್ತದೆ. ಆದರೆ, ಇಷ್ಟು ಚಿಕ್ಕವಯಸ್ಸಿನಲ್ಲಿ ನೀವು ಧೈರ್ಯದಿಂದ ನಿಂತು ಅವರನ್ನು ಎದುರಿಸಿದ್ದು ನನಗೆ ತುಂಬಾ ಹೆಮ್ಮೆ ತಂದಿದೆ. ಯಾವುದೇ ಪುರುಷ ನಟನಿಗೆ ಅವನ ತೂಕ ಎಷ್ಟು ಎಂದು ಕೇಳುವುದಿಲ್ಲ. ಮಹಿಳಾ ನಟಿಗೆ ಮಾತ್ರ ಇಂತಹ ಪ್ರಶ್ನೆಗಳು ಏಕೆ ಕೇಳಲಾಗುತ್ತದೆ ಎಂದು ಗೊತ್ತಾಗುತ್ತಿಲ್ಲ” ಎಂದು ಚಿನ್ಮಯಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗೌರಿಯ ಪರ ನಿಲ್ಲದೆ ಮೌನವಾಗಿದ್ದ ನಟ ಆದಿತ್ಯ ಮಾಧವನ್, ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ಕೊಟ್ಟು ಗೌರಿಯ ಪರವಾಗಿ ನಿಲ್ಲದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.

“ನನ್ನ ಮೌನವು ಯಾರ ಬಾಡಿ ಶೇಮಿಂಗ್ ಅನ್ನು ಬೆಂಬಲಿಸುತ್ತದೆ ಎಂದರ್ಥವಲ್ಲ. ಅದು ನನ್ನ ಮೊದಲ ಚಿತ್ರವಾದ್ದರಿಂದ, ಆ ಪ್ರಶ್ನೆ ಆಕಸ್ಮಿಕವಾಗಿ ಬಂದು ನನ್ನನ್ನು ಸ್ತಂಭನಗೊಳಿಸಿತು. ನಾನು ಆದಷ್ಟು ಬೇಗ ಮಧ್ಯಪ್ರವೇಶಿಸಬೇಕಿತ್ತು ಎಂದು ಬಯಸುತ್ತೇನೆ. ಗೌರಿ ಬಾಡಿ ಶೇಮಿಂಗ್‌ಗೆ ಒಳಗಾಗಬೇಕಾದವರಲ್ಲ, ಯಾರೂ ಒಳಗಾಗಬೇಕಾದವರಲ್ಲ. ನಾವು ಯಾರೇ ಆಗಿರಲಿ, ಎಲ್ಲರಿಗೂ ಗೌರವ ಸಲ್ಲಬೇಕು. ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ” ಎಂದು ಕಾರ್ತಿಕ್ ಬರೆದುಕೊಂಡಿದ್ದಾರೆ.

“ಪತ್ರಿಕೋದ್ಯಮ ತನ್ನ ನೆಲೆಯನ್ನು ಕಳೆದುಕೊಂಡಿದೆ. ಪತ್ರಕರ್ತರು ಎಂದು ಕರೆಯಲ್ಪಡುವವರು ಪತ್ರಿಕೋದ್ಯಮವನ್ನು ಗಟಾರಕ್ಕೆ ಕೊಂಡೊಯ್ಯುತ್ತಿದ್ದಾರೆ. ಮಹಿಳೆ ಎಷ್ಟು ತೂಕವಿದ್ದಾಳೆ ಎಂದು ಆಳೆಯುವುದು ಅವರ ಕೆಲಸವಲ್ಲ. ಅದರಲ್ಲೂ ಆ ಬಗ್ಗೆ ನಾಯಕ ನಟನಲ್ಲಿ ಕೇಳುವುದು?? ಎಂತಹ ನಾಚಿಕೆಗೇಡಿನ ಸಂಗತಿ!” ಎಂದು ನಟಿ ಖುಷ್ಬೂ ಸುಂದರ್ ಹೇಳಿದ್ದಾರೆ.

ಗೌರಿ ತನ್ನ ನಿಲುವಿನಲ್ಲಿ ಗಟ್ಟಿಯಾಗಿ ನಿಂತಿದ್ದಕ್ಕಾಗಿ ಅಭಿನಂದಿಸಿದ ಖುಷ್ಬೂ, “ನಾವು ಮಹಿಳೆಯರು, ನಟರು, ತಮ್ಮ ಕುಟುಂಬದ ಮಹಿಳೆಯರ ಬಗ್ಗೆ ಅದೇ ಪ್ರಶ್ನೆಯನ್ನು ಕೇಳಿದರೆ, ಅದೂ ಪುರುಷರು ಕೇಳಿದರೆ ಸರಿಯೇ? ಗೌರವ ಎಂದಿಗೂ ಏಕಮುಖವಲ್ಲ. ನೀವು ಗೌರವಿಸಲ್ಪಡಬೇಕೆಂದು ನಿರೀಕ್ಷಿಸಿದರೆ ಗೌರವ ನೀಡಲು ಕಲಿಯಿರಿ” ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಪಾ ರಂಜಿತ್ ಕೂಡ ಗೌರಿಗೆ ಬೆಂಬಲ ವ್ಯಕ್ತಪಡಿಸಿದ್ದು, ‘ಮೋರ್ ಪವರ್ ಟೂ ಯು’. ವರದಿಗಾರನ ಕೃತ್ಯಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವು ಸ್ವೀಕಾರಾರ್ಹವಲ್ಲ ಮತ್ತು ನಾಚಿಕೆಗೇಡಿನ ಸಂಗತಿ. ಮಹಿಳಾ ನಟಿಯರು ಇನ್ನೂ ಈ ಅಸಭ್ಯ ಪ್ರಶ್ನೆಗಳನ್ನು ಎದುರಿಸಬೇಕಾಗಿರುವುದು ತಮಿಳು ಸಿನಿಮಾ ಇನ್ನೂ ಕ್ರಮಿಸಬೇಕಾದ ದೂರವನ್ನು ತೋರಿಸುತ್ತದೆ” ಎಂದಿದ್ದಾರೆ.

ನಟ ಕವಿನ್ ಕೂಡ ಗೌರಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದು, “ಒಳಗೆ ಮತ್ತು ಹೊರಗೆ, ನೀವು ಸುಂದರ ಮತ್ತು ಸ್ಪೂರ್ತಿದಾಯಕ ಗೌರಿ, ಯಾವಾಗಲೂ ಒಂದೇ ಆಗಿರಿ” ಎಂದು ಬರೆದುಕೊಂಡಿದ್ದಾರೆ.

ಫ್ರಂಟ್‌ಲೈನ್‌ನ ಹಿರಿಯ ಸಹಾಯಕ ಸಂಪಾದಕ ಆರ್‌.ಕೆ ರಾಧಾಕೃಷ್ಣನ್ ಕೂಡ ವರದಿಗಾರನ ಪತ್ರಕರ್ತನ ಕೃತ್ಯವನ್ನು ಖಂಡಿಸಿದ್ದಾರೆ.

“ಸಿನಿಮಾದ ಹೀರೋ ಬಳಿ ಗೌರಿ ಅವರ ತೂಕ ಕೇಳುವ ಯಾವುದೇ ಅಧಿಕಾರ ಪತ್ರಕರ್ತನಿಗೆ ಇಲ್ಲ. ಅಸಂಬಂದ್ಧ ಪ್ರಶ್ನೆ ಕೇಳಿದವನ ಜೊತೆಗೂಡಿ ಹೆಚ್ಚಿನ ಪತ್ರಕರ್ತರೂ ಗೌರಿ ಧ್ವನಿ ಅಡಗಿಸಲು ಪ್ರಯತ್ನಿಸಿದರು. ಆದರೂ, ಗೌರಿ ಧೈರ್ಯದಿಂದ ಅವರನ್ನು ಎದುರಿಸಿದರು. ತಮಿಳು ಸಿನಿಮಾದಲ್ಲಿ ನಾನು ನೋಡಿದ ಅತ್ಯುತ್ತಮ ಧೈರ್ಯದ ಎದುರಾಟಗಳಲ್ಲಿ ಇದು ಒಂದೂ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...