Homeಚಳವಳಿ2021 ಸಿನಿಮಾ ಲೋಕ: ಜಾತಿ ದೌರ್ಜನ್ಯವನ್ನು ಪ್ರಶ್ನಿಸಿದ, ಚಿಂತನೆಗೆ ಹಚ್ಚಿದ ಚಲನಚಿತ್ರಗಳ ಪಟ್ಟಿ ಇಲ್ಲಿದೆ

2021 ಸಿನಿಮಾ ಲೋಕ: ಜಾತಿ ದೌರ್ಜನ್ಯವನ್ನು ಪ್ರಶ್ನಿಸಿದ, ಚಿಂತನೆಗೆ ಹಚ್ಚಿದ ಚಲನಚಿತ್ರಗಳ ಪಟ್ಟಿ ಇಲ್ಲಿದೆ

- Advertisement -
- Advertisement -

2021ನೇ ವರ್ಷ ದೇಶದ ಚಲನಚಿತ್ರೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು. ಈ ವರ್ಷ ಅತಿ ಹೆಚ್ಚು ಜಾತಿ ದೌರ್ಜನ್ಯವನ್ನು ಪ್ರಶ್ನಿಸಿದ, ಈ ಕುರಿತು ಚಿಂತೆಗೆ ಹಚ್ಚುವ ಚಲನಚಿತ್ರಗಳು ಬಿಡುಗಡೆಯಾಗಿವೆ.

ಈ ಚಿತ್ರಗಳು ಕೇವಲ ಜನಮಾನಸದಲ್ಲಿ ನೆಲೆಗೊಳ್ಳದೆ, ಬಾಕ್ಸ್ ಆಫೀಸ್‌ನಲ್ಲೂ ಕಮಾಲ್ ಮಾಡಿವೆ. ಒಂದರ ನಂತರ ಒಂದರಂತೆ ಬಿಡುಗಡೆಯಾದ ಚಿತ್ರಗಳು ಪ್ರಶಸ್ತಿಗಳನ್ನು ಬಾಚಿಕೊಳ್ಳುವುದರಲ್ಲಿ ಹಿಂದೆ ಉಳಿಯಲಿಲ್ಲ. ತಮಿಳು, ಮರಾಠಿ, ತೆಲುಗು, ಹಿಂದಿ ಭಾಷೆಗಳಲ್ಲಿ ಅತಿ ಹೆಚ್ಚು ಚಿತ್ರಗಳು ಬಿಡುಗಡೆಯಾದವು.

ಕರ್ಣನ್‌, ಲವ್ ಸ್ಟೋರಿ, ಉಪ್ಪೇನಾ, ಸಾರ್ಪಟ್ಟ ಪರಂಪರೈ, ಶ್ರೀದೇವಿ ಸೋಡಾ ಸೆಂಟರ್‌, ಜಯಂತಿ ಸೇರಿದಂತೆ ಹಲವು ಚಿತ್ರಗಳು ಜಾತಿ ದೌರ್ಜನ್ಯದ ಬಗ್ಗೆ ಚಿಂತನೆ ಮಾಡುವಂತೆ ಮಾಡಿವೆ. ನೋಡುಗರಲ್ಲಿ ಹೊಸ ದೃಷ್ಟಿಕೋನವನ್ನು ಬಿತ್ತುವ ಕೆಲಸ ಮಾಡಿವೆ.

ಇದನ್ನೂ ಓದಿ: ‘ಕರ್ಣನ್’ ಸಿನಿಮಾ ವಿಮರ್ಶೆ; ಘನತೆಗಾಗಿ ತಳ ಸಮುದಾಯದ ಪ್ರತಿರೋಧದ ಸೃಜನಶೀಲ ಅಭಿವ್ಯಕ್ತಿ

ಈ ವರ್ಷದ ಜಾತಿ, ಸಾಮಾಜಿಕ ದೌರ್ಜನ್ಯವನ್ನು ವಿರೋಧಿಸಿದ, ಪ್ರಶ್ನಿಸಿದ, ಪ್ರತಿರೋಧಿಸಿದ ಚಲನಚಿತ್ರಗಳ ಪಟ್ಟಿ ಇಲ್ಲಿದೆ.

1.ಕರ್ಣನ್- ತಮಿಳು (ಅಮೆಜಾನ್ ಪ್ರೈಂ ವಿಡಿಯೋ)

ಮಾರಿ ಸೆಲ್ವರಾಜ್ ನಿರ್ದೇಶನದ ನಟ ಧನುಷ್ ಅಭಿನಯದ ’ಕರ್ಣನ್’ ಘನತೆಗಾಗಿ ತಳ ಸಮುದಾಯದ ಪ್ರತಿರೋಧವನ್ನು ಗಟ್ಟಿಯಾಗಿ ಕಟ್ಟಿಕೊಟ್ಟ ಚಿತ್ರ. ಹೆದ್ದಾರಿಯಿಂದ ದೂರವಿರುವ ಒಂದು ಜಾಗವನ್ನು ತಮ್ಮದಾಗಿಸಿಕೊಂಡು, ತಮ್ಮ ಪೂರ್ವಜರ ಹೆಸರುಗಳನ್ನು ಬದಲಿಸಿಕೊಂಡು ಘನತೆಯಿಂದ ಬದುಕಲು ಪ್ರಯತ್ನಿಸುತ್ತಿರುವ ಊರು ಪೊಡಿಯಾಂಗುಳಂ. ಈ ಊರಿನ ಜನರ ಮೇಲೆ ಪಕ್ಕದ ಮೇಲ್ಜಾತಿಯ ಊರಿನವರಿನವರು ಮತ್ತು ಸಮಾಜದ ಅಸಹನೆ, ದಲಿತರ ಪ್ರತಿರೋಧದ ಚಿತ್ರಣವನ್ನು ನಿರ್ದೇಶಕ ಕಟ್ಟಿಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಇನ್ನೋವೇಟಿವ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಚಲನಚಿತ್ರ ಪ್ರಶಸ್ತಿಯನ್ನು ಕರ್ಣನ್ ಗೆದ್ದುಕೊಂಡಿದೆ.

2. ಉಪ್ಪೇನಾ – ತೆಲುಗು ( ನೆಟ್‌ಫ್ಲಿಕ್ಸ್)

ಬುಚ್ಚಿ ಬಾಬು ಸಾನಾ ನಿರ್ದೇಶನದ ಉಪ್ಪೇನಾ ಸಿನಿಮಾ ದಲಿತ ಕ್ರಿಶ್ಚಿಯನ್ ಮೀನುಗಾರ ಮತ್ತು ‘ಮೇಲ್ಜಾತಿ’ ಹಿಂದೂ ಯುವತಿಯ ಅಂತರ್ಜಾತಿ ಪ್ರೇಮಕಥೆಯನ್ನು ಹೊಂದಿದೆ. ಪ್ರಭಾವಿ ಜಮೀನ್ದಾರ ತನ್ನ ಜಾತಿಯ ಗೌರವವನ್ನು ಕಾಪಾಡಲು ಪ್ರೇಮಿಗಳನ್ನು ದೂರ ಮಾಡಲು ನಡೆಸುವ ಕೆಟ್ಟ ಪ್ರಯತ್ನಗಳನ್ನು ಈ ಸಿನಿಮಾ ಕಟ್ಟಿ ಕೊಡುತ್ತದೆ.

ಈ ಚಿತ್ರವು 2021 ರಲ್ಲಿ ದೊಡ್ಡ ಓಪನಿಂಗ್ಸ್ ಗಳಿಸಿತು. ಹೊಸಕಲಾವಿದರಾದ ವೈಷ್ಣವ್ ತೇಜ್ ಮತ್ತು ಕೃತಿ ಶೆಟ್ಟಿಗೆ ಅಪಾರ ಜನ ಮನ್ನಣೆ ದೊರಕುವಂತೆ ಮಾಡಿತು. ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಕರ್ಣನ್ ಸಿನಿಮಾ ವಿಮರ್ಶೆ-2; ದೃಶ್ಯರೂಪಕಗಳೊಂದಿಗೆ ಕಾವ್ಯಾತ್ಮಕವಾಗಿರುವ ಪ್ರತಿರೋಧದ ಕಥೆ

3. ಸಾರ್ಪಟ್ಟ ಪರಂಪರೈ -ತಮಿಳು (ಅಮೆಜಾನ್ ಪ್ರೈಂ ವಿಡಿಯೋ)

ಪಾ.ರಂಜಿತ್ ಅವರ ಸಾರ್ಪಟ್ಟ ಪರಂಬರೈ ತಮಿಳು ಭಾಷೆಯ ಕ್ರೀಡಾ ಸಾಹಸ ಚಲನಚಿತ್ರವಾಗಿದ್ದು, ದಲಿತ ಬಾಕ್ಸರ್‌ನ ಘನತೆ ಮತ್ತು ಸ್ವಾಭಿಮಾನದ ಚಿತ್ರವಾಗಿ ಮುಖ್ಯವಾಗುತ್ತದೆ. ಚಿತ್ರದಲ್ಲಿ ಆರ್ಯ, ಜಾನ್ ಕೊಕ್ಕೆನ್, ಶಬೀರ್ ಕಲ್ಲರಕ್ಕಲ್, ದುಶಾರ ವಿಜಯನ್, ಪಶುಪತಿ, ಅನುಪಮಾ ಕುಮಾರ್ ಮತ್ತು ಸಂಚನಾ ನಟರಾಜನ್ ನಟಿಸಿದ್ದಾರೆ. 1970ರ ದಶಕದಲ್ಲಿ ನಡೆದ ಉತ್ತರ ಚೆನ್ನೈನ ಇಡಿಯಪ್ಪ ಪರಂಬರೈ ಮತ್ತು ಸಾರ್ಪಟ್ಟ ಪರಂಬರೈ ಎಂಬ ಎರಡು ಕುಲಗಳ ನಡುವಿನ ಘರ್ಷಣೆಯ ಸುತ್ತ ಸುತ್ತುತ್ತದೆ. ಇದು ಸ್ಥಳೀಯ ಬಾಕ್ಸಿಂಗ್ ಸಂಸ್ಕೃತಿಯನ್ನು ಮತ್ತು ಅದರಲ್ಲಿ ತೊಡಗಿಸಿಕೊಂಡಿರುವ ರಾಜಕೀಯವನ್ನು ತೋರಿಸುತ್ತದೆ.

ಈ ಚಿತ್ರ ನ್ಯೂಯಾರ್ಕ್ ಟೈಮ್ಸ್ ‘ಒಟಿಟಿಯಲ್ಲಿ ನೋಡಲೇಬೇಕಾದ ಅಂತರರಾಷ್ಟ್ರೀಯ ಚಲನಚಿತ್ರಗಳ’ ಪಟ್ಟಿಯಲ್ಲಿ ವಿಶೇಷ ಉಲ್ಲೇಖ ಪಡೆಯಿತು.

4. ಜಯಂತಿ- ಮರಾಠಿ

ನವೆಂಬರ್‌ನಲ್ಲಿ ಬಿಡುಗಡೆಯಾದ ಮರಾಠಿ ಚಿತ್ರ ಜಯಂತಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಅಂಬೇಡ್ಕರ್, ಫುಲೆ ಮತ್ತು ಶಿವಾಜಿ ಮಹಾರಾಜರ ಜೀವನ ಮತ್ತು ಕೃತಿಗಳನ್ನು ಓದಿದಾಗ ಕಥಾ ನಾಯಕ ಸಂತ್ಯಾ ಅನ್ಯಾಯದ ವಿರುದ್ಧ ಹೋರಾಡುವವನಾಗಿ ರೂಪಗೊಳ್ಳುವುದನ್ನು ಚಿತ್ರಿಸಿದೆ. ಚಿತ್ರವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಮುಖ ಕೃತಿಯಾದ ಹೂ ವರ್ ದಿ ಶೂದ್ರಸ್ ಅನ್ನು ಉಲ್ಲೇಖಿಸುತ್ತದೆ ಎಂದು ಚಿತ್ರ ತಂಡ ತಿಳಿಸಿದೆ.

5. ಲವ್‌ ಸ್ಟೋರಿ – ತೆಲುಗು

 ಬಹುತೇಕ ಜಡ್ಡುಗಟ್ಟಿದ ಫ್ಯೂಡಲ್ ತೆಲುಗು ಚಿತ್ರ ರಂಗದಲ್ಲಿ ಶೇಖರ್ ಕಮ್ಮುಲ ತಮ್ಮ ’ಲವ್ ಸ್ಟೋರಿ’ ಸಿನಿಮಾ ಮೂಲಕ ತೆಲುಗು ಸಿನಿಮಾ ಪ್ರೇಕ್ಷಕರಿಗೆ ಹೊಸ ಕಣ್ಣೋಟವೊಂದನ್ನು ನೀಡಿದ್ದಾರೆ. ಲವ್ ಸ್ಟೋರಿ ಸಿನಿಮಾದಲ್ಲಿ ಎರಡು ಸಂಗತಿಗಳನ್ನು ಸಮಾನಾಂತರವಾಗಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಒಂದು ನಮ್ಮ ಸಮಾಜದಲ್ಲಿರುವ ಜಾತಿ ವ್ಯವಸ್ಥೆ. ಮತ್ತೊಂದು ಫ್ಯೂಡಲ್ ಜಾತಿಯ ಪುರುಷ ಪ್ರಧಾನ ಕೌಟಂಬಿಕ ವ್ಯವಸ್ಥೆ ಒಳಗೆ ಹೆಣ್ಣಿನ ಬಗೆಗಿನ ದೃಷ್ಟಿಕೋನ. ದಲಿತ ಸಮುದಾಯದ ರೇವಂತ್ ಕಥಾನಾಯಕ, ಫ್ಯೂಡಲ್ ಸಮುದಾಯದ ಮೊನಿಕಾ ನಾಯಕಿ, ಕಥಾನಾಯಕನ ತಾಯಿ ಮನಮ್ಮ ಮತ್ತು ಕಥಾನಾಯಕಿಯ ಚಿಕ್ಕಪ್ಪ ನರಸಿಂಹಂ. ಈ ನಾಲ್ಕು ಪ್ರಧಾನ ಪಾತ್ರಗಳು.

ಇದನ್ನೂ ಓದಿ: ’ಲವ್ ಸ್ಟೋರಿ’: ಫ್ಯೂಡಲ್ ಮನಸ್ಥಿತಿಯ ತೆಲುಗು ಸಿನಿಮಾರಂಗದಲ್ಲೊಂದು ಸಣ್ಣ ಆಶಾವಾದದ ಮಿಂಚು

6. ಜೈ ಭೀಮ್- ಐದು ಭಾಷೆಗಳು (ಅಮೆಜಾನ್ ಪ್ರೈಂ ವಿಡಿಯೋ)

ಜೈ ಭೀಮ್ ಒಂದು ನೈಜ ಘಟನೆಯನ್ನಾಧರಿಸಿದ ಚಿತ್ರ. 1990ರ ದಶಕದಲ್ಲಿ ತಮಿಳುನಾಡಿನಲ್ಲಿ ನಡೆದ ಈ ಘಟನೆಯಲ್ಲಿ ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಇಮ್ಮಡಿಗೊಳಿಸುವ ರೀತಿಯಲ್ಲಿ ತುಳಿತಕ್ಕೊಳಗಾದ, ದಮನಿತ ಜನಸಮುದಾಯಗಳಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡುವ ವಕೀಲ ಮತ್ತು ಇರುಳ್ ಸಮುದಾಯದ ಕಥೆ ಇದಾಗಿದೆ.

ತಾನು ಮಾಡದ ಕಳ್ಳತನದ ಆರೋಪಕ್ಕೆ ಸಿಲುಕಿ ಪೊಲೀಸರಿಂದ ಬಂಧನಕ್ಕೊಳಗಾಗುವ ರಾಜಕಣ್ಣು ಮತ್ತು ಅವನ ಸಹಚರರು ಪೊಲೀಸ್ ಠಾಣೆಯಲ್ಲಿ ಅನುಭವಿಸುವ ದೈಹಿಕ ಹಿಂಸೆ, ದೌರ್ಜನ್ಯ ಮತ್ತು ಈ ಅಮಾಯಕ ಆದಿವಾಸಿಗಳ ಮೇಲೆ ಪೊಲೀಸರು ನಡೆಸುವ ದೈಹಿಕ ಆಕ್ರಮಣ ನೋಡುಗರ ಎದೆನಡುಗಿಸುತ್ತದೆ. ಆತನ ಪತ್ನಿ ಸೆಂಗಣಿ ಗರ್ಭಿಣಿಯಾಗಿದ್ದರೂ ಪೊಲೀಸರಿಂದ ಅನುಭವಿಸುವ ಚಿತ್ರಹಿಂಸೆ ಪ್ರೇಕ್ಷಕರ ಎದೆಗೆ ನಾಟುವಂತಿದೆ. 

ಈ ವರ್ಷ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ, ಹೆಚ್ಚು ಚರ್ಚೆಗೆ ಒಳಗಾದ ಚಿತ್ರ ಇದಾಗಿದೆ. IMDB ರೇಟಿಂಗ್‌ನಲ್ಲಿ ಎಲ್ಲಾ ದಾಖಲೆಗಳನ್ನು ಈ ಚಿತ್ರ ಸರಿಗಟ್ಟಿದೆ.

7. ಗಿಲಿ ಪುಚ್ಚಿ (ಅಜೀಬ್ ದಾಸ್ತಾನ್ಸ್ )- ಹಿಂದಿ ( ನೆಟ್‌ಫ್ಲಿಕ್ಸ್)

ನೀರಜ್ ಘಯ್ವಾನ್ ಅವರ ಅಜೀಬ್ ದಾಸ್ತಾನ್ಸ್ ಶಾರ್ಟ್ ಸ್ಟೋರಿಸ್‌ಗಳಲ್ಲಿ ಗೀಲಿ ಪುಚ್ಚಿಯಲ್ಲಿ ದಲಿತ ಮಹಿಳೆ ಕೆಲಸದ ಸ್ಥಳದಲ್ಲಿ ತಾನು ಬಯಸಿದ ಕೆಲಸ ಪಡೆದುಕೊಳ್ಳಲು ನಡೆಸುವ ಕಸರತ್ತು ಮತ್ತು ಮೇಲ್ಜಾತಿ ಮಹಿಳೆಯೊಂದಿಗಿನ ಸ್ನೇಹದ ಕುರಿತು ಚಿತ್ರ ಮಾತಾಡುತ್ತದೆ. ದಲಿತ ಮಹಿಳೆ ಪಾತ್ರವನ್ನು ನಿರ್ವಹಿಸಿದ್ದ ಕೊಂಕಣ ಸೇನ್ ಶರ್ಮಾಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.

8. ಶ್ರೀದೇವಿ ಸೋಡಾ ಸೆಂಟರ್‌- ತೆಲುಗು (ಝೀ5)

’ಶ್ರೀದೇವಿ ಸೋಡಾ ಸೆಂಟರ್’ ನಾಗೇಂದ್ರ ಕಾಸಿ ಚಿತ್ರಕತೆಯ, ಕರುಣಾ ಕುಮಾರ್ ನಿದೇಶನದ ಚಿತ್ರ. ಚಿತ್ರದಲ್ಲಿ ಸುಧೀರ್ ಬಾಬು ಮತ್ತು ಆನಂದಿ ನಟಿಸಿದರೆ ನರೇಶ್ ಮತ್ತು ಸತ್ಯಂ ರಾಜೇಶ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಲೈಟಿಂಗ್ ಕೆಲಸ ಮಾಡುವ ಸೂರಿ ಬಾಬು ಮತ್ತು ಸೋಡಾ ಅಂಗಡಿ ನಡೆಸುವ ಶ್ರೀದೇವಿಯ ಅಂತರ್ಜಾತಿ ಪ್ರೇಮಕಥೆ ಚಿತ್ರದಲ್ಲಿದ್ದು, ಅಂತರ್‌ಜಾತಿ ಅವನು ಪ್ರೀತಿಯಲ್ಲಿ ಬೀಳುತ್ತಾನೆ. ತಮ್ಮ ಪ್ರೀತಿಯನ್ನು ಗೆಲ್ಲುವ ಹೋರಾಟ, ಸಮಾಜದಲ್ಲಿರುವ ಜಾತಿ ವ್ಯವಸ್ಥೆಯ ಚಿತ್ರಣವನ್ನು ಕಟ್ಟಿ ಕೊಡಲಾಗಿದೆ.

ಈ ಸಿನಿಮಾಗಳು ಚಿತ್ರೋದ್ಯಮದಲ್ಲಿ ಹೊಸ ಅಲೆಯನ್ನು ಮೂಡಿಸುವ ಜೊತೆಗೆ ಸಿನಿ ಪ್ರೇಕ್ಷಕರನ್ನು ಚಿಂತನೆಗೂ ಹಚ್ಚಿದೆ. ಕನ್ನಡ, ಮಲಯಾಳಂ, ಹಿಂದಿ ಸಿನಿಮೋದ್ಯಮದಲ್ಲೂ ಇಂತಹ ಚಿತ್ರಗಳ ಸಂಖ್ಯೆ ಹೆಚ್ಚಲಿ, ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಜಾತಿ ದೌರ್ಜನ್ಯ ವಿರೋಧಿ ಚಿತ್ರಗಳು ಹೊರ ಬರಲಿ ಎನ್ನುವುದು ನಮ್ಮ ಆಶಯ.


ಇದನ್ನೂ ಓದಿ: ಕೊಳೆತು ನಾರುತ್ತಿರುವ ವ್ಯವಸ್ಥೆಯ ಕಥೆ ಹೇಳುವ ‘ಜೈ ಭೀಮ್’…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸಮಾಜದಲ್ಲಿ ಬದಲಾವಣೆ ಆದಾಗ ಮಾತ್ರ ಸಮಾನತೆ ಸ್ವಾತಂತ್ರ್ಯ ಸಹಬಾಳ್ವೆ ಇಂದ ಬದುಕ ಬಹುದು…

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...