ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಇಎಸ್ ಮಾಡೆಲ್ ಕಾನ್ವೆಂಟ್ ಶಾಲೆಯು ಸಂವಿಧಾನ ವಿರೋಧಿ ಚರ್ಚಾ ಸ್ಪರ್ಧೆಯನ್ನು ಆಯೋಜಿಸಿದ್ದು, ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ‘ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ’ ದೂರು ನೀಡಿದೆ.
ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಸಂವಿಧಾನಕ್ಕೆ ಅಗೌರವ, ಅಪನಂಬಿಕೆ ತೋರುವ ರೀತಿಯಲ್ಲಿ ವಿಷಯವನ್ನು ನೀಡಲಾಗಿದೆ. ‘72 years of Bharathiya Samvidhana/Indian Constitution has reached expiry Date’ (72 ವರ್ಷಗಳ ಭಾರತ ಸಂವಿಧಾನದ ಅವಧಿ ಮುಗಿದಿದೆ) ಎಂಬ ವಿಷಯವನ್ನು ನೀಡಿದ್ದಾರೆ. ಸಂಸ್ಥೆಯ ಮುಖ್ಯಸ್ಥರೂ ಈ ಸಂಬಂಧ ಒಪ್ಪಿಕೊಂಡಿರುವುದಾಗಿ ಸಮಿತಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದೆ.
“ಈ ಸ್ಪರ್ಧೆಗೆ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿರುವುದು ಮತ್ತು ಇಂದು (ಜ.25) ಇದೇ ವಿಷಯದ ಮೇಲೆ ಶಾಲೆಯಲ್ಲಿ ಚರ್ಚಾ ಸ್ಪರ್ಧೆಗೆ ತಯಾರಿ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ” ಎಂದು ಸಮಿತಿಯು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

“ಇಲ್ಲಿ ನೀಡಿರುವ ಚರ್ಚಾ ವಿಷಯವು ನೇರವಾಗಿ ನಮ್ಮ ಭಾರತದ ಸಂವಿಧಾನವನ್ನು ಅವಮಾನಿಸುವ ಮತ್ತು ಆ ಮೂಲಕ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ಸಾರ್ವಜನಿಕರಲ್ಲಿ ಸಂವಿಧಾನದ ಬಗ್ಗೆ ಕೆಟ್ಟ ಅಭಿಪ್ರಾಯ, ಅಪನಂಬಿಕೆ, ದ್ವೇಷಭಾವನೆ ಮೂಡಿಸುವ ದುರುದ್ದೇಶ ಹೊಂದಿರುವುದು ನೇರವಾಗಿ ಕಂಡು ಬಂದಿದೆ” ಎಂದು ಸಮಿತಿ ಆರೋಪಿಸಿದೆ.
“ಸಂವಿಧಾನವನ್ನು ಅವಮಾನಿಸುವುದೆಂದರೆ ದೇಶವನ್ನೇ ಅವಮಾನಿಸಿದಂತೆ. ಹಾಗಾಗಿ ದೇಶದ್ರೋಹದ ಕೆಲಸ ಮಾಡಿರುವ ಸಂವಿಧಾನ ವಿರೋಧಿಯಾದ ಶಾಲೆಯನ್ನು ಈ ತಕ್ಷಣವೇ ಕಪ್ಪುಪಟ್ಟಿಗೆ ಸೇರಿಸಬೇಕು. ಇದು ಭಾರತದ ಸಂವಿಧಾನ ವಿರೋಧಿ ಶಾಲೆ ಎಂದು ಘೋಷಿಸಿ, ಶಾಲೆಯ ಪರವಾನಗಿಯನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸಲಾಗಿದೆ.
“ಈ ಕೃತ್ಯಕ್ಕೆ ಒಪ್ಪಿಗೆ ಸೂಚಿಸಿರುವ ಮುಖ್ಯೋಪಾಧ್ಯಾಯರು /ಪ್ರಾಂಶುಪಾಲರನ್ನು, ವಿಷಯ ಕೊಟ್ಟ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಬೇಕು. ಮುಂದೆ ಅವರು ಯಾವ ಶಿಕ್ಷಣ ಸಂಸ್ಥೆಗಳಲ್ಲಿಯೂ ಕಾರ್ಯನಿರ್ವಹಿಸಲು ಅನರ್ಹರೆಂದು ಘೋಷಿಸಬೇಕು. ಇವರೊಂದಿಗೆ ಶಾಲೆಯ ಆಡಳಿತ ಮಂಡಳಿಯವರ ಮೇಲೆ ದೇಶದ್ರೋಹದ ಅಡಿಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಬೇಕು. ಈ ಮೂಲಕ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಸರ್ಕಾರವು ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಬೇಕು” ಎಂದು ಆಗ್ರಹಿಸಲಾಗಿದೆ.
ಭಾರತ ಸಂವಿಧಾನದ ಕುರಿತು ತಪ್ಪು ತಿಳಿವಳಿಕೆ ಮೂಡಿಸುವ ಪ್ರಯತ್ನಗಳು ನಡೆದಿದ್ದು, ಈ ಕುರಿತು ಸರ್ಕಾರ ಸೂಕ್ತ ಆದೇಶ ಹೊರಡಿಸಿ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಕಾಲೇಜುಗಳ ಮುಖ್ಯಸ್ಥರುಗಳಿಗೆ ಸೂಕ್ತ ಸುತ್ತೋಲೆ ಹೊರಡಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.
ಸಮಿತಿಯ ಮುಖಂಡರಾದ ಹ.ರಾ.ಮಹೇಶ್ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಶಿಕ್ಷಣ ಇಲಾಖೆ ಆಯುಕ್ತರೊಂದಿಗೆ ಮಾತನಾಡಿದ್ದೇವೆ. ಅವರು ಸಂಬಂಧಪಟ್ಟ ಡಿಡಿಪಿಐಗೆ ಅವರು ಸೂಚನೆ ನೀಡಿದ್ದಾರೆ. ಡಿಡಿಪಿಐ, ಬಿಇಒಗೆ ದೂರು ವರ್ಗಾಯಿಸಿದ್ದಾರೆ. ಬಿಇಒಗಳ ಒಂದು ಸಮಿತಿ ಶಾಲೆಗೆ ಭೇಟಿ ನೀಡಿ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು ತಿಳಿದುಬಂದಿದೆ” ಎಂದು ಮಾಹಿತಿ ನೀಡಿದರು.
“ಸದರಿ ಶಾಲೆಯು ರಾಮನಗರ ಪೊಲೀಸ್ ವರಿಷ್ಠಾಧಿಕಾರಿಗಳ ವ್ಯಾಪ್ತಿಗೆ ಬರಲಿದೆ. ರಾಮನಗರ ಎಸ್ಪಿಯವರಿಗೂ ದೂರು ನೀಡಲಾಗುವುದು. ಸಂವಿಧಾನಕ್ಕೆ ಅಪಚಾರ ಎಸಗುವಂತಹ ವಿಷಯವನ್ನು ಚರ್ಚೆಸ್ಪರ್ಧೆಗೆ ನೀಡಿದ್ದು ನಿಜವೆಂದು ಶಾಲೆ ಒಪ್ಪಿಕೊಂಡಿದೆ. ಅಷ್ಟಕ್ಕೆ ನಾವು ಬಿಡುವುದಿಲ್ಲ. ಶಾಲೆಯ ಉದ್ದೇಶವೇ ತಪ್ಪಿರುವುದರಿಂದ ಇಡೀ ಶಾಲೆಯ ಪರವಾನಗಿ ರದ್ಧತಿಗೆ ಹೋರಾಡುತ್ತೇವೆ. ಏಕೆಂದರೆ ಅವರು ಮಕ್ಕಳ ಎದೆಯಲ್ಲಿ ವಿಷ ಬಿತ್ತುವ ಯತ್ನವನ್ನು ಈ ಶಾಲೆ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿದಾಗ ಈ ಸಂಬಂಧ ದೂರು ಬಂದಿರುವುದಾಗಿ ಖಚಿತಪಡಿಸಿತು. ಅಲ್ಲದೆ ಸಂಬಂಧಪಟ್ಟ ಡಿಡಿಪಿಐ ಕಚೇರಿಯ ಗಮನಕ್ಕೂ ವಿಷಯವನ್ನು ವರ್ಗಾಯಿಸಲಾಗಿದೆ ಎಂದು ಆಯಕ್ತರ ಕಚೇರಿ ಮಾಹಿತಿ ನೀಡಿತು.
ವಿಇಎಸ್ ಮಾಡೆಲ್ ಕಾನ್ವೆಂಟ್ ಶಾಲೆಯ ಅಧಿಕೃತ ವೆಬ್ಸೈಟ್ನಲ್ಲಿರುವ ನಂಬರ್ ಮೂಲಕ ಪ್ರಾಂಶುಪಾಲರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಸಂಸ್ಥೆಯ ಸಿಬ್ಬಂದಿ ಕರೆಗೆ ಲಭ್ಯವಾದರು. ಪ್ರಾಂಶುಪಾಲರಿಗೆ ಕನೆಕ್ಟ್ ಮಾಡುವುದಾಗಿ ತಿಳಿಸಿದರು. ಆದರೆ ಪ್ರಾಂಶುಪಾಲರು ಸಂಪರ್ಕಕ್ಕೆ ಸಿಕ್ಕಿಲ್ಲ. (ಅವರ ಪ್ರತಿಕ್ರಿಯೆ ಸಿಕ್ಕಲ್ಲಿ ಅಪ್ಡೇಟ್ ಮಾಡಲಾಗುವುದು)
ಇದನ್ನೂ ಓದಿರಿ: ಕೇಂದ್ರದಿಂದ ಐಎಎಸ್ಗಳು ದೂರ ಉಳಿಯಲು ಕೇಂದ್ರದ ಕಿರುಕುಳವೇ ಕಾರಣ: ಸಸಿಕಾಂತ್ ಸೆಂಥಿಲ್



ನಮ್ಮ ಸಂವಿಧಾನವನ್ನು ನಿಷ್ಕ್ರಿಯಗೊಳಿಸಿ, ಅದರ ಜಾಗದಲ್ಲಿ ಮನುಸ್ಮೃತಿಯನ್ನು ಪ್ರತಿಷ್ಟಾಪನೆ ಮಾಡುವ ಕೆಲಸವನ್ನು ಮನುವಾದಿಗಳು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅಹಿಂದ ವರ್ಗದವರು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, ಈ ದೇಶಕ್ಕೆ ಕರಾಳ ಬವಿಶ್ಯ ಕಟ್ಟಿಟ್ಟ ಬುತ್ತಿಯಾಗಲಿದೆ.
ಸಂವಿಧಾನ ವಿರೋಧಿಯಾದ ಆ ಶಾಲೆಯ ಪರವಾನಗಿ ಮತ್ತು ಅಲ್ಲಿಯ ಶಿಕ್ಷಕರು ಬೋಧನೆಗೆ ಅನರ್ಹರೆಂದು ಕರೆದು ಅವರನ್ನು ಬಂದಿಸಬೇಕು.ಇಲ್ಲದಿದ್ದಲ್ಲಿ ಕಾನೂನು ಮತ್ತು ಹೋರಾಟದ ಮೂಲಕ ತಮ್ಮ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ.ಜೈ ಭೀಮ್ ಜೈ ಟಿಪ್ಪು.ಜೈ ಕನ್ನಡ
ಆ topic ಕೊಟ್ಟವರಿಗೆ ಶಿಕ್ಷೆ ಆಗಲೇಬೇಕು
ಏನಿಲ್ಲ. ಅದು ಅವರ ಒಳ ಉದ್ದೇಶ ತೋರಿಸುತ್ತದೆ.
ಈ ಶಾಲೆ ಇದೊಂದೆ ವಿಚಾರ ಅಲ್ಲ….ತುಂಬಾ ವಿಚಾರದಲ್ಲಿಯೂ ಪೋಷಕರಿಗೆ ಬೇಸರ ಮಾಡಿದೆ…careless teachers