ಭಾರತೀಯ ಸೇನೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಅಪಚಾರವೆಸಗುವಂತಹ “ರಾಷ್ಟ್ರ ವಿರೋಧಿ” ಟ್ವೀಟ್ಗೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ವಾಂಸ ಸಾಜಿದ್ ಬಿನ್ ಸಯೀದ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಈ ಟ್ವೀಟ್ನ ಆಧಾರದ ಮೇಲೆ ಜುಲೈ 8 ರಂದು ಸಯೀದ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಟ್ವೀಟ್ ನ ಸ್ಕ್ರೀನ್ಶಾಟ್ ಅನ್ನು ಪೊಲೀಸರಿಗೆ ನೀಡಲಾಯಿತು. ಅದರಲ್ಲಿ, “ಭಾರತೀಯ ಮಿಲಿಟರಿ ಕಾಶ್ಮೀರಿಗಳ ವ್ಯವಸ್ಥಿತ ನರಮೇಧವನ್ನು ಮಾಡುತ್ತಿದೆ. ಇದನ್ನು ಆರ್ಎಸ್ಎಸ್ ರೂಪಿಸಿದೆ. ಬಿಜೆಪಿ ಸರ್ಕಾರವು ತಮ್ಮ ಪ್ರಾದೇಶಿಕ ದುರಾಶೆಯನ್ನು ನಿಲ್ಲಿಸಬೇಕು ಮತ್ತು ಯುಎನ್ ಖಾತರಿಪಡಿಸಿದ ಕಾಶ್ಮೀರಿಗಳ ಸ್ವ-ನಿರ್ಣಯದ ಹಕ್ಕನ್ನು ಸ್ವೀಕರಿಸಲು ಸಿದ್ಧರಾಗಿರಬೇಕು. ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಇದು ಸರಿಯಾದ ಸಮಯ. #ಕಾಶ್ಮೀರ” ಎಂದು ಟ್ವೀಟ್ ಮಾಡಲಾಗಿದೆ.
ಆದರೆ ಈ ಟ್ವೀಟ್ ಸಯೀದ್ ಅವರ ಟೈಮ್ ಲೈನ್ ನಲ್ಲಿ ಕಾಣಿಸುತ್ತಿಲ್ಲ!
ಬಿಜೆಪಿ ಕಾರ್ಯಕರ್ತ ತಜಿಂದರ್ ಯಾದವ್ ಅವರ ದೂರಿನ ಮೇರೆಗೆ “ಗಲಭೆಯನ್ನು ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ” ಮತ್ತು “ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವುದು” ಎಂದು ಸಯೀದ್ ವಿರುದ್ಧ ಪ್ರಕರಣ ದಾಖಲಾಗಿದೆ.
ನೈರುತ್ಯ ದೆಹಲಿಯ ಕಪಶೇರಾ ಪ್ರದೇಶದ ನಿವಾಸಿ ಯಾದವ್, ಬಿಜೆಪಿಯ ಯುವ ವಿಭಾಗವಾದ ಭಾರತೀಯ ಜನತಾ ಯುವ ಮೋರ್ಚಾದ ಮೆಹ್ರೌಲಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
“ಸಯೀದ್, ಸೇನೆ ಮತ್ತು ಭಾರತ ಸರ್ಕಾರದ ವಿರುದ್ಧ ರಾಷ್ಟ್ರ ವಿರೋಧಿ ಟ್ವೀಟ್ ಬರೆದಿದ್ದಾರೆ. ಭಾರತೀಯ ಸೇನೆ ಕಾಶ್ಮೀರದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಡೆಸಿದ ಕಾರ್ಯಾಚರಣೆ ಕುರಿತು, ಅವರು ನಿರಪರಾಧಿಗಳು” ಎಂದು ಟ್ವೀಟ್ ಮಾಡಿದ್ದರು ಎಂಬುದಾಗಿ ತಜಿಂದರ್ ಯಾದವ್ ದೂರಿದ್ದಾರೆ.
“ನಮಗೆ ದೂರು ಬಂದಿತ್ತು. ಪ್ರೋಟೋಕಾಲ್ ಪ್ರಕಾರ ನಾವು ಪ್ರಕರಣ ದಾಖಲಿಸಿದ್ದೇವೆ. ಇದನ್ನು ಪರಿಶೀಲಿಸಲಾಗುತ್ತಿದೆ ”ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಯೀದ್ ಮತ್ತೊಂದು ಟ್ವೀಟ್ನಲ್ಲಿ, “ಕಾಶ್ಮೀರವು ಜಗತ್ತಿನ ಅತ್ಯಂತ ಹೆಚ್ಚಿನ ಮಿಲಿಟರಿ ಇರುವ ಸ್ಥಳವಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯು ಪ್ರತಿದಿನವೂ ನಡೆಯುತ್ತಿದೆ. ಜಿಯೋನಿಸ್ಟ್ ಇಸ್ರೇಲ್ ಪ್ಯಾಲೆಸ್ಟೈನ್ ನಲ್ಲಿ ನರಮೇಧ ಮಾಡಿದಂತೆ, ಇಲ್ಲಿನ ಸರ್ಕಾರವು ಕಾಶ್ಮೀರದಲ್ಲಿ ಮಾಡಲು ಕನಸು ಕಾಣುತ್ತಿದೆ. ಆದರೆ ಯಶಸ್ವಿಯಾಗುವುದಿಲ್ಲ” ಎಂದಿದ್ದಾರೆ.
#Kashmir is the most militarised place in the globe where human rights violations mountain every other day. The government plots ethnic cleansing in Kashmir like illegal state Zionist Israel executes in Palestine but still they couldn't succeed as they dream.#KashmiriLivesMatter
— Sajid bin Sayed (@SajidbinSayed) July 12, 2020
“ರಾಷ್ಟ್ರ ವಿರೋಧಿ ಮತ್ತು ನಮ್ಮ ದೇಶದ ಹಿತಾಸಕ್ತಿಗೆ ವಿರುದ್ಧವಾದ ಕೆಲವು ಮಾಹಿತಿಗಳು ಬಂದಿದೆ. ಇದು ಭಾರತದ ಸೈನ್ಯ ಮತ್ತು ಸೈನಿಕರ ಬಗ್ಗೆ ಅವಹೇಳನಕಾರಿಯಾಗಿದ್ದು, ಇದು ನಮ್ಮ ದೇಶದ ಮತ್ತು ನಮ್ಮ ಗೌರವಾನ್ವಿತ ಸೈನ್ಯದ ಸಮಗ್ರತೆಗೆ ಭಂಗ ತರುವಂತದ್ದು ”ಎಂದು ಎಫ್ಐಆರ್ ಹೇಳಿದೆ.
ಈ ಪ್ರಕರಣವನ್ನು ತುಂಬಾ ಎಚ್ಚರಿಕೆಯಿಂದ ತನಿಖೆ ಮಾಡಬೇಕು ಎಂದು ಆರ್ ಎಸ್ ಎಸ್ ಹೇಳಿದೆ.
ಇದನ್ನೂ ಓದಿ: ನಿಮಗೆ ಇದೇ ಸರಿಯಾದ ಚಿಕಿತ್ಸೆ : ಜೆಎನ್ಯು, ಜಾಮಿಯ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ ಕೇಂದ್ರ ಸಚಿವ..