ತಮಿಳುನಾಡು ಮಾಜಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರ ಆಪ್ತ ಸಹಾಯಕನನ್ನು (ಪಿಎ) ಸೇಲಂ ಜಿಲ್ಲೆಯ ಓಮಲೂರಿನಲ್ಲಿ ಭಾನುವಾರದಂದು ಬಂಧಿಸಲಾಗಿದೆ. ಅವರು ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕೆ. ಪಳನಿಸ್ವಾಮಿ ಅವರ ಆಪ್ತ ಸಹಾಯಕ ಮಣಿ ಎಂಬವರು ನೆಯ್ವೇಳಿಯ ತಮಿಳ್ಸೆಲ್ವನ್ ಎಂಬವರಿಗೆ ಸಾರಿಗೆ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ 17 ಲಕ್ಷ ರೂ.ಗಳನ್ನು ಪಡೆದಿದ್ದರು ಎಂದು ದೂರಲಾಗಿದೆ.
ಇದನ್ನೂ ಓದಿ:‘ತಂದೆಯಂತೆ ಕಾಪಾಡುತ್ತೇನೆ’: ಮಹಿಳೆಯರಿಗೆ ತಮಿಳುನಾಡು ಸಿಎಂ ಭರವಸೆ
ತಮಿಳ್ ಸೆಲ್ವನ್ ಅವರಿಂದ ದುಡ್ಡು ಪಡೆದಿದ್ದರೂ ನೀಡಿದ್ದ ಭರವಸೆ ಈಡೇರಿಸದ ಬಗ್ಗೆ ಕೇಳಿದಾಗ, ಆಪ್ತಸಹಾಯಕ ಮಣಿ ಅವರಿಗೆ ಬೆದರಿಕೆ ಒಡ್ಡಿ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಹೇಳಿದ್ದರು. ಆದರೆ ತಮಿಳ್ ಸೆಲ್ವನ್ ಸೇಲಂ ಕ್ರೈಂ ಬ್ರಾಂಚ್ನಲ್ಲಿ ಒಂದು ತಿಂಗಳ ಹಿಂದೆ ಪ್ರಕರಣ ದಾಖಲಿಸಿದ್ದರು. ಮಣಿ ಜೊತೆಗೆ ಪೊಲೀಸರು ಬ್ರೋಕರ್ ಸೆಲ್ವಕುಮಾರ್ ಎಂಬವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ತನ್ನ ವಿರುದ್ದ ಪ್ರಕರಣ ದಾಖಲಾಗಿದ್ದರಿಂದ ಮಣಿ ಅವರು ನಿರೀಕ್ಷಣಾ ಜಾಮೀನು ಕೋರಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಜಿಲ್ಲಾ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಇದರ ನಂತರ ಅವರು ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು. ಇದೀಗ ಹೈಕೋರ್ಟ್ ಕೂಡ ಅರ್ಜಿಯನ್ನು ತಿರಸ್ಕರಿಸಿ ಅವರ ಬಂಧನಕ್ಕೆ ದಾರಿ ಮಾಡಿಕೊಟ್ಟಿದೆ.
ಮಣಿ ಅವರು ಓಮಲೂರು ಬಳಿಯ ನಡುಪಟ್ಟಿಯಲ್ಲಿರುವ ಮನೆಯೊಂದರಲ್ಲಿದ್ದಾರೆ ಎಂಬ ಮಾಹಿತಿ ಪಡೆದ ಅಪರಾಧ ವಿಭಾಗದ ಪೊಲೀಸರು ಮುಂಜಾನೆ ಅಲ್ಲಿಗೆ ಧಾವಿಸಿ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳ್ ಸೆಲ್ವನ್ ಮಾತ್ರವಲ್ಲದೆ, ಇನ್ನೂ ಕೆಲವರಿಂದ 50 ಲಕ್ಷ ರೂ.ಗೂ ಅಧಿಕ ಹಣ ಪಡೆದಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಮಣಿ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ದೇಶದ ಕಡಿಮೆ ಬಡತನದ ರಾಜ್ಯಗಳಾಗಿ ಹೊರಹೊಮ್ಮಿದ ಕೇರಳ, ತಮಿಳುನಾಡು: ನೀತಿ ಆಯೋಗ