Homeಮುಖಪುಟಲವ್ ಜಿಹಾದ್ ಎಂಬ ಕಪೋಲಕಲ್ಪಿತ: ಮತಾಂತರ ವಿರೋಧ ಕಾಯ್ದೆಯ ಅವಾಂತರ..

ಲವ್ ಜಿಹಾದ್ ಎಂಬ ಕಪೋಲಕಲ್ಪಿತ: ಮತಾಂತರ ವಿರೋಧ ಕಾಯ್ದೆಯ ಅವಾಂತರ..

ಸಾವಿರವಲ್ಲ, ಕೇವಲ ಒಂದು ಸುಳ್ಳು ಹೇಳಿ ಮದುವೆಯಾದಳು: ‘ಅವನು’ ಈಗ ಜೈಲಿನಲ್ಲಿ, ‘ಅವಳು’ ಪೋಷಕರ ಬಂಧನದಲ್ಲಿ!

- Advertisement -
- Advertisement -

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬುದೇನೋ ಗಾದೆ. (ಇದು ಕೂಡ ಮಹಿಳೆಯರ ವಿರುದ್ಧದ ಷಡ್ಯಂತ್ರವೇ!). ಅದಿರಲಿ, ಈ ಹುಡುಗಿ ತಾನು ಪ್ರೀತಿಸಿದವನನ್ನು, ಅದಕ್ಕೂ ಹೆಚ್ಚಾಗಿ ತನ್ನ ಶ್ರೇಯೋಭಿವೃದ್ಧಿಗೆ ಎಲ್ಲ ರೀತಿಯಲ್ಲೂ ನೆರವು ನೀಡುತ್ತಿದ್ದವನನ್ನು ಮದುವೆಯಾಗಲು ಒಂದೇ ಒಂದು ಸುಳ್ಳನ್ನು ಪೋಷಕರಿಗೆ ಹೇಳಿದಳು. ತೌಫೀಕ್‌ನನ್ನು ರಾಹುಲ್ ವರ್ಮಾ ಎಂದು ಪೋಷಕರಿಗೆ ಪರಿಚಯಿಸಿ ಮದುವೆಯಾದಳು.

ಪ್ರೀತಿಗೆ ಬದ್ಧನಾಗಿದ್ದ ತೌಫಿಕ್ ಹಿಂದೂ ಸಂಪ್ರದಾಯದಂತೆ ವಿವಾಹವಾದ. ಈ ಸುಳ್ಳೇನೂ ಮಹಾಪರಾಧವಲ್ಲ ಎಂದು ನಂಬಿದ್ದ ಪ್ರಿಯಾ ಎದುರು ಧುತ್ತನೆ ಈಗ ಉತ್ತರಪ್ರದೇಶದ ಮತಾಂತರ ವಿರೋಧಿ ಕಾನೂನು ಎಂಬ ‘ಭಯಂಕರ’ ಭೂತ ಎದುರಾಗಿದೆ. ಇದರ ಪರಿಣಾಮ, ಸುಳ್ಳು ಪರಿಚಯ ಮಾಡಿಕೊಂಡು ಮತಾಂತರ ಮಾಡಲು ತೌಫಿಕ್ ಮದುವೆಯಾಗಿದ್ದ, ಇದು ಲವ್ ಜಿಹಾದ್ ಎಂದೆಲ್ಲ ಕತೆ ಕಟ್ಟಿದ ಬಿಜೆಪಿ ನಾಯಕನೊಬ್ಬ ಪ್ರಿಯಾ ಪೋಷಕರ ತಲೆ ಕೆಡಿಸಿದ.

ಈಗ ತೌಫಿಕ್ ಜೈಲಿನಲ್ಲಿ, ಪ್ರಿಯಾ ಪೋಷಕರ ಮನೆಯೆಂಬ ಜೈಲಿಗಿಂತ ಭೀಕರವಾದ ಬಂಧನದಲ್ಲಿ!

ಬರೀ ಇಂತಹ ಉಪದ್ಯಾಪಿ ಕಾನೂನುಗಳನ್ನೇ ಮಾಡುವುದಕ್ಕೆಂದೇ ಸಂಘ ಪರಿವಾರ ಸೃಷ್ಟಿಸಿರುವ ಯೋಗಿ ಆದಿತ್ಯನಾಥ ಎಂಬ ಮುಖ್ಯಮಂತ್ರಿ ಲವ್ ಜಿಹಾದ್ ‘ತಡೆಯಲು’ ಮತಾಂತರ ವಿರೋಧ ಕಾನೂನು ಜಾರಿಗೆ ತಂದರು. ಅದೀಗ ಮುಸ್ಲಿಂ ಮತ್ತು ಹಿಂದೂ ಯುವ-ಯುವತಿಯರು ಪ್ರೀತಿಸಲೇಬಾರದು ಮತ್ತು ಮದುವೆಯಾಗಲೇಬಾರದು ಎಂಬ ಅಲಿಖಿತ ಜಂಗಲ್ ರಾಜ್ ವ್ಯವಸ್ಥೆಗೆ ನಾಂದಿ ಹಾಡಿದೆ. ಬಿಜೆಪಿ ಅಧಿಕಾರವಿರುವ ಹಿಮಾಚಲ ಪ್ರದೇಶ, ಮಧ್ಯಪ್ರದೇಶಗಳಲ್ಲೂ ಈ ಜಂಗಲ್ ಕಾಯ್ದೆ ಜಾರಿಗೆ ಬಂದಿದ್ದು, ಗುಜರಾತ್ ಸರ್ಕಾರವು ಜಾರಿಗೆ ತರಲು ತಯ್ಯಾರಿ ನಡೆಸಿದೆ. ಕರ್ನಾಟಕದಲ್ಲೂ ಕೆಲವು ಸಚಿವರು ಈ ಬಗ್ಗೆ ರಾಗ ಎಳೆದಿದ್ದಾರೆ. ಡ್ರಾಫ್ಟ್ ಹೇಗೂ ಯೋಗಿ ಬಳಿ ಸಿದ್ಧವಿದೆಯಲ್ಲ? ಸುಗ್ರೀವಾಜ್ಞೆ ಎಂಬ ಜನವಿರೋಧಿ ಅಸ್ತ್ರವಿದೆಯಲ್ಲ? ಇಲ್ಲೂ ಜಾರಿಗೆ ಬರುವ ದಿನ ದೂರವಿಲ್ಲ!

ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರಿಯಾ (29) ಮತ್ತು ತೌಫಿಕ್ (32) ಕಳೆದ ತಿಂಗಳಷ್ಟೇ ಪ್ರಿಯಾ ಪೋಷಕರು-ಸಂಬಂಧಿಕರ ಮತ್ತು ಪರಿಚಯಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸ್ವಲ್ಪ ದಿನಗಳ ನಂತರ ರಾಹುಲ್ ವರ್ಮಾ ಅಲ್ಲ ತೌಫಿಕ್ ಎಂದು ಗೊತ್ತಾದ ನಂತರ ಆರೆಸ್ಸೆಸ್ ಮಾಜಿ ಸದಸ್ಯ ಮತ್ತು ಬಿಜೆಪಿಯ ಹಾಲಿ ನಾಯಕನೊಬ್ಬ ಪ್ರಿಯಾ ತಂದೆ ಸರ್ವೇಶ್ ಶುಕ್ಲಾರನ್ನು ಭೇಟಿಯಾಗಿ, ಇದು ಲವ್ ಜಿಹಾದ್ ಕೇಸು, ಕೂಡಲೇ ದೂರು ದಾಖಲಿಸಿ ಎಂದು ಗಂಟುಬಿದ್ದ. ಆಗ ವಿವಾಹ ಸಂಬಂಧದ ಸಂಪ್ರದಾಯ ಆಚರಣೆಗೆಂದು ತವರಿನಲ್ಲೇ ಇದ್ದ ಪ್ರಿಯಾ ದೂರು ಕೊಡದಂತೆ ಪೋಷಕರಿಗೆ ಕಾಡಿ ಬೇಡಿದಳು.

‘ಆತ ತನಗೆ ಮೋಸ ಮಾಡಿಲ್ಲ. ನೀವು ಮುಸ್ಲಿಂನನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ನಾನೇ ಆತನ ಹೆಸರು ಮರೆಮಾಚಿದೆ. ಆತ ಎಂದೂ ಮತಾಂತರಕ್ಕೆ ಒತ್ತಾಯಿಸಿಲ್ಲ’ ಎಂದು ವಿನಂತಿಸಿದರೂ ಕೇಳಲಿಲ್ಲ. ದೂರು ದಾಖಲಿಸಿಯೇ ಬಿಟ್ಟರು. ಪೊಲೀಸರು ಮನೆಗೆ ಬಂದು ತೌಫಿಕ್ ವಿರುದ್ಧ ಪ್ರಿಯಾ ಹೇಳಿಕೆ ಪಡೆದು ಹೋಗಿ ತೌಫಿಕನನ್ನು ಅರೆಸ್ಟ್ ಮಾಡಿದ್ದಾರೆ.

ಈಗ ಮತ್ತೊಂದು ಮದುವೆಗೆ ಪ್ರಿಯಾ ಮೇಲೆ ಒತ್ತಡ ಹಾಕಲಾಗುತ್ತಿದೆ. ಆದರೆ ಪ್ರಿಯಾ ಒಪ್ಪುತ್ತಿಲ್ಲ. ‘ದಿ ಪ್ರಿಂಟ್’ ಪ್ರತಿನಿಧಿ ಅವರ ಮನೆಗೆ ಹೋದಾಗ, ಪ್ರಿಯಾಗೆ ಮುಕ್ತವಾಗಿ ಮಾತಾಡುವ ಅವಕಾಶವನ್ನು ಪೋಷಕರು ನೀಡಲಿಲ್ಲ. ಪಕ್ಕಕ್ಕೆ ಕರೆದು ಮೆಲ್ಲಗೆ ಪ್ರತಿನಿಧಿಯ ನಂಬರ್ ಪಡೆದ ಪ್ರಿಯಾ ನಂತರ ಫೋನಿನಲ್ಲಿ ಎಲ್ಲವನ್ನೂ ವಿವರಿಸಿ, ‘ನನ್ನ ಸಲುವಾಗಿ ತೌಫಿಕ್ ಹಿಂದೂ ಧರ್ಮಕ್ಕೆ ಮತಾಂತರವಾಗಲು ಸಿದ್ಧನಾಗಿದ್ದ. ಅಂತಹ ಹುಡುಗ ಏಕೆ ನನ್ನನ್ನು ಮತಾಂತರಕ್ಕೆ ಒತ್ತಾಯಿಸುತ್ತಾನೆ? ನನ್ನ ಮಾತನ್ನು ಇಲ್ಲಿ ಕೇಳುವವರೇ ಇಲ್ಲ’ ಎಂದು ತನ್ನ ಸಂಕಟ ಹೇಳಿಕೊಂಡಿದ್ದಾಳೆ.

ಅಂದಂತೆ, ದೂರಿನಲ್ಲಿ ಎಲ್ಲೂ ಮತಾಂತರದ ಉದ್ದೇಶದ ಪ್ರಸ್ತಾಪವಿಲ್ಲ! ಇದನ್ನೂ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ‘ಆದರೆ, ಯುವತಿಯೇ ಹೇಳಿಕೆ ಕೊಟ್ಟ ಮೇಲೆ ನಾವೇನು ಮಾಡುವುದು?’ ಎಂದಿದ್ದಾರೆ.
ಆದರೆ, ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸದೇ ಮನೆಯಲ್ಲಿಯೇ ಹೇಳಿಕೆ ಪಡೆದ ಪೊಲೀಸರು, ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಪಡೆದವರಂತೆ ಎಫ್‌ಐಆರ್ ತಯಾರಿಸಿದ್ದಾರೆ. ಬೇರೊಬ್ಬರ ಹೆಸರಲ್ಲಿ ಮದುವೆಯಾಗಿರುವುದು, ಮೋಸ, ದುರುದ್ದೇಶದಿಂದ ಮದುವೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ ಈ ಸೆಕ್ಷನ್‌ಗಳ ಜೊತೆಗೆ, 2020 ರ ಮತಾಂತರ ವಿರೋಧಿ ಧಾರ್ಮಿಕ ಕಾಯ್ದೆಯ 3 ಮತ್ತು 6ನೆ ಸೆಕ್ಷನ್‌ಗಳಡಿ ತೌಫಿಕ್‌ನನ್ನು ಬಂಧಿಸಲಾಗಿದೆ.

‘ಮತಾಂತರದ ಉದ್ದೇಶಕ್ಕೆ ಮದುವೆ’ಯನ್ನು ಸೆಕ್ಷನ್ 3 ನಿಷೇಧಿಸಿದರೆ, ಸೆಕ್ಷನ್ 6, ‘ಕಾನೂನುಬಾಹಿರ ಮತಾಂತರಕ್ಕೆಂದೇ ನಡೆದ ಮದುವೆ’ಯನ್ನು ನಿಷೇಧಿಸುತ್ತದೆ. ಗಮನಿಸಬೇಕಾದ ಅಂಶ ದೂರಿನಲ್ಲೆಲ್ಲೂ ಮತಾಂತರದ ವಿಷಯವೇ ಪ್ರಸ್ತಾಪವಿಲ್ಲ. ಇದು ಏನನ್ನು ಸೂಚಿಸುತ್ತದೆ? ಸ್ಥಳೀಯ ಬಿಜೆಪಿ ನಾಯಕರ ಅಣತಿಯಂತೆ ಪೊಲೀಸರು ಈ ಕಾಯ್ದೆಯನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂಬುದನ್ನಲ್ಲವೆ?

ಪ್ರಿಯಾ ಮತ್ತು ತೌಫಿಕ್ ಏನೂ ಹದಿಹರೆಯ ಉಕ್ಕಿ ಉತ್ಸಾಹದಲ್ಲಿ ಪ್ರೀತಿಸಿದವರಲ್ಲ. ಈಗ 29 ವರ್ಷವಾಗಿರುವ ಪ್ರಿಯಾ ಮತ್ತು 32 ವರ್ಷದ ತೌಫಿಕ್ ಎರಡು ವರ್ಷದ ಹಿಂದಿನಿಂದಲೇ ಪ್ರೀತಿಸುತ್ತಿದ್ದಾರೆ. ಪ್ರಿಯಾ ಸೋಷಿಯಾಲಜಿಯಲ್ಲಿ ಡಬಲ್ ಎಂಎ ಪಡೆದಿದ್ದು, ಐಪಿಎಸ್ ಆಗುವ ಉದ್ದೇಶ ಹೊಂದಿದ್ದಾಳೆ.
‘ತೌಫಿಕ್ ಕೂಡ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಿದ್ದು, ಇಬ್ಬರೂ ಸೇರಿ ಅಭ್ಯಾಸ ಮಾಡುವ ಗುರಿ ಹೊಂದಿದ್ದೆವು. ಆತ ನನಗೆ ಹಲವಾರು ಅಮೂಲ್ಯ ಪುಸ್ತಕಗಳನ್ನು ತಂದು ಕೊಟ್ಟಿದ್ದಾನೆ. ಆತನ ಧರ್ಮದ ವಿಷಯದಲ್ಲಿ ಹೇಳಿದ ಸುಳ್ಳು ಅವನನ್ನು ಜೈಲಿಗೆ ತಳ್ಳಲಿದೆ ಎಂಬುದನ್ನು ನಾವಿಬ್ಬರೂ ಊಹಿಸಿರಲೇ ಇಲ್ಲ’ ಎಂದು ಫೋನಿನಲ್ಲಿ ಪ್ರಿಂಟ್ ಪ್ರತಿನಿಧಿ ಎದುರು ಪ್ರಿಯಾ ಹೇಳಿಕೊಂಡಿದ್ದಾಳೆ.

ಅಸಹಾಯಕ ಸ್ಥಿತಿಯಲ್ಲಿರುವ ಆಕೆ ಪ್ರಿಂಟ್ ಪ್ರತಿನಿಧಿಯ ನೆರವನ್ನು ಕೇಳಿದ್ದಾಳೆ. ‘ಒತ್ತಡದಲ್ಲಿ ನಾನು ನೀಡಿದ ಹೇಳಿಕೆ ಪರಿಗಣಿಸಬೇಡಿ ಎಂದು ಸತ್ಯ ಹೇಳಿದ ನಂತರವೂ ದೂರು ದಾಖಲಾಗಿದೆ. ಈಗ ನನ್ನ ಗಂಡನನ್ನು ನಾನು ಭೇಟಿ ಮಾಡಬೇಕು. ಪೊಲಿಸರು ಅದಕ್ಕೆ ಅವಕಾಶ ನೀಡಲಾರರು. ಕೋರ್ಟ್ ಮೊರೆ ಹೋದರೆ ನ್ಯಾಯ ಸಿಗಬಹುದೇ? ಎಂದು ಪ್ರಿಂಟ್ ಪ್ರತಿನಿಧಿ ಜೊತೆ ಚರ್ಚಿಸಿರುವ ಪ್ರಿಯ ಕೋರ್ಟ್ ಮೆಟ್ಟಿಲೇರುವ ಉದ್ದೇಶ ಹೊಂದಿದ್ದಾಳೆ.

ಆರೆಸ್ಸೆಸ್ ಮಾಜಿ ಸದಸ್ಯ ಮತ್ತು ಈಗ ಕಾನ್ಪುರ ಮತ್ತು ಬುಂದೇಲ್‌ಖಂಡ್ ವಿಭಾಗದ ಬಿಜೆಪಿ ಮುಖ್ಯಸ್ಥನಾಗಿರುವ ವಿನಯ್ ಮತ್ತು ಆತನ ಹಿಂಬಾಲಕರ ಚಿತಾವಣೆಯಿಂದ, ಮತಾಂತರ ವಿರೋಧಿ ಕಾಯ್ದೆ ಎಂಬ ಜೀವವಿರೋಧಿ ‘ಸಿದ್ಧಾಂತ’ದಿಂದ ಉಜ್ವಲ ಕನಸುಗಳನ್ನು ಹೊತ್ತ ದಂಪತಿ ಈಗ ಬಂಧನದಲ್ಲಿದ್ದಾರೆ. ಒಂದು ಪೊಲೀಸ್ ಬಂಧನ, ಇನ್ನೊಂದು ಕೌಟುಂಬಿಕ ಬಂಧನ. ಎರಡರ ಹಿಂದೆಯೂ ಆಳುವ ಪಕ್ಷ ಉತ್ತರಪ್ರದೇಶದಲ್ಲಿ ನಿರ್ಮಿಸಿರುವ ಕಲುಷಿತ ಸಾಮಾಜಿಕ ವಾತಾವರಣವೇ ಕೆಲಸ ಮಾಡುತ್ತಿದೆ.

  • ಮಲ್ಲನಗೌಡರ್ ಪಿ.ಕೆ
  • ಆಧಾರ: ದಿ ಪ್ರಿಂಟ್

ಇದನ್ನೂ ಓದಿ: ನಮ್ಮ ಪ್ರೀತಿಯ ಮುಂದೆ ನಿಮ್ಮ ದ್ವೇಷದ ಸೋಲು ನಿಶ್ಚಯ- ಲವ್ ಜಿಹಾದ್ ವಿರೋಧಿಸಿ, ಪ್ರೀತಿಗಾಗಿ ಪ್ರತಿಭಟನೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...