ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದುದನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಗಳಲ್ಲಿ ಪೋಸ್ಟ್ ಹಾಕಿದ್ದ ಆರೋಪದಲ್ಲಿ ಅಸ್ಸಾಂ ಪೊಲೀಸರು ಆಗಸ್ಟ್ನಲ್ಲಿ 16 ಜನರನ್ನು ಬಂಧಿಸಿದ್ದರು. ಇದೀಗ ಅಲ್ಲಿನ ಸ್ಥಳೀಯ ನ್ಯಾಯಾಲಯಗಳು 14 ಮಂದಿಗೆ ಜಾಮೀನು ನೀಡಿವೆ. ವಿಶೇಷವೇನೆಂದರೆ, ಬಂಧನಕ್ಕೆ ಒಳಗಾದ 15 ಜನರ ವಿರುದ್ದ ಕರಾಳ ಕಾಯ್ದೆಯಾದ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಅದಾಗ್ಯೂ, ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿವೆ. ಈ ಕಾಯ್ದೆ ಅಡಿಯಲ್ಲಿ ಪ್ರಕರಣದ ದಾಖಲಾದರೆ ಜಾಮೀನು ಲಭ್ಯವಾಗುವುದು ಕಷ್ಟವಾಗುತ್ತದೆ. ನ್ಯಾಯಾಲಯವು ಆರೋಪಿಗಳನ್ನು ಜೈಲಿನಲ್ಲಿ ಇಡಲು ಸಾಕಷ್ಟು ಆಧಾರಗಳಿಲ್ಲ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ: ಲಖಿಂಪುರ್ ಹತ್ಯಾಕಾಂಡ: ಹುತಾತ್ಮ ರೈತರಿಗಾಗಿ ರೈತರಿಂದ ಅಂತಿಮ ನಮನ
ಅಸ್ಸಾಂ ವಿಶೇಷ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಜಿ.ಪಿ.ಸಿಂಗ್ ಆಗಸ್ಟ್ 14 ರಂದು ಮೊದಲ 14 ಜನರ ಬಂಧನ ನಡೆದಿದೆ ಎಂದು ಘೋಷಿಸಿದ್ದರು, ಮರುದಿನ ಮತ್ತೆ ಇಬ್ಬರನ್ನು ಬಂಧಿಸಲಾಯಿತು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡಾ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು.
ಪ್ರಕರಣವನ್ನು ಹತ್ತಿರದಿಂದ ಬಲ್ಲ ಗುವಾಹಟಿ ಹೈಕೋರ್ಟ್ನ ಹಿರಿಯ ವಕೀಲರು, “ಹೆಚ್ಚಿನ ಪೋಸ್ಟ್ಗಳು ಉದ್ದೇಶಪೂರ್ವಕವಲ್ಲ ಎಂದು ತೋರುತ್ತದೆ. ಪ್ರಕರಣವು ಯುಎಪಿಎಯಂತಹ ಕಠಿಣ ಕ್ರಮಕ್ಕೆ ಸಂಬಂಧಿಸಿಲ್ಲ. ನ್ಯಾಯಾಲಯವು ಅದನ್ನು ಅರ್ಥಮಾಡಿಕೊಂಡಿದ್ದು, ಆದ್ದರಿಂದ ಹಲವರಿಗೆ ಜಾಮೀನು ಸಿಕ್ಕಿದೆ” ಎಂದು ಹೇಳಿದ್ದಾರೆ.
ಇನ್ನೂ ಇಬ್ಬರು ಆರೋಪಿಗಳಿಗೆ ಜಾಮೀನು ಲಭಿಸಿಲ್ಲ, ಈ ಇಬ್ಬರ ಜಾಮೀನು ಅರ್ಜಿಯನ್ನು ಧುಬ್ರಿ ಸೆಷನ್ಸ್ ಕೋರ್ಟ್ ತಿರಸ್ಕರಿಸಿದೆ. ಅವರ ಅರ್ಜಿಯ ಮುಂದಿನ ವಿಚಾರಣೆಯು ಅಕ್ಟೋಬರ್ 22 ನಡೆಯಲಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಇದನ್ನೂ ಓದಿ: ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್: ಪ್ರಶ್ನಿಸಿದ್ದಕ್ಕೆ ‘ಈ ಕೆಲಸ ಮಾಡಲೆಂದೇ ಜಾತಿಗಳಿವೆ’ ಎಂದ ಇಂಜಿನಿಯರ್!
ಜಾಮೀನು ನೀಡಿದ್ದು ಸ್ವಾಗತಾರ್ಹ.