ಬಾಂಗ್ಲಾದೇಶದ ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್ ಅವರು ವಾಸಿಸುತ್ತಿದ್ದ ಮನೆಯನ್ನು (ಸ್ಮಾರಕ ಮ್ಯೂಸಿಯಂ) ಬುಧವಾರ (ಫೆ.5) ಪ್ರತಿಭಟನಾಕಾರರ ಗುಂಪೊಂದು ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ ಎಂದು ಪಿಟಿಐ ವರದಿ ಮಾಡಿದೆ. ಮುಜಿಬುರ್ ರೆಹಮಾನ್ ಅವರ ಪುತ್ರಿ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಆನ್ಲೈನ್ ಭಾಷಣ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ವ್ಯಕ್ತಿ ಹಾಗೂ ಸ್ವಾತಂತ್ರ್ಯೋತ್ತರ ಬಾಂಗ್ಲಾದ ಪ್ರಥಮ ಅಧ್ಯಕ್ಷರೂ ಆಗಿದ್ದಾರೆ.
ಶೇಖ್ ಮುಜಿಬುರ್ ರೆಹಮಾನ್ ಸ್ಮಾರಕ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿರುವ ಅವರು ವಾಸಿಸುತ್ತಿದ್ದ ಮನೆ ‘ಧನ್ಮೊಂಡಿ -32’ ಕಡೆಗೆ ಬುಲ್ಡೋಝರ್ ಮೆರವಣಿಗೆಗೆ ಕರೆ ನೀಡಿದ ನಂತರ ರಾತ್ರಿ 8 ಗಂಟೆ ಸುಮಾರಿಗೆ ಪ್ರತಿಭಟನೆ ಪ್ರಾರಂಭವಾಯಿತು ಎಂದು ಬಾಂಗ್ಲಾದ ಮಾಧ್ಯಮ ಪ್ರೋಥೋಮ್ ಅಲೋ ವರದಿ ಮಾಡಿದೆ. ಪ್ರತಿಭಟನಾಕಾರರು ಏಕಾಏಕಿ ‘ಧನ್ಮೊಂಡಿ -32’ರ ಕಡೆಗೆ ಮೆರವಣಿಗೆ ಘೋಷಿಸಿದರು ಎಂದಿದೆ.
ಪ್ರತಿಭಟನಾಕಾರರು ಪ್ರವೇಶ ದ್ವಾರವನ್ನು ಮುರಿದು ‘ಧನ್ಮೊಂಡಿ -32’ರ ಆವರಣಕ್ಕೆ ನುಗ್ಗಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಹಲವಾರು ವಿಡಿಯೋಗಳಲ್ಲಿ ಅವರು ಮುಜಿಬುರ್ ರೆಹಮಾನ್ ನಿವಾಸಕ್ಕೆ ಬೆಂಕಿ ಹಚ್ಚುವುದನ್ನು ನೋಡಬಹುದು. ಪ್ರತಿಭಟನಾಕಾರರ ವಿಧ್ವಂಸಕ ಕೃತ್ಯಗಳನ್ನು ತಡೆಯುವ ಸಲುವಾಗಿ ಅವರ ಮನವೊಲಿಸಲು ಸೇನೆಯು ಸ್ಥಳಕ್ಕೆ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಪಿಟಿಐ ವರದಿ ವಿವರಿಸಿದೆ.
560 ಜನರ ಸಾವಿಗೆ ಕಾರಣವಾದ ಅವಾಮಿ ಲೀಗ್ ಸರ್ಕಾರದ ವಿರುದ್ಧದ ಬೃಹತ್ ಪ್ರತಿಭಟನೆಯ ನಂತರ, ಆಗಸ್ಟ್ 5, 2024 ರಂದು ಬಾಂಗ್ಲಾದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಈಗಲೂ ಅವರು ಭಾರತದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಹಸೀನಾ 16 ವರ್ಷಗಳ ಕಾಲ ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು.
ಹಸೀನಾ ಅವರ ಪಲಾಯನದ ಬಳಿಕ ಅವಾಮಿ ಲೀಗ್ ಸರ್ಕಾರ ಪತನಗೊಂಡಿದೆ. ನಂತರ ಮಧ್ಯಂತರ ಸರ್ಕಾರ ರಚನೆಯಾಗಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನುಸ್ ಅವರು ಆಗಸ್ಟ್ 8ರಂದು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಬುಧವಾರ ಅವಾಮಿ ಲೀಗ್ನ ವಿದ್ಯಾರ್ಥಿ ವಿಭಾಗವಾದ ಛಾತ್ರ ಲೀಗ್ ಆಯೋಜಿಸಿದ್ದ ಭಾಷಣದಲ್ಲಿ, ಹಸೀನಾ ಅವರು ಬಾಂಗ್ಲಾದೇಶದ ನಾಗರಿಕರು ಪ್ರಸ್ತುತ ಆಡಳಿತದ ವಿರುದ್ಧ ಪ್ರತಿರೋಧವನ್ನು ಸಂಘಟಿಸುವಂತೆ ಕರೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ಲಕ್ಷಾಂತರ ಹುತಾತ್ಮರ ಪ್ರಾಣವನ್ನು ಬಲಿಕೊಟ್ಟು ನಾವು ಗಳಿಸಿದ ರಾಷ್ಟ್ರಧ್ವಜ, ಸಂವಿಧಾನ ಮತ್ತು ಸ್ವಾತಂತ್ರ್ಯವನ್ನು ಬುಲ್ಡೋಝರ್ ಬಳಸಿ ನಾಶಮಾಡುವ ಶಕ್ತಿ ಅವರಿಗೆ ಇನ್ನೂ ಬಂದಿಲ್ಲ” ಎಂದು ಯೂನುಸ್ ಆಡಳಿತದ ಬಗ್ಗೆ ಹಸೀನಾ ಹೇಳಿರುವುದಾಗಿ ವರದಿ ತಿಳಿಸಿದೆ.
“ಅವರು ಕಟ್ಟಡಗಳನ್ನು ಕೆಡವಬಹುದು, ಆದರೆ ಇತಿಹಾಸವನ್ನಲ್ಲ. ಇತಿಹಾಸವು ತನ್ನ ಸೇಡನ್ನು ತೀರಿಸಿಕೊಳ್ಳಲಿದೆ ಎಂಬುವುದನ್ನು ಅವರು ನೆನಪಿನಲ್ಲಿಡಬೇಕು” ಎಂದು ಹಸೀನಾ ಹೇಳಿದ್ದಾರೆ.
ಮಂಗಳವಾರ ಫೇಸ್ಬುಕ್ನಲ್ಲಿ ಸರಣಿ ಪೋಸ್ಟ್ಗಳನ್ನು ಹಾಕಿದ್ದ ಇಂಕಿಲಾಬ್ ಮಂಚ್ನ ಸಂಚಾಲಕ ಮತ್ತು ಜಾತ್ಯ ನಾಗೋರಿಕ್ ಸಮಿತಿಯ ಸದಸ್ಯ ಷರೀಫ್ ಒಸ್ಮಾನ್ ಬಿನ್ ಹಾದಿ ಧನ್ಮೊಂಡಿ -32ರ ಕಡೆಗೆ ಮೆರವಣಿಗೆ ನಡೆಸಲು ಕರೆ ನೀಡಿದ್ದಾರೆ ಎಂದು ಪ್ರೋಥೋಮ್ ಅಲೋ ವರದಿ ತಿಳಿಸಿದೆ.
“ಪ್ಯಾಸಿಸಂನ ಪವಿತ್ರ ಸ್ಥಳದಿಂದ ಬಾಂಗ್ಲಾದೇಶ ಇಂದು ಮುಕ್ತಿ ಹೊಂದಲಿದೆ” ಎಂದು ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿಯ ಸಂಚಾಲಕ ಹಸ್ನತ್ ಅಬ್ದುಲ್ಲಾ ಕೂಡ ಬುಧವಾರ ಸಂಜೆ 7 ಗಂಟೆಗೆ ಫೇಸ್ಬುಕ್ನಲ್ಲಿ ಬರೆದಿದ್ದರು ಎಂದು ವರದಿ ಹೇಳಿದೆ.
2024ರ ಆಗಸ್ಟ್ 5 ರಂದು ಕೂಡ ಮುಜಿಬುರ್ ರೆಹಮಾನ್ ಅವರ ಮನೆಗೆ ಬೆಂಕಿ ಹಚ್ಚಲಾಗಿತ್ತು.
ಭಾರತಕ್ಕೆ ಮರಳಿದ ಅಕ್ರಮ ವಲಸಿಗರು; ಮೊದಲ ತಂಡದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ 48 ಜನರು


