Homeಚಳವಳಿಭಗತ್‌ ಸಿಂಗ್ ಜನ್ಮದಿನ: ಭಾರತದ ಅದಮ್ಯ ಚೇತನದ ನೆನಪು

ಭಗತ್‌ ಸಿಂಗ್ ಜನ್ಮದಿನ: ಭಾರತದ ಅದಮ್ಯ ಚೇತನದ ನೆನಪು

ಭಗತ್ ಸಿಂಗ್ ಎಂಬ ಕ್ರಾಂತಿಕಾರಿಯ 'ನೂರ ಹದಿಮೂರನೇ ಜಯಂತಿ' ಆಚರಿಸುವ ಈ ಹೊತ್ತಿನಲ್ಲಿ ನಾವು ದೇಶಭಕ್ತ ಎಂದು ಪೂಜಿಸುವುದು, ಆತನನ್ನು ಒಂದು ಕೋಮು, ಪಕ್ಷ, ಜಾತಿಗೆ ಸೀಮಿತಗೊಳಿಸುವ ಸಾಹಸ ಅಪ್ಪಿತಪ್ಪಿಯೂ ಮಾಡಬಾರದು.

- Advertisement -
- Advertisement -

“ನಾವು ಪ್ರಭುತ್ವದ ವಿರುದ್ಧ ಸಮರ ಸಾರಿದ್ದೇವೆ. ಹಾಗಾಗಿ ಯುದ್ಧ ಖೈದಿಗಳಾಗಿದ್ದೇವೆ ಎಂದು ಹೇಳಲಿಚ್ಚಿಸುತ್ತೇನೆ. ನಮ್ಮನ್ನು ಯುದ್ಧ ಖೈದಿಗಳಂತೆಯೇ ಪರಿಗಣಿಸಲು ಆಗ್ರಹಿಸುತ್ತೇವೆ. ಅರ್ಥಾತ್ ನಮ್ಮನ್ನು ಗಲ್ಲಿಗೇರಿಸುವ ಬದಲು ನೇರವಾಗಿ ಗುಂಡಿಟ್ಟು ಕೊಲ್ಲುವಂತೆ ಕೋರುತ್ತೇವೆ.” ಇಂತಹ ಕೋರಿಕೆಯ ಮಾತುಗಳು ಬ್ರಿಟೀಷ್ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಹೇಳಿರುವ ಕ್ರಾಂತಿಕಾರಿ ವೀರ ಯಾರು ಗೊತ್ತಾ? ಅವರೇ ಭಗತ್ ಸಿಂಗ್!

ಭಾರತದ ಇತಿಹಾಸದಲ್ಲಿ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯುವ ಅದಮ್ಯ ಚೇತನ ಶಾಹಿದ್ ಭಗತ್ ಸಿಂಗ್. ಬ್ರಿಟಿಷ್ ವಸಾಹತುಶಾಹಿಯ ನೇಣಿಗೆ ನಗು ನಗುತ್ತಲೇ ಕೊರಳೊಡ್ಡಿದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೀರ. ಆತ ಬದುಕ್ಕಿದ್ದು ಕೇವಲ ಇಪ್ಪತ್ಮೂರು ವರ್ಷ ಮಾತ್ರ, ಆದರೆ ಆತನ ಕ್ರಾಂತಿಯ ಕಿಚ್ಚು ಲಕ್ಷಾಂತರ  ಯುವ ಸಮುದಾಯದ ಎದೆಯೊಳಗೆ ಹೊತ್ತಿಸಿದ್ದು ಸುಳ್ಳಲ್ಲ.

‘ಭಗತ್ ಸಿಂಗ್’ ಎಂದರೆ ಸ್ಪೂರ್ತಿಯ ಸೆಲೆ, ದೇಶಪ್ರೇಮದ ಕಿಡಿ, ಯುವ ಮನಸ್ಸಿಗೆ ಮತ್ತಷ್ಟು ಹುಮ್ಮಸ್ಸು ತುಂಬುವ ಧೀರ ಶಕ್ತಿ. ಈ ಎಲ್ಲಾ ಸಾಮರ್ಥ್ಯವನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಭಗತ್ ಸಿಂಗ್ ಭಾರತೀಯರಿಗೆ ಸದಾ ಯುವ ಚೇತನ, ಕ್ರಾಂತಿಯ ಚಿಲುಮೆ. ಭಗತ್‌‌ಸಿಂಗ್ ನಿಗೆ ಕೇವಲ ‘ಹುತಾತ್ಮ’ರ ಪಟ್ಟಿಗೆ ಸೇರಿಸಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಎಂದಷ್ಟೇ ಕರೆದು ಸೀಮಿತಗೊಳಿಸುವ ಪ್ರಯತ್ನ ಮಾಡುವುದು ಅಷ್ಟು ಸಮಂಜಸವಲ್ಲ.

ತನ್ನ ವಯಸ್ಸಿಗೆ ಮೀರಿದ ಭಗತನ ಪ್ರಬುದ್ಧತೆ, ಬರಹಗಳು ಬ್ರಿಟಿಷ್ ವಸಾಹತುಶಾಹಿಗೆ ನಡುಕ ಹುಟ್ಟಿಸುತ್ತಿದ್ದವು. ಅಂದಿನ ಸಮಕಾಲೀನ ಸಮಾಜದ ಅಸಮಾನತೆ, ಶೋಷಣೆ, ಧರ್ಮಾಂಧತೆ, ಕೋಮುವಾದ ವಿರುದ್ಧ ಕಠೋರ ನಿಲುವು ತಾಳಿದ ಭಗತ್ ಸಿಂಗ್ ಚಿಂತನೆಗಳು ಮುನ್ನೆಲೆಗೆ ಬರಬೇಕಾಗಿದೆ. ಆತನ ವಿಚಾರಗಳು ಪ್ರಸ್ತುತ ಸಮಾಜದ ಸ್ಥಿತಿಗತಿಗೆ ಹಿಡಿದ ಕನ್ನಡಿಯಾಗಿವೆ.

“ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ ಅವರ ವಿಚಾರಗಳನ್ನಲ್ಲ” ಎಂದಿರುವ ಭಗತ್‍ ಸಿಂಗ್‍ ದೈಹಿಕವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ ಆತನೇ ಹೇಳಿರುವಂತೆ ಆತನ ಪ್ರಬುದ್ಧತೆಯ ಲೇಖನಗಳು, ಆದರ್ಶ ಸಿದ್ಧಾಂತ, ಕ್ರಾಂತಿಕಾರಿ ಹೋರಾಟದ ಬದುಕು ಇಂದಿಗೂ ಭಾರತದಲ್ಲಿ ಉಸಿರಾಡುತ್ತಿದೆ.  ನಾವು ಭಗತ್ ಸಿಂಗ್ ನನ್ನು ಒಬ್ಬ ಅಪ್ಪಟ ‘ದೇಶಪ್ರೇಮಿ’ ಎಂದು ಆರಾಧನೆ ಮಾಡುವುದಲ್ಲ. ಭಗತ್ ನ ಉನ್ನತ ಧ್ಯೇಯ ಮತ್ತು ಆದರ್ಶ ಚಿಂತನೆಗಳು ಪ್ರಸ್ತುತ ಸಮಾಜದಲ್ಲಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡುವುದು ತೀರ ಅಗತ್ಯತೆ ಇದೆ. ಇದೇ ನಾವು ಆತನಿಗೆ ಸಲ್ಲಿಸುವ ಮಹೋನ್ನತ ಗೌರವವಾಗಿದೆ.

ಶಾಹಿದ್ ಭಗತ್ ಸಿಂಗ್ ಹುಟ್ಟಿದ್ದು ಇಪ್ಪತ್ತೆಂಟನೆ ಸೆಪ್ಟೆಂಬರ್ 1907 ರಂದು, ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರಿಗೆ ಮೂರನೆಯ ಮಗನಾಗಿ ಭಗತನು ಜನಿಸಿದ. ಅಗಾಧ ದೇಶಭಕ್ತಿಗೆ ಹೆಸರುವಾಸಿ, ಹಾಗೂ ಕ್ರಾಂತಿಕಾರಿ ವಿಚಾರಧಾರೆಯ ಕುಟುಂಬದಲ್ಲಿ ಜನಿಸಿದ ಭಗತ ಎದೆಯಲ್ಲಿ ಹುಟ್ಟುತ್ತಲೇ ದೇಶಪ್ರೇಮದ ಕಿಚ್ಚು ಮೊಳಕೆಯೊಡೆದಿತ್ತು.

ಅದು 1919ರ ವೇಳೆ ಜಲಿಯಾನ್ ವಾಲ್ ಬಾಗದಲ್ಲಿ ಸಂಭವಿಸಿದ ರಕ್ತ ಕ್ರಾಂತಿಯ ಹತ್ಯಾಕಾಂಡ ಭಗತ್ ಸಿಂಗ್ ನಿಗೆ ಅತಿಯಾಗಿ ಕಾಡಿದ್ದು. ಅಂದಿನ ಆ ಘಟನೆ ಭಗತ್ ಸಿಂಗ್ ನನ್ನು ಒಬ್ಬ ಅಪ್ರತಿಮ ಹೋರಾಟಗಾರ, ಕೌರ್ಯ ಸಮಾಜದ ವಿರುದ್ಧ ಸಿಡಿದೇಳುವಂತೆ ಮಾಡಿತ್ತು. ಮುಂದೆ ಬ್ರಿಟೀಷ್ ರಿಗೆ ಸಿಂಹಸ್ವಪ್ನವಾಗಿ, ಭವಿಷ್ಯ ಭಾರತದ ದಾರ್ಶನಿಕತೆಗಾಗಿ, ಶೋಷಣೆ ರಹಿತ, ಜಾತಿ ರಹಿತವಾದ ಸಮ ಸಮಾಜಕ್ಕಾಗಿ ಹೋರಾಡಿದನು.

ಭಾರತದ ಸ್ವಾತಂತ್ರ್ಯ ಚಳುವಳಿಗೆ ಬ್ರಿಟಿಷರ ವಿರುದ್ಧ ಸಮರ ಸಾರಿದವರಲ್ಲಿ ಭಗತ್‍ಸಿಂಗ್ ಮತ್ತು ಆತನ ಸಂಗಾತಿಗಳಾದ ರಾಜಗುರು, ಸುಖದೇವ್ ಮೊದಲಿಗರು. ಭಗತ್ ಸಿಂಗ್ ಕೇವಲ ಬ್ರಿಟೀಷ್ ವಸಾಹತುಶಾಹಿಯ ಸಾಮ್ರಾಜ್ಯದ ವಿರುದ್ಧ ಅಷ್ಟೇ ಹೋರಾಟ ನಡೆಸಲಿಲ್ಲ. ದೇಶದ ಕೋಮುವಾದ, ಅಸಮಾನತೆ, ಶೋಷಣೆ, ಅಶಾಂತಿ ಮತ್ತು ಕೌರ್ಯದ ವಿರುದ್ಧ ಹೋರಾಟ ಆರಂಭಿಸಿದನು.

ಬಹುತ್ವ ಭಾರತದ ಅಸ್ಮಿತೆ ಉಳಿವಿಗಾಗಿ ಶ್ರಮಿಸಿದ ಭಗತ್ ಸಿಂಗ್  “ಭಾರತದ ನೆಲದಲ್ಲಿ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಗೊಳಿಸಿ ಸಮಾಜವಾದಿ ಗಣತಂತ್ರವನ್ನು ಸ್ಥಾಪಿಸುವವರೆಗೂ ನಮ್ಮ ಅವಿರತ ಹೋರಾಟ ದಿಟ್ಟತನದಿಂದ, ದೃಢತೆಯಿಂದ ಮತ್ತು ಅಪರಿಮಿತ ವಿಶ್ವಾಸದಿಂದ ನಡೆಯುತ್ತದೆ” ಎನ್ನುವ ಕೆಚ್ಚೆದೆಯ ಚಿಂತನೆಗಳು ಪ್ರತಿಪಾದಿಸಿದನು.

ಕ್ರಾಂತಿಯ ಮೂಲಕವೇ ಸಾಮಾಜಿಕ ಬದಲಾವಣೆ ಬಯಸಿದ ಭಗತ್ ಸಿಂಗ್ ‘ಕ್ರಾಂತಿ’ ಎಂದರೆ ಕ್ರಿಯೆ ಹಾಗೂ ಪವಿತ್ರವಾದದ್ದು ಎಂದು ತಿಳಿದಿದನು. “ಸಂಘಟಿತರಾಗಿ, ವ್ಯವಸ್ಥಿತವಾದ ಕಾರ್ಯ ಯೋಜನೆಯ ಮೂಲಕ ಉದ್ದೇಶಪೂರ್ವಕವಾಗಿ ಬದಲಾವಣೆ ತರುವುದನ್ನು ಕ್ರಾಂತಿ ಎನ್ನಲಾಗುತ್ತದೆ” ಎಂದು ಹೇಳುತ್ತಾನೆ. ಮುಂದೆ ‘ಕ್ರಾಂತಿಕಾರಿಗಳು ಸಂಪೂರ್ಣ ಕ್ರಾಂತಿಗಾಗಿ ಹೋರಾಡುತ್ತೇವೆ ಆದರೆ ಸಂಪ್ರದಾಯವಾದಿಗಳು ಕ್ರಾಂತಿಕಾರಿ ಶಕ್ತಿಯನ್ನು ಭಂಗಗೊಳಿಸಿ ಹೋರಾಟವನ್ನು ವಿಫಲಗೊಳಿಸುತ್ತಾರೆ. ಹಾಗಾಗಿ ಇಂತಹ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ನಾವು ಗೊಂದಲಕ್ಕೆ ಒಳಗಾಗದೇ ಧ್ಯೇಯವನ್ನು ಸಾಧಿಸಬೇಕು’ ಎನ್ನುವ ಸವಾಲು ಎದುರಿಸಲು ಧೈರ್ಯ ತುಂಬುತ್ತಾನೆ.

ಭಗತ್ ಸಿಂಗ್ ಎಂಬ ಕ್ರಾಂತಿಕಾರಿಯ ‘ನೂರ ಹದಿಮೂರನೇ ಜಯಂತಿ’ ಆಚರಿಸುವ ಈ ಹೊತ್ತಿನಲ್ಲಿ ನಾವು ದೇಶಭಕ್ತ ಎಂದು ಪೂಜಿಸುವುದು, ಆತನನ್ನು ಒಂದು ಕೋಮು, ಪಕ್ಷ, ಜಾತಿಗೆ ಸೀಮಿತಗೊಳಿಸುವ ಸಾಹಸ ಅಪ್ಪಿತಪ್ಪಿಯೂ ಮಾಡಬಾರದು.

“ಸಮಾಜವನ್ನು ನೂತನ ನೆಲೆಯಲ್ಲಿ, ಹೆಚ್ಚು ಸಮರ್ಥವಾದ ನೆಲೆಯಲ್ಲಿ, ಪ್ರಸಕ್ತ ಆಡಳಿತ ವ್ಯವಸ್ಥೆ ಮತ್ತು ಪ್ರಭುತ್ವವನ್ನು ಕೊನೆಗೊಳಿಸಿ ವ್ಯವಸ್ಥಿತವಾಗಿ ನವ ಸಮಾಜವನ್ನು ನಿರ್ಮಿಸುವುದು ಕ್ರಾಂತಿಯ ಸ್ವರೂಪ” ಎಂದಿರುವ ಭಗತ್ ಸಿಂಗ್ ಚಿಂತನೆ ಇಂದು ಇಲ್ಲವಾಗುತ್ತಿವೆ. ಆತನ ಮೂಲ ತತ್ವ ಸಿದ್ಧಾಂತ ಬದಿಗೊತ್ತಿ ಹುಸಿಚಿಂತನೆಯ ಸಿದ್ಧಾಂತದ ತೆಕ್ಕೆಗೆ ಸೆಳೆದುಕೊಳ್ಳುವ ಪ್ರತಿಗಾಮಿ ಶಕ್ತಿಗಳ ಪ್ರಯತ್ನ ಎಗ್ಗಿಲ್ಲದೆ ನಡೆಸುತ್ತಿದೆ.

ಸಾಮಾಜಿಕ ವಿಚಾರಗಳನ್ನು ಸೇರಿದಂತೆ ಇನ್ನಿತರ ಮಹನೀಯರು ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಅನುಭವಾತ್ಮಕವಾಗಿ ಅರ್ಥೈಸಿಕೊಳ್ಳಲು ಭಗತ್ ಸಿಂಗ್ ಹೆಚ್ಚು ಇಷ್ಟಪಡುತ್ತಿದ್ದನು. ಹೀಗಾಗಿಯೇ “ಎಲ್ಲ ವಿಚಾರಗಳ ಅಧ್ಯಯನ ನಡೆಸಲು ಸೆರೆಮನೆಯೇ ಸೂಕ್ತ ತಾಣ ಎಂದು ನನಗೆ ಭಾಸವಾಗುತ್ತದೆ. ಯಾವುದೇ ವ್ಯಕ್ತಿ ಸ್ವತಃ ನೋವು ಅನುಭವಿಸಿದಲ್ಲಿ ಮಾತ್ರ‌ ಸ್ವಯಂ ಅಧ್ಯಯನ ಅತ್ಯುನ್ನತ ಹಂತ ಕಾಣಲು ಸಾಧ್ಯ” ಎಂದು
ಓದು-ಬರಹದ ಬಗ್ಗೆ ತನಗಿರುವ ಹೆಮ್ಮೆಯ ಕುರಿತು ಹೇಳಿಕೊಂಡಿದ್ದಾನೆ.

ಸಮಕಾಲೀನ ಭಾರತದಲ್ಲಿ ಭಗತ್ ಸಿಂಗ್ ಕೇವಲ ಆರಾಧನೆಗಾಗಿ ಮಾತ್ರ ಉಳಿದಿದ್ದಾನೆ ಎಂದೆನಿಸುತ್ತಿದೆ. ಇಂದು ಭಾರತದಲ್ಲಿ ಭಗತನು ಪ್ರತಿಪಾದಿಸಿದ ಸಿದ್ಧಾಂತ ಉಸಿರಾಡಲು ನಲುಗುತ್ತಿದೆ. ಎಲ್ಲ ಮೌಲ್ಯಗಳೂ ಪ್ರಭುತ್ವದ ಶೋಷಣೆಗೆ ಸಿಲುಕಿ ಒದ್ದಾಡುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರುವ ಪ್ರಸ್ತುತ ಸಮಾಜದಲ್ಲಿ ಮಾತು ಮೌನವಾಗಿ, ಕಣ್ಣಿದ್ದು ಕುರುಡರಾಗಿದ್ದೇವೆ. ನಾನು ಈ ನೆಲದ ಅಸ್ಮಿತೆಯ ಉಳಿವಿಗಾಗಿ ಹೋರಾಡಿದ್ದೇನೆ, ನನ್ನನ್ನು ಗುಂಡಿಕ್ಕಿ ಕೊಂದುಬಿಡಿ, ಎಂದು ಬ್ರಿಟಿಷ ಸರ್ಕಾರಕ್ಕೆ ವಿನಂತಿಸಿಕೊಂಡು ತನ್ನ ಕೆಚ್ಚೆದೆಯ ಅಪ್ರತಿಮ ಚೈತನ್ಯ ತೋರಿದ ಭಾರತದ ಏಕೈಕ ದೇಶಪ್ರೇಮಿ ಭಗತನಿಗೆ ಇನ್ನೂ ‘ಭಾರತ ರತ್ನ’ ಕೊಡಲು ಸಾಧ್ಯವಾಗಲಿಲ್ಲ.

ಭಗತ್ ‌ಸಿಂಗ್, ರಾಜಗುರು ಹಾಗೂ ಸುಖದೇವ್ ಸೇರಿದಂತೆ ಅಸಂಖ್ಯಾತ ಸಂಗಾತಿಗಳನ್ನು ನಾವು ಹುತಾತ್ಮರೆಂದು ನೆನೆಯುತ್ತಿದ್ದೇವೆ. ಆದರೆ ಇಂದಿನ ಯುವ ‌‌ಸಮುದಾಯವನ್ನು ಒಗ್ಗೂಡಿಸಿ ಕ್ರಾಂತಿಯ ಮಾರ್ಗದಲ್ಲಿ ಕೊಂಡೊಯ್ಯಬಲ್ಲ ಸಾಮರ್ಥ್ಯ ಕೇವಲ ಭಗತ್ ಸಿಂಗ್ ಚಿಂತನೆಗಳಲ್ಲಿದೆ. ಅಂದಿನ ಭಗತ್ ಸಿಂಗ್ ಎನ್ನುವ ‘ರಿಯಲ್ ಹೀರೋ’ ಇಂದಿನ ಯುವ ಪೀಳಿಗೆಗೆ ಆದರ್ಶ, ರೋಲ್ ಮಾಡೆಲ್.

ಭಗತ್ ಸಿಂಗ್ ನ ಆಳವಾದ ಚಿಂತನೆ, ಆತನ ಮಾನವೀಯ ಮೌಲ್ಯಗಳು ಈಗಾಗಲೇ ನಮ್ಮೆಲ್ಲರ ಮನಸ್ಸಿನ ಪ್ರಭಾವ ಬೀರಿವೆ. ನಾವು ಕಟ್ಟಲು ಬಯಸಿದ ಭವಿಷ್ಯ ಭಾರತ ದೇಶಕ್ಕೆ ಭಗತ್ ಸಿಂಗ್ ಎನ್ನುವ ತರುಣ ಸದಾ ಆದರ್ಶವಾಗಿರುತ್ತಾನೆ. ಆತನ ಚಿಂತನೆಗಳು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ನಾವೆಲ್ಲರೂ ಮಾಡಬೇಕಾಗಿದೆ. ತ್ಯಾಗ ಬಲಿದಾನದ ಸಂಕೇತವಾಗಿ ಗಳಿಸಿದ ಈ ಸ್ವಾತಂತ್ರ್ಯವನ್ನು ನಾವು ಅಷ್ಟೇ ಹೆಮ್ಮೆ ಹಾಗೂ ಗೌರವದಿಂದ ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿ ಕೂಡ ನಮ್ಮೆಲ್ಲರ ಮೇಲಿದೆ, ಅದಕ್ಕೆ ಭಗತ್ ಸಿಂಗ್ ಎನ್ನುವ ಕ್ರಾಂತಿಯ ಯುವ ಚೇತನ ಸ್ಪೂರ್ತಿವೆ.

ಬಾಲಾಜಿ ಕುಂಬಾರ, ಚಟ್ನಾಳ,

ಶಿಕ್ಷಕರು ಮತ್ತು ಯುವ ಬರಹಗಾರ. ತಾ.ಔರಾದ ಬಾ, ಜೀ. ಬೀದರ.


ಇದನ್ನೂ ಓದಿ: ಬಹುಜನ ಭಾರತ: ಕೋಮುವಾದದ ಇರುಳ ಸೀಳುವ ಬೆಳಕು ಭಗತ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್ ಬಳಿಕ 9 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮತದಾರರ ಸಂಖ್ಯೆ 1.70 ಕೋಟಿ ಇಳಿಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಒಟ್ಟು ಸಂಖ್ಯೆಯಲ್ಲಿ 1.70 ಕೋಟಿ ಇಳಿಕೆ ಕಂಡಿದೆ. ಗುಜರಾತ್, ಪುದುಚೇರಿ, ಲಕ್ಷದ್ವೀಪ, ರಾಜಸ್ಥಾನ, ಛತ್ತೀಸ್‌ಗಢ, ಅಂಡಮಾನ್...

ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ : 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ

ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಭಾನುವಾರ (ಫೆ.22) ಭಾರೀ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಪಕ್ತಿಕಾ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿರುವ ಏಳು ಸಶಸ್ತ್ರ ಗುಂಪುಗಳ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ...

ಹೊಸ ಜಾಗತಿಕ ಸುಂಕವನ್ನು ಶೇ.15ಕ್ಕೆ ಏರಿಸಿದ ಟ್ರಂಪ್

ಪ್ರತಿ ಸುಂಕ ನೀತಿಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದು, ಎಲ್ಲಾ ದೇಶಗಳ ಆಮದಿನ ಮೇಲೆ ಹೊಸದಾಗಿ 10 ಶೇಕಡ ಜಾಗತಿಕ ಸುಂಕ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶನಿವಾರ...

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...