ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೋರಿಕೆಯ ಮೇರೆಗೆ ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಬಾಂಬೆ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಆದೇಶದ ತಡೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಸ್ತರಿಸಿದೆ.
ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಇತರ ಆರೋಪಿಗಳ ಇದೇ ರೀತಿಯ ಜಾಮೀನು ವಿಷಯಗಳು ಉನ್ನತ ನ್ಯಾಯಾಲಯಗಳ ಇತರ ಪೀಠಗಳ ಮುಂದೆ ಇತ್ಯರ್ಥವಾಗುತ್ತಿಲ್ಲ ಎಂದು ತಿಳಿಸಿದ ನಂತರ ನ್ಯಾಯಾಲಯವು ತನಿಖಾ ಸಂಸ್ಥೆಯ ಮೇಲ್ಮನವಿಯನ್ನು ಪುರಸ್ಕರಿಸಿ, ಎಲ್ಲ ಪ್ರಕರಣಗಳನ್ನು ಮುಖ್ಯ ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸುವುದಾಗಿ ಹೇಳಿದೆ.
72 ವರ್ಷ ವಯಸ್ಸಿನ ಕಾರ್ಯಕರ್ತನಿಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್ ಡಿಸೆಂಬರ್ 19ರ ಆದೇಶವನ್ನು ಪ್ರಶ್ನಿಸಿ ಎನ್ಐಎ ಮೇಲ್ಮನವಿ ಸಲ್ಲಿಸಿತ್ತು. ಡಿಸೆಂಬರ್ 19ರ ಆದೇಶದ ಮೂಲಕ ಹೈಕೋರ್ಟ್ ತನ್ನ ನಿರ್ಧಾರವನ್ನು ಮೂರು ವಾರಗಳವರೆಗೆ ತಡೆಹಿಡಿದಿರುವುದರಿಂದ, ಸಿಜೆಐ ಅವರು ಪೀಠದ ಮುಂದೆ ವಿಷಯವನ್ನು ಹಂಚುವವರೆಗೂ ಹಿಂದಿನ ಆದೇಶವನ್ನೆ ವಿಸ್ತರಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂಎಂ ಸುಂದ್ರೇಶ್ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠ ಶುಕ್ರವಾರ ಹೇಳಿದೆ.
ಭೀಮಾ-ಕೋರೆಗಾಂವ್ ಹಿಂಸಾಚಾರದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ಈ ವಿಷಯವನ್ನು ಒಂದು ವಿಚಾರಣಾ ಅರ್ಜಿಯೊಂದಿಗೆ ಆಲಿಸಬೇಕು ಎಂದು ಒತ್ತಾಯಿಸಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ನೇತೃತ್ವದ ನವ್ಲಾಖಾ ಅವರ ವಕೀಲರ ನಡುವೆ ವಿವಾದ ಉಂಟಾದ ನಂತರ ನ್ಯಾಯಾಲಯವು ಮೇಲ್ಮನವಿಯ ಬಗ್ಗೆ ನೋಟಿಸ್ ನೀಡಲಿಲ್ಲ.
ಎನ್ಐಎಯನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಎಸ್ವಿ ರಾಜು ಅವರು, ಮತ್ತೊಬ್ಬ ಆರೋಪಿ ಮಹೇಶ್ ರಾವುತ್ಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಂಸ್ಥೆ ಸಲ್ಲಿಸಿದ ಇದೇ ರೀತಿಯ ಮೇಲ್ಮನವಿಯೊಂದಿಗೆ ವಿಷಯವನ್ನು ಪಟ್ಟಿ ಮಾಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.
ಸೆಪ್ಟೆಂಬರ್ ನಲ್ಲಿ, ಬಾಂಬೆ ಹೈಕೋರ್ಟ್ ರಾವುತ್ಗೆ ಜಾಮೀನು ನೀಡಿತ್ತು ಮತ್ತು ಅದೇ ತಿಂಗಳು, ಎನ್ಐಎ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿತು. ಅವರ ಬಿಡುಗಡೆಗೆ ತಡೆಯಾಜ್ಞೆಯನ್ನು ವಿಸ್ತರಿಸಿತು. ಈ ವಿಷಯವು ಇನ್ನೂ ಉನ್ನತ ನ್ಯಾಯಾಲಯದಲ್ಲಿ ಪರಿಗಣನೆಗೆ ಬಾಕಿ ಇದೆ’ ಎಂದು ನೆನಪಿಸಿದರು.
ಈ ವಿಷಯಗಳು ವಿವಿಧ ಪೀಠಗಳ ಮುಂದೆ ಇತ್ಯರ್ಥಕ್ಕೆ ಬಾಕಿ ಇವೆ ಎಂದು ಎರಡೂ ಕಡೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ನವೆಂಬರ್ 2022 ರಲ್ಲಿ ಅಂಗೀಕರಿಸಿದ ಸುಪ್ರೀಂ ಆದೇಶದ ನಂತರ ನವ್ಲಾಖಾ ಅವರು ಪ್ರಸ್ತುತ ಗೃಹಬಂಧನದಲ್ಲಿದ್ದಾರೆ. ಆ ವಿಷಯವು ಸುಪ್ರೀಂ ಕೋರ್ಟಿನಲ್ಲಿ ಬಾಕಿ ಉಳಿದಿದೆ ಎಂದು ಹಿರಿಯ ವಕೀಲ ನಿತ್ಯಾ ರಾಮಕೃಷ್ಣನ್ ಗಮನಸೆಳೆದರು.
ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದ ಮತ್ತೊಬ್ಬ ಆರೋಪಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಹನಿ ಬಾಬು ಅವರ ಜಾಮೀನು ಅರ್ಜಿಯನ್ನು ಎರಡು ದಿನಗಳ ಹಿಂದೆ, ನ್ಯಾಯಮೂರ್ತಿ ಅನಿರುದ್ಧ ಬೋಸ್ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಲಾಗಿದ್ದು, ಅಲ್ಲಿ ನೋಟಿಸ್ ನೀಡಲಾಯಿತು ಮತ್ತು ವಿಚಾರಣೆಯನ್ನು ಮೂರು ವಾರಗಳವರೆಗೆ ಮುಂದೂಡಲಾಯಿತು. ಈ ಪ್ರಕರಣ ಸಂಬಂಧ ಹಲವಾರು ಪೀಠಗಳ ಮುಂದೆ ವಿಚಾರಣೆ ಬಾಕಿಯಿದೆ ಎಂದು ಸಿಂಘ್ವಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ಇದೆ ಮಾದರಿಯ ಪ್ರಕರಣಗಳೊಂದಿಗೆ ವಿಚಾರಣೆ ನಡೆಸುವ ಕಾರ್ಯಸಾಧ್ಯತೆಯನ್ನು ಪರಿಗಣಿಸಲು ನಾವು ಈ ವಿಷಯವನ್ನು ಭಾರತದ ಮುಖ್ಯ ನ್ಯಾಯಾಧೀಶರ ಮುಂದೆ ಇಡಲು ನೋಂದಾವಣೆಗೆ ನಿರ್ದೇಶಿಸುತ್ತೇವೆ’ ಎಂದು ಹೇಳಿದರು.
ಏಕ ಪೀಠದ ಮುಂದೆ ಎಲ್ಲ ಪ್ರಕರಣಗಳ ವಿಚಾರಣೆಗೆ ನಡೆಸಬೇಕು ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರದಲ್ಲಿ 2018ರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನವ್ಲಾಖಾ ಅವರನ್ನು ಏಪ್ರಿಲ್ 2020 ರಲ್ಲಿ ಬಂಧಿಸಲಾಯಿತು ಮತ್ತು ನಿಷೇಧಿತ ನಕ್ಸಲ್ ಸಂಘಟನೆ – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ನೊಂದಿಗೆ ಸಂಪರ್ಕ ಹೊಂದಿರುವ ಆರೋಪವಿದೆ. ಅವರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ. 10 ನವೆಂಬರ್ 2022ರಿಂದ, ಆರೋಗ್ಯ ಸಂಬಂಧಿತ ಸಮಸ್ಯೆಗಳ ಕಾರಣದಿಂದ ಗೃಹಬಂಧನದಲ್ಲಿ ಇರಲು ಉನ್ನತ ನ್ಯಾಯಾಲಯವು ಅವರಿಗೆ ಅನುಮತಿ ನೀಡಿದೆ.
ಭೀಮಾ-ಕೋರೆಗಾಂವ್ ಪ್ರಕರಣವು 31 ಡಿಸೆಂಬರ್ 2017 ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಆಪಾದಿತ ಪ್ರಚೋದಕ ಭಾಷಣಗಳಿಗೆ ಸಂಬಂಧಿಸಿದೆ. ವಿಯೋತ್ಸವ ನಡೆದ ಮರುದಿನ ಭೀಮಾ-ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಪೊಲೀಸರು ಹೇಳಿದ್ದಾರೆ; ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
317 ಸಾಕ್ಷಿಗಳಿದ್ದು, ಆರೋಪಗಳನ್ನು ಹೊರಿಸಬೇಕಾಗಿರುವುದರಿಂದ ಶೀಘ್ರದಲ್ಲೇ ವಿಚಾರಣೆ ಪ್ರಾರಂಭವಾಗುವ ಸಾಧ್ಯತೆಯಿಲ್ಲ ಎಂದು ನವ್ಲಾಖಾ ಅವರ ವಕೀಲರು ಸೂಚಿಸಿದರು. ಯುಎಪಿಎ ಅಪರಾಧಗಳಲ್ಲಿ, ವಿಚಾರಣೆಯ ಪ್ರಾರಂಭವು ಕಣ್ಣಿಗೆ ಬೀಳದಿದ್ದರೆ, ಅದು ಜಾಮೀನು ನೀಡಲು ಒಂದು ಆಧಾರವಾಗಿದೆ ಎಂದು ಸಿಂಘ್ವಿ ಹೇಳಿದರು.
ನವ್ಲಾಖಾ ಅವರಿಗೆ ಜಾಮೀನು ನೀಡುವಾಗ ಹೈಕೋರ್ಟ್, ₹1 ಲಕ್ಷ ವೈಯಕ್ತಿಕ ಬಾಂಡ್ ನೀಡುವಂತೆ ಸೂಚಿಸಿತ್ತು. 18 ನವೆಂಬರ್ 2022 ಮತ್ತು 21 ಸೆಪ್ಟೆಂಬರ್ 2023 ರಂದು ಕ್ರಮವಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ತೇಲ್ತುಂಬ್ಡೆ ಮತ್ತು ರಾವುತ್ಗೆ ಕೂಡಾ ಅದೇ ಮಾದರಿಯ ಷರತ್ತುಗಳನ್ನು ವಿಧಿಸಿತು.
ಇದನ್ನೂ ಓದಿ; ಮಿಮಿಕ್ರಿ ಮಾಡಿದ ಸಂಸದರನ್ನು ಊಟಕ್ಕೆ ಕರೆದ ಧನ್ಖರ್; ಸಂತಸ ವ್ಯಕ್ತಪಡಿಸಿದ ಕಲ್ಯಾಣ್ ಬ್ಯಾನರ್ಜಿ


