“ಈ ವರ್ಷ ಪವಿತ್ರ ರಂಝಾನ್ ಮಾಸದ ಶುಕ್ರವಾರ ಬರುವ ಹೋಳಿಯಂದು ಮನೆಯೊಳಗೆ ಇರಿ ಮತ್ತು ಹಿಂದೂಗಳು ತಮ್ಮ ಹಬ್ಬವನ್ನು ಯಾವುದೇ ಅಡೆತಡೆಗಳಿಲ್ಲದೆ ಆಚರಿಸಲು ಬಿಡಿ” ಎಂದು ಬಿಹಾರದ ಬಿಜೆಪಿ ಶಾಸಕರೊಬ್ಬರು ಸೋಮವಾರ (ಮಾ.10) ಮುಸ್ಲಿಮರಿಗೆ ಮನವಿ ಮಾಡಿರುವುದು ವಿವಾದಕ್ಕೀಡಾಗಿದೆ.
ಮಧುಬನಿ ಜಿಲ್ಲೆಯ ಬಿಸ್ಫಿ ವಿಧಾನಸಭಾ ಕ್ಷೇತ್ರದ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಅವರು ವಿಧಾನಸಭೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.
“ಒಂದು ವರ್ಷದಲ್ಲಿ 52 ಶುಕ್ರವಾರಗಳು ಇರುತ್ತವೆ. ಅವುಗಳಲ್ಲಿ ಒಂದು ಹೋಳಿಯ ದಿನವೇ ಬಂದಿದೆ. ಆದ್ದರಿಂದ, ಮುಸ್ಲಿಮರು ಹಿಂದೂಗಳಿಗೆ ಹಬ್ಬವನ್ನು ಆಚರಿಸಲು ಬಿಡಬೇಕು. ಅವರ ಮೇಲೆ ಬಣ್ಣಗಳನ್ನು ಬಳಿದರೆ ನೊಂದುಕೊಳ್ಳಬಾರದು. ಅವರಿಗೆ ಅಂತಹ ಸಮಸ್ಯೆ ಇದ್ದರೆ, ಅವರು ಮನೆಯಲ್ಲೇ ಇರಬೇಕು. ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಇದು ಅತ್ಯಗತ್ಯ” ಎಂದು ಠಾಕೂರ್ ಹೇಳಿದ್ದಾರೆ.
ಮುಸ್ಲಿಮರು ರಂಝಾನ್ ಸಮಯದಲ್ಲಿ ಉಪವಾಸ ಆಚರಿಸುತ್ತಾರೆ. ಶುಕ್ರವಾರದಂದು ವಿಶೇಷ ಪ್ರಾರ್ಥನೆ ಮಾಡುತ್ತಾರೆ ಎಂದಾಗ, ಶಾಸಕ ಠಾಕೂರ್, “ಅವರದು ಯಾವಾಗಲೂ ದ್ವಿಮುಖ ನೀತಿ. ಬಣ್ಣದ ಪುಡಿ ಮಾರಾಟ ಮಾಡುವ ಅಂಗಡಿಗಳನ್ನು ಹಾಕುವ ಮೂಲಕ ಹಣ ಗಳಿಸಲು ಅವರಿಗೆ ಯಾವ ಅಡೆತಡೆಯೂ ಇಲ್ಲ. ಆದರೆ ಕೆಲವು ಬಣ್ಣದ ಕಲೆಗಳು ಅವರ ಬಟ್ಟೆಗಳ ಮೇಲೆ ಬಿದ್ದರೆ, ಅದು ಅವರಿಗೆ ಆಗುವುದಿಲ್ಲ”, ಎಂದಿದ್ದಾರೆ.
ಆರ್ಜೆಡಿ ಶಾಸಕ ಮತ್ತು ಮಾಜಿ ಸಚಿವ ಇಸ್ರೈಲ್ ಮನ್ಸೂರಿ, ಬಚೌಲ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಹಬ್ಬಗಳ ವಿಷಯಕ್ಕೆ ಬಂದಾಗ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಯಾವುದೇ ಸಮಸ್ಯೆ ಇಲ್ಲ. ಹಿಂದೂಗಳು ನಮ್ಮ ಇಫ್ತಾರ್ ಕೂಟಗಳಿಗೆ ಹಾಜರಾಗುತ್ತಾರೆ. ಬಿಜೆಪಿ ಶಾಸಕರು ಹೋಳಿಯಂದು ಮುಸ್ಲಿಮರ ಬಗ್ಗೆ ಏಕೆ ಚಿಂತೆ ಮಾಡುತ್ತಿದ್ದಾರೆ? ಇವರೆಲ್ಲ ರಾಜಕೀಯಕ್ಕಾಗಿ ಕೋಮು ಗಲಭೆಯನ್ನು ಹುಟ್ಟುಹಾಕುತ್ತಾರೆ. ಇವರೇ ಸನಾತನದ ಧ್ವಜಧಾರಿಗಳಂತೆ ನಟಿಸುತ್ತಾರೆ” ಎಂದು ಹೇಳಿದ್ದಾರೆ.
ರಾಜ್ಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮತ್ತು ಜೆಡಿ (ಯು) ನಾಯಕ ಜಮಾ ಖಾನ್, “ಹೋಳಿಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯುವುದಿಲ್ಲ. ಹಬ್ಬದ ಸಮಯದಲ್ಲಿ ಸಾಮರಸ್ಯವನ್ನು ಕಾಪಾಡಲು ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ” ಎಂದಿದ್ದಾರೆ.


