ರಾಜ್ಯದಲ್ಲಿ ಹಿಜಾಬ್ ವಿಚಾರವಾಗಿ ನಡೆಯುತ್ತಿರುವ ವಿವಾದದ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಪ್ರತಿಕ್ರಿಯಿಸಿ, “ತಲೆಯ ಮೇಲೆ ಬಟ್ಟೆ, ಹಣೆಯ ಮೇಲೆ ಶ್ರೀಗಂಧ ಹಾಕಿದರೆ ಸಮಸ್ಯೆಯೇನು?” ಎಂದು ಪ್ರಶ್ನಿಸಿದ್ದು, ವಿವಾದವೂ ಸಂಪೂರ್ಣವಾಗಿ ಅರ್ಥಹೀನವಾಗಿದ್ದು, ಇದರ ಬಗ್ಗೆ ಯಾವುದೇ ಚರ್ಚೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷದ ಬೆಂಬಲದೊಂದಿಗೆ ಬಿಹಾರದಲ್ಲಿ ಸರ್ಕಾರ ನಡೆಸುತ್ತಿರುವ ನಿತೀಶ್ ಕುಮಾರ್, ರಾಜ್ಯದ ವಿವಾದಕ್ಕೆ ಬಿಹಾರದ ಉದಾಹರಣೆಯನ್ನು ನೀಡಿದ್ದಾರೆ. “ಹಿಜಾಬ್ ವಿವಾದ ಅರ್ಥಹೀನ. ಬಿಹಾರದ ಶಾಲೆಯಲ್ಲಿ, ಎಲ್ಲರೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ವಿದ್ಯಾರ್ಥಿನಿಯೊಬ್ಬಳು ತನ್ನ ತಲೆಯ ಮೇಲೆ ಏನೊ ಹಾಕುತ್ತಾರೆ ಅಥವಾ ಹಣೆಯ ಮೇಲೆ ಶ್ರೀಗಂಧವನ್ನು ಹಾಕಿದರೆ, ಅದರಲ್ಲಿ ಸಮಸ್ಯೆ ಏನಿದೆ?” ಎಂದು ಅವರು ಕೇಳಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಹಿಜಾಬ್ ಧರಿಸಿದ ಶಿಕ್ಷಕಿಯರಿಗೂ ಇಲ್ಲ ಪ್ರವೇಶ: ಗೇಟ್ ಬಳಿಯೇ ಹಿಜಾಬ್, ಬುರ್ಕಾ ತೆಗೆದ ಶಿಕ್ಷಕಿಯರು
ಎಲ್ಲ ಜನರು ತಮ್ಮದೇ ಆದ ಜೀವನ ವಿಧಾನವನ್ನು ಹೊಂದಿದ್ದಾರೆ ಮತ್ತು ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
“ಹಿಜಾಬ್ ವಿವಾದ ನಮ್ಮ ದೃಷ್ಟಿಯಲ್ಲಿ ವಿಶೇಷವೇನೂ ಅಲ್ಲ. ಕೆಲವರಿಗೆ ತಮ್ಮದೇ ಆದ ದಾರಿ ಇರುತ್ತದೆ. ಅದರಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ಅದರ ಬಗ್ಗೆ ನಾವು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನಾವು ಧಾರ್ಮಿಕ ಭಾವನೆಗಳಿಗೆ ಪರಸ್ಪರ ಗೌರವ ನೀಡಬೇಕು” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಹಿಜಾಬ್ ವಿವಾದದಂತಹ ವಿಷಯಗಳ ಬಗ್ಗೆ ಚರ್ಚೆ ಅಥವಾ ಗಮನ ಅಗತ್ಯವಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದು, “ಕೆಲವು ವಿಷಯಗಳಿಗೆ ವಿಶೇಷ ಗಮನ ಅಗತ್ಯವಿಲ್ಲ. ಈ ಎಲ್ಲ ವಿಷಯಗಳ ಬಗ್ಗೆ ವಾದ ಮಾಡುವ ಅಗತ್ಯ ಏನಿದೆ” ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದ ಉಡುಪಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶ ನಿರಾಕರಿಸಿದ ಹಿನ್ನಲೆಯಲ್ಲಿ, ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಪ್ರಕರಣವನ್ನು ನ್ಯಾಯಾಲಯದ ಪೂರ್ಣ ಪೀಠ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: “ಶಾಲೆಗಳಲ್ಲಿ ಹಿಜಾಬ್ ನಿಷೇಧ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ”: ಅಮೆರಿಕಾ ಟೀಕೆ