75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರ ಆರಂಭಿಸಿರುವ “ಹರ್ ಘರ್ ತಿರಂಗ” ಅಭಿಯಾನವನ್ನು ಬಹಿಷ್ಕರಿಸುವಂತೆ ಹಿಂದುತ್ವವಾದಿ ಯತಿ ನರಸಿಂಗಾನಂದ ಹಿಂದೂಗಳಿಗೆ ತಿಳಿಸಿದ್ದಾರೆ.
ದ್ವೇಷ ಭಾಷಣಗಳಿಗೆ ಕುಖ್ಯಾತಿ ಪಡೆದಿರುವ, ಭಾರತದ ಸಂವಿಧಾನದ ಬಗ್ಗೆ ಅಗೌರವವನ್ನು ಹೊಂದಿರುವ ಯತಿ ನರಸಿಂಗಾನಂದ ಮತ್ತೊಮ್ಮೆ ತಮ್ಮ ಪ್ರವೃತ್ತಿಯನ್ನು ಮುಂದುವರಿಸಿದ್ದು, “ಹರ್ ಘರ್ ತಿರಂಗ ಅಭಿಯಾನದಿಂದ ಮುಸ್ಲಿಂ ಒಡೆತನದ ಸಂಸ್ಥೆಗೆ ಲಾಭವಾಗುತ್ತಿದೆ. ತಿರಂಗ ಧ್ವಜ ಹಾರಿಸುವ ಬದಲು ಹಿಂದೂಗಳು ತಮ್ಮ ಮನೆಯ ಮೇಲೆ ಭಗವಾ ಧ್ವಜ (ಕೇಸರಿ ಧ್ವಜ) ಹಾರಿಸಬೇಕು” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಈ ಅಭಿಯಾನಕ್ಕಾಗಿ [ಧ್ವಜಗಳನ್ನು ಸಂಗ್ರಹಿಸುವ] ಅತಿದೊಡ್ಡ ಆದೇಶವನ್ನು ಪಶ್ಚಿಮ ಬಂಗಾಳದ ಸಲಾವುದ್ದೀನ್ ಒಡೆತನದ ಕಂಪನಿಗೆ ನೀಡಲಾಗಿದೆ. ಇದು ಹಿಂದೂಗಳ ವಿರುದ್ಧದ ಒಂದು ದೊಡ್ಡ ಪಿತೂರಿ. ನೀವು [ಹಿಂದೂಗಳು] ಜೀವಂತವಾಗಿರಲು ಬಯಸಿದರೆ, ಈ ಅಭಿಯಾನದ ಹೆಸರಿನಲ್ಲಿ ನಿಮ್ಮ ಹಣವನ್ನು ಮುಸ್ಲಿಮರಿಗೆ ನೀಡುವುದನ್ನು ನಿಲ್ಲಿಸಿ” ಎಂದು ನರಸಿಂಗಾನಂದ ನಾಲಿಗೆ ಹರಿಬಿಟ್ಟಿದ್ದಾರೆ.
ಆಗಸ್ಟ್ 13 ರಿಂದ ಆಗಸ್ಟ್ 15ರವರೆಗೆ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ “ಹರ್ ಘರ್ ತಿರಂಗ” ಅಭಿಯಾನದಲ್ಲಿ ಪಾಲ್ಗೊಳ್ಳವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
“ಹಿಂದೂ ರಾಜಕಾರಣಿಗಳು ಮುಸ್ಲಿಮರ ಆರ್ಥಿಕ ಬಹಿಷ್ಕಾರಕ್ಕಾಗಿ ಪ್ರಚಾರ ಮಾಡುತ್ತಾರೆ. ಆದರೆ ಅಧಿಕಾರಕ್ಕೆ ಬಂದ ನಂತರ ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳನ್ನು ನೀಡುತ್ತಾರೆ” ಎಂದು ನರಸಿಂಹಾನಂದ ಆರೋಪಿಸಿರುವ ವಿಡಿಯೊ ವೈರಲ್ ಆಗುತ್ತಿದೆ.
ಈ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಿ ಎಂದಿರುವ ನರಸಿಂಗಾನಂದ, “ರಾಜಕಾರಣಿಗಳು ನಿಮ್ಮ [ಹಿಂದೂಗಳ] ಹಣವನ್ನು ಮುಸ್ಲಿಮರನ್ನು ಶ್ರೀಮಂತರನ್ನಾಗಿ ಮಾಡಲು ಬಳಸಬಾರದು. ನಿಮ್ಮ ಮಕ್ಕಳನ್ನು ಕೊಲ್ಲಲು ವ್ಯವಸ್ಥೆ ಮಾಡಬಾರು. ಇವರ ಬಲೆಗೆ ಬೀಳಬೇಡಿ” ಎಂದಿದ್ದಾರೆ.
“ಹಿಂದೂಗಳು ರಾಷ್ಟ್ರಧ್ವಜವನ್ನು ಹಾರಿಸಬಾರದು. ಅದು ಹಿಂದೂಗಳಿಗೆ ಹಾನಿಯುಂಟುಮಾಡುತ್ತದೆ. ಪ್ರತಿಯೊಬ್ಬ ಹಿಂದೂ ತನ್ನ ಮನೆಯ ಮೇಲೆ ಕೇಸರಿ ಬಣ್ಣದ ಧ್ವಜವನ್ನು ಹಾರಿಸಬೇಕು” ಎಂದು ಪ್ರತಿಪಾದಿಸಿದ್ದಾರೆ.
हर चीज़ में मुस्लिम ऐंगल क्यों जोड़ दिया जाता है?
अब प्रधानमंत्री मोदी जी के ‘हर घर तिरंगा अभियान’ का बहिष्कार करने की बात करते हुए यति नरसिंहानंद सरस्वती को सुनिये…👇🏽 pic.twitter.com/uc2rW4K4XF
— Ashraf Hussain (@AshrafFem) August 11, 2022
ಹರಿದ್ವಾರದಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ ನಂತರ ಜನವರಿ 15ರಂದು ನರಸಿಂಗಾನಂದ ಬಂಧನಕ್ಕೊಳಗಾಗಿದ್ದರು. “ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವ ಉದ್ದೇಶದಿಂದ” ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂಬ ಷರತ್ತಿನ ಮೇಲೆ ಫೆಬ್ರವರಿ 7ರಂದು ಅವರಿಗೆ ಜಾಮೀನು ನೀಡಲಾಗಿದೆ.
ಆದಾಗ್ಯೂ, ಏಪ್ರಿಲ್ 17 ರಂದು, ಅವರು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಮತ್ತೊಂದು ಪ್ರಚೋದನಾತ್ಮಕ ಭಾಷಣವನ್ನು ನರಸಿಂಗಾನಂದ ಮಾಡಿದ್ದರು. ಭಾರತವು ಇಸ್ಲಾಮಿಕ್ ರಾಷ್ಟ್ರವಾಗದಂತೆ ತಡೆಯಲು ಹಿಂದೂಗಳು ಹೆಚ್ಚು ಮಕ್ಕಳನ್ನು ಹುಟ್ಟಿಸಬೇಕು ಎಂದು ಹೇಳಿಕೆ ನೀಡಿದ್ದರು.
ಕಳೆದ ಜೂನ್ನಲ್ಲಿ ಮತ್ತೆ ನಾಲಿಗೆ ಹರಿಬಿಟ್ಟಿದ್ದ ಯತಿ ನರಸಿಂಗಾನಂದ, “ಮಹಾತ್ಮ ಗಾಂಧಿ ಭಾರತೀಯ ಮುಸ್ಲಿಮರಿಗೆ ಹಕ್ಕುಗಳನ್ನು ನೀಡಿದರು. ಗಾಂಧಿ ಕಾರಣದಿಂದಾಗಿ 100 ಕೋಟಿ ಹಿಂದೂ ಸಮುದಾಯಕ್ಕೆ ತಮ್ಮದೇ ಆದ ಒಂದು ಇಂಚು ಭೂಮಿ ಇಲ್ಲ” ಎಂದು ಆರೋಪಿಸಿದ್ದರು. ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿರಿ: ಹಿಂದೂ ಮಹಾಪಂಚಾಯತ್ ಆಯೋಜಕನ ವಿಕೃತಿ ಅನಾವರಣ; ಸರಣಿ ಅತ್ಯಾಚಾರದಿಂದ ನೊಂದ ಪತ್ನಿಯಿಂದ ಪ್ರಕರಣ ದಾಖಲು
ಮುಸ್ಸೂರಿ ಪೊಲೀಸ್ ಠಾಣೆಯಲ್ಲಿ ನರಸಿಂಗಾನಂದ ಸರಸ್ವತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505(2) (ವರ್ಗಗಳ ನಡುವೆ ದ್ವೇಷ ಉತ್ತೇಜಿಸುವ ಹೇಳಿಕೆಗಳು), 153ಬಿ (ರಾಷ್ಟ್ರೀಯ ಏಕೀಕರಣಕ್ಕೆ ಹಾನಿಯುಂಟುಮಾಡುವ ಆರೋಪ) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ದ್ವೇಷ ಭಾಷಣ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡುತ್ತಾ ನರಸಿಂಗಾನಂದ, “ನಮಗೆ ಭಾರತದ ಸುಪ್ರೀಂ ಕೋರ್ಟ್ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಈ ದೇಶದ 100 ಕೋಟಿ ಹಿಂದೂಗಳನ್ನು ಸಂವಿಧಾನ ಕೊಲ್ಲುತ್ತಿದೆ. ಈ ಸಂವಿಧಾನವನ್ನು ನಂಬಿದವರನ್ನು ಕೊಲ್ಲಲಾಗುತ್ತದೆ. ಈ ವ್ಯವಸ್ಥೆಯನ್ನು ನಂಬುವವರು, ಈ ರಾಜಕಾರಣಿಗಳು, ಸುಪ್ರೀಂ ಕೋರ್ಟ್ ಮತ್ತು ಸೈನ್ಯದಲ್ಲಿರುವವರು ಎಲ್ಲರೂ ನಾಯಿಯಂತೆ ಸಾಯುತ್ತಾರೆ” ಎಂದು ಮತ್ತೊಮ್ಮೆ ಪ್ರಚೋದನೆ ನೀಡಿದ್ದರು.
ಹೀಗೆ ದ್ವೇಷ ಭಾಷಣಗಳ ಬಹುದೊಡ್ಡ ಇತಿಹಾಸ ಹೊಂದಿರುವ ಯತಿ ನರಸಿಂಗಾನಂದ ಮತ್ತೆ ಮತ್ತೆ ಜಾಮೀನು ಪಡೆದು ಹೊರಬಂದು ದ್ವೇಷ ಭಾಷಣಗಳನ್ನು ಮಾಡುತ್ತಾ ಸಮಾಜದಲ್ಲಿ ಕ್ಷೋಭೆಯನ್ನು ಉಂಟು ಮಾಡುತ್ತಲೇ ಇದ್ದಾರೆ.



ಈ ನರಸಿಂಗಾನಂದನ ವಿರುದ್ಧ ಈ ಕೂಡಲೇ ಕಾನೂನು ಕ್ರಮವನ್ನು ಜರುಗಿಸಬೇಕು.