ತೆಲಂಗಾಣದ ಮಾಜಿ ಮುಖ್ಯಮಂತ್ರಿ ಹಾಗೂ ಬಿಆರ್ಎಸ್ ಪಕ್ಷದ ನಾಯಕ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರಿಗೆ ಮಗಳು ಕೆ.ಕವಿತಾ ಅವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದ್ದು, ರಾಜ್ಯದಲ್ಲಿ ಹೊಸ ರಾಜಕೀಯ ಚರ್ಚೆಯನ್ನು ಹುಟ್ಟು ಹಾಕಿದೆ.
ತೆಲಂಗಾಣದಲ್ಲಿ ಬಿಜೆಪಿ ಜೊತೆ ಬಿಆರ್ಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಊಹಾಪೋಹಗಳು ದಟ್ಟವಾಗಿ ಹರಡಿತ್ತು. ಈ ನಡುವೆ ಕವಿತಾ ಅವರದ್ದು ಎನ್ನಲಾದ ಪತ್ರದ ಕೆಲವೊಂದು ಅಂಶಗಳು ಸಂಚಲನ ಸೃಷ್ಟಿಸಿದೆ.
ವೈರಲ್ ಪತ್ರದ ನೈಜತೆ ಇನ್ನೂ ದೃಢಪಡದಿದ್ದರೂ, ಈ ಕುರಿತು ಕವಿತಾರ ಕಚೇರಿಯಾಗಲಿ ಅಥವಾ ಕೆ.ಚಂದ್ರಶೇಖರ್ ಅವರಿಂದಾಗಲಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
“ನೀವು (ಕೆಸಿಆರ್) ಕೇವಲ ಎರಡು ನಿಮಿಷಗಳ ಕಾಲ ಮಾತನಾಡಿದರೂ, ಭವಿಷ್ಯದಲ್ಲಿ ಬಿಜೆಪಿ ಜೊತೆ ಮೈತ್ರಿ ಏರ್ಪಡುತ್ತದೆ ಎಂದು ಕೆಲವರು ಊಹಿಸಲು ಪ್ರಾರಂಭಿಸಿದ್ದಾರೆ. ನೀವು (ಬಿಜೆಪಿ ವಿರುದ್ಧ) ಇನ್ನೂ ಬಲವಾಗಿ ಮಾತನಾಡಬೇಕಿತ್ತು ಎಂದು ನಾನು ವೈಯಕ್ತಿಕವಾಗಿ ಭಾವಿಸಿದ್ದೇನೆ. ಬಹುಶಃ ನಾನು (ಬಿಜೆಪಿಯಿಂದಾಗಿ) ತೊಂದರೆ ಅನುಭವಿಸಿದ್ದರಿಂದ ಹಾಗೆ ಅನಿಸಿರಬಹುದು. ಆದರೆ, ನೀವು ಬಿಜೆಪಿಯನ್ನು ಇನ್ನೂ ಸ್ವಲ್ಪ ಹೆಚ್ಚು ಗುರಿಯಾಗಿಸಿಕೊಳ್ಳಬೇಕಿತ್ತು ಅಪ್ಪಾ” ಎಂದು ಕವಿತಾ ಅವರು ತಂದೆಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಹಿಂದುಳಿದ ವರ್ಗಗಳಿಗೆ ಶೇ.42ರಷ್ಟು ಮೀಸಲಾತಿ, ಪರಿಶಿಷ್ಟ ಜಾತಿ ಒಳ ಮೀಸಲಾತಿ, ವಕ್ಫ್ ತಿದ್ದುಪಡಿ ಕಾಯ್ದೆ ಮತ್ತು ತಮ್ಮ ಭಾಷಣದಲ್ಲಿ ಉರ್ದು ಭಾಷೆಯನ್ನು ಕೈಬಿಟ್ಟಿರುವುದು ಮುಂತಾದ ಪ್ರಮುಖ ವಿಷಯಗಳ ಕುರಿತು ಸಭೆಯಲ್ಲಿ ನೀವು (ಕೆಸಿಆರ್) ಮೌನ ವಹಿಸಿರುವುದು ನಕಾರಾತ್ಮಕ ಪ್ರತಿಕ್ರಿಯೆಗೆ ಕಾರಣ” ಎಂದು ಪತ್ರದಲ್ಲಿ ಹೇಳಲಾಗಿದೆ
“ಕಾಂಗ್ರೆಸ್ ಸರ್ಕಾರವು ತಳಮಟ್ಟದ ಜನ ಬೆಂಬಲವನ್ನು ಕಳೆದುಕೊಂಡಿದೆ. ಕೆಲವು ಬಿಆರ್ಎಸ್ ಕಾರ್ಯಕರ್ತರು ಈಗ ಬಿಜೆಪಿಯನ್ನು ಪರ್ಯಾಯವಾಗಿ ನೋಡುತ್ತಿದ್ದಾರೆ. ಇತ್ತೀಚಿನ ಎಂಎಲ್ಸಿ ಚುನಾವಣೆಯಲ್ಲಿ ಬಿಆರ್ಎಸ್ ಸ್ಪರ್ಧಿಸದಿರಲು ನಿರ್ಧರಿಸಿದ್ದು, ನಾವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬ ಬಲವಾದ ಸೂಚನೆಯನ್ನು ಪಕ್ಷದ ಕಾರ್ಯಕರ್ತರಿಗೆ ರವಾನಿಸಿದೆ” ಎನ್ನಲಾಗಿದೆ.
“ರಾಜಕೀಯ ಸನ್ನಿವೇಶವನ್ನು ಪರಿಹರಿಸಲು ನೀವು ನಿರ್ದಿಷ್ಟ ಕಾರ್ಯಕ್ರಮಗಳು ಅಥವಾ ಮಾರ್ಗಸೂಚಿಗಳನ್ನು ನೀಡುತ್ತೀರಿ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಕನಿಷ್ಠ ಈಗ ನಾವು ಒಂದು ಅಥವಾ ಎರಡು ದಿನಗಳ ಕಾಲ ಸಮಗ್ರ ಸಭೆಯನ್ನು ನಡೆಸಬಹುದು. ಕಾರ್ಯಕರ್ತರಿಂದ ಸಾಧ್ಯವಾದಷ್ಟು ಅಭಿಪ್ರಾಯಗಳನ್ನು ಸಂಗ್ರಹಿಸಿ ಅವರಿಗೆ ಮಾರ್ಗಸೂಚಿಯನ್ನು ನೀಡಿ” ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಗಂಟೆಗಳೇ ಕಳೆದಿದ್ದರೂ, ವಿರೋಧ ಪಕ್ಷವಾದ ಬಿಆರ್ಎಸ್ ಈವರೆಗೆ ಪತ್ರವನ್ನು ನಿರಾಕರಿಸಿಲ್ಲ. ಬಿಆರ್ಎಸ್ ತನ್ನ ವಜ್ರ ಮಹೋತ್ಸವವನ್ನು ಏಪ್ರಿಲ್ 27 ರಂದು ವಾರಂಗಲ್ನಲ್ಲಿ ಆಚರಿಸಿತ್ತು.
ವಾರಂಗಲ್ ಕಾರ್ಯಕ್ರಮದ ಸಂದರ್ಭದಲ್ಲಿ ತೆಲಂಗಾಣ ಚಳವಳಿಯ ಕೆಲವು ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಳ್ಳಲಾಗಿಲ್ಲ ಅಥವಾ ಮಾತನಾಡಲು ಅವಕಾಶ ನೀಡಲಾಗಿಲ್ಲ ಎಂದು ಪತ್ರವು ಕಳವಳ ವ್ಯಕ್ತಪಡಿಸಿದೆ.
ಸಕಾರಾತ್ಮಕವಾಗಿ, “ಆಪರೇಷನ್ ಕಾಗರ್” ಬಗೆಗಿನ ಕೆಸಿಆರ್ ನಿಲುವನ್ನು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗಾಗಿ ಅವರು ಮೌನ ಆಚರಿಸಿದ ಕ್ಷಣವನ್ನು ಶ್ಲಾಘಿಸಲಾಗಿದೆ. ವಾರಂಗಲ್ ಕಾರ್ಯಕ್ರಮದ ಯಶಸ್ಸಿಗೆ ಕೆಸಿಆರ್ ಅವರನ್ನು ಅಭಿನಂದಿಸುತ್ತಾ ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.
ಬಿಆರ್ಎಸ್ ಎಂಎಲ್ಸಿಯೂ ಆಗಿರುವ ಕವಿತಾ ಅವರು ತಮ್ಮ ಮಗನ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಪ್ರಸ್ತುತ ಅಮೆರಿಕದಲ್ಲಿರುವುದರಿಂದ ಅವರು ವೈರಲ್ ಪತ್ರದ ಬಗ್ಗೆ ತಕ್ಷಣದ ಪ್ರತಿಕ್ರಿಯೆಗೆ ಸಿಕ್ಕಿಲ್ಲ ಎಂದು ವರದಿಗಳು ತಿಳಿಸಿವೆ.
ವೈರಲ್ ಪತ್ರವನ್ನು ಕವಿತಾ ಅವರೇ ನಿಜವಾಗಿಯೂ ಬರೆದಿದ್ದಾರೆಯೇ ಎಂಬುವುದು ಖಚಿತವಾಗಿಲ್ಲ. ಒಂದು ವೇಳೆ ಅವರೇ ಬರೆದಿದ್ದರೂ, ಅದರಲ್ಲಿ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ. ಪತ್ರದ ವಿಷಯಗಳು ಪ್ರತಿಕ್ರಿಯೆಯ ಸ್ವರೂಪದ್ದಾಗಿವೆ ಎಂದು ಬಿಆರ್ಎಸ್ ಎಂಎಲ್ಸಿ ಶ್ರವಣ್ ದಾಸೋಜು ಹೇಳಿದ್ದಾರೆ.
“ಒಬ್ಬರು ಮಗಳು ತಂದೆಗೆ ಅಥವಾ ಒಬ್ಬ ಸರ್ವೋಚ್ಚ ನಾಯಕನಿಗೆ ನೀಡುವ ಸಾಮಾನ್ಯ ಪ್ರತಿಕ್ರಿಯೆ ಇದು. ಇದು ಜನರಿಂದ ಪಡೆದ ಪ್ರತಿಕ್ರಿಯೆಯನ್ನು ಕ್ರೋಢೀಕರಿಸಿ ರವಾನಿಸಿದಂತಿದೆ” ಎಂದಿದ್ದಾರೆ.
ವೈರಲ್ ಪತ್ರವು ಬಿಆರ್ಎಸ್ ಪಕ್ಷದಲ್ಲಿನ ಆಂತರಿಕ ಬಿರುಕುಗಳನ್ನು ಬಯಲು ಮಾಡಿದೆ ಎಂಬ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಅಭಿಪ್ರಾಯಗಳ ಬಗ್ಗೆ ಕೇಳಿದಾಗ, “ಭತ್ತ ಖರೀದಿ ಮತ್ತು ನಿರುದ್ಯೋಗದಂತಹ ಜನರಿಗೆ ಹೆಚ್ಚು ಪ್ರಸ್ತುತವಾದ ಇತರ ವಿಷಯಗಳಿವೆ” ಎಂದು ದಾಸೋಜು ಹೇಳಿದ್ದಾರೆ.
ನಿವೃತ್ತಿ ನಂತರ ಯಾವುದೇ ಹುದ್ದೆ ಪಡೆಯದಿರಲು ನ್ಯಾ. ಓಕಾ ಮತ್ತು ನಾನು ನಿರ್ಧರಿಸಿದ್ದೇವೆ: ಸಿಜೆಐ ಬಿ.ಆರ್ ಗವಾಯಿ


