ಸರ್ಕಾರಿ ಶಾಲೆಗಳ ಅಭಿವೃದ್ದಿಯಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ ಹೆಸರು ಗಳಿಸಿರುವ ದೆಹಲಿಯ ಆಪ್ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷ ಅಪಸ್ವರ ಎತ್ತಿದೆ. ಇದರ ಜೊತೆಗೆ ಮೆಟ್ರೊ ಮತ್ತು ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಏಳು ತಿಂಗಳ ನಂತರ ವಿಧಾನ ಸಭಾ ಚುನಾವಣೆಯು ಸಹ ಇರುವುದರಿಂದ ಹಲವಾರು ವಿಚಾರಕ್ಕೆ ಇವೆರಡು ಪಕ್ಷಗಳ ನಡುಗೆ ಜಿದ್ದಾಜಿದ್ದಿ, ಮಾತಿನ ಚಕಮಕಿ ನಡೆಯುತ್ತಿದೆ.
ಇದು ಆರಂಭವಾಗಿದ್ದು ಹೀಗೆ. ಕಳೆದ ವಾರ ಬಿಜೆಪಿಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಜೆ.ಪಿ ನಡ್ಡಾ “ದೆಹಲಿ ಸರ್ಕಾರ ಏನು ಕೆಲಸ ಮಾಡುತ್ತಿಲ್ಲ” ಎಂದು ಹೇಳಿಕೆ ನೀಡಿದರು. ಅವರ ಬೆನ್ನಲ್ಲೇ ಪೂರ್ವ ದೆಹಲಿಯ ಸಂಸದರಾದ ವಿಜಯ್ ಗೋಯಲ್ “ಕೇವಲ ಒಂದು ಶಾಲೆಯನ್ನು ಮಾತ್ರ ಚೆನ್ನಾಗಿ ಮಾಡಿ ನಿಮ್ಮನ್ನು, ನಿಮ್ಮ ದೆಹಲಿಯ ಶಿಕ್ಷಣ ನೀತಿಯನ್ನು ಹೊಗಳಿಕೊಳ್ಳಬೇಡಿ, ನಮ್ಮೊಡನೆ ಜೊತೆಯಾಗಿ ಬನ್ನಿ ಮುಸ್ತಾಫಬಾದ್ನಲ್ಲಿರುವ ಶಾಲೆಗಳ ಪರಿಸ್ಥಿತಿಯನ್ನು ನೋಡೋಣ” ಎಂದು ಸವಾಲು ಹಾಕಿದ್ದಾರೆ.
ಈ ಆರೋಪಗಳಿಕೆ ಕೂಡಲೇ ಪ್ರತಿಕ್ರಿಯಿಸಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ, ಬಿಜೆಪಿ ಆಳ್ವಿಕೆಯ ರಾಜ್ಯಗಳ ಅತ್ಯುತ್ತಮ ಶಾಲೆಗಳು ಮತ್ತು ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿಯಲ್ಲಿನ ಅತ್ಯುತ್ತಮ ಶಾಲೆಗಳಿಗೂ ಹೋಲಿಸಿ ನೋಡೋಣ ಬನ್ನಿ ಎಂದು ಮರುಸವಾಲು ಹಾಕಿದ್ದಾರೆ.
ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿಯಲ್ಲಿ 2018-2019ರ ಸಾಲಿನಲ್ಲಿ ಆಪ್ ಸರ್ಕಾರವು 13,997 ಕೋಟಿ ರೂಗಳನ್ನು ಶಿಕ್ಷಣಕ್ಕೆ ಮೀಸಲಿಟ್ಟಿದೆ. ಅಂದರೆ ರಾಜ್ಯ ಬಜೆಟ್ನ ಶೇ.26% ರಷ್ಟು. ಸಂತಸದಾಯಕ ಕಲಿಕೆ ಮತ್ತು ಪಠ್ಯಕ್ರಮದ ಜೊತೆಗೆ ಅತ್ಯುತ್ತಮ ಕಲಿಕಾ ವಾತಾವರಣವನ್ನು ದೆಹಲಿ ಸರ್ಕಾರ ನಿರ್ಮಿಸಿದೆ. ಶಾಲೆಯ ಹೊರೆಗೆ ಅತ್ಯಾಧುನಿಕ ಆಟದ ಮೈದಾನ, ಈಜುಕೊಳ, ಹಾಕಿ, ಪುಟ್ಬಾಲ್ ಗ್ರೌಂಡ್, ಶಾಲೆಯ ಒಳಗೆ ಫ್ಯಾನ್ಗಳು, ಕೂಲರ್ಗಳು, 11000 ಹೊಸ ಕೊಠಡಿಗಳು, ಹೈ ಕ್ಲಾಸ್ ಸಭಾಂಗಣ, ಶಾಲೆಯ ಮೇಲ್ಛಾವಣಿ, ಮಹಡಿಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಇತ್ಯಾದಿ ಮಾದರಿ ಕೆಲಸಗಳು ನಡೆದಿವೆ.
ಕೇವಲ ಮೂಲಭೂತ ಸೌಲಭ್ಯಗಳಲ್ಲದೇ ಶಿಕ್ಷಣದ ಗುಣಮಟ್ಟದಲ್ಲಿಯೂ ಮಹತ್ವದ ಬದಲಾವಣೆಗಳು ಬಂದಿದ್ದು ಈ ವರ್ಷದಲ್ಲಿ ಎಸ್ಎಸ್ಎಸ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ದೆಹಲಿಯ ವಿದ್ಯಾರ್ಥಿಗಳು ಒಂದು ದಶಕದಲ್ಲಿಯೇ ಅತ್ಯಂತ ಗಮನಾರ್ಹ ಸಾಧನೆ ಮಾಡಿದ್ದರೆ ಎಂಬುದು ದೆಹಲಿ ಸರ್ಕಾರದ ವಾದ.
ಬಿಜೆಪಿಯ ಸಂಸದ ಮನೋಜ್ ತಿವಾರಿಯವರು ದೆಹಲಿ ಸರ್ಕಾರಿ ಶಾಲೆಗಳ 11000 ಸಾವಿರ ಕೊಠಡಿಗಳ ನಿರ್ಮಾಣ ಕಾರ್ಯದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ, ಸುಮಾರು 2000 ಕೋಟಿ ರೂಗಳಷ್ಟು ಅವ್ಯವಹಾರ ನಡೆದಿದೆ ಎಂದು ಮತ್ತೊಂದು ಆರೋಪ ಮಾಡಿದ್ದು ನನ್ನ ಬಳಿ ಆರ್.ಟಿ.ಐ ಮೂಲಕ ಪಡೆದ ಮಾಹಿತಿ ಇದೆ ಎಂದಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್ ರವರು ಸುಳ್ಳು ಹೇಳುವುದನ್ನು ನಿಲ್ಲಿಸಿ ಮತ್ತು ಧೈರ್ಯವಿದ್ದರೆ ಅಂತಹ ಅವ್ಯವಹಾರ ಮಾಡಿರುವವರನ್ನು ಬಂಧಿಸಿ ಎಂದು ತಿರುಗೇಟು ನೀಡಿದ್ದಾರೆ.
ದೆಹಲಿ ಬಸ್ ಮತ್ತು ಮೆಟ್ರೊದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೂ ಕುತ್ತು
ಇನ್ನು ದೆಹಲಿ ಸರ್ಕಾರದ ಮಹತ್ವದ ಯೋಜನೆಯಾದ ದೆಹಲಿ ಬಸ್ ಮತ್ತು ಮೆಟ್ರೊದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವೂ ವಿವಾದಕ್ಕೀಡಾಗಿದೆ. ಈ ಯೋಜನೆಯ ಮೂಲಕ ಮಹಿಳಾ ಸುರಕ್ಷತೆ, ಸಾರ್ವಜನಿಕ ವಾಹನಗಳ ಬಳಕೆಗೆ ಉತ್ತೇಜನ ಮತ್ತು ಮಾಲಿನ್ಯ ನಿಯಂತ್ರಣ ಇಷ್ಟನ್ನು ಸಾಧಿಸಬಹುದೆನ್ನುವುದು ದೆಹಲಿ ಸರ್ಕಾರದ ಆಶಯವಾಗಿದೆ. ಬಹಳ ಪ್ರಚಾರ ಪಡೆದ ಈ ಕಾರ್ಯಕ್ರಮಕ್ಕೆ ದೆಹಲಿ ಮೆಟ್ರೋದ ಮಾಜಿ ಅಧ್ಯಕ್ಷ ಈ ಶ್ರೀಧರನ್ ರವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ಪ್ರಧಾನಿಗಳಿಗೆ ಪತ್ರ ಬರೆದು ಸುದ್ದಿ ಮಾಡಿದ್ದರು.
ಈಗ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದಿಪ್ ಪುರಿಯವರು ಲೋಕಸಭೆಯಲ್ಲಿ ಮಾತನಾಡುತ್ತಾ ಉಚಿತ ಸೇವೆಯ ಕುರಿತು ನಮಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದಿದ್ದಲ್ಲದೆ, ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಹೀಗೆಲ್ಲಾ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ದೆಹಲಿ ಮೆಟ್ರೊ ನಿಗಮ ಇದಕ್ಕೆ ಅವಕಾಶ ಸಹ ಕೊಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಕಳೆದ ವರ್ಷವೂ ಸಹ ದೆಹಲಿಯ ಅನಧಿಕೃತ ಕಾಲೋನಿಗಳನ್ನು ಅಧಿಕೃತಗೊಳಿಸುವ ವಿಚಾರದಲ್ಲಿ ಹರ್ದೀಪ್ ಮತ್ತು ದೆಹಲಿ ಸರ್ಕಾರದ ನಡುವೆ ಸಾಕಷ್ಟು ತಿಕ್ಕಾಟ ನಡೆದಿತ್ತು.
ಒಟ್ಟಿನಲ್ಲಿ ಏಳು ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿರುವ ಬಿಜೆಪಿ ಮತ್ತು 70ರಲ್ಲಿ 67 ವಿಧಾನ ಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಆಪ್ ನಡುವೆ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯ ಮೇಲಿದೆ ಕಣ್ಣಿದೆ. ಅದಕ್ಕಾಗಿ ಈ ಜಿದ್ದಾಜಿದ್ದಿಗೆ ಬಿಜೆಪಿ ಚಾಲನೆ ಕೊಟ್ಟರೆ ಆಪ್ ತಿರುಗೇಟು ನೀಡಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.