“ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು. ಗೋವುಗಳ ರಕ್ಷಣೆ ಹಿಂದೂಗಳ ಮೂಲಭೂತ ಹಕ್ಕು ಎಂದು ಪರಿಗಣಿಸಬೇಕು” ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ತಾಳಿರುವುದು ಚರ್ಚೆಗೆ ಗ್ರಾಸವಾಗಿದೆ. ನ್ಯಾಯಾಂಗ ಬಹುಸಂಖ್ಯಾತವಾದದತ್ತ ವಾಲುತ್ತಿದೆ ಎಂಬ ಟೀಕೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದಕ್ಕೆ ಅಲಹಾಬಾದ್ ಹೈಕೋರ್ಟ್ ನಿಲುವು ಇಂಬು ನೀಡಿದೆ.
ಧಾರ್ಮಿಕ ಮೂಲಭೂತವಾದ, ಕೋಮುವಾದ ರಾರಾಜಿಸುತ್ತಿರುವಾಗ, ಗೋವಿನ ಹೆಸರಲ್ಲಿ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಅಲ್ಪಸಂಖ್ಯಾತ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವಿದ್ಯಮಾನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಾಗ, ನ್ಯಾಯಾಂಗ ತಾಳುವ ಇಂತಹ ನಿರ್ಧಾರಗಳು ಸಮಾಜದಲ್ಲಿ ಕ್ಷೋಭೆ ಉಂಟು ಮಾಡುತ್ತವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಗೋಹತ್ಯೆ ಮಾಡಿದ ಆರೋಪಿಗೆ ಜಾಮೀನು ನಿರಾಕರಿಸಿರುವ ಹೈಕೋರ್ಟ್, “ದೇಶದ ಸಂಸ್ಕೃತಿ ಮತ್ತು ನಂಬಿಕೆಗಳಿಗೆ ದಕ್ಕೆಯಾದಾಗ ದೇಶ ದುರ್ಬಲವಾಗುತ್ತದೆ” ಎಂದೂ ಹೇಳಿದೆ.
ಅರ್ಜಿದಾರರು “ಮತ್ತೆ ಮತ್ತೆ ಗೋಹತ್ಯೆ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದು, ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತಿದೆ. ಆರೋಪಿಯು ಪರಿಸರವನ್ನು ಹಾಳುಗೆಡುವುತ್ತಿದ್ದಾನೆ. ಗೋವನ್ನು ಪೂಜಿಸಿದರೆ ಮಾತ್ರ ದೇಶ ಏಳಿಗೆ ಹೊಂದುತ್ತದೆ. ಮೂಲಭೂತ ಹಕ್ಕುಗಳು ಗೋವನ್ನು ಭಕ್ಷಿಸುವವರ ಪರಮಾಧಿಕಾರವಲ್ಲ. ಗೋವನ್ನು ಪೂಜಿಸುವವರಿಗೂ, ಅವುಗಳನ್ನು ಅವಲಂಬಿಸಿರುವವರಿಗೂ ಮೂಲಭೂತ ಹಕ್ಕುಗಳಿವೆ. ಗೋಮಾಂಸ ತಿನ್ನುವುದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗದು” ಎಂದು ಹೈಕೋರ್ಟ್ನಲ್ಲಿ ವಾದಿಸಿದ್ದರು.
“ಗೋವು ತನ್ನ ಮುಪ್ಪಿನಲ್ಲೂ ಸಮಾಜಕ್ಕೆ ಉಪಕಾರಿಯಾಗಿದೆ. ಅದರ ಮೂತ್ರವನ್ನು ಕೃಷಿ ಹಾಗೂ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಗೋವನ್ನು ತಾಯಿಯೆಂದು ಗೌರವಿಸಲಾಗುತ್ತದೆ. ಗೋವು ಆಕ್ಸಿಜನ್ ಹೊರಗೆ ಬಿಡುವ ಏಕೈಕ ಪ್ರಾಣಿ ಎಂದು ವಿಜ್ಞಾನಿಗಳು ಹೇಳಿದ್ದಾರೆ” ಎಂಬುದಾಗಿಯೂ ಜಸ್ಟೀಸ್ ಶೇಖರ್ ಕುಮಾರ್ ಯಾದವ್ ಅವರು ಇದ್ದ ಪೀಠ ಅಭಿಪ್ರಾಯಪಟ್ಟಿದೆ.
ಗೋವನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಗೋವನ್ನು ಹಿಂದೂಗಳಷ್ಟೇ ಅಲ್ಲ, ಮುಸ್ಲಿಮರೂ ಪೂಜನೀಯ ಭಾವನೆಗಳನ್ನು ಹೊಂದಿದ್ದರು. ಬಾಬರ್, ಅಕ್ಬರ್, ಹುಮಾಯೂನ್ ಕಾಲದಲ್ಲಿ ಗೋವಿನ ಹತ್ಯೆಯನ್ನು ನಿಷೇಧಿಸಲಾಗಿತ್ತು ಎಂದೂ ಕೋರ್ಟ್ ಹೇಳಿದೆ.
ಗೋವುಗಳು ಹಾದಿ ಬೀದಿಯಲ್ಲಿ ಅನಾಥವಾಗುತ್ತಿವೆ. ಸರ್ಕಾರ ಅವುಗಳ ರಕ್ಷಣೆಗೆ ಧಾವಿಸಬೇಕು. ವಯಸ್ಸಾದ ಹಸುಗಳಲ್ಲಿ ಬೀದಿಯಲ್ಲಿ ಬಿಟ್ಟು, ಅವು ವಿಷಕಾರಿ ವಸ್ತುಗಳನ್ನು ಸೇವಿಸಿ ಸಾಯುವುದನ್ನೂ ತಪ್ಪಿಸಬೇಕು. ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ, ಗೋವಿನ ರಕ್ಷಣೆ ಮೂಲಭೂತ ಹಕ್ಕೆಂದು ಪರಿಗಣಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ಗೋವು ಉಸಿರಾಡುವಾಗ ಆಮ್ಲಜನಕವನ್ನು ಹೊರಗೆ ಬಿಡುತ್ತದೆ ಎಂದು ಹೇಳಿರುವುದರಲ್ಲಿ ಯಾವುದೇ ಹುರಳಿಲ್ಲ. ಉತ್ತರಖಂಡ್ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್ ರಾವತ್ ಹಿಂದೊಮ್ಮೆ ಇದೇ ಅಭಿಪ್ರಾಯನ್ನು ತಾಳಿದಾಗ, ಪ್ರಾಣಿವಿಜ್ಞಾನ ತಜ್ಞರು ಅವರ ಹೇಳಿಕೆಯನ್ನು ಅಲ್ಲಗಳೆದಿದ್ದರು. ಮನುಷ್ಯನಂತೆಯೇ ಗೋವು ಕೂಡ ಉಚ್ಛಾಸ, ನಿಶ್ವಾಸವನ್ನು ಹೊಂದಿದ್ದು, ಇಂಗಾಲವನ್ನು ಒಳಗೆ ತೆಗೆದುಕೊಂಡು, ಆಮ್ಲಜನಕವನ್ನು ಹೊರಗೆ ಬಿಡುತ್ತವೆ’ ಎಂದಿದ್ದರು ತಜ್ಞರು.
ಭಾವನಾತ್ಮಕ ಸಂಗತಿಗಳನ್ನೇ ವೈಜ್ಞಾನಿಕ ವಿಚಾರಗಳಂತೆ ಬಿಂಬಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದನ್ನು ಹೈಕೋರ್ಟ್ ಕೂಡ ಪರಿಶೀಲಿಸಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಗೋವಿನ ಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂಬ ವಾದದಲ್ಲೂ ಯಾವುದೇ ಹುರುಳಿಲ್ಲ. ಗೋವಿನ ಮಾಂಸ ರಫ್ತಿನಲ್ಲಿರುವ ಭಾರತ ಮುಂಚೂಣಿಯಲ್ಲಿದೆ. ಹೀಗಿರುವಾಗ ನ್ಯಾಯಾಂಗ ತಾಳುವ ಇಂತಹ ನಿರ್ಧಾರಗಳು ರಾಜಕೀಯ ಹಿತಾಸಕ್ತಿಗಳಿಗೆ ಬಲ ನೀಡುತ್ತವೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಮೂಡಿಗೆರೆ: ದಲಿತ ಯುವಕ ಮೂತ್ರ ಕುಡಿಸಿದ್ದ ಪಿಎಸ್ಐ ಅರ್ಜುನ್ ಬಂಧನ