ದಾವಣಗೆರೆಯ ದಲಿತ ಮುಖಂಡರು, ಮಾಜಿ ಶಾಸಕರು ಆದ ದಿವಂಗತ ಡಾ. ಬಿ.ಎಂ. ತಿಪ್ಪೇಸ್ವಾಮಿ ಹಾಗೂ ಅವರ ಕುಟುಂಬದ ಮೂರು ಸದಸ್ಯರ ಸಮಾಧಿಗಳನ್ನು ಸಮಾಧಿಯನ್ನು ಅತಿಕ್ರಮಣಕಾರರು ಧ್ವಂಸಗೊಳಿಸಿ, ದೌರ್ಜನ್ಯವೆಸಗುತ್ತಿದ್ದಾರೆ ಎಂದು ತಿಪ್ಪೇಸ್ವಾಮಿಯವರ ಪುತ್ರಿಯಾದ ಲೇಖಕಿ ಬಿ.ಟಿ ಜಾಹ್ನವಿಯವರು ಆರೋಪಿಸಿದ್ದಾರೆ.
ನವೆಂಬರ್ 20ರ ಭಾನುವಾರ ಮಧ್ಯಾನ್ನ 11 ಗಂಟೆ ಸುಮಾರಿಗೆ ಯಾವುದೇ ಮುನ್ಸೂಚನೆ ಇಲ್ಲದೆ ಗಣೇಶ ಹುಲ್ಲುಮನೆ ಮತ್ತು ಇತರರು ಜೆಸಿಬಿ ಯಿಂದ ಧ್ವಂಸ ಮಾಡಿರುವುದು ಕುಟುಂಬದ ಸದಸ್ಯರಲ್ಲಿ ಹಾಗೂ ಮಾದಿಗ ಸಮಾಜದಲ್ಲಿ ಆಘಾತ ಉಂಟು ಮಾಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಡಾ. ಬಿ.ಎಂ. ತಿಪ್ಪೇಸ್ವಾಮಿ ಇವರು ಮಾದಿಗ ಸಮಾಜದಲ್ಲಿ ಜನಿಸಿ ಸ್ವಂತ ಶ್ರಮದಿಂದ ದೇಶ-ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದು ಸ್ಥಳೀಯ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರಾಗಿ ಸಾಕಷ್ಟು ಜನರಿಗೆ ನೆರವಾಗಿದ್ದಾರೆ. ಕೆಪಿಎಸ್ಸಿ ಸದಸ್ಯರಾಗಿ ಹಲವಾರು ನಿರುದ್ಯೋಗಿ ಯುವಜನರಿಗೆ ಮಾರ್ಗದರ್ಶನ ನೀಡಿ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. 1985 ರಲ್ಲಿ ಭರಮಸಾಗರದ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ, ಎಸ್ಸಿ-ಎಸ್ಟಿ ಕಮಿಷನ್ ಅಧ್ಯಕ್ಷರಾಗಿ ಈ ಜನಾಂಗದ ಏಳಿಗೆಗಾಗಿ ಶ್ರಮಪಟ್ಟಿದ್ದಾರೆ. ದಲಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸಿದ್ದಾರೆ. ಅಂತಹ ವ್ಯಕ್ತಿಯ ಸಮಾಧಿ ಧ್ವಂಸಗೊಳಿಸಿರುವುದು ವಿಷಾಧನೀಯ ಎಂದು ಬಿ.ಟಿ ಜಾಹ್ನವಿ ತಿಳಿಸಿದ್ದಾರೆ.
1978 ರಲ್ಲಿ ನಿರುದ್ಯೋಗಿ ವಿದ್ಯಾವಂತರಾಗಿದ್ದ ಡಾ.ಬಿ.ಎಂ.ತಿಪ್ಪೇಸ್ವಾಮಿ ಅವರ ಹಿರಿಯ ಮಗ ಬಿ.ಟಿ.ಮಲ್ಲಿಕಾರ್ಜುನ ಇವರಿಗೆ ಸರ್ಕಾರದಿಂದ ಸ್ವ-ಉದ್ಯೊಗಕ್ಕಾಗಿ ದಾವಣಗೆರೆ ನಿಟ್ಟುವಳ್ಳಿಯಲ್ಲಿ 2 ಎಕರೆ 11 ಗುಂಟೆ ಭೂ ಮಂಜೂರಾಗಿತ್ತು. ಈ ಸ್ಥಳವನ್ನು ಡೈರಿ ಹಾಗೂ ಇತರೆ ಸ್ವಯಂ ಉದ್ಯೋಗಕ್ಕೆ ಉಪಯೋಗಿಸಲಾಗುತ್ತಿತ್ತು. ಡಾ.ಬಿ.ಎಂ.ತಿಪ್ಪೇಸ್ವಾಮಿ ಇವರು 1990 ರಲ್ಲಿ ಮೃತಪಟ್ಟಿದ್ದು ಮಂಜೂರಾದ ಈ ಜಮೀನಿನ ಒಂದು ಭಾಗದಲ್ಲಿ ಅಂತ್ಯಕ್ರಿಯೆ ಮಾಡಿ ಸಮಾಧಿಯನ್ನು ನಿರ್ಮಾಣ ಮಾಡಲಾಗಿತ್ತು, ನಂತರ 1999 ರಲ್ಲಿ ನಮ್ಮ ತಿಪ್ಪೇಸ್ವಾಮಿಯವರ 2ನೇ ಮಗನಾದ ಬಿ.ಟಿ.ಮೋಹನ್ ಅವರನ್ನು, ನಂತರ 2003 ರಲ್ಲಿ ಅವರ ಧರ್ಮಪತ್ನಿಯಾದ ಶ್ರೀಮತಿ ಯಲ್ಲಮ್ಮನವರನ್ನು ಸದರಿ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು, ಆನಂತರ 2016 ರಲ್ಲಿ ನಿಧನರಾದ ಅವರ ಹಿರಿಯ ಮಗ ಮಲ್ಲಿಕಾರ್ಜುನರವರನ್ನೂ ಸಹ ಅಲ್ಲಿಯೇ ಅಂತ್ಯಕ್ರಿಯೆ ಮಾಡಿ ನಾಲ್ಕು ಸಮಾಧಿಗಳನ್ನು ನಿರ್ಮಾಣ ಮಾಡಲಾಗಿತ್ತು ಹಾಗೂ ಆ ಭೂಮಿಯಲ್ಲಿ ನಮ್ಮ ಕುಟುಂಬದ ನಾಲ್ವರ ಸಮಾಧಿ ಇದ್ದ ಕಾರಣ ಆಗಿನಂದಲೂ ಅದನ್ನು ಪೂಜ್ಯಸ್ಥಾನವಾಗಿ ಭಾವಿಸಿ ಪೂಜೆ ಮಾಡಿಕೊಂಡು ಬರಲಾಗುತ್ತಿತ್ತು. ಹಾಗೂ ಆ ಜಾಗವನ್ನು ಬೇರೆ ಯಾವುದೇ ವೈಯಕ್ತಿಕ ಉದ್ದೇಶಕ್ಕೆ ಬಳಸದೇ ನಮಗೆ ಅನುಕೂಲವಾದ ಕಾಲಕ್ಕೆ ಡಾ.ತಿಪ್ಪೇಸ್ವಾಮಿಯವರ ಸ್ಮಾರಕವನ್ನು ಸ್ಥಾಪಿಸಿ ಅಲ್ಲಿ ನಮ್ಮ ಸಮಾಜದ ಏಳಿಗೆ ಮತ್ತು ಕಲ್ಯಾಣಕ್ಕಾಗಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿತ್ತು ಎಂದು ಬಿ.ಟಿ ಜಾಹ್ನವಿಯವರು ತಿಳಿಸಿದ್ದಾರೆ.

ಈ ಮಧ್ಯೆ ಸದರಿ ಭೂಮಿಗೆ ಸಂಬಂಧಿಸಿದಂತೆ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದು, 2002 ರಲ್ಲಿ ಮಲ್ಲಿಕಾರ್ಜುನ ಅವರಿಗೆ ಮಂಜೂರಾದ ಭೂಮಿ ನ್ಯಾಯಸಮ್ಮತವಾಗಿದೆ ಎಂದು ಮಾನ್ಯ ಉಚ್ಚನ್ಯಾಯಾಲಯವು ಆದೇಶ ನೀಡಿರುತ್ತದೆ ಹಾಗೂ ಈಗ ಮಲ್ಲಿಕಾರ್ಜುನ ಅವರ ಮರಣದ ನಂತರ ಅವರ ಪತ್ನಿ ಪುಷ್ಪಲತಾ ಹಾಗೂ ಮಕ್ಕಳಾದ, ರಾಹುಲ್ ಹಾಗು ನಕುಲ್ ಅವರಿಗೆ ಅದು ವರ್ಗಾವಣೆಯಾಗಿರುತ್ತದೆ. ಹೀಗಿರುವಾಗ ಕಾನೂನು ಬಾಹಿರವಾಗಿ ಗಣೇಶ ಹುಲ್ಲುಮನೆ ಮತ್ತು ಇತರರು “ಈ ಜಾಗ ನಮ್ಮದು, ಇಲ್ಲಿರುವ ಸಮಾಧಿ ಯಾವುದೋ, ಯಾರದೋ ನಮಗೆ ತಿಳಿದಿಲ್ಲ ಅದು ಯಾರದ್ದೇ ಆಗಿರಲಿ ಆ ಸಮಾಧಿಯನ್ನ ನಾವು ಒಡೆದುಹಾಕಿದೆವು” ಎಂದು ಹೇಳೀ ಹಲ್ಲೆಗೆ ಮುಂದಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
32 ವರ್ಷಗಳಿಂದ ಅಲ್ಲೇ ಇದ್ದ ಡಾ.ತಿಪ್ಪೇಸ್ವಾಮಿಯವರ ಸಮಾದಿಯನ್ನು ಅವರಿಗೆ ಅರಿವಿದ್ದೇ ದ್ವಂಸ ಮಾಡಿರುವುದು ತುಂಬಾ ಖಂಡನೀಯ ಮತ್ತು ಹೇಯ ಕೃತ್ಯ. ಇದರಿಂದ ಇದರಿಂದ ಕುಟುಂಬದ ಸದಸ್ಯರು ಹಾಗೂ ಜನಾಂಗದ ಮುಖಂಡರಿಗೆ ಆಘಾತವಾಗಿದೆ. ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದೇವೆ. ಈ ದೌರ್ಜನ್ಯವನ್ನು ಖಂಡಿಸಿ ನವೆಂಬರ್ 24ರ ಗುರುವಾರ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮತದಾರರ ಮಾಹಿತಿ ಕಳ್ಳತನದಲ್ಲಿ ಬಿಜೆಪಿಯ ನೇರ ಕೈವಾಡ; ಏಜೆಂಟರಿಗೆ ಪಕ್ಷದ ಕಚೇರಿಯಲ್ಲೆ ತರಬೇತಿ!


