ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಬೆಂವಿವಿ) ದಲಿತ ಸಮುದಾಯದ ಪ್ರಾಧ್ಯಾಪಕರಿಗೆ ಬಡ್ತಿ ಮತ್ತು ಅಧಿಕಾರ ಹಂಚಿಕೆಯಲ್ಲಿ ವ್ಯಾಪಕ ತಾರತಮ್ಯ ನಡೆಯುತ್ತಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ವಿಶ್ವವಿದ್ಯಾಲಯಗಳ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ದಲಿತ ಪ್ರಾಧ್ಯಾಪಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳ ಒಕ್ಕೂಟದ ವಿದ್ಯಾರ್ಥಿ ನಾಯಕ ಚಂದ್ರು ಪೆರಿಯಾರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಲಪತಿ ಡಾ. ಜಯಕರ ಎಸ್.ಎಂ. ಅವರನ್ನು ತಕ್ಷಣ ಹುದ್ದೆಯಿಂದ ಹಿಂತೆಗೆದುಕೊಳ್ಳುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರು ಪೆರಿಯಾರ್, ರೋಸ್ಟರ್ ನಿಯಮಗಳನ್ನು ಮೀರಿ ದಲಿತ ಸಮುದಾಯದ ಪ್ರತಿಭಾವಂತ ಪ್ರಾಧ್ಯಾಪಕರನ್ನು ಕಡೆಗಣಿಸಿ, ಹೊರಗಿನಿಂದ ಐವರು ಬಲಾಢ್ಯ ಜಾತಿಗಳಿಗೆ ಸೇರಿದ ಪ್ರಾಧ್ಯಾಪಕರನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು. ಬೆಂವಿವಿ ಸ್ಥಾಪನೆಯಾದಾಗಿನಿಂದಲೂ ಒಬ್ಬರೂ ದಲಿತರು ಕುಲಪತಿಯಾಗಿಲ್ಲ. “ಇದು ದಲಿತರ ಮೇಲಿನ ಅಸಹನೆಗೆ ಹಿಡಿದ ಕನ್ನಡಿ” ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಿಯಮಬಾಹಿರ ಕಾರ್ಯನಿರ್ವಹಣೆ ಮತ್ತು ದಲಿತ ವಿರೋಧಿ ಧೋರಣೆ:
ಕುಲಪತಿ ರಜೆಯಲ್ಲಿರುವಾಗ ಅವರ ಜವಾಬ್ದಾರಿಯನ್ನು ಹಿರಿಯ ಡೀನ್ಗೆ ವಹಿಸುವುದು ನಿಯಮ. ಆದರೆ, ಬೆಂವಿವಿಯಲ್ಲಿರುವ ಎಲ್ಲಾ ಹಿರಿಯ ಡೀನ್ಗಳು ದಲಿತ ಸಮುದಾಯಕ್ಕೆ ಸೇರಿರುವ ಕಾರಣಕ್ಕಾಗಿ ಅವರಿಗೆ ಉಸ್ತುವಾರಿ ನೀಡದೆ, ಕುಲಸಚಿವರಿಗೆ ನೀಡಲಾಗಿದೆ ಎಂದು ಚಂದ್ರು ಪೆರಿಯಾರ್ ಹೇಳಿದರು. “ಇದು ಕಾನೂನು ಬಾಹಿರವಷ್ಟೇ ಅಲ್ಲದೆ, ಕುಲಪತಿಗೆ ದಲಿತರ ಮೇಲಿರುವ ಅಸಹನೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಅಲ್ಲದೆ, ದಲಿತ ವಿತ್ತಾಧಿಕಾರಿಗಳ ಅಧಿಕಾರವನ್ನು ಕಟ್ಟಡ ನವೀಕರಣದ ನೆಪವೊಡ್ಡಿ ಸುಮಾರು ಒಂದು ವರ್ಷಗಳ ಕಾಲ ‘ಒಂದೇ ಸೂರಿನ ತತ್ವ’ದಡಿ ಕುಲಸಚಿವರಿಗೆ ವಹಿಸಲಾಗಿದೆ. ದಲಿತ ಅತಿಥಿ ಉಪನ್ಯಾಸಕರನ್ನು ವಿನಾ ಕಾರಣ ಕೆಲಸದಿಂದ ತೆಗೆದುಹಾಕಿ, ವರ್ಷಾನುಗಟ್ಟಲೆ ಸಂಬಳ ನೀಡದೆ ವಂಚಿಸಲಾಗಿದೆ. ಇದರಿಂದ ಕೆಲವರು ಜೀವನ ಭದ್ರತೆ ಇಲ್ಲದೆ ಮಾನಸಿಕವಾಗಿ ಕುಗ್ಗಿ ಆಸ್ಪತ್ರೆ ಸೇರಿದ್ದಾರೆ ಎಂದೂ ಚಂದ್ರು ಪೆರಿಯಾರ್ ಆರೋಪಿಸಿದರು. “ಇಷ್ಟೆಲ್ಲಾ ಆದಮೇಲೆ ಕುಲಪತಿಯವರಿಂದ ನ್ಯಾಯ ಸಿಗಲಿದೆ ಎಂದು ಕಾಯುವುದರಲ್ಲಿ ಅರ್ಥವಿಲ್ಲ. ಕುಲಪತಿಯವರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಬೇಕು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಬೆಂವಿವಿ ಜಾತಿಯತೆ ಬಿತ್ತುವ ಸಂಸ್ಥೆಯಾಗಿದೆ”: ಶಿವಶಂಕರ್
ರಾಜ್ಯ ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮಿತಿಯ ಅಧ್ಯಕ್ಷ ಶಿವಶಂಕರ್ ಮಾತನಾಡಿ, ಹಿಂದೆ ಎಚ್. ನರಸಿಂಹಯ್ಯ, ಜಿ.ಎಸ್. ಶಿವರುದ್ರಪ್ಪ, ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ ಅವರಂತಹ ಮಹನೀಯರು ಕೆಲಸ ಮಾಡಿದ ಬೆಂವಿವಿಯಲ್ಲಿ ವೈಜ್ಞಾನಿಕತೆ, ವೈಚಾರಿಕತೆ, ಸಮಾಜಮುಖಿ ಚಿಂತನೆಗಳು ಬಿತ್ತರವಾಗುತ್ತಿದ್ದವು. ಆದರೆ ಈಗ ವಿಶ್ವವಿದ್ಯಾಲಯವು ಜಾತಿಯತೆ ಮತ್ತು ಕೋಮುವಾದವನ್ನು ಬಿತ್ತುವ ಸಂಸ್ಥೆಯಾಗಿ ಮಾರ್ಪಾಡಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
“67 ಪ್ರಾಧ್ಯಾಪಕರು ಜಾತಿ ತಾರತಮ್ಯ ನಡೆಯುತ್ತಿದೆ ಎಂದು ಸಹಿ ಮಾಡಿದರೂ, ಕುಲಪತಿ ಅಸಡ್ಡೆ ತೋರುತ್ತಿರುವುದು ದುರಂತ. ವಿಶ್ವವಿದ್ಯಾಲಯದ ಅವ್ಯವಸ್ಥೆ ಮತ್ತು ಜಾತಿ ತಾರತಮ್ಯದ ಕುರಿತು ತಕ್ಷಣ ತನಿಖೆ ನಡೆಸಬೇಕು” ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಟ ಚೇತನ್ ಅಹಿಂಸಾ, ದಲಿತ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಣ್ಣ ಮತ್ತು ಜ್ಞಾನೇಶ್ವರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.