‘ಜಸ್ಟೀಸ್ ಎಚ್.ಎನ್.ನಾಗಮೋಹನ್ದಾಸ್ ರವರ ಸಮೀಕ್ಷಾ ವರದಿ ಜುಲೈ 30ರೊಳಗೆ ಸಲ್ಲಿಕೆಯಾಗಲಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಧಿವೇಶನದಲ್ಲಿ ಒಳಮೀಸಲಾತಿ ಈಡೇರಿಕೆಗಾಗಿ ತಮ್ಮ ಬದ್ಧತೆಯನ್ನು ಪ್ರಕಟಿಸಬೇಕು. ಮಳೆಗಾಲ ಅಧಿವೇಶನದಲ್ಲಿ ಒಳಮೀಸಲಾತಿ ಅಂಗೀಕಸಬೇಕು ಎಂದು ಆಗ್ರಹಿಸಿ ಆಗಸ್ಟ್ 11 ರಿಂದ ಅನಿರ್ಧಿಷ್ಟ ಅಹೋರಾತ್ರಿ ಸತ್ಯಾಗ್ರಹ ಆರಂಭ ಮಾಡಲಾಗುವುದು” ಎಂದು ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ’ ಸಂಚಾಲಕರಾದ ಬಸವರಾಜ್ ಕೌತಾಳ್ ತಿಳಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಗಸ್ಟ್ 1, 2024 ರಂದು ಸರ್ವೋಚ್ಛ ನ್ಯಾಯಾಲಯವು ಪರಿಶಿಷ್ಟರ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರಗಳು ಆದ್ಯತೆಯ ಮೇರೆಗೆ ಜಾರಿಗೊಳಿಸಬಹುದು ಎಂಬ ಐತಿಹಾಸಿಕ ತೀರ್ಪನ್ನು ನೀಡಿ ಒಂದುವರ್ಷ ಗತಿಸುತ್ತಿದೆ. ಎರಡೇ ತಿಂಗಳಲ್ಲಿ ಪರಿಶಿಷ್ಠ ಜಾತಿ ಸಮುದಾಯಗಳ ಜನಸಂಖ್ಯಾ ಸಮೀಕ್ಷೆಯನ್ನು ಪೂರ್ಣಗೊಳಿಸಿ ತಮ್ಮ ನೈತಿಕ ಜವಾಬ್ದಾರಿಯನ್ನು ಪೂರೈಸಿದ್ದರೆ, 30 ವರ್ಷಗಳ ಒಳಮೀಸಲಾತಿ ಹೋರಾಟವು ಮತ್ತೊಂದು ಸುತ್ತಿನ ಹೋರಾಟವಾಗಿ ಪರಿವರ್ತನೆಯಾಗುವ ಅಗತ್ಯವಿರಲಿಲ್ಲ” ಎಂದು ಹೇಳಿದರು.
“ಈಗಲಾದರೂ ಇಂತಹ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರೆಸದೇ, ಆಡಳಿತರೂಢ ಸರ್ಕಾರವು ಪ್ರಸಕ್ತ ಅಧಿವೇಶನದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ತಮ್ಮ ಬದ್ಧತೆಯನ್ನು ಪ್ರಕಟಿಸಬೇಕಾಗಿದೆ. ಏಕೆಂದರೆ, ಜಸ್ಟಿಸ್ ನಾಗಮೋಹನ್ ದಾಸ್ರವರ ನೇತೃತ್ವದಲ್ಲಿ ನೇಮಕವಾದ ಏಕಸದಸ್ಯ ಆಯೋಗವು ಪರಿಶಿಷ್ಠ ಜಾತಿಗಳ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವೈಜ್ಞಾನಿಕ ಹಾಗೂ ವಸ್ತುನಿಷ್ಠ ವರದಿಯನ್ನು ಜುಲೈ 30ರೊಳಗಡೆ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ” ಎಂದರು.
“ವರದಿಯನ್ನು ಆದಷ್ಟು ಬೇಗ ಪಡೆದು ಆಗಸ್ಟ್ 11 ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಸರ್ವಪಕ್ಷಗಳ ಅನುಮೋದನೆಯೊಂದಿಗೆ ಒಳಮೀಸಲಾತಿ ಬೇಡಿಕೆಯನ್ನು ಅಂಗೀಕರಿಸಿದರೆ, ನೇಮಕಾತಿ ಆಗಬೇಕಾದ 30 ಸಾವಿರಕ್ಕೂ ಅಧಿಕ ಹುದ್ದೆಗಳು ವಂಚಿತ ನಿರುದ್ಯೋಗಿ ಯುವಕ, ಯುವತಿಯರು ಪಡೆಯಬಹುದಾಗಿದೆ. ವಿಷಾದಕರ ಸಂಗತಿ ಎಂದರೆ, ಕಳೆದ 30ವರ್ಷಗಳಲ್ಲಿ ಆಯೋಗ ನೇಮಕವಾಗಲು, ನೇಮಕವಾದ ಆಯೋಗಕ್ಕೆ ಅನುದಾನ ನೀಡಲು, ಸರ್ಕಾರಕ್ಕೆ ಒಪ್ಪಿಸಿದ ವರದಿಯನ್ನು ಅನುಷ್ಠಾನಗೊಳಿಸಲು 3 ದಶಕಗಳ ವಿಳಂಬ ಮುಂದುವರೆದಿರುವುದರಿಂದ ನೊಂದ ಸಮುದಾಯಗಳು ಯಾವುದೇ ಸರ್ಕಾರಗಳನ್ನು ನಂಬುವ ಸ್ಥಿತಿಯಲ್ಲಿಲ್ಲ” ಎಂದು ಬೇಸರ ಹೊರಹಾಕಿದರು.
“ಈ ಎಲ್ಲ ಕಹಿ ಅನುಭವಗಳು ಮುಂದುವರೆಯದಂತೆ ಸರ್ಕಾರವು ಆಗಸ್ಟ್ 11 ರಿಂದ ಆರಂಭವಾಗಲಿರುವ ಮಳೆಗಾಲ ಅಧಿವೇಶನದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವ ತೀರ್ಮಾನವನ್ನು ಕೈಗೊಳ್ಳುವ ಮೂಲಕ ನುಡಿದಂತೆ ನಡೆಯಲು ಆಗ್ರಹಿಸಿ ದಿನಾಂಕ: 11-08-2025 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಟ ಅಹೋರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ, ಎಲ್ಲ ಸಂಘ- ಸಂಸ್ಥೆಗಳ ಮುಖಂಡರುಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ವಿನಂತಿಸುತ್ತೇವೆ” ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್ ಕೌತಾಳ್, ಚಂದ್ರು ತರಹುಣಿಸೆ, ಮೂರ್ತಿ ಅಂಬೇಡ್ಕರ್, ವೇಣುಗೋಪಾಲ್ ಮೌರ್ಯ, ಮಂಜುನಾಥ ಮರಾಟ, ಪೌರಕಾರ್ಮಿಕರ ಸಂಘದ ಶ್ರೀನಿವಾಸ್ ಹಾಜರಿದ್ದರು.
‘ಕರ್ನಾಟಕ ಹೈಕೋರ್ಟ್ ಆದೇಶ ಸ್ವೀಕಾರಾರ್ಹವಲ್ಲ..’; ನಟ ದರ್ಶನ್ ಜಾಮೀನಿಗೆ ಸುಪ್ರೀಂ ಕೋರ್ಟ್ ಮತ್ತೆ ಆಕ್ಷೇಪ


