ಭಾರತದ ಪೌರತ್ವ ಪಡೆಯುವ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರು ಎನ್ನುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ದೆಹಲಿ ಪೊಲೀಸರಿಗೆ ದೆಹಲಿಯ ವಿಶೇಷ ನ್ಯಾಯಾಲಯ ಮಂಗಳವಾರ (ಡಿಸೆಂಬರ್ 9) ನೋಟಿಸ್ ಜಾರಿ ಮಾಡಿದೆ.
ಕ್ರಿಮಿನಲ್ ಪರಿಷ್ಕರಣಾ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ, ಹಿರಿಯ ವಕೀಲ ಪವನ್ ನಾರಂಗ್ ಅವರ ವಾದಗಳನ್ನು ಆಲಿಸಿದ ನಂತರ ನೋಟಿಸ್ ಜಾರಿ ಮಾಡಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 6ಕ್ಕೆ ನಿಗದಿಪಡಿಸಲಾಗಿದೆ.
ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಅವರ ಸೆಪ್ಟೆಂಬರ್ 11ರಂದು ನೀಡಿದ ಆದೇಶವನ್ನು ಪ್ರಶ್ನಿಸಿ ಸೆಂಟ್ರಲ್ ದೆಹಲಿ ಕೋರ್ಟ್ ಬಾರ್ ಅಸೋಸಿಯೇಷನ್ನ ಉಪಾಧ್ಯಕ್ಷ ಹಾಗೂ ವಕೀಲ ವಿಕಾಸ್ ತ್ರಿಪಾಠಿ ಅವರು ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ಚೌರಾಸಿಯಾ ಅವರು ಅರ್ಜಿ ವಜಾಗೊಳಿಸುವ ವೇಳೆ, ತಮ್ಮ ನ್ಯಾಯಾಲಯಕ್ಕೆ ಭಾರತೀಯ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಮಾತ್ರ ಮೀಸಲಾಗಿರುವ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಲು ಅಧಿಕಾರ ಇಲ್ಲ, ಏಕೆಂದರೆ ನಾಗರಿಕತ್ವವು ಸ್ವತಂತ್ರ ರಾಷ್ಟ್ರ ಮತ್ತು ಅದರ ಪ್ರಜೆಗಳ ನಡುವಿನ ವಿಶೇಷ ಸಂಬಂಧವಾಗಿದೆ ಎಂದಿದ್ದರು.
ಅಲ್ಲದೆ, ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಾಧೀಶರು, ಇಂತಹ ಕ್ರಮವು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಸಮಾನವಾಗಿದೆ. ಆಪಾದಿತ ಅಪರಾಧಗಳಾದ ವಂಚನೆ, ನಕಲಿ ಮತ್ತು ಇತರವುಗಳನ್ನು ರೂಪಿಸಲು ಅಗತ್ಯವಾದ ಮೂಲಭೂತ ಅಂಶಗಳು ಸ್ಪಷ್ಟವಾಗಿ ಕೊರತೆಯಿದೆ. ಅರ್ಜಿದಾರರು 1980ರ ಪ್ರಮಾಣೀಕರಿಸದ ಚುನಾವಣಾ ಪಟ್ಟಿಯ ನಕಲು ಪ್ರತಿಯನ್ನು ಮಾತ್ರ ಅವಲಂಬಿಸಿದ್ದಾರೆ. ಇದರಿಂದ ಬಲವಾದ ಆರೋಪಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.
ಕಾನೂನುಬದ್ಧ ಆಧಾರವಿಲ್ಲದ ಆರೋಪಗಳನ್ನು ಬಳಸಿ, ನ್ಯಾಯಾಲಯಕ್ಕೆ ಇಲ್ಲದ ಅಧಿಕಾರವನ್ನು ಬಲವಂತವಾಗಿ ಒದಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದ್ದರು.
ತನ್ನ ಅರ್ಜಿ ವಜಾಗೊಳಿಸಿದ ಮ್ಯಾಜಿಸ್ಟ್ರೇಟ್ ಆದೇಶ ಪ್ರಶ್ನಿಸಿ ವಕೀಲ ತ್ರಿಪಾಠಿ ವಿಶೇಷ ನ್ಯಾಯಾಲಯಕ್ಕೆ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿದ್ದಾರೆ.
ಸೋನಿಯಾ ಗಾಂಧಿಯವರ ಹೆಸರು 1980ರಲ್ಲಿ ನವದೆಹಲಿಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ, ಅವರು ಭಾರತದ ನಾಗರಿಕರಾಗಿದ್ದು 1983ರಲ್ಲಿ ಎಂಬುವುದು ವಕೀಲ ತ್ರಿಪಾಠಿಯ ವಾದವಾಗಿದೆ.
ಸೋನಿಯಾ ಗಾಂಧಿ ಸೇರಿದಂತೆ ಪರಿಚಿತ ಮತ್ತು ಅಪರಿಚಿತ ವ್ಯಕ್ತಿಗಳು ಸುಳ್ಳು ದಾಖಲೆ ಪತ್ರಗಳನ್ನು ರಚಿಸುವ ಕಾನೂನುಬಾಹಿರ ಕೃತ್ಯಗಳನ್ನು ಮಾಡಿದ್ದಾರೆ. ಸೋನಿಯಾ ಗಾಂಧಿ ಭಾರತದ ನಾಗರಿಕಲ್ಲದಿದ್ದರೂ, ಅವರ ಹೆಸರನ್ನು ಸಾರ್ವಜನಿಕ ದಾಖಲೆಗಳಲ್ಲಿ ಸೇರಿಸಲಾಗಿತ್ತು. ಇದನ್ನು ಮ್ಯಾಜಿಸ್ಟ್ರೇಟ್ ಗಂಭೀರವಾಗಿ ಗಮನಿಸಿಲ್ಲ ಎಂದು ವಕೀಲ ತ್ರಿಪಾಠಿ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.


