ಮೊದಲವರು ಜೆಎನ್ಯುಗೆ ಬಂದರು, ನೀವು ದನಿಯೆತ್ತಲಿಲ್ಲವೇಕೆಂದರೆ, ‘ಅವರು ಎಡಪಂಥೀಯರು, ಅರ್ಬನ್ ನಕ್ಸಲ್ಗಳು, ದೇಶದ್ರೋಹಿಗಳು, ಅವರಿಗೆ ಹಾಗೆಯೇ ಆಗಬೇಕಿತ್ತು’.
ನಂತರ ಅವರು ಜಾಮಿಯಾಕ್ಕೆ ಬಂದರು, ನೀವು ದನಿಯೆತ್ತಲಿಲ್ಲ. ಏಕೆಂದರೆ ‘ಅವರು ಮುಸ್ಲಿಮರು, ಭಯೋತ್ಪಾದಕರು, ಅವರಿಗೆ ಹಾಗೆಯೇ ಆಗಬೇಕಿತ್ತು’.
ನಂತರ ಅವರು ಶಾಹೀನ್ ಬಾಗ್ನತ್ತ ಗುಂಡೆಸೆದರು, ನೀವು ಆಗಲೂ ಮಾತನಾಡಲಿಲ್ಲ. ‘ಅವರು ಹಣಕ್ಕಾಗಿ ಪ್ರತಿಭಟಿಸುತ್ತಿದ್ದ, ದಾರಿತಪ್ಪಿದ ಮಹಿಳೆಯರಾಗಿದ್ದರು’.
ನಂತರ ಅವರು ಈ ದೇಶದ ರಾಜಕೀಯ ರಹಿತ ಹೆಣ್ಣುಮಕ್ಕಳಾದ ಗಾರ್ಗಿ ಹುಡುಗಿಯರತ್ತ ಬಂದರು. ಆಗ ನಿಮ್ಮ ಪರವಾಗಿ ದನಿಯೆತ್ತಲು ಏನೂ ಇರಲಿಲ್ಲ.
ಕಳೆದ ವಾರದಲ್ಲಿ ಗಾರ್ಗಿ ಕಾಲೇಜಿನಲ್ಲಿ ನಡೆದದ್ದನ್ನು ಕೇಳಿ ಬಹಳಷ್ಟು ಜನರು ಶಾಕ್ಗೊಳಗಾಗಿದ್ದಾರೆ. ಗುಂಪೊಂದು ಹೆಣ್ಣು ಮಕ್ಕಳ ಮೈಮುಟ್ಟಿ, ಲೈಂಗಿಕ ಕಿರುಕುಳ ಕೊಟ್ಟು, ಅವರ ಮುಂದೆಯೇ ಮುಷ್ಠಿಮೈಥುನ ನಡೆಸಿದ್ದಾರೆ. ಇದೆಲ್ಲವೂ ನಡೆದದ್ದು ದೇಶದ ರಾಜಧಾನಿಯಲ್ಲಿ, ದೆಹಲಿ ಪೊಲೀಸರು, ಶಿಕ್ಷಕರು ಮತ್ತು ಕಾಲೇಜು ಭದ್ರತಾ ಸಿಬ್ಬಂದಿಯ ಎದುರು ಎಂಬುದು ಇನ್ನೂ ಶಾಕಿಂಗ್ ಆದದ್ದಾಗಿದೆ. ಸಿಎಎ ಪರವಾದ ಪ್ರತಿಭಟನೆಯೊಂದನ್ನು ಮುಗಿಸಿಕೊಂಡು ಬಂದು ಜೈ ಶ್ರೀರಾಂ ಎಂಬ ಘೋಷಣೆ ಕೂಗುತ್ತಿದ್ದ ಬಿಜೆಪಿಯ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ಈ ಲೈಂಗಿಕ ಹಲ್ಲೆ ನಡೆದಿದೆ ಎಂಬುದನ್ನು ಗಮನಿಸಬೇಕಿದೆ. ಅವರಲ್ಲಿ ಬಹುತೇಕ ಜನರಿಗೆ ದೆಹಲಿ ಹೈಕೋರ್ಟ್ ಜಾಮೀನು ಸಹ ನೀಡಿದೆ.
ಇದು ಏನನ್ನು ತೋರಿಸುತ್ತದೆ? ಗೋವಿನ ಹೆಸರಲ್ಲಿ, ಲವ್ ಜಿಹಾದ್ ಹೆಸರಿನಲ್ಲಿ ಮತ್ತು ಮುಸ್ಲಿಮರು ಹೆಸರಿನಲ್ಲಿ ಕೊಲ್ಲಲು ತಯಾರು ಮಾಡಲಾಗಿದ್ದ ಗುಂಪು ನಿಮ್ಮ ನೆರೆಹೊರೆಗೆ, ಮನೆಗೆ, ಕಾಲೇಜು ಕ್ಯಾಂಪಸ್ಸುಗಳ ಬಳಿಗೆ ಬಂದಿದೆ ಎಂಬುದನ್ನು ತೋರುತ್ತಿದೆ. ಇಂತಹ ಕೊಳಕು ಕೃತ್ಯಗಳನ್ನೆಸಗಲು ಸದರಿ ಗುಂಪನ್ನು ರೂಪಿಸಿದ್ದು, ಬಲ ತುಂಬಿದ್ದು ಮತ್ತು ಸಾಯುಧರನ್ನಾಗಿಸಿದ್ದು ಪುರುಷಹಂಕಾರ ತುಂಬಿದ ಫ್ಯಾಸಿಸ್ಟ್ ಬಲಪಂಥೀಯ ತಾತ್ವಿಕತೆಯೇ ಆಗಿದೆ.
ಅವರ ಆದರ್ಶ ನಾರಿ ಚೌಕಟ್ಟಿಗೆ ಸರಿಯಾಗಿ ಹೊಂದಿಕೊಳ್ಳದ ಮಹಿಳೆಯರನ್ನು ಸ್ತ್ರೀ ದ್ವೇಷ ಮತ್ತು ಅಸಹನೆಯ ಮತ್ತನ್ನು ಏರಿಸಿಕೊಂಡಿರುವ ಗುಂಪು ಇಷ್ಟಪಡುವುದಿಲ್ಲ. ಆ ಗುಂಪು ಶಹೀನ್ಬಾಗ್ನ ಮಹಿಳೆಯರನ್ನು ರೇಪ್ ಮಾಡುತ್ತೇವೆಂದು ಬಹಿರಂಗವಾಗಿ ಹೇಳುತ್ತದೆ. ಅದೇ ರೀತಿ ನರೇಂದ್ರ ಮೋದಿ ಸರ್ಕಾರವನ್ನು ವಿರೋಧಿಸುವ ಜೆಎನ್ಯು, ಜಾಮಿಯಾ ಅಥವಾ ಯಾವುದೇ ವಿದ್ಯಾರ್ಥಿಗಳನ್ನು ಕೊಲ್ಲುವುದಾಗಿ ಅಬ್ಬರಿಸುತ್ತದೆ. ಆಳುತ್ತಿರುವವರ ಶಾಮೀಲುದಾರಿಕೆ ಮತ್ತು ಸರ್ಕಾರೀ ಯಂತ್ರಾಂಗದ ಬೆಂಬಲದೊಂದಿಗೆ ದೇಶದ ಯಾವುದೇ ಭಾಗದಲ್ಲಿ ಅಪರಾಧೀ ಕೃತ್ಯಗಳನ್ನೆಸಗಲು ತಮಗೆ ಲೈಸೆನ್ಸ್ ಸಿಕ್ಕಿದೆ ಎಂದು ಅದು ಭಾವಿಸಿದೆ.
ಮಧ್ಯಮವರ್ಗ ಅಥವಾ ಮೇಲ್ವರ್ಗದ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ವಾದಿಸುವ ಸಂಸ್ಕಾರಯುತ ಜನವರ್ಗಗಳು ಫ್ಯಾಸಿಸ್ಟ್ ಗುಂಪಿನ ಇಂತಹ ಕೃತ್ಯಗಳ ಕುರಿತು ಉಸಿರೆತ್ತುವುದಿಲ್ಲ.
ಮುಂದಿನ ದಿನಗಳ ಸೂಚನೆ
ಕ್ಯಾಂಪಸ್ಸುಗಳ ಮೇಲಿನ ದಾಳಿಯು ಬಿಜೆಪಿ ಸರ್ಕಾರದ ಪ್ರಮುಖ ಗುಣಲಕ್ಷಣಗಳಲ್ಲೊಂದಾಗಿದೆ. ಈ ಸರ್ಕಾರವು ಸುಶಿಕ್ಷಿತರನ್ನು ಮತ್ತು ಶಿಕ್ಷಣ ಪಡೆಯಬಯಸುವವರನ್ನು ದ್ವೇಷಿಸುತ್ತದೆ. ದೇಶದುದ್ದಗಲದ ಹಲವಾರು ಕ್ಯಾಂಪ್ಸಸುಗಳಲ್ಲಿ ಇದು ಪುನರಾವರ್ತನೆಯಗಿದೆ. ಕಳೆದ ಐದು ವರ್ಷಗಳಲ್ಲಿ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳನ್ನು ವಿಲನ್ಗಳನ್ನಾಗಿಸುವ ಕೆಲಸ ಅವ್ಯಾಹತವಾಗಿ ನಡೆದದ್ದಲ್ಲದೇ ದಾಳಿ ಮಾಡಲಾಗಿದೆ.
ಮಹಿಳೆಯರ ಕುರಿತಾದ ಇವರ ದ್ವೇಷದ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿನಿಯರಿಗೆ ಏನು ಕಾದಿದೆಯೋ ಅದನ್ನು ಗಾರ್ಗಿ ಕಾಲೇಜಿನ ಹುಡುಗಿಯರು ಈಗ ಅನುಭವಿಸಿದ್ದಾರೆ. ಗಾರ್ಗಿ ಕಾಲೇಜಿನ ಪ್ರಿನ್ಸಿಪಾಲೆರ ಹುಡುಗಿಯರು ಲಕ್ಷ್ಮಣರೇಖೆಯನ್ನು ದಾಟಿದ್ದರಿಂದ ಇದಾಗಿದೆಯೆಂದು ಹೇಳಿಬಿಟ್ಟಿದ್ದನ್ನೂ ಗಮನಿಸಬೇಕು. ಎಲ್ಲೆಡೆ ಮಹಿಳೆಯರು ಸಮಾನ ಅವಕಾಶಗಳು ಮತ್ತು ಸಮಾನವಾಗಿ ತಮ್ಮನ್ನು ನಡೆಸಿಕೊಳ್ಳಬೇಕೆಂಬ ಹಕ್ಕೊತ್ತಾಯವನ್ನು ಮುಂದಿಡುತ್ತಿದ್ದಾರಾದರೂ, ಇಂತಹ ಘಟನೆಗಳು ‘ರಕ್ಷಣೆ’ಯ ಹೆಸರಿನಲ್ಲಿ ಮಹಿಳೆಯರನ್ನು ಮತ್ತಷ್ಟು ಪಂಜರದ ಗೊಂಬೆಗಳನ್ನಾಗಿಸುವ ಸಾಧ್ಯತೆಯೇ ಹೆಚ್ಚು.
ಎಲ್ಲಾ ಕ್ಯಾಂಪಸ್ಸುಗಳಲ್ಲೂ ಹುಡುಗಿಯರು ತಮಗೂ 24 ಗಂಟೆಗಳ ಗ್ರಂಥಾಲಯ, ಅಲ್ಲಿಗೆ ಮುಕ್ತವಾಗಿ ಓಡಾಡಲು ಸ್ವಾತಂತ್ರ್ಯ ಇತ್ಯಾದಿಗಳು ಬೇಕೆಂದು ಕೇಳುತ್ತಿದ್ದಾರೆ. ಆದರೆ, ಪುರುಷ ಕೇಂದ್ರಿತ ದೃಷ್ಟಿಕೋನವು ಇವೆಲ್ಲವನ್ನೂ ರಕ್ಷಣೆಯ ಹೆಸರಿನಲ್ಲಿ ಅಥವಾ ಹಸಿ ಹಸಿಯಾಗಿ ‘ನಿಮಗೆ ಇವುಗಳ ಅಗತ್ಯವಿಲ್ಲ’ ಎಂದು ಹೇಳುತ್ತಾ ಹಿಂದೆ ತಳ್ಳಲು ಇಂತಹ ಘಟನೆಗಳು ನೆಪವಾಗುತ್ತವೆ. ಗಾರ್ಗಿ ಕಾಲೇಜಿನ ಮೇಲೆ ದಾಳಿ ನಡೆಸಿದವರ ಮೇಲೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳದಿರುವುದು ದೇಶದೆಲ್ಲೆಡೆಯ ವಿದ್ಯಾರ್ಥಿನಿಯರ ಭವಿಷ್ಯದ ಮೇಲೂ ಹಾಕಿದ ಕಲ್ಲಾಗಿದೆ.


