Homeಕರ್ನಾಟಕಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ನಿಗೂಢ ಸಾವುಗಳು

ಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ನಿಗೂಢ ಸಾವುಗಳು

- Advertisement -
- Advertisement -

| ಸೋಮಶೇಖರ್ ಚಲ್ಯ |

ಸಕ್ಕರೆ ನಾಡು ಎನ್ನುವ ಹೆಗ್ಗಳಿಕೆ ಇರುವ ಮಂಡ್ಯ ಈಗೀಗ ಗುರುತಿಸಿಕೊಳ್ಳುತ್ತಿರುವುದು ಹಲವು ಕುಖ್ಯಾತ ಕಾರಣಗಳಿಂದ. ರೈತರ ಆತ್ಮಹತ್ಯೆ, ಹೆಣ್ಣು ಭ್ರೂಣ ಹತ್ಯೆ, ಮರ್ಯಾದಾ ಹತ್ಯೆ, ಜಾತಿಯಾಧಾರಿತ ದೌರ್ಜನ್ಯಗಳ ಕುಖ್ಯಾತಿಯ ಪಟ್ಟಿಯಲ್ಲಿ ಮಂಡ್ಯ ಮೊದಲ ಶ್ರೇಣಿಯಲ್ಲಿರುವುದು ಮಂಡ್ಯದ ಘನತೆಯನ್ನು ಕುಂದಿಸುತ್ತಿದೆ.

ಈ ಪಟ್ಟಿಗೆ ಇನ್ನೊಂದು ಸೇರ್ಪಡೆ, ಕಲ್ಲಿನ ಕ್ವಾರೆಗಳಲ್ಲಿ ನಿಗೂಢ ಸಾವುಗಳು. ಕೆಆರ್‍ಎಸ್ ಸುತ್ತಮುತ್ತಲಿನ ಶ್ರೀರಂಗಪಟ್ಟಣ, ಬೇಬಿ ಬೆಟ್ಟ ಮುಂತಾದ ಹಲವಾರು ಪ್ರದೇಶಗಳಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ರಾಜಕೀಯ ಬಲ ಹಾಗೂ ತೋಳ್ಬಲಗಳಿಂದ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಇದರಿಂದಾಗಿ ಆ ಪ್ರದೇಶಗಳು ಬಳ್ಳಾರಿಯಂತಹ ಮೈನಿಂಗ್ ತಾಣಗಳಂತೆ ಕಾಣುತ್ತಿದ್ದು, ಮಂಡ್ಯದ ಮತ್ತೊಂದು ಮುಖವನ್ನು ತೆರೆದಿಟ್ಟಿದೆ. ಈ ಗಣಿಗಾರಿಕೆಗಳಿಂದಾಗಿ ಕೆಆರ್‍ಎಸ್ ಅಣೆಕಟ್ಟೆಗೂ ಅಪಾಯ ಬಂದಿದೆಯೆಂದು, ಅದರ ಉಳಿವಿಗಾಗಿ ಮೈನಿಂಗ್ ವಿರುದ್ಧ ಹೋರಾಟಗಳು ನಡೆಯುತ್ತಲೇ ಇವೆ.

ಇದೆಲ್ಲದರ ನಡುವೆ ಕ್ವಾರೆಗಳಲ್ಲಿ ಕೂಲಿ ಕೆಲಸ ಮಾಡುವ ಜನರ ಸಾವುಗಳು ಸರಣಿ ರೀತಿಯಲ್ಲಿ ನಡೆಯುತ್ತಲೇ ಇವೆ. ಆದರೆ ಈ ಸಾವುಗಳಿಗೆ ಕಾರಣವನ್ನು ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತ ಸೋತಿರುವುದು ಸ್ಥಳೀಯ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಜೂನ್ 20ರ ರಾತ್ರಿ ಮತ್ತೊಬ್ಬ ಕೂಲಿ ಕಾರ್ಮಿಕ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಚೆನ್ನಕೆರೆ ಗ್ರಾಮದ ಕ್ವಾರೆಯಲ್ಲಿ ರಾತ್ರಿ 11 ಗಂಟೆಯ ವೇಳೆಗೆ ಕಂಪ್ರೆಸರ್ ಮೂಲಕ ಕುಳಿ ತೋಡಲು ಹೋಗಿದ್ದ ಕಾರ್ಮಿಕ ರಾಜು ಸಾವನ್ನಪ್ಪಿದ್ದಾನೆ. ಹಿಂದೆ ಒಂದು ಸಾರಿ ಕಲ್ಲನ್ನು ಸಿಡಿಸಲು ತೆಗೆದಿದ್ದ ಹಳೇ ಕುಳಿಯಲ್ಲಿ ಸಿಡಿಮದ್ದು ತುಂಬಿಯೂ ಅದು ಸಿಡಿದಿರಲಿಲ್ಲ. ಈಗ ಅದೇ ಸಿಡಿಮದ್ದು ತುಂಬಿದ್ದ ಕುಳಿಯಲ್ಲಿ ಮತ್ತೆ ಕುಳಿ ತೆಗೆದು ಸಿಡಿಸಲು ಹೋಗಿದ್ದಾರೆ. ಮೊದಲೇ ತುಂಬಿದ್ದ ಸಿಡಿಮದ್ದು ಕುಳಿ ಹಾಕುತ್ತಿದ್ದಂತೆಯೇ ಸಿಡಿದು ಹೋಗಿದೆ. ಇದರಿಂದ ರಾಜು ಸಾವನ್ನಪ್ಪಿದ್ದಾನೆ, ಆತನ ಸಂಬಂಧಿ ಮುನಿಯಪ್ಪನಿಗೆ ಕೈ ಮುರಿದಿದೆ. ಆದರೆ, ಕ್ವಾರೆಯ ಮಾಲೀಕರಾದ ಮೀನಾಕ್ಷಿ, ನಂಜೇಗೌಡ ಮತ್ತು ಸಂತೋಷ್ ಕಂಪ್ರೇಸರ್ ಟ್ರ್ಯಾಕ್ಟರ್ ಮಗುಚಿ ಆತ ಸಾವಿನ್ನಪ್ಪಿದ್ದಾನೆ ಎಂದು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಪ್ರೊ.ಹುಲ್ಕೆರೆ ಮಹದೇವ ಆರೋಪಿಸಿದ್ದಾರೆ.

ಇಂತಹ ಘಟನೆಗಳು ಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ಮೊದಲೇನಲ್ಲ. ರಾಜ್ಯದ ಹಲವಾರು ಹಳ್ಳಿಗಳಿಂದ ಬಡಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಇಂತಹ ಉದ್ಯೋಗಗಳನ್ನು ಅರಸಿ ಬರುತ್ತಾರೆ. ಅಂತಹ ಜನರಿಗೆ ಒಂದಷ್ಟು ಮೊತ್ತದ ದುಡ್ಡು ಕೊಟ್ಟು ಇಂತಿಷ್ಟು ವರ್ಷಗಳಿಗೆ ಎಂದು ಜೀತದ ರೀತಿಯಲ್ಲಿ ದುಡಿಸಿಕೊಳ್ಳುವುದು ಕ್ವಾರೆಗಳಲ್ಲಿ ಇನ್ನು ತಪ್ಪಿಲ್ಲ. ದಾರುಣ ಬಡತನದಲ್ಲಿರುವ ಜನ ಈಗಲೂ ಜೀತದಾಳುಗಳಾಗಿ ಬಂದು ದುಡಿಯುತ್ತಿದ್ದಾರೆ.

ಇದೇ ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿಯ ಪ್ರಕರಣಗಳು ಎಲ್ಲರಿಗೂ ನೆನಪಿದ್ದೇ ಇರುತ್ತದೆ. 18 ವರ್ಷಗಳ ಹಿಂದೆ, ಹಂಗರಹಳ್ಳಿಯಲ್ಲಿ ಕಾಲಿಗೆ ಕೋಳ ತೊಡಿಸಿ ಕಾರ್ಮಿಕರು ಎಲ್ಲೂ ಹೋಗದಂತೆ ಒಂದೇ ಕಡೆ ಕಟ್ಟಿ ದುಡಿಸಲಾಗುತ್ತಿತ್ತು. ರೈತಸಂಘವು ಅದನ್ನು ಬಯಲಿಗೆ ತಂದನಂತರ ದೇಶಾದ್ಯಂತ ಸುದ್ದಿ ಆಗಿತ್ತು. ನಂತರದಲ್ಲಿ ಆ ಸಂತ್ರಸ್ತರನ್ನೇ ಹೆದರಿಸಿ, ತಮಗೆ ಸಿನೆಮಾ ಶೂಟಿಂಗ್ ಕಾರಣಕ್ಕೆ ಕೋಳ ತೊಡಿಸಲಾಗಿತ್ತೆಂದು ಸಾಕ್ಷಿ ನುಡಿಸಿದ್ದರು. ಅಂತಿಮವಾಗಿ ಕೇಸು ಬಿದ್ದುಹೋಗಿತ್ತು. ಇಷ್ಟಾದ ನಂತರ ಇದೇ ಹಂಗರಹಳ್ಳಿಯಲ್ಲಿ 2018ರ ಅಕ್ಟೋಬರ್‍ನಲ್ಲಿಯೂ ತನ್ನ ದುಡಿಮೆಯ ಲೆಕ್ಕ ಕೇಳಿದ ಕರಿಯಪ್ಪ ಮಾದರ್ ಎಂಬ ಜೀತಗಾರನನ್ನು ಕೊಂದು ನೇಣುಹಾಕಲಾಗಿತ್ತೆಂದು ಹೇಳಲು ಹಲವು ಸಾಂದರ್ಭಿಕ ಸಾಕ್ಷ್ಯಗಳಿದ್ದವು. ಆಗಲೂ ಪ್ರಕರಣ ಮುಚ್ಚಿಹೋಗದಂತೆ ಸ್ಥಳೀಯ ಹೋರಾಟಗಾರರು ಅದನ್ನು ಬೆಳಕಿಗೆ ತಂದಿದ್ದರು. ಅದೇ ಸಮಯದಲ್ಲಿ ಮದ್ದೂರಿನ ಕುದುರುಗುಂಡಿಯಲ್ಲಿ ದಲಿತ ಮಹಿಳೆಯೊಬ್ಬರನ್ನು ಜೀತಕ್ಕಿರಿಸಿಕೊಂಡು ದುಡಿಸಲಾಗುತ್ತಿತ್ತು. ಆಕೆ ಜೀತವನ್ನು ನಿರಾಕರಿಸಿ ಹೊರಹೋಗಿದ್ದರಿಂದ, ಆಕೆಯನ್ನು ಬಲವಂತವಾಗಿ ಎಳೆದೊಯ್ದಿದ್ದ ಪ್ರಕರಣವೂ ಬೆಳಕಿಗೆ ಬಂದಿತ್ತು. ಈ ಅಮಾನವೀಯ ಕೃತ್ಯಗಳ ಬಗ್ಗೆ ಪತ್ರಿಕೆಯಲ್ಲಿ ವರದಿಯನ್ನೂ ಮಾಡಿದ್ದೆವು.

ಈಗ ನಿಗೂಢವಾಗಿ ಸಾವನ್ನಪ್ಪಿರುವ ರಾಜು ಕೂಡ ಕೊಳ್ಳೆಗಾಲ ತಾಲ್ಲೂಕಿನ ವಡ್ಡಲದೊಡ್ಡಿ ಗ್ರಾಮದಿಂದ ತನ್ನ ಸಂಬಂಧಿ ಮುನಿಯಪ್ಪನ ಜೊತೆ ಬಂದು ಚೆನ್ನಕೆರೆ ಕ್ವಾರೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು. ರಾತ್ರಿಯ ವೇಳೆಯಲ್ಲಿ ಸಿಡಿಮದ್ದುಗಳನ್ನು ಸಿಡಿಸುವುದರಿಂದ ರಾಜು ಮತ್ತು ಮುನಿಯಪ್ಪ ಕ್ವಾರೆಯಲ್ಲಿ ಕುಳಿ ತೆಗೆಯಲು ಬಂದಿದ್ದಾಗ ಈ ಘಟನೆ ನಡೆದಿದೆ. ಆದರೆ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಆತನ ಶವವನ್ನು ಪೊಲೀಸ್ ಮಹಜರ್ ಮಾಡುವುದಕ್ಕೂ ಮೊದಲೇ ಯಾರಿಗೂ ತಿಳಿಯದಂತೆ ಜಲ್ಲಿ ಕ್ರಷರ್‍ನಲ್ಲಿ ಅಡಗಿಸಿಟ್ಟಿದ್ದಾರೆ. ಕ್ರಷರ್ ಬಳಿಗೆ ಯಾರೂ ಬಾರದಂತೆ ರಸ್ತೆಯಲ್ಲಿ ಗುಂಡಿ ತೋಡಿದ್ದಾರೆ. ಬೆಳಗ್ಗೆಯ ವೇಳೆಗೆ ಆತನ ಕುಟುಂಬಕ್ಕೆ 4.5 ಲಕ್ಷದಷ್ಟು ಹಣ ಕೊಟ್ಟು ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ. ಆ ಸಮಯಕ್ಕೆ ಘಟನೆಯ ವಿಷಯ ಅಕ್ಕ-ಪಕ್ಕದವರಿಗೆ ಗೊತ್ತಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ.
ಜೂನ್ 21ರಂದು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮತ್ತಿತರ ಹಿರಿಯ ಹೋರಾಟಗಾರರಿಗೆ ವಿಷಯ ತಿಳಿದಿದೆ. ಶ್ರೀರಂಗಪಟ್ಟಣ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ, ತಹಶೀಲ್ದಾರರನ್ನು ವಿಚಾರಿಸಿದ್ದಾರೆ. ತಹಶೀಲ್ದಾರ್ ಆ ವಿಷಯ ತಮಗೆ ತಿಳಿದೇ ಇಲ್ಲವೆಂದು ನಾನಾ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅರಕೆರೆ ಪೊಲೀಸರೂ ತಮಗೂ ವಿಷಯ ತಿಳಿದಿಲ್ಲವೆಂದು ಹೇಳಿದ್ದಾರೆ. ಆದರೆ ಇಂಥದೊಂದು ಘಟನೆ ನಡೆದಿದೆ, ಮಾಲೀಕರಿಗೆ ಶಿಕ್ಷೆಯಾಗಬೇಕು ಎಂದು ಹೋರಾಟಗಾರರು ಹೇಳುವಾಗ, ಆ ಮಾಲೀಕ ದಲಿತ ಜಾತಿಗೆ ಸೇರಿದವರು ಏನ್ ಮಾಡ್ತಿರಾ ಎಂದು ಅರಕೆರೆ ಪೊಲೀಸ್ ಠಾಣೆಯ ಎಸ್‍ಐ ಹೇಳಿದ್ದಾರೆ. ಇದು ಪೊಲೀಸರು ಕ್ವಾರೆಯ ಮಾಲೀಕರೊಂದಿಗೆ ಸೇರಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ ಎಂಬುದು ಅವರ ಆರೋಪ. ಮೊದಲೇ ಈ ವಿಚಾರ ಗೊತ್ತಿದ್ದರೂ ಗೊತ್ತಿಲ್ಲವೆಂಬಂತೆ ನಟಿಸಿರುವುದು ಹಸಿಹಸಿಯಾಗಿ ಬಯಲಾದ ನಂತರ ಅವರು ತಬ್ಬಿಬ್ಬಾದರು ಮತ್ತು ಆಗ ಪೊಲೀಸರು ಮತ್ತು ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡೆವೆಂದು ಹೇಳಿದ್ದಾರೆ.

ನಂತರ ಸಂಜೆ 4.30ರ ವೇಳೆಗೆ ಮೈಸೂರಿನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಶವವನ್ನು ತಂದಿದ್ದಾರೆ. ಅಲ್ಲಿಯವರೆಗೂ ಶವ ಎಲ್ಲಿತ್ತು ಎಂಬ ಸುಳಿವೇ ಸಿಕ್ಕಿಲ್ಲ, ಮಹಜರ್ ಸಹಾ ಮಾಡಲಾಗಿಲ್ಲ. ಆಸ್ಪತ್ರೆಯಲ್ಲಿ ಎಫ್‍ಐಆರ್ ಆಗದೆ ಪೋಸ್ಟ್‍ಮಾರ್ಟಂ ಮಾಡುವುದಿಲ್ಲ ಎಂದು ಹೇಳಿದ ಮೇಲೆ ಅಪಘಾತ ಸಾವು ಎಂದು ಎಫ್‍ಐಆರ್ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಂಪ್ರೆಸರ್ ಟ್ರ್ಯಾಕ್ಟರ್ ಮೇಲಿತ್ತು, ನಾವು ಹೋಗುವ ಸಮಯದಲ್ಲಿ ಅದು ಉರುಳಿಬಿತ್ತು ಎಂದು ಮುನಿಯಪ್ಪ ಹೇಳಿಕೆ ನೀಡಿದ್ದಾನೆ. ಆದರೆ ಈ ಹೇಳಿಕೆಯು ಮಾಲೀಕರ ಮೇಲಿನ ಭಯದಿಂದ ಬಂದಿದೆ ಎಂದು ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮಹಜರು ಮಾಡದೆ ಮತ್ತು ಎಫ್‍ಐಆರ್ ಹಾಕದೆ ಶವವನ್ನು ಮರಣೋತ್ತರ ಪರೀಕ್ಷೆಗೆ ತಂದಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಹಜರ್ ಮಾಡದೇ ಶವವನ್ನ ತೆಗೆದಿದ್ದು ಯಾಕೆ? ಯಾರು ಆ ಸ್ಥಳಕ್ಕೆ ಬಾರದಂತೆ ರಸ್ತೆಯಲ್ಲಿ ಗುಂಡಿ ತೆಗೆದಿದ್ದು ಯಾಕೆ? ಎಫ್‍ಐಆರ್ ದಾಖಲಿಸದೇ ಪೋಸ್ಟ್ ಮಾರ್ಟಮ್‍ಗೆ ತೆಗೆದುಕೊಂಡು ಹೋಗಿದ್ದಾರೆ, ಅಲ್ಲಿಯವರೆಗೆ ಶವ ಎಲ್ಲಿತ್ತು? ಶವವನ್ನು ಬಚ್ಚಿಟ್ಟಿದ್ದು ಯಾಕೆ? ಇಷ್ಟೆಲ್ಲಾ ಆದರೂ ಪೊಲೀಸರು ಮಾಲೀಕರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ಯಾಕೆ? ಇವೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇನ್ನೂ ಪೋಸ್ಟ್‍ಮಾರ್ಟಂ ರಿಪೋರ್ಟ್ ಬಹಿರಂಗಗೊಂಡಿಲ್ಲ.

ಈಗಲಾದರೂ ಇದನ್ನೊಂದು ಪ್ರತ್ಯೇಕ ಆಕಸ್ಮಿಕ ಘಟನೆ ಎಂದು ನೋಡದೇ, ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ, ಅಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ರೀತಿ, ನಿಗೂಢ ಸಾವುಗಳು ಇದರ ಕುರಿತಂತೆ ಸಮಗ್ರ ತನಿಖೆ ಹಾಗೂ ಕ್ರಮಗಳು ಆಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...