Homeಕರ್ನಾಟಕಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ನಿಗೂಢ ಸಾವುಗಳು

ಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ನಿಗೂಢ ಸಾವುಗಳು

- Advertisement -
- Advertisement -

| ಸೋಮಶೇಖರ್ ಚಲ್ಯ |

ಸಕ್ಕರೆ ನಾಡು ಎನ್ನುವ ಹೆಗ್ಗಳಿಕೆ ಇರುವ ಮಂಡ್ಯ ಈಗೀಗ ಗುರುತಿಸಿಕೊಳ್ಳುತ್ತಿರುವುದು ಹಲವು ಕುಖ್ಯಾತ ಕಾರಣಗಳಿಂದ. ರೈತರ ಆತ್ಮಹತ್ಯೆ, ಹೆಣ್ಣು ಭ್ರೂಣ ಹತ್ಯೆ, ಮರ್ಯಾದಾ ಹತ್ಯೆ, ಜಾತಿಯಾಧಾರಿತ ದೌರ್ಜನ್ಯಗಳ ಕುಖ್ಯಾತಿಯ ಪಟ್ಟಿಯಲ್ಲಿ ಮಂಡ್ಯ ಮೊದಲ ಶ್ರೇಣಿಯಲ್ಲಿರುವುದು ಮಂಡ್ಯದ ಘನತೆಯನ್ನು ಕುಂದಿಸುತ್ತಿದೆ.

ಈ ಪಟ್ಟಿಗೆ ಇನ್ನೊಂದು ಸೇರ್ಪಡೆ, ಕಲ್ಲಿನ ಕ್ವಾರೆಗಳಲ್ಲಿ ನಿಗೂಢ ಸಾವುಗಳು. ಕೆಆರ್‍ಎಸ್ ಸುತ್ತಮುತ್ತಲಿನ ಶ್ರೀರಂಗಪಟ್ಟಣ, ಬೇಬಿ ಬೆಟ್ಟ ಮುಂತಾದ ಹಲವಾರು ಪ್ರದೇಶಗಳಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ರಾಜಕೀಯ ಬಲ ಹಾಗೂ ತೋಳ್ಬಲಗಳಿಂದ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಇದರಿಂದಾಗಿ ಆ ಪ್ರದೇಶಗಳು ಬಳ್ಳಾರಿಯಂತಹ ಮೈನಿಂಗ್ ತಾಣಗಳಂತೆ ಕಾಣುತ್ತಿದ್ದು, ಮಂಡ್ಯದ ಮತ್ತೊಂದು ಮುಖವನ್ನು ತೆರೆದಿಟ್ಟಿದೆ. ಈ ಗಣಿಗಾರಿಕೆಗಳಿಂದಾಗಿ ಕೆಆರ್‍ಎಸ್ ಅಣೆಕಟ್ಟೆಗೂ ಅಪಾಯ ಬಂದಿದೆಯೆಂದು, ಅದರ ಉಳಿವಿಗಾಗಿ ಮೈನಿಂಗ್ ವಿರುದ್ಧ ಹೋರಾಟಗಳು ನಡೆಯುತ್ತಲೇ ಇವೆ.

ಇದೆಲ್ಲದರ ನಡುವೆ ಕ್ವಾರೆಗಳಲ್ಲಿ ಕೂಲಿ ಕೆಲಸ ಮಾಡುವ ಜನರ ಸಾವುಗಳು ಸರಣಿ ರೀತಿಯಲ್ಲಿ ನಡೆಯುತ್ತಲೇ ಇವೆ. ಆದರೆ ಈ ಸಾವುಗಳಿಗೆ ಕಾರಣವನ್ನು ಕಂಡುಕೊಳ್ಳುವಲ್ಲಿ ಜಿಲ್ಲಾಡಳಿತ ಸೋತಿರುವುದು ಸ್ಥಳೀಯ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಜೂನ್ 20ರ ರಾತ್ರಿ ಮತ್ತೊಬ್ಬ ಕೂಲಿ ಕಾರ್ಮಿಕ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಚೆನ್ನಕೆರೆ ಗ್ರಾಮದ ಕ್ವಾರೆಯಲ್ಲಿ ರಾತ್ರಿ 11 ಗಂಟೆಯ ವೇಳೆಗೆ ಕಂಪ್ರೆಸರ್ ಮೂಲಕ ಕುಳಿ ತೋಡಲು ಹೋಗಿದ್ದ ಕಾರ್ಮಿಕ ರಾಜು ಸಾವನ್ನಪ್ಪಿದ್ದಾನೆ. ಹಿಂದೆ ಒಂದು ಸಾರಿ ಕಲ್ಲನ್ನು ಸಿಡಿಸಲು ತೆಗೆದಿದ್ದ ಹಳೇ ಕುಳಿಯಲ್ಲಿ ಸಿಡಿಮದ್ದು ತುಂಬಿಯೂ ಅದು ಸಿಡಿದಿರಲಿಲ್ಲ. ಈಗ ಅದೇ ಸಿಡಿಮದ್ದು ತುಂಬಿದ್ದ ಕುಳಿಯಲ್ಲಿ ಮತ್ತೆ ಕುಳಿ ತೆಗೆದು ಸಿಡಿಸಲು ಹೋಗಿದ್ದಾರೆ. ಮೊದಲೇ ತುಂಬಿದ್ದ ಸಿಡಿಮದ್ದು ಕುಳಿ ಹಾಕುತ್ತಿದ್ದಂತೆಯೇ ಸಿಡಿದು ಹೋಗಿದೆ. ಇದರಿಂದ ರಾಜು ಸಾವನ್ನಪ್ಪಿದ್ದಾನೆ, ಆತನ ಸಂಬಂಧಿ ಮುನಿಯಪ್ಪನಿಗೆ ಕೈ ಮುರಿದಿದೆ. ಆದರೆ, ಕ್ವಾರೆಯ ಮಾಲೀಕರಾದ ಮೀನಾಕ್ಷಿ, ನಂಜೇಗೌಡ ಮತ್ತು ಸಂತೋಷ್ ಕಂಪ್ರೇಸರ್ ಟ್ರ್ಯಾಕ್ಟರ್ ಮಗುಚಿ ಆತ ಸಾವಿನ್ನಪ್ಪಿದ್ದಾನೆ ಎಂದು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಪ್ರೊ.ಹುಲ್ಕೆರೆ ಮಹದೇವ ಆರೋಪಿಸಿದ್ದಾರೆ.

ಇಂತಹ ಘಟನೆಗಳು ಮಂಡ್ಯ ಜಿಲ್ಲೆಯ ಕ್ವಾರೆಗಳಲ್ಲಿ ಮೊದಲೇನಲ್ಲ. ರಾಜ್ಯದ ಹಲವಾರು ಹಳ್ಳಿಗಳಿಂದ ಬಡಜನರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಇಂತಹ ಉದ್ಯೋಗಗಳನ್ನು ಅರಸಿ ಬರುತ್ತಾರೆ. ಅಂತಹ ಜನರಿಗೆ ಒಂದಷ್ಟು ಮೊತ್ತದ ದುಡ್ಡು ಕೊಟ್ಟು ಇಂತಿಷ್ಟು ವರ್ಷಗಳಿಗೆ ಎಂದು ಜೀತದ ರೀತಿಯಲ್ಲಿ ದುಡಿಸಿಕೊಳ್ಳುವುದು ಕ್ವಾರೆಗಳಲ್ಲಿ ಇನ್ನು ತಪ್ಪಿಲ್ಲ. ದಾರುಣ ಬಡತನದಲ್ಲಿರುವ ಜನ ಈಗಲೂ ಜೀತದಾಳುಗಳಾಗಿ ಬಂದು ದುಡಿಯುತ್ತಿದ್ದಾರೆ.

ಇದೇ ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿಯ ಪ್ರಕರಣಗಳು ಎಲ್ಲರಿಗೂ ನೆನಪಿದ್ದೇ ಇರುತ್ತದೆ. 18 ವರ್ಷಗಳ ಹಿಂದೆ, ಹಂಗರಹಳ್ಳಿಯಲ್ಲಿ ಕಾಲಿಗೆ ಕೋಳ ತೊಡಿಸಿ ಕಾರ್ಮಿಕರು ಎಲ್ಲೂ ಹೋಗದಂತೆ ಒಂದೇ ಕಡೆ ಕಟ್ಟಿ ದುಡಿಸಲಾಗುತ್ತಿತ್ತು. ರೈತಸಂಘವು ಅದನ್ನು ಬಯಲಿಗೆ ತಂದನಂತರ ದೇಶಾದ್ಯಂತ ಸುದ್ದಿ ಆಗಿತ್ತು. ನಂತರದಲ್ಲಿ ಆ ಸಂತ್ರಸ್ತರನ್ನೇ ಹೆದರಿಸಿ, ತಮಗೆ ಸಿನೆಮಾ ಶೂಟಿಂಗ್ ಕಾರಣಕ್ಕೆ ಕೋಳ ತೊಡಿಸಲಾಗಿತ್ತೆಂದು ಸಾಕ್ಷಿ ನುಡಿಸಿದ್ದರು. ಅಂತಿಮವಾಗಿ ಕೇಸು ಬಿದ್ದುಹೋಗಿತ್ತು. ಇಷ್ಟಾದ ನಂತರ ಇದೇ ಹಂಗರಹಳ್ಳಿಯಲ್ಲಿ 2018ರ ಅಕ್ಟೋಬರ್‍ನಲ್ಲಿಯೂ ತನ್ನ ದುಡಿಮೆಯ ಲೆಕ್ಕ ಕೇಳಿದ ಕರಿಯಪ್ಪ ಮಾದರ್ ಎಂಬ ಜೀತಗಾರನನ್ನು ಕೊಂದು ನೇಣುಹಾಕಲಾಗಿತ್ತೆಂದು ಹೇಳಲು ಹಲವು ಸಾಂದರ್ಭಿಕ ಸಾಕ್ಷ್ಯಗಳಿದ್ದವು. ಆಗಲೂ ಪ್ರಕರಣ ಮುಚ್ಚಿಹೋಗದಂತೆ ಸ್ಥಳೀಯ ಹೋರಾಟಗಾರರು ಅದನ್ನು ಬೆಳಕಿಗೆ ತಂದಿದ್ದರು. ಅದೇ ಸಮಯದಲ್ಲಿ ಮದ್ದೂರಿನ ಕುದುರುಗುಂಡಿಯಲ್ಲಿ ದಲಿತ ಮಹಿಳೆಯೊಬ್ಬರನ್ನು ಜೀತಕ್ಕಿರಿಸಿಕೊಂಡು ದುಡಿಸಲಾಗುತ್ತಿತ್ತು. ಆಕೆ ಜೀತವನ್ನು ನಿರಾಕರಿಸಿ ಹೊರಹೋಗಿದ್ದರಿಂದ, ಆಕೆಯನ್ನು ಬಲವಂತವಾಗಿ ಎಳೆದೊಯ್ದಿದ್ದ ಪ್ರಕರಣವೂ ಬೆಳಕಿಗೆ ಬಂದಿತ್ತು. ಈ ಅಮಾನವೀಯ ಕೃತ್ಯಗಳ ಬಗ್ಗೆ ಪತ್ರಿಕೆಯಲ್ಲಿ ವರದಿಯನ್ನೂ ಮಾಡಿದ್ದೆವು.

ಈಗ ನಿಗೂಢವಾಗಿ ಸಾವನ್ನಪ್ಪಿರುವ ರಾಜು ಕೂಡ ಕೊಳ್ಳೆಗಾಲ ತಾಲ್ಲೂಕಿನ ವಡ್ಡಲದೊಡ್ಡಿ ಗ್ರಾಮದಿಂದ ತನ್ನ ಸಂಬಂಧಿ ಮುನಿಯಪ್ಪನ ಜೊತೆ ಬಂದು ಚೆನ್ನಕೆರೆ ಕ್ವಾರೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು. ರಾತ್ರಿಯ ವೇಳೆಯಲ್ಲಿ ಸಿಡಿಮದ್ದುಗಳನ್ನು ಸಿಡಿಸುವುದರಿಂದ ರಾಜು ಮತ್ತು ಮುನಿಯಪ್ಪ ಕ್ವಾರೆಯಲ್ಲಿ ಕುಳಿ ತೆಗೆಯಲು ಬಂದಿದ್ದಾಗ ಈ ಘಟನೆ ನಡೆದಿದೆ. ಆದರೆ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಆತನ ಶವವನ್ನು ಪೊಲೀಸ್ ಮಹಜರ್ ಮಾಡುವುದಕ್ಕೂ ಮೊದಲೇ ಯಾರಿಗೂ ತಿಳಿಯದಂತೆ ಜಲ್ಲಿ ಕ್ರಷರ್‍ನಲ್ಲಿ ಅಡಗಿಸಿಟ್ಟಿದ್ದಾರೆ. ಕ್ರಷರ್ ಬಳಿಗೆ ಯಾರೂ ಬಾರದಂತೆ ರಸ್ತೆಯಲ್ಲಿ ಗುಂಡಿ ತೋಡಿದ್ದಾರೆ. ಬೆಳಗ್ಗೆಯ ವೇಳೆಗೆ ಆತನ ಕುಟುಂಬಕ್ಕೆ 4.5 ಲಕ್ಷದಷ್ಟು ಹಣ ಕೊಟ್ಟು ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ. ಆ ಸಮಯಕ್ಕೆ ಘಟನೆಯ ವಿಷಯ ಅಕ್ಕ-ಪಕ್ಕದವರಿಗೆ ಗೊತ್ತಾಗಿದ್ದು ಪ್ರಕರಣ ಬೆಳಕಿಗೆ ಬಂದಿದೆ.
ಜೂನ್ 21ರಂದು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮತ್ತಿತರ ಹಿರಿಯ ಹೋರಾಟಗಾರರಿಗೆ ವಿಷಯ ತಿಳಿದಿದೆ. ಶ್ರೀರಂಗಪಟ್ಟಣ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ, ತಹಶೀಲ್ದಾರರನ್ನು ವಿಚಾರಿಸಿದ್ದಾರೆ. ತಹಶೀಲ್ದಾರ್ ಆ ವಿಷಯ ತಮಗೆ ತಿಳಿದೇ ಇಲ್ಲವೆಂದು ನಾನಾ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅರಕೆರೆ ಪೊಲೀಸರೂ ತಮಗೂ ವಿಷಯ ತಿಳಿದಿಲ್ಲವೆಂದು ಹೇಳಿದ್ದಾರೆ. ಆದರೆ ಇಂಥದೊಂದು ಘಟನೆ ನಡೆದಿದೆ, ಮಾಲೀಕರಿಗೆ ಶಿಕ್ಷೆಯಾಗಬೇಕು ಎಂದು ಹೋರಾಟಗಾರರು ಹೇಳುವಾಗ, ಆ ಮಾಲೀಕ ದಲಿತ ಜಾತಿಗೆ ಸೇರಿದವರು ಏನ್ ಮಾಡ್ತಿರಾ ಎಂದು ಅರಕೆರೆ ಪೊಲೀಸ್ ಠಾಣೆಯ ಎಸ್‍ಐ ಹೇಳಿದ್ದಾರೆ. ಇದು ಪೊಲೀಸರು ಕ್ವಾರೆಯ ಮಾಲೀಕರೊಂದಿಗೆ ಸೇರಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ ಎಂಬುದು ಅವರ ಆರೋಪ. ಮೊದಲೇ ಈ ವಿಚಾರ ಗೊತ್ತಿದ್ದರೂ ಗೊತ್ತಿಲ್ಲವೆಂಬಂತೆ ನಟಿಸಿರುವುದು ಹಸಿಹಸಿಯಾಗಿ ಬಯಲಾದ ನಂತರ ಅವರು ತಬ್ಬಿಬ್ಬಾದರು ಮತ್ತು ಆಗ ಪೊಲೀಸರು ಮತ್ತು ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡೆವೆಂದು ಹೇಳಿದ್ದಾರೆ.

ನಂತರ ಸಂಜೆ 4.30ರ ವೇಳೆಗೆ ಮೈಸೂರಿನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಶವವನ್ನು ತಂದಿದ್ದಾರೆ. ಅಲ್ಲಿಯವರೆಗೂ ಶವ ಎಲ್ಲಿತ್ತು ಎಂಬ ಸುಳಿವೇ ಸಿಕ್ಕಿಲ್ಲ, ಮಹಜರ್ ಸಹಾ ಮಾಡಲಾಗಿಲ್ಲ. ಆಸ್ಪತ್ರೆಯಲ್ಲಿ ಎಫ್‍ಐಆರ್ ಆಗದೆ ಪೋಸ್ಟ್‍ಮಾರ್ಟಂ ಮಾಡುವುದಿಲ್ಲ ಎಂದು ಹೇಳಿದ ಮೇಲೆ ಅಪಘಾತ ಸಾವು ಎಂದು ಎಫ್‍ಐಆರ್ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಂಪ್ರೆಸರ್ ಟ್ರ್ಯಾಕ್ಟರ್ ಮೇಲಿತ್ತು, ನಾವು ಹೋಗುವ ಸಮಯದಲ್ಲಿ ಅದು ಉರುಳಿಬಿತ್ತು ಎಂದು ಮುನಿಯಪ್ಪ ಹೇಳಿಕೆ ನೀಡಿದ್ದಾನೆ. ಆದರೆ ಈ ಹೇಳಿಕೆಯು ಮಾಲೀಕರ ಮೇಲಿನ ಭಯದಿಂದ ಬಂದಿದೆ ಎಂದು ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮಹಜರು ಮಾಡದೆ ಮತ್ತು ಎಫ್‍ಐಆರ್ ಹಾಕದೆ ಶವವನ್ನು ಮರಣೋತ್ತರ ಪರೀಕ್ಷೆಗೆ ತಂದಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಹಜರ್ ಮಾಡದೇ ಶವವನ್ನ ತೆಗೆದಿದ್ದು ಯಾಕೆ? ಯಾರು ಆ ಸ್ಥಳಕ್ಕೆ ಬಾರದಂತೆ ರಸ್ತೆಯಲ್ಲಿ ಗುಂಡಿ ತೆಗೆದಿದ್ದು ಯಾಕೆ? ಎಫ್‍ಐಆರ್ ದಾಖಲಿಸದೇ ಪೋಸ್ಟ್ ಮಾರ್ಟಮ್‍ಗೆ ತೆಗೆದುಕೊಂಡು ಹೋಗಿದ್ದಾರೆ, ಅಲ್ಲಿಯವರೆಗೆ ಶವ ಎಲ್ಲಿತ್ತು? ಶವವನ್ನು ಬಚ್ಚಿಟ್ಟಿದ್ದು ಯಾಕೆ? ಇಷ್ಟೆಲ್ಲಾ ಆದರೂ ಪೊಲೀಸರು ಮಾಲೀಕರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ಯಾಕೆ? ಇವೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇನ್ನೂ ಪೋಸ್ಟ್‍ಮಾರ್ಟಂ ರಿಪೋರ್ಟ್ ಬಹಿರಂಗಗೊಂಡಿಲ್ಲ.

ಈಗಲಾದರೂ ಇದನ್ನೊಂದು ಪ್ರತ್ಯೇಕ ಆಕಸ್ಮಿಕ ಘಟನೆ ಎಂದು ನೋಡದೇ, ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ, ಅಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ರೀತಿ, ನಿಗೂಢ ಸಾವುಗಳು ಇದರ ಕುರಿತಂತೆ ಸಮಗ್ರ ತನಿಖೆ ಹಾಗೂ ಕ್ರಮಗಳು ಆಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...