ವಿಶೇಷ ಸ್ಥಾನಮಾನ ರದ್ಧತಿಯ ಬಳಿಕ ತನ್ನ ಮೊದಲ ವಿಧಾನಸಭೆ ಚುನಾವಣೆಯನ್ನು ನೋಡುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟವು ಮುಂದಿನ ಸರ್ಕಾರವನ್ನು ರಚಿಸಲು ಸಿದ್ಧವಾಗಿದೆ. ಆದರೆ, ಗೆಲುವಿನ ಪ್ರಮಾಣವು ಸಣ್ಣ ಪಕ್ಷಗಳನ್ನು ಮೀರಿಸಿದೆ.
ಈ ವರ್ಷದ ಚುನಾವಣೆಯಲ್ಲಿ ಜಮಾತ್-ಎ-ಇಸ್ಲಾಮಿ ಚುನಾವಣಾ ಪ್ರಕ್ರಿಯೆಯಲ್ಲಿ ದಶಕಗಳ ನಂತರ ಮರುಪ್ರವೇಶವನ್ನು ಕಂಡಿತು. ಈ ಚುನಾವಣೆಯಲ್ಲಿ ಅದರ ಅಭ್ಯರ್ಥಿಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣುಗಳಿದ್ದವು. ಲೋಕಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ ಇಂಜಿನಿಯರ್ ರಶೀದ್ ಅವರ ಅವಾಮಿ ಇತ್ತೆಹಾದ್ ಪಕ್ಷವು ಜಮಾತ್ನೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಕುತೂಹಲ ಮತ್ತಷ್ಟು ಹೆಚ್ಚಾಯಿತು.
ನಾಮಪತ್ರ ಸಲ್ಲಿಕೆ ವೇಳೆ ಜಮಾತ್ ಬೆಂಬಲಿತ 10 ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರು. ಆದರೆ, ಕೆಲವರು ಕಣದಿಂದ ಹಿಂದೆ ಸರಿದಿದ್ದರು. ಎಲ್ಲ ಜಮಾತ್ ಬೆಂಬಲಿತ ಅಭ್ಯರ್ಥಿಗಳು ತಮ್ಮತಮ್ಮ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ ಎಂದು ಫಲಿತಾಂಶ ತೋರಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ಗೆಲುವಿನ ಹೊರತಾಗಿಯೂ, ಇಂಜಿನಿಯರ್ ರಶೀದ್ ಅವರು ವಿಧಾನಸಭೆ ಚುನಾವಣೆಯಲ್ಲಿ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ಅವರ ಪಕ್ಷದ ಬೆಂಬಲಿತ ಅಭ್ಯರ್ಥಿ, ಅವರ ಸಹೋದರ ಖುರ್ಷೀದ್ ಅಹ್ಮದ್ ಶೇಖ್ ಮುನ್ನಡೆ ಸಾಧಿಸಿದ್ದರು.
ಕಳಪೆ ಪ್ರದರ್ಶನ ಕೊಟ್ಟ ಗುಲಾಂ ನಬಿ ಆಜಾದ್ ಪಕ್ಷದ
ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ನಿಂದ ಬೇರ್ಪಟ್ಟ ನಂತರ 2022 ರಲ್ಲಿ ಸ್ಥಾಪನೆಯಾದ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಆಜಾದ್ ಪಕ್ಷವು ಸಹ ಕಳಪೆ ಪ್ರದರ್ಶನ ನೀಡಿದೆ. ಸ್ಪರ್ಧಿಸಿದ ಎಲ್ಲ ಸ್ಥಾನಗಳಲ್ಲಿ ಹಿಂದುಳಿದಿದೆ. ತನ್ನ ಚುನಾವಣಾ ಚೊಚ್ಚಲವಾದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದ ಎಲ್ಲ ಮೂರು ಕ್ಷೇತ್ರಗಳನ್ನು ಕಳೆದುಕೊಂಡ ನಂತರ ಪಕ್ಷವು ಈಗಾಗಲೇ ಅಸ್ತವ್ಯಸ್ತವಾಗಿದೆ. ಲೋಕಸಭೆ ಸೋಲಿನ ಬಳಿಕ ಅದರ ಅನೇಕ ನಾಯಕರು ಪಕ್ಷ ತ್ಯಜಿಸಿದ್ದರು.
ಈ ಎಲ್ಲ ವೈಫಲ್ಯಗಳಲ್ಲಿನ ಸಾಮಾನ್ಯ ವಿಷಯವೆಂದರೆ, ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟದ ಮತಗಳನ್ನು ತನ್ನತ್ತ ಸೆಳೆಯಲು ಬಿಜೆಪಿಯು ಈ ರಾಜಕೀಯ ಪಕ್ಷಗಳನ್ನು ಬೆಂಬಲಿಸಿದೆ ಎಂಬ ಮಾತುಗಳು ಕೇಳಿ ಬಂದಿವೆ. ಏಕೆಂದರೆ, ಇಂಜಿನಿಯರ್ ರಶೀದ್ ಅವರು ಚುನಾವಣಾ ಪ್ರಚಾರಕ್ಕಾಗಿ ಜಾಮೀನು ಪಡೆದಾಗ ಈ ಗಾಳಿಸುದ್ದಿಯ ಗ್ರಹಿಕೆಯನ್ನು ಮತ್ತಷ್ಟು ಬಲಪಡಿಸಿತು.
ಕೇವಲ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಮೆಹಬೂಬಾ ಮುಫ್ತಿ ಅವರ ಪಿಡಿಪಿಗೆ ಬಿಜೆಪಿಯ ಆಪ್ತತೆಯ ಕುರಿತ ಊಹಾಪೋಹಗಳು ಕೂಡ ಘಾಸಿಗೊಳಿಸಿವೆ. ಮುಫ್ತಿ ಅವರ ಪುತ್ರಿ ಇಲ್ತಿಜಾ ಕೂಡ ಶ್ರೀಗುಫ್ವಾರಾ-ಬಿಜ್ಬೆಹರಾ ಕ್ಷೇತ್ರದಿಂದ ಸೋಲನ್ನು ಒಪ್ಪಿಕೊಂಡಿದ್ದಾರೆ.
2018 ರಲ್ಲಿ ಮೈತ್ರಿ ಕುಸಿಯುವವರೆಗೂ ಮೆಹಬೂಬಾ ಮುಫ್ತಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರವನ್ನು ನಡೆಸಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ಒಂದು ವರ್ಷದ ನಂತರ ತೆಗೆದುಹಾಕಲಾಯಿತು. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಪ್ರಾಂತ್ಯಗಳನ್ನಾಗಿ ರಾಜ್ಯವನ್ನು ಎರಡು ಒಕ್ಕೂಟಗಳಾಗಿ ವಿಂಗಡಿಸಲಾಯಿತು.
ಇದನ್ನೂ ಓದಿ; ‘ಜಮ್ಮು-ಕಾಶ್ಮೀರ ಮುಂದಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ..’; ಫಾರೂಕ್ ಅಬ್ದುಲ್ಲಾ ಘೋಷಣೆ


