Homeಅಂತರಾಷ್ಟ್ರೀಯExplainer: ಅಮೆರಿಕಾ ಚುನಾವಣಾ ಪದ್ದತಿ, ಅಧ್ಯಕ್ಷರ ಆಯ್ಕೆ ಮತ್ತು ಸಮಸ್ಯೆಗಳು

Explainer: ಅಮೆರಿಕಾ ಚುನಾವಣಾ ಪದ್ದತಿ, ಅಧ್ಯಕ್ಷರ ಆಯ್ಕೆ ಮತ್ತು ಸಮಸ್ಯೆಗಳು

ಯುಎಸ್‌ಎಯು ಹಳೆಯ ಕಾಲದ ನೇರ ಚುನಾವಣಾ ಪದ್ಧತಿಯನ್ನು ಪರೋಕ್ಷ ಮಾಡಿದುದು ಹೇಗೆ? ಯುಎಸ್‌ಎಯ ಪ್ರಜಾಪ್ರಭುತ್ವದ ಮಾದರಿ ಹೇಗೆ ಕೆಲಸ ಮಾಡುತ್ತದೆ? ಈ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಅದರ ಮೂಲವನ್ನು ನೆನಪಿಸಿಕೊಳ್ಳುವುದು ಅತ್ಯಂತ ಅಗತ್ಯ.

- Advertisement -
- Advertisement -

ಉತ್ತರ ಅಮೇರಿಕಾ ಖಂಡದ 13 ಮೂಲ ಬ್ರಿಟಿಷ್ ವಸಾಸತುಗಳು 1776ರಲ್ಲಿ ಬಂಡೆದ್ದು ಪ್ರತ್ಯೇಕವಾದಾಗ ಅಮೇರಿಕಾ ಸಂಯುಕ್ತ ಸಂಸ್ಥಾನದ ಆರಂಭವಾಯಿತು. ಅಮೇರಿಕಾ ಸಂಯುಕ್ತ ಸಂಸ್ಥಾನಗಳು ಎಂಬ ಹೆಸರೇ ಇವು ಪ್ರತ್ಯೇಕ ರಾಜ್ಯಗಳು ಜೊತೆ ಸೇರಿ ಒಂದು ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತವೆ ಎಂಬುದನ್ನು ಸೂಚಿಸುತ್ತದೆ. ಅಂದರೆ, ಈ ರಾಜ್ಯಗಳು ತಮ್ಮ ಸ್ವಾಯತ್ತತೆಯನ್ನು ಉಳಿಸಿಕೊಂಡಿರುತ್ತವೆ ಮತ್ತು ಹೊಸ ದೇಶದ ಪ್ರಜೆಗಳು ಅವಳಿ ಪೌರತ್ವ ಹೊದಿರುತ್ತಾರೆ. ಅವೆಂದರೆ ರಾಜ್ಯದ ಪೌರತ್ವ ಮತ್ತು ದೇಶದ ಪೌರತ್ವ.

ಆ ಹೊಸ ದೇಶದ ಮೂಲಾಧಾರ ಎಂದರೆ ಹಲವಾರು ಸೈದ್ಧಾಂತಿಕ ಮತ್ತು ಆರ್ಥಿಕ ವಿಷಯಗಳ ಒಂದು ಕಲಸುಮೇಲೋಗರ ಸಮಾಗಮವಾಗಿತ್ತು. ಕ್ವೇಕರ್ಸ್‌ನಂತಹ (ಬ್ಯಾಪ್ಟಿಸ್ಟ್‌ಗಳಂತೆ ಒಂದು ಧಾರ್ಮಿಕ ಗುಂಪು) ಸಮುದಾಯಗಳು ಹೊಸ ನೆಲದಲ್ಲಿ ತಮ್ಮ ಹೊಸ ಅಸ್ತಿತ್ವವನ್ನು ಕಂಡುಕೊಳ್ಳಲು ಬಯಸಿದ್ದವು. ಕೆಲವು ಸಂದರ್ಭಗಳಲ್ಲಿ ಅವು ಗುಲಾಮಿ ಪದ್ಧತಿಯನ್ನು ಅನುಸರಿಸುತ್ತಿದ್ದವು. ಈ ವಸಾಹತುಗಳು ಆರ್ಥಿಕವಾಗಿ ಬ್ರಿಟನ್‌ನಿಂದ ಸ್ವತಂತ್ರಗೊಂಡು ಅವುಗಳಿಗೆ ಅದರ ರಾಜಕೀಯ ಅಥವಾ ಮಿಲಿಟರಿ ಅಸ್ತಿತ್ವ ಬೇಕಾಗಿರಲಿಲ್ಲ.

ಕೆಲವರು ಅಮೇರಿಕಾದ ಮೂಲನಿವಾಸಿಗಳ (ಇಂಡಿಯನ್ಸ್) ಸಮುದಾಯಗಳ ಜೊತೆ ಬ್ರಿಟಿಷ್ ಸಾಮ್ರಾಜ್ಯವು ಮಾಡಿಕೊಂಡಿದ್ದ ಒಪ್ಪಂದಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಪಶ್ಚಿಮದ ಭಾಗಗಳನ್ನು ವಶಪಡಿಸಿಕೊಳ್ಳಲು ಬಯಸಿದ್ದವು. ಇದರ ಜೊತೆಗೇ ಕೆಲವು ವಸಾಹತುಗಳು ಉದಾತ್ತವಾದ ಉದಾರವಾದಿ ಚಿಂತನೆಗಳನ್ನು ಸಾಂಪ್ರದಾಯಿಕವಾದ ಶ್ರೀಮಂತ ಸಮುದಾಯ ಇಲ್ಲದೇ ಇದ್ದಂತಹ ಒಂದು ಹೊಸ ದೇಶದಲ್ಲಿ ಪರೀಕ್ಷೆಗೆ ಒಡ್ಡಲು ಬಯಸಿದ್ದವು.

ಈ ರೀತಿಯಾಗಿ ಬೇರೆಬೇರೆ ಹಿತಾಸಕ್ತಿಗಳು ಮತ್ತು ಚಿಂತನೆಗಳಿದ್ದ ಬೇರೆಬೇರೆ ವಸಾಹತುಗಳು ಜೊತೆಗೆ ಬಂದಾಗ ಬೇರೆಬೇರೆ ರೀತಿಯ ಆಡಳಿತ ಪದ್ಧತಿಗಳು ಜೊತೆಗೆ ಸೇರುವುದು ಅನಿವಾರ್ಯವಾಯಿತು. ಇವುಗಳ ಏಕತೆ ಅಥವಾ ಒಗ್ಗಟ್ಟು ಬಹಳ ಸೂಕ್ಷ್ಮವಾಗಿತ್ತು. ಆದುದರಿಂದ ಹಲವಾರು ರಾಜಿ ಮತ್ತು ಹೊಂದಾಣಿಕೆಗಳನ್ನು ಮಾಡಲಾಯಿತು. ಸ್ಥಳೀಯವಾಗಿ ವಸಾಹತುಗಳ ರಾಜಕೀಯ ವ್ಯವಸ್ಥೆಗಳು ಉಳಿದುಕೊಳ್ಳುತ್ತವೆ. ಇದು ಸ್ಥಳೀಯ ಇರೋಕಿಗಳಂತಹ ಮೂಲನಿವಾಸಿ ಸಮುದಾಯಗಳು ಸಾಂಪ್ರದಾಯಿಕವಾಗಿ ಅಭಿವೃದ್ಧಿಪಡಿಸಿದ್ದ ಆಡಳಿತ ಪದ್ಧತಿಗಳಿಂದ ಕಲಿತುಕೊಂಡದ್ದು ಮತ್ತು ಆ ಕಾಲದ ಐರೋಪ್ಯ ರಾಜಕೀಯ ವ್ಯವಸ್ಥೆಗಳ ಮಿಶ್ರಣವಾಗಿತ್ತು.

ಈ ವಸಾಹತುಗಳು ಹೊಸ ದೇಶವನ್ನು ಸೇರುವ ಮೊದಲು ಪ್ರತಿಯೊಂದು ವಸಾಹತಿಗೆ ಸ್ವಾಯತ್ತತೆ ಬೇಕೆಂದು ಒತ್ತಾಯಿಸಿದ್ದವು. ಈ ರಾಜ್ಯಗಳು ಕೇಂದ್ರ ಸರಕಾರವೊಂದರ ಅಡಿಯಲ್ಲಿ ಏಕೀಕೃತ (ಸಂಯುಕ್ತ)ವಾಗುವುದೆಂದು ನಿರ್ಧಾರವಾಯಿತು. ರಾಜಧಾನಿ ವಾಷಿಂಗ್ಟನ್ ಡಿ.ಸಿ. ಆ ಕಾಲದಲ್ಲಿ ದೇಶದ ಮಧ್ಯ ಭಾಗದಲ್ಲಿ ಇದ್ದು, ಅದು ಯಾವುದೇ ರಾಜ್ಯದ ಭಾಗವಾಗಿರಲಿಲ್ಲ. ಕಾರಣವೆಂದರೆ ಅದು ಎಲ್ಲಾ ರಾಜ್ಯಗಳ ಕುರಿತು ಆಲಿಪ್ತ ಅಥವಾ ನಿರ್ಲಿಪ್ತವಾಗಿರಬೇಕು ಎಂಬ ಚಿಂತನೆಯಾಗಿತ್ತು. ಕೇಂದ್ರ ಸರಕಾರವು ಮೂರು ಸ್ವತಂತ್ರವಾದ ವಿಭಾಗಗಳನ್ನು ಹೊಂದಿತ್ತು. ಅವೆಂದರೆ, ಬ್ರಿಟಿಷ್ ಪದ್ಧತಿಯಂತೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ. ಈ ವಸಾಹತುಗಳಿಗೆ ಯಾವುದೇ ರಾಜ ಇಲ್ಲದಿದ್ದುದರಿಂದ ಕಾರ್ಯಾಂಗವು ಶಾಸಕಾಂಗದ ನಿರ್ಧಾರದಂತೆ ಕಾರ್ಯ ನಿರ್ವಹಿಸಬೇಕಾಗಿತ್ತು.

ಯುಎಸ್‌ಎಯ ಶಾಸಕಾಂಗ

ಯುಎಸ್‌ಎಯ ಶಾಸಕಾಂಗವು ಎರಡು ಭಾಗಗಳಿಂದ ಕೂಡಿದೆ. ಅದೆಂದರೆ, ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್ ಅಥವಾ ಭಾರತೀಯ ಸಂಸತ್ತಿನ ರಾಜ್ಯಸಭೆಯ ರೀತಿಯಲ್ಲಿ ಇರುವ ಸೆನೆಟ್. ಪ್ರತೀ ರಾಜ್ಯಕ್ಕೆ ಎರಡರಂತೆ ಸೆನೆಟರ್‌ಗಳಿದ್ದಾರೆ. ಬ್ರಿಟನ್‌ನಲ್ಲಿ ಇದ್ದಂತೆ ಶ್ರೀಮಂತ ಪಾಳೆಯಗಾರಿ ವರ್ಗ ಇಲ್ಲದಿದ್ದುದರಿಂದ ಸೆನೆಟರ್‌ಗಳ ಆಯ್ಕೆ ಜನರಿಂದಲೇ ನಡೆಯಬೇಕೆಂದಾಯಿತು.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎಂದರೆ ಜನಪ್ರತಿನಿಧಿ ಸಭೆ ಎಂಬುದು ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್ ಅಥವಾ ಭಾರತದ ಲೋಕಸಭೆಯಂತೆ ಇದೆ. ಅದು ಹೆಸರೇ ಹೇಳುವಂತೆ ಜನರ ಪ್ರತಿನಿಧಿ ಸಭೆಯಾಗಿದೆ. ಇಡೀ ದೇಶವನ್ನು ಜಿಲ್ಲೆಗಳಾಗಿ ವಿಭಜಿಸಲಾಯಿತು. ಪ್ರತಿಯೊಂದು ಜಿಲ್ಲೆಯು ಒಬ್ಬೊಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುವುದು ಎಂದು ನಿರ್ಧರಿಸಲಾಯಿತು.

ಮತದಾರ ಘಟಕ (ಇಲೆಕ್ಟೋರಲ್ ಕಾಲೇಜ್)

ಶಾಸಕಾಂಗಕ್ಕೆ ಆಯ್ಕೆ ಮಾಡುವುದರ ಜೊತೆಗೆ ಜನರು ಕಾರ್ಯಾಂಗದ ಮುಖ್ಯಸ್ಥರಾದ ಅಧ್ಯಕ್ಷರನ್ನೂ ಆಯ್ಕೆ ಮಾಡಬೇಕಾಗುತ್ತದೆ. ಇದನ್ನು ಮುಖ್ಯವಾಗಿ ಗುಲಾಮಿ ಪದ್ಧತಿಗೆ ಅವಕಾಶ ನೀಡಿದ್ದ ಹಲವಾರು ರಾಜ್ಯಗಳು ವಿರೋಧಿಸಿದ್ದವು. ಏಕೆಂದರೆ, ತಮ್ಮ ರಾಜ್ಯದ ಜನಸಂಖ್ಯೆ ಕಡಿಮೆಯಾದಲ್ಲಿ ತಮ್ಮ ರಾಜ್ಯದ ಪ್ರಭಾವ ಕುಂದುತ್ತದೆ ಎಂಬ ಕಾರಣಕ್ಕಾಗಿ. ಆ ಕಾಲದಲ್ಲಿ ಜಮೀನು ಹೊಂದಿದ್ದ ಪುರುಷರಿಗೆ ಮಾತ್ರ ಮತದಾನದ ಅವಕಾಶವಿತ್ತು. ಹೆಚ್ಚು ಕೃಷಿ ಪ್ರಧಾನವಾದ ರಾಜ್ಯಗಳಲ್ಲಿ ಮತದಾನ ಮಾಡಹುದಾದ ಜನರ ಸಾಂದ್ರತೆ ಸಹಜವಾಗಿಯೇ ಕಡಿಮೆಯಾಗಿತ್ತು. ಇದು ಗುಲಾಮರಿಂದ ಕೆಲಸ ಮಾಡಿಸುತ್ತಿದ್ದ ಭಾರಿ ಪ್ರಮಾಣದ ಜಮೀನು ಹೊಂದಿದ್ದ ಭೂಮಾಲಕರ ಆತಂಕವಾಗಿತ್ತು. ಆದುದರಿಂದ ಈ ಆತಂಕ ದೂರ ಮಾಡಲು ಯುಎಸ್‌ಎಯು ಮತದಾನ ಘಟಕದ ವ್ಯವಸ್ಥೆ ಮಾಡಿತು.

ಕೆಲವು ವಸಾಹತುಗಳಿಗೆ ಇದ್ದ ಪ್ರಮುಖ ಆತಂಕ ಎಂದರೆ ಗುಲಾಮಿ ಪದ್ಧತಿಗೆ ಏನಾದೀತು ಎಂಬುದು. ಯುಎಸ್‌ಎಯ ನಕ್ಷೆಯನ್ನು ಗುಲಾಮಿ ಪದ್ಧತಿಗೆ ಅವಕಾಶ ನೀಡುವ ಮತ್ತು ಅದನ್ನು ರದ್ದುಗೊಳಿಸಿದ ರಾಜ್ಯಗಳ ನಡುವೆ ಸಮತೋಲನ ಇರುವಂತೆ ರಚಿಸಲಾಯಿತು. ಈ ಸಮತೋಲನವನ್ನು ಕಾಪಾಡಿಕೊಂಡು ಬರುವಂತೆ ಯುಎಸ್‌ಎಯ ಈ ರಾಜ್ಯಗಳ ಇತಿಹಾಸ ಇದೆ. ಹೆಚ್ಚಿನ ಸಲ ಒಂದು ಹೊಸ ರಾಜ್ಯ ಸೇರ್ಪಡೆಯಾದಾಗ, ಈ ಸಮತೋಲನ ಕಾಪಾಡಿಕೊಳ್ಳಲು ಹಳೆಯ ರಾಜ್ಯಗಳನ್ನು ಒಡೆಯಲಾಗಿದೆ.

ಈ ಮತದಾರ ಘಟಕ ವ್ಯವಸ್ಥೆಯಲ್ಲಿ ಪ್ರತೀ ರಾಜ್ಯಕ್ಕೆ ನಿರ್ದಿಷ್ಟ ಸಂಖ್ಯೆಯ ಮತಗಳು ಇರುತ್ತವೆ. ಮತಗಳು ಸೆನೆಟರ್‌ಗಳ ಸಂಖ್ಯೆಗೆ (ಪ್ರತೀ ರಾಜ್ಯಕ್ಕೆ ಎರಡೆರಡು) ಮತ್ತು ಜನ ಪ್ರತಿನಿಧಿಗಳ ಸಂಖ್ಯೆಗೆ (ಹೆಚ್ಚುಕಡಿಮೆ ಜನಸಂಖ್ಯೆಗೆ ಅನುಗುಣವಾಗಿ) ಅನುಗುಣವಾಗಿ ಇರುತ್ತದೆ. ಪ್ರತಿಯೊಂದು ರಾಜ್ಯದ ಒಳಗೆ ಯಾವ ಅಭ್ಯರ್ಥಿ ರಾಜ್ಯವನ್ನು ಪ್ರತಿನಿಧಿಸುತ್ತಾನೆ/ಳೆ ಎಂಬುದನ್ನು ನಾಗರಿಕರು ಬಹುಮತದ ಆಧಾರದಲ್ಲಿ ನಿರ್ಧರಿಸುತ್ತಾರೆ. ರಾಜ್ಯದ ಬೆಂಬಲವನ್ನು ರಾಜ್ಯಗಳು ಹೊಂದಿರುವ ಸ್ಥಾನಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಈ ಮತದಾರ ಘಟಕದಲ್ಲಿ ಬಹುಮತ ಹೊಂದಿರುವ ಅಧ್ಯಕ್ಷೀಯ ಅಭ್ಯರ್ಥಿ ಗೆಲ್ಲುತ್ತಾನೆ/ಳೆ‌.

ಈ ವ್ಯವಸ್ಥೆಯ ಸಮಸ್ಯೆಗಳು

ಈ ವ್ಯವಸ್ಥೆಯ ಟೀಕಾಕಾರರು ಇತಿಹಾಸವನ್ನು ಎತ್ತಿತೋರಿಸುತ್ತಾರೆ. ಅದು ಒಂದು ರಾಜಿಯಾಗಿದ್ದು, ಮೂಲ ಉದ್ದೇಶವನ್ನೇ ನುಂಗಿಹಾಕಿದೆ.

ಮೊದಲನೆಯದಾಗಿ ಅದು ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳಿಗೆ ಅನ್ಯಾಯವಾಗಿ ಹೆಚ್ಚು ಪ್ರಾತಿನಿಧ್ಯ ನೀಡುತ್ತದೆ ಮತ್ತು ಕೃಷಿ ಪ್ರಧಾನವಾದ ಪ್ರಬಲ ರಾಜ್ಯಗಳ ಶಕ್ತಿಯನ್ನು ಕುಂದಿಸುತ್ತದೆ. ಯುಎಸ್‌ಎಯಲ್ಲಿ ಕೃಷಿಕರು ಕೇವಲ 1.3ರಷ್ಟಿದ್ದರೂ ಭಾರೀ ಪ್ರಮಾಣದ ಸರಕಾರಿ ಸಬ್ಸಿಡಿಯ ಪರಿಣಾಮವಾಗಿ ತುಂಬಾ ಶ್ರೀಮಂತರಾಗಿದ್ದಾರೆ.

ಎರಡನೆಯದಾಗಿ ವ್ಯವಸ್ಥೆಯು ಅನಗತ್ಯವಾಗಿ ಪರೋಕ್ಷವಾಗಿದೆ. ಕೆಲವು ಸಲ ಬಹುಸಂಖ್ಯಾತರು ಒಬ್ಬ ಅಭ್ಯರ್ಥಿಯ ಪರವಾಗಿ ಮತ ಹಾಕಿದರೂ ಅದು ಮತದಾರರ ಘಟಕದಲ್ಲಿ ಸರಿಯಾಗಿ ಪ್ರತಿನಿಧಿಸಲ್ಪಡುವುದಿಲ್ಲ. ಹಿಲರಿ ಕ್ಲಿಂಟನ್ ವಿರುದ್ಧ ಡೊನಾಲ್ಡ್ ಟ್ರಂಪ್ ಮತ್ತು ಅಲ್ ಗೋರ್ ವಿರುದ್ಧ ಜಾರ್ಜ್ ಡಬ್ಲ್ಯೂ ಬುಷ್ ಚುನಾವಣೆಯಲ್ಲಿ ಮತದಾರ ಘಟಕಗಳು ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಬಹುಸಂಖ್ಯಾತ ಜನರು ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರು. ಬಹುಸಂಖ್ಯಾತ ಜನರು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಸೋಲಾಯಿತು.

ಮೂರನೆಯದಾಗಿ, ರಾಜ್ಯಗಳ ಹಕ್ಕುಗಳು ಹಿಂದೆ ಗುಲಾಮಿ ಪದ್ಧತಿಯನ್ನು ಉಳಿಸಿಕೊಳ್ಳುವುದಕ್ಕೆ ಪೂರಕವಾಗಿದ್ದರೆ, ಇಂದು ಬಿಳಿಯರ ಪ್ರಾಬಲ್ಯವನ್ನು ಉಳಿಸಿಕೊಳ್ಳುವುದಕ್ಕೆ ಪೂರಕವಾಗಿವೆ. ಪರಿಣಾಮವಾಗಿ ಆಫ್ರಿಕನ್ ಅಮೇರಿಕನ್ ಜನರು ಪ್ರಬಲವಾಗಿರುವ ಕಡೆಗಳಲ್ಲೂ ಅವರ ಮತಗಳು ಬಿಳಿಯರ ಪ್ರಾಬಲ್ಯವಿರುವ ಮತದಾರ ಘಟಕಗಳಿಂದ ಕಡೆಗಣಿಸಲ್ಪಟ್ಟಿರುವುದು ಕಂಡುಬಂದಿದೆ. ಇದು ಪ್ರಜಾಪ್ರಭುತ್ವವಾದಿ ಹಕ್ಕುಗಳನ್ನೇ ಕಡೆಗಣಿಸುತ್ತದೆ.

“ಸ್ವಿಂಗ್” ರಾಜ್ಯಗಳೆಂದರೇನು?

ಹೆಚ್ಚಿನ ರಾಜ್ಯಗಳಲ್ಲಿ ರಾಜಕೀಯ ಪರಿಸ್ಥಿತಿ ಹೇಗಿದೆಯೆಂದರೆ, ಯಾವ ಅಧ್ಯಕ್ಷೀಯ ಅಭ್ಯರ್ಥಿ ಗೆಲ್ಲುತ್ತಾರೆ ಎಂಬುದನ್ನು ಮೊದಲೇ ಊಹಿಸಬಹುದು. ಕೆಲವು ರಾಜ್ಯಗಳು ಯಾವತ್ತೂ ಡೆಮಾಕ್ರಾಟ್ ಅಭ್ಯರ್ಥಿಗಳನ್ನು ಬೆಂಬಲಿಸಿದರೆ, ಕೆಲವು ರಾಜ್ಯಗಳು ಯಾವತ್ತೂ ರಿಪಬ್ಲಿಕನ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತವೆ. ಅವುಗಳಲ್ಲಿ ಚುನಾವಣಾ ಪ್ರಚಾರ ಮಾಡುವುದೇ ಅಪ್ರಸ್ತುತವಾಗುತ್ತದೆ. ಫಲಿತಾಂಶ ಅನಿರ್ಧಾರಿತವಾಗಿರುವ ಕೆಲವೇ ಕೆಲವು ರಾಜ್ಯಗಳು ಮಾತ್ರ ಹೋರಾಟದ ಕಣಗಳಾಗಿ ಪರಿಣಮಿಸುತ್ತವೆ. ಇವುಗಳನ್ನೇ ಫಲಿತಾಂಶ ಏರುಪೇರು ಮಾಡಬಲ್ಲ “ಸ್ವಿಂಗ್” ರಾಜ್ಯಗಳೆಂದು ಪರಿಗಣಿಸಲಾಗುತ್ತದೆ.

ಇಂದು ಬಹುತೇಕ ಅಮೇರಿಕನ್ ಜನರು ಮತದಾರರ ಘಟಕ ವ್ಯವಸ್ಥೆಯನ್ನು ವಿರೋಧಿಸುತ್ತಾರೆ. ಏಕೆಂದರೆ ಅದು ಬಹುತೇಕ ಜನರ ಮತಶಕ್ತಿಯನ್ನು ಕುಂದಿಸುತ್ತದೆ. 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಹೆಚ್ಚು ಮತಗಳನ್ನು ಗಳಿಸಿಯೂ, ಡೊನಾಲ್ಡ್ ಟ್ರಂಪ್ ಗೆದ್ದ ಬಳಿಕವಂತೂ ಈ ಓಬಿರಾಯನ ಕಾಲದ ವ್ಯವಸ್ಥೆಯ ಬಗ್ಗೆ ವಿರೋಧ ಗಣನೀಯವಾಗಿ ಹೆಚ್ಚಿದೆ.

  • ಕಿಶೋರ್ ಗೋವಿಂದ, ಬೆಂಗಳೂರು  ಅಮೆರಿಕಾದಲ್ಲಿ ಹುಟ್ಟಿ, ಬೆಳೆದು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರು)

ಅನುವಾದ: ನಿಖಿಲ್ ಕೋಲ್ಪೆ


Also Read: The Electoral College: How America made its direct election indirect

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...