‘ಮಾದಕ ವಸ್ತು’ ಯಾವುದೋ ವಿದೇಶಿ ವಿಷಯ ಎನ್ನುವ ಕಾಲವೊಂದಿತ್ತು. ಆದರೆ, ಈಗ ಭಾರತದ ಮಟ್ಟಿಗೆ ಮಾದಕ ವಸ್ತು ದೊಡ್ಡ ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ. ನಮ್ಮ ಊರುಗಳ ಗಲ್ಲಿ ಗಲ್ಲಿಗೂ ಮಾದಕ ವಸ್ತುಗಳು ಕಾಲಿಟ್ಟಿದೆ. ಯುವಜನರು ಅವುಗಳಿಗೆ ದಾಸರಾಗಿ ಜೀವನ, ಜೀವ ಕಳೆದುಕೊಳ್ಳುತ್ತಿದ್ದಾರೆ.
ಕೇರಳದಲ್ಲಿ ಮಾದಕ ವಸ್ತುಗಳು ಮಕ್ಕಳ ಪೋಷಕರಿಂದ ಹಿಡಿದು ಸರ್ಕಾರದವರೆಗೆ ಎಲ್ಲರಿಗೂ ದೊಡ್ಡ ತಲೆನೋವಾಗಿ ಮಾರ್ಪಟ್ಟಿದೆ. ಯುವಜನರು ಮಾದಕ ವಸ್ತುಗಳಿಗೆ ದಾಸರಾಗಿ ಹೆತ್ತ ತಂದೆ-ತಾಯಿಯನ್ನು ಕೊಲೆ ಮಾಡುವಂತಹ ಪ್ರಕರಣಗಳು ವರದಿಯಾಗುತ್ತಿವೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಣ್ಣೂರು ಜಿಲ್ಲೆಯ ಮಾಟೂಲ್ ಗ್ರಾಮ ಪಂಚಾಯತ್ನ ಅಧ್ಯಕ್ಷೆ ಫರೀಷಾ ಆಬಿದ್ ಅವರು ಪ್ರಾರಂಭಿಸಿದ ಕಾರ್ಯಕ್ರಮವೊಂದು ದೊಡ್ಡ ಅಭಿಯಾನವಾಗಿ ಮಾರ್ಪಟ್ಟಿದೆ. ಎಲ್ಲಾ ವರ್ಗದ ಜನ ಸಮೂಹ ಫರೀಷಾ ಅವರ ಬೆನ್ನಿಗೆ ನಿಂತಿದ್ದಾರೆ.
View this post on Instagram
ಈ ಹಿಂದೆ ಶಿಕ್ಷಕಿಯಾಗಿದ್ದ ಈಗ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಫರೀಷಾ ಆಬಿದ್ ಅವರು, ಕಳೆದ ಎರಡು ತಿಂಗಳ ಹಿಂದೆ ಮಾದಕ ವಸ್ತುಗಳ ವಿರುದ್ದ ‘ಧೀರ’ ಎಂಬ ಹೆಸರಿನ ಕಾರ್ಯಕ್ರಮ ಆರಂಭಿಸಿದ್ದಾರೆ. ಆರಂಭದಲ್ಲಿ ಕೆಲ ಯುವಕರನ್ನು ಸೇರಿಸಿ ವಾಟ್ಸಾಪ್ ಗ್ರೂಪ್ ಮೂಲಕ ಆರಂಭವಾದ ಈ ಕಾರ್ಯಕ್ರಮ ಈಗ ದೊಡ್ಡ ಅಭಿಯಾನವಾಗಿ ಮಾರ್ಪಟ್ಟಿದೆ. ಜನ ಸಮುದಾಯ ಈ ಅಭಿಯಾನಕ್ಕೆ ಅಪೂರ್ವ ಬೆಂಬಲ ವ್ಯಕ್ತಪಡಿಸಿದ್ದು, ಮಾಟೂಲ್ನ ಪಕ್ಕದ ಮಾಡಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯವರೂ ಸೇರಿದಂತೆ 800 ಸ್ವಯಂ ಸೇವಕರ ಪಡೆ ರಚನೆಯಾಗಿದೆ.
ಈ ಸ್ವಯಂ ಸೇವಕರು ಮಾದಕ ವಸ್ತುಗಳ ಸಾಗಣೆ ಮತ್ತು ಸೇವನೆಯ ಬಗ್ಗೆ ಗುಪ್ತವಾಗಿ ಮಾಹಿತಿ ಸಂಗ್ರಹಿಸಿ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಫರೀಷಾ ಅವರ ತಂಡ ಮುಂದಿನ ದಿನಗಳಲ್ಲಿ ಗುಪ್ತ ಮಾದಕವಸ್ತು ಚಟುವಟಿಕೆಗಳನ್ನು ಪತ್ತೆಹಚ್ಚಲು ಥರ್ಮಲ್ ಸ್ಕ್ಯಾನಿಂಗ್ನೊಂದಿಗೆ ಡ್ರೋನ್ ಕಣ್ಗಾವಲು ಪರಿಚಯಿಸುವ ಯೋಚನೆಯಲ್ಲಿದೆ.
ಶಿಕ್ಷಕರು, ವಿದ್ಯಾರ್ಥಿಗಳು, ಉದ್ಯಮಿಗಳು, ವ್ಯಾಪಾರಸ್ಥರು, ವಕೀಲರು, ಪೊಲೀಸ್ ಅಧಿಕಾರಿಗಳು ಮತ್ತು ಇತರ ನಾಗರಿಕರು ಫರೀಷಾ ಅವರ ‘ಧೀರ’ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಪರಿಣಾಮ ಮಾದಕವಸ್ತು ಪ್ರಕರಣಗಳಲ್ಲಿ ಭಾಗಿಯಾಗಿರುವ ಕನಿಷ್ಠ 13 ಜನರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ ಮತ್ತು ವ್ಯಸನದಿಂದ ಬಳಲುತ್ತಿರುವ ಹಲವಾರು ಜನರನ್ನು ಗುರುತಿಸಿ ಅವರನ್ನು ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಲಾಗಿದೆ.
ಯಾವುದೇ ಗಂಡು-ಹೆಣ್ಣಿನ ಮದುವೆಗೂ ಮುನ್ನ ಅವರನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಬೇಕು ಎಂದು ಧಾರ್ಮಿಕ ಸಂಸ್ಥೆಗಳು, ನಾಯಕರ ಮೂಲಕ ಸಾರ್ವಜನಿಕರಿಗೆ ಧೀರ ಅಭಿಯಾನ ಸಲಹೆ ನೀಡಿದೆ. ಈ ಮೂಲಕ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಕೌಟುಂಬಿಕ ಕಲಹಗಳನ್ನು ತಪ್ಪಿಸುವ ಪ್ರಯತ್ನದಲ್ಲಿದೆ.
ಆರಂಭದಲ್ಲಿ ಮಾಟೂಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾರಂಭಗೊಂಡ ಧೀರ ಅಭಿಯಾನದೊಂದಿಗೆ ಈಗ ಪಕ್ಕದ ಮಾಡಾಯಿ ಗ್ರಾಮಸ್ಥರು ಕೈ ಜೋಡಿಸಿದ್ದಾರೆ. ಹಾಗಾಗಿ, ಧೀರ ತಂಡದ ಹೆಸರನ್ನು ಈಗ “ಧೀರ : ಮಾಟ್ಟೂಲ್-ಮಾಡಾಯಿ ಕೂಟಾಯಿಮ” (Dheera: Mattool-Madayi Collective) ಎಂದು ಬದಲಾಯಿಸಲಾಗಿದೆ.
“ಮಾದಕ ವಸ್ತುಗಳ ಸಾಗಣೆ ಮತ್ತು ಸೇವನೆ ಬಗ್ಗೆ ಮಾಹಿತಿಯಿದ್ದರೂ ಅದರ ಬಗ್ಗೆ ಮಾತನಾಡಲು ಜನರು ಹೆದರುತ್ತಿದ್ದರು. ನಮ್ಮ ಅಭಿಯಾನ, ಜನರು ಮುಂದೆ ಬಂದು ಮಾತನಾಡಲು ಪ್ರೋತ್ಸಾಹಿಸಿದೆ. ಮಾದಕವಸ್ತು ವಲಯಗಳು, ಮಾರಾಟಗಾರರು ಮತ್ತು ಬಳಕೆದಾರರ ಬಗ್ಗೆ ಪ್ರಮುಖ ಮಾಹಿತಿಯನ್ನು ಒದಗಿಸುತ್ತಿದ್ದಾರೆ” ಫರೀಷಾ ಹೇಳುತ್ತಾರೆ.
ಧೀರ ಅಭಿಯಾನ ಕೇವಲ ಮಾದಕ ವಸ್ತು ಪೂರೈಕೆ ಮಾಡುವವರನ್ನು ಹಿಡಿದು ಕೊಡುವ ಕೆಲಸ ಮಾತ್ರ ಮಾಡುತ್ತಿಲ್ಲ. ಅಭಿಯಾನದ ಭಾಗವಾಗಿ ಶಾಲೆ, ಪಂಚಾಯತ್ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರಪತ್ರಗಳನ್ನು ವಿತರಿಸಿ ಜನರಿಗೆ ವಿಷಯದ ಗಂಭೀರತೆ ಅರ್ಥ ಮಾಡಿಸಲಾಗುತ್ತಿದೆ. ಇತ್ತೀಚೆಗೆ ವಲಸೆ ಕಾರ್ಮಿಕರು ಮಾದಕ ವಸ್ತು ಪೂರೈಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದ ಕಾರಣ, ಹಿಂದಿಯಲ್ಲಿ ಕರಪತ್ರ ಮುದ್ರಿಸಿ ವಲಸೆ ಕಾರ್ಮಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ.
ಮಾದಕವಸ್ತು ಸೇವನೆ ಮಾಡುವವರಿಗೆ ಜಾಗದ ವ್ಯವಸ್ಥೆ ಮಾಡಿಕೊಡುವ ಕೆಲ ಆಸ್ತಿ ಮಾಲೀಕರಿಗೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಧೀರ ತಂಡ ಎಚ್ಚರಿಕೆ ನೀಡಿದೆ. ಮಾದಕವಸ್ತು ವ್ಯಾಪಾರದ ಮೇಲೆ ಸಂಘಟಿತ ಕ್ರಮ ಕೈಗೊಳ್ಳಲು ಧೀರ ತಂಡ ಪಳಯಂಗಡಿ ಪೊಲೀಸರು ಮತ್ತು ಜಿಲ್ಲಾ ಅಬಕಾರಿ ತಂಡದೊಂದಿಗೆ ನಿಕಟವಾಗಿ ಸಹಕರಿಸುತ್ತಿದೆ.
ಮಾದಕವಸ್ತು ವಿರುದ್ದ ಬೀದಿಗಳಿದ ಬಳಿಕ ಫರೀಷಾ ಅವರಿಗೆ ಹಲವಾರು ಬೆದರಿಕೆ ಕರೆಗಳು ಬಂದಿವೆಯಂತೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕಿ ಅವರ ಮಾನಹಾನಿ ಮಾಡುವ ಪ್ರಯತ್ನಗಳು ಆಗಿವೆ. ಕೆಲವರು ಫರೀಷಾ ಅವರ ಮಕ್ಕಳು ಮತ್ತು ಕುಟುಂಬಸ್ಥರ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಫರೀಷಾ ಈಗಾಗಲೇ ಪಳಯಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೊಸ ಗಾಜಾ ಕದನ ವಿರಾಮ ಪ್ರಸ್ತಾವನೆಗೆ ಒಪ್ಪಿದ ಹಮಾಸ್: ಪ್ರತಿ-ಪ್ರಸ್ತಾಪ ಸಲ್ಲಿಸಿದ ಇಸ್ರೇಲ್


