ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ತನ್ನ ಮಗಳನ್ನೆ ತಂದೆಯೆ ಕೊಲೆ ಮಾಡಿರುವ ಅಮಾನುಷ ಘಟನೆ ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ. ಕೊಲೆಯಾದ ಯುವತಿಯನ್ನು 19 ವರ್ಷದ ಗಾಯತ್ರಿ ಎಂದು ಗುರುತಿಸಲಾಗಿದೆ.
ತನ್ನ ಮಗಳನ್ನೇ ತಾನು ಕೊಂದಿರುವುದಾಗಿ ಯುವತಿಯ ತಂದೆ ಜಯರಾಮ್ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಭಾರತೀಯ ಕಾನೂನುಗಳಿಗೆ ಬದ್ಧರಾಗಿದ್ದೇವೆ: ಸಂಸದೀಯ ಸಮಿತಿ ಮುಂದೆ ಟ್ವಿಟರ್ ಸ್ಪಷ್ಟನೆ
ಪಿಯುಸಿ ಓದುತ್ತಿದ್ದ ಯುವತಿ, ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಮನೆಯಲ್ಲೆ ಇದ್ದರು ಎನ್ನಲಾಗಿದೆ. ಈ ವೇಳೆ ತನ್ನದೇ ಗ್ರಾಮದ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದರು. ಈ ಬಗ್ಗೆ ತಿಳಿದ ಯುವತಿಯ ಕುಟುಂಬಸ್ಥರು ಯವಕನಿಂದ ದೂರ ಇರುವಂತೆ ಯುವತಿಗೆ ಎಚ್ಚರಿಕೆ ನೀಡಿದ್ದರು. ಆದರೆ ಇದನ್ನು ಪರಿಗಣಿಸದ ಯುವತಿ ಯುವಕನೊಂದಿಗೆ ಒಡನಾಟ ಮುಂದುವರೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗಾಗಿ ಊಟ ತೆಗೆದುಕೊಂಡ ಗಾಯತ್ರಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಯುವತಿಯ ಪ್ರೀತಿಯ ವಿಷಯದ ಕುರಿತು ಮಾತುಕತೆಯಾಗಿದೆ. ಆದರೆ ಯುವತಿಯು, ತಾನು ಯಾವುದೇ ಕಾರಣಕ್ಕೂ ಯುವಕನ ಸಂಬಂಧವನ್ನು ಬಿಡುವುದಿಲ್ಲ ಎಂದು ಹಠ ಮಾಡಿದ್ದಾರೆ. ಇದರಿಂದ ಕೋಪಗೊಂಡ ಜಯರಾಮ್(ತಂದೆ) ಮಚ್ಚಿನಿಂದ ಯುವತಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನ್ನ ಮಗಳನ್ನು ತಾನೆ ಕೊಲೆ ಮಾಡಿರುವುದಾಗಿ ಆರೋಪಿಯು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೊರೊನಾ ನಿಯಮಗಳ ಉಲ್ಲಂಘನೆ, 3ನೇ ಅಲೆಗೆ ಕಾರಣವಾಗಬಹುದು: ದೆಹಲಿ ಹೈಕೋರ್ಟ್