ಮೇ 4 ರಂದು ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮೂವರು ಕುಕಿ ಬುಡಕಟ್ಟು ಮಹಿಳೆಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಎಫ್ಐಆರ್ ನೋಂದಣಿ ಮಾಡಿಕೊಳ್ಳಲು ವಿಳಂಬ ಮಾಡಿರುವುದೇಕೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.
ಎಫ್ಐಆರ್ ದಾಖಲಿಸಲು ಪೊಲೀಸರು 14 ದಿನಗಳ ಕಾಲ ಏನು ಮಾಡುತ್ತಿದ್ದರು? ”ಶೂನ್ಯ ಎಫ್ಐಆರ್ಗೆ ಹದಿನಾಲ್ಕು ದಿನ ಬೇಕಾ?” ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪ್ರಶ್ನಿಸಿದ್ದಾರೆ.
ಅಪರಾಧ ನಡೆದಿರುವ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಸಾಮಾನ್ಯವಾಗಿೆ ಎಫ್ಐಆರ್ ದಾಖಲಿಸಲಾಗುತ್ತದೆ. ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಬಹುದು ಮತ್ತು ಶೂನ್ಯ ಎಫ್ಐಆರ್ನ್ನು ದಾಖಲಿಸಲು ಆನಂತರ ಅದನ್ನು ಸಂಬಂಧಪಟ್ಟ ಠಾಣೆಗೆ ರವಾನಿಸಲು ಅನುಮತಿಸುತ್ತದೆ.
ಬೆತ್ತಲೆಯಾಗಿಸಿ ಮೆರವಣಿಗೆ ನಡೆಸಿದ್ದ ಪ್ರಕರಣದ ಇಬ್ಬರು ಸಂತ್ರಸ್ತ ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸುತ್ತಿದೆ. ಜುಲೈ 19ರಂದು ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಮೈತಿ ಮತ್ತು ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ಭುಗಿಲೆದ್ದ ಒಂದು ದಿನದ ನಂತರ, ಮೇ 4ರಂದು ಕಾಂಗ್ಪೊಕ್ಪಿಯ ಬಿ ಫೈನೋಮ್ ಗ್ರಾಮದಲ್ಲಿ ವೀಡಿಯೊದಲ್ಲಿ ಕಂಡುಬರುವ ಇಬ್ಬರು ಸೇರಿದಂತೆ ಮೂವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಪೊಲೀಸ್ ದೂರಿನ ಪ್ರಕಾರ ಮಹಿಳೆಯರಲ್ಲಿ ಒಬ್ಬರನ್ನು ”ಕ್ರೂರವಾಗಿ ಸಾಮೂಹಿಕ ಅತ್ಯಾಚಾರ” ಮಾಡಲಾಗಿದೆ.
ಪ್ರಕರಣದ ಶೂನ್ಯ ಎಫ್ಐಆರ್ನ್ನು ಮೇ 18 ರಂದು ದಾಖಲಿಸಲಾಗಿದೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡ ನಂತರವೇ ಪ್ರಕರಣದ ಆರೋಪಿಗಳನ್ನು ಬಂಧಿಸಲಾಯಿತು.
ಜುಲೈ 20ರಂದು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಹೇಯ ಕೃತ್ಯದ ಬಗ್ಗೆ ಮಾತನಾಡಿತ್ತು. ಈ ಘಟನೆಯು “ಸರಳವಾಗಿ ಸ್ವೀಕಾರಾರ್ಹವಲ್ಲ” ಮತ್ತು ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಇಲ್ಲದಿದ್ದರೆ, ನಾವೇ ಕ್ರಮಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದರು.
ಮಣಿಪುರ ಹಿಂಸಾಚಾರದ ವಿಚಾರದಲ್ಲಿ ಸುಮಾರು 80ದಿನಗಳ ಕಾಲ ಮೌನ ವಾಗಿದ್ದ ಪ್ರಧಾನಿ ಮೋದಿ ಅವರು ಈ ವಿಡಿಯೋ ವೈರಲ್ ಆದ ಬಳಿಕ ಒತ್ತಡ ಹೆಚ್ಚಾದ ಕಾರಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಬೇರೆ ರಾಜ್ಯಗಳಲ್ಲೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎನ್ನುವುದನ್ನು ಉಲ್ಲೇಖಿಸಿದ್ದರು.
ಇದನ್ನೂ ಓದಿ: ಬೇರೆಡೆಯೂ ನಡೆದಿವೆ ಎಂದು ಮಣಿಪುರದ ಘಟನೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
”ಇತರ ರಾಜ್ಯಗಳಲ್ಲಿ ಇದೇ ರೀತಿಯ ಪ್ರಕರಣಗಳು ನಡೆಯುತ್ತಿವೆ ಎಂಬ ಕಾರಣಕ್ಕಾಗಿ ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿರ್ಲಕ್ಷಿಸಲಾಗುವುದಿಲ್ಲ” ಎಂದು ಸೋಮವಾರ ನ್ಯಾಯಾಲಯ ಹೇಳಿದೆ.
”ದೇಶಾದ್ಯಂತ ಮಹಿಳೆಯರ ವಿರುದ್ಧ ಅಪರಾಧಗಳು ನಡೆಯುತ್ತಿವೆ – ಅದು ವಾಸ್ತವದ ಸಂಗತಿ. ಆದರೆ ಇಲ್ಲಿ, ನಾವು ಭಯಂಕರ ಹೇಯ ಕೃತ್ಯದ ಕುರಿತು ಮಾತನಾಡುತ್ತಿದ್ದೇವೆ. ಬೇರೆ ಕಡೆಗಳಲ್ಲಿ ಅಪರಾಧಗಳು ಕೋಮು ಮತ್ತು ಪಂಥೀಯ ಕಲಹದ ಪರಿಸ್ಥಿತಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಅಪರಾಧಗಳು” ಎಂದು ಹೇಳಿದರು.
ನ್ಯಾಯವಾದಿ ಬಾನ್ಸುರಿ ಸ್ವರಾಜ್ ಅವರು ಪಶ್ಚಿಮ ಬಂಗಾಳ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನ್ಯಾಯಾಲಯದ ಗಮನಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ ನಂತರ ”ನಾವು ಮಣಿಪುರವನ್ನು ಹೇಗೆ ಎದುರಿಸುತ್ತೇವೆ ಎಂಬುದು ಪ್ರಶ್ನೆಯಾಗಿದೆ. ಭಾರತದ ಎಲ್ಲಾ ಹೆಣ್ಣುಮಕ್ಕಳನ್ನು ರಕ್ಷಿಸಿ ಎಂದು ನೀವು ಹೇಳುತ್ತೀರಾ ಅಥವಾ ಯಾರನ್ನೂ ರಕ್ಷಿಸಬೇಡಿ ಎಂದು ಹೇಳುತ್ತಿರಾ? ಎಂದು ಮುಖ್ಯ ನ್ಯಾಯಾಧೀಶರು ಈ ಹೇಳಿಕೆ ನೀಡಿದ್ದಾರೆ ಎಂದು ಬಾರ್ ಮತ್ತು ಬೆಂಚ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮೇ 4ರಂದು ನಡೆದ ಲೈಂಗಿಕ ದೌರ್ಜನ್ಯವನ್ನು ಪ್ರತ್ಯೇಕ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ, ಆದರೆ ಇದು ವ್ಯವಸ್ಥಿತ ಹಿಂಸೆಯ ಭಾಗವಾಗಿದೆ ಎಂದು ಹೇಳಿದರು. ಅಂತಹ ಸಂದರ್ಭದಲ್ಲಿ, ನೀವು [ಮಣಿಪುರ ಸರ್ಕಾರ] ವಿಶೇಷ ತಂಡವನ್ನು ಹೊಂದಿರುವುದು ಮುಖ್ಯವಲ್ಲವೇ? ಮಣಿಪುರ ರಾಜ್ಯದಲ್ಲಿ ಹಿಂಸಾಚಾರ ಅವ್ಯಾಹತವಾಗಿ ಮುಂದುವರಿದಿದೆ ಅದನ್ನು ನಿಲ್ಲಿಸಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ರಾಜ್ಯಾದ್ಯಂತ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 6,000 ಕ್ಕೂ ಹೆಚ್ಚು ಎಫ್ಆರ್ಗಳನ್ನು ಸಲ್ಲಿಸಲಾಗಿದೆ ಎಂದು ಮಣಿಪುರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.
ಇವುಗಳಲ್ಲಿ ಎಷ್ಟು ಪ್ರಕರಣಗಳು ಮಹಿಳೆಯರ ವಿರುದ್ಧದ ಅಪರಾಧಗಳನ್ನು ಒಳಗೊಂಡಿವೆ ಮತ್ತು ಎಷ್ಟು ಕೊಲೆ ಮತ್ತು ಅಗ್ನಿಸ್ಪರ್ಶದಂತಹ ಗಂಭೀರ ಅಪರಾಧಗಳಿಗೆ ಸಂಬಂಧಿಸಿದೆ ಎಂಬುದನ್ನು ತಿಳಿಸುವಂತೆ ನ್ಯಾಯಾಲಯವು ಮೆಹ್ತಾ ಅವರನ್ನು ಕೇಳಿದೆ. ಕೇಂದ್ರೀಯ ತನಿಖಾ ದಳವು ಎಲ್ಲಾ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಸ್ಥಿತಿಯಲ್ಲಿದೆಯೇ? ಎಂದು ಪೀಠವು ಕೇಳಿದೆ.
ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಅರ್ಜಿ ವಿಚಾರಣೆ ನಡೆಯಲಿದೆ.
ಮೇ 3ರಿಂದ ಮಣಿಪುರದಲ್ಲಿ ಕುಕಿ ಮತ್ತು ಬಹುಸಂಖ್ಯಾತ ಮೈತಿ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆ ಆರಂಭವಾಯಿತು. ಈವರೆಗೂ ಹಿಂಸಾಚಾರದಲ್ಲಿ 113 ಕುಕಿಗಳು ಮತ್ತು 62 ಮೈತಿ ಜನರು ಸೇರಿದಂತೆ ಕನಿಷ್ಠ 181 ಜನರು ಸಾವಿಗೀಡಾಗಿದ್ದಾರೆ ಮತ್ತು ಸುಮಾರು 60,000 ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ.


