ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧದ ತನಿಖೆಗೆ ಜೂನ್ 30 ರಂದು ಬಾಂಬೆ ಹೈಕೋರ್ಟ್ ನೀಡಿದ್ದ ತಡೆಯನ್ನು ಪ್ರಶ್ನಿಸಿ ಮಹರಾಷ್ಟ್ರ ಸರ್ಕಾರ ನೀಡಿದ್ದ ಮೇಲ್ಮನವಿಯನ್ನು ಆಲಿಸುತ್ತಿದ್ದ ಸುಪ್ರೀಂಕೋರ್ಟ್, ”ಪತ್ರಿಕಾ ಸ್ವಾತಂತ್ರ್ಯ ಎಂದರೆ ಪತ್ರಕರ್ತನನ್ನು ಪ್ರಶ್ನೆಗಳನ್ನು ಕೇಳಬಾರದು ಎಂದು ಅರ್ಥವಲ್ಲ” ಎಂದು ಅಭಿಪ್ರಾಯಪಟ್ಟಿದೆ.
ಕೊರೊನಾ ಲಾಕ್ಡೌನ್ ಸಮಯದಲ್ಲಿ ಪಾಲ್ಘರ್ ಗುಂಪುಹತ್ಯೆ ಮತ್ತು ಬಾಂದ್ರಾ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಗುಂಪು ಸೇರಿದ್ದ ಘಟನೆಯನ್ನು ಕೋಮು ದ್ವೇಷ ಹರಡಲು ಪ್ರಚೋದಿಸಿದ ಆರೋಪದಲ್ಲಿ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಎರಡು ಎಫ್ಐಆರ್ ಅನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: TRP ಹಗರಣದಲ್ಲಿ ವಿಚಾರಣೆಗೆ ಹಾಜರಾಗಲು ಸಮನ್ಸ್; ಬಂಧನ ಭೀತಿಯಲ್ಲಿ ಅರ್ನಾಬ್ ಗೋಸ್ವಾಮಿ
ರಿಪಬ್ಲಿಕ್ ಟಿವಿ ಕಾರ್ಯಕ್ರಮಗಳನ್ನು ಪ್ರಶ್ನಿಸಿ ನ್ಯಾಯಾಲಯ ಹತ್ತಿದ ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ, ಅರ್ನಾಬ್ ವಿರುದ್ಧದ ಸಂಪೂರ್ಣ ತನಿಖೆಯನ್ನು ತಡೆಹಿಡಿಯುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆಂದು ಲೈವ್ ಲಾ ವರದಿ ಮಾಡಿದೆ.
“ತನಿಖೆ ಮತ್ತೇ ಪ್ರಾರಂಭವಾದರೆ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸುವುದಿಲ್ಲ” ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ ಅವರು, ”ಕೆಲವು ಜನರು ಕಾನೂನಿಗಿಂತ ಮೇಲಿದ್ದಾರೆ ಎಂದು ಸಂದೇಶವು ಹೋಗಬಾರದು” ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ, “ಯಾರೂ ಕಾನೂನಿನ ಮೇಲಿರದಿದ್ದರೂ, ಕೆಲವು ಜನರು ಗುರಿಯಾಗುತ್ತಾರೆ. ಈ ಸಮಯದಲ್ಲಿ ಅವರಿಗೆ ಹೆಚ್ಚಿನ ಮಟ್ಟದ ರಕ್ಷಣೆ ನೀಡುವ ಸಂಪ್ರದಾಯ ಇದೆ” ಎಂದು ಹೇಳಿದರು.
ಇದನ್ನೂ ಓದಿ: TRP ಹಗರಣ: ಎಲ್ಲರಂತೆ ಹೈಕೋರ್ಟ್ಗೆ ಹೋಗಿ ಎಂದ ಸುಪ್ರೀಂ, ರಿಪಬ್ಲಿಕ್ ಅರ್ನಾಬ್ಗೆ ಮುಖಭಂಗ!
ಅರ್ನಾಬ್ ಗೋಸ್ವಾಮಿ ಅವರ ಸಲಹೆಗಾರ ಹರೀಶ್ ಸಾಲ್ವೆಗೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ಪತ್ರಿಕಾ ಸ್ವಾತಂತ್ರ್ಯವು ನಿರ್ಣಾಯಕ ಎಂದು ನ್ಯಾಯಾಲಯ ಒಪ್ಪಿಕೊಂಡರೂ, ಮಾಧ್ಯಮದ ಒಬ್ಬ ವ್ಯಕ್ತಿಯಾಗಿ ನಿಮ್ಮ ಕಕ್ಷಿದಾರರನ್ನು ಯಾವುದೇ ಪ್ರಶ್ನೆ ಕೇಳಬಾರದು ಎಂಬ ಮನವಿಯನ್ನು ಪ್ರಶಂಸಿಸುವುದಿಲ್ಲ” ಎಂದು ಹೇಳಿದ್ದಾರೆ.
ಅರ್ನಾಬ್ ಗೋಸ್ವಾಮಿಯು ವರದಿ ಮಾಡುವಾಗ ಜವಾಬ್ದಾರಿಯಿಂದ ವರ್ತಿಸುವಂತೆ ನ್ಯಾಯಮೂರ್ತಿ ಸೂಚಿಸಿದರು. ನ್ಯಾಯಾಲಯದ ವಿಷಯವನ್ನು ಒಪ್ಪಿದ ಅರ್ನಾನ್ ಪರ ಹಾಜರಾದ ವಕೀಲ ಸಾಲ್ವೆ, ಅರ್ನಾಬ್ ವಿರುದ್ದದ ಎಫ್ಐಆರ್ಗಳು ನಿಜವಲ್ಲ, ಅದನ್ನು ಗಣನೆಗೆ ತೆಗೆದು ಕೊಳ್ಳಬಾರದು ಎಂದು ಹೇಳಿದರು.
ಗೋಸ್ವಾಮಿ ವಿರುದ್ಧ ದಾಖಲಾದ ಎಫ್ಐಆರ್ಗಳ ಪಟ್ಟಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಮಹಾರಾಷ್ಟ್ರ ಸರ್ಕಾರವನ್ನು ಕೇಳಿದ್ದು, ವಿಚಾರಣೆಯನ್ನು ಎರಡು ವಾರಗಳ ನಂತರ ಮಾಡುವುದಾಗಿ ಪ್ರಕಟಿಸಿತು.
ಇದನ್ನೂ ಒದಿ: ಅರ್ನಾಬ್ ರಿಪಬ್ಲಿಕ್ ಚಾನೆಲ್ ವಿರುದ್ಧ PIL: ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್