‘ಕೊರೊನಾ ಸಾಂಕ್ರಾಮಿಕವು ದೇವರ ಕಾರ್ಯ. ಹಾಗಾಗಿಯೇ ಜಿಎಸ್ಟಿ ಸಂಗ್ರಹದಲ್ಲಿ ಕುಸಿತವಾಗಿದೆ’ ಎಂದು ಹೇಳಿ ವಿವಾದಕ್ಕೊಳಗಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ರವರನ್ನು ಮಾಜಿ ಸಚಿವ ಪಿ. ಚಿದಂಬರಂ ದೇವರ ಸಂದೇಶವಾಹಕರು ಎಂದು ಕರೆದು ವ್ಯಂಗ್ಯವಾಡಿದ್ದಾರೆ.
ಸಾಂಕ್ರಾಮಿಕವು ದೇವರ ಕಾರ್ಯ ಎಂದು ನೀವು ಹೇಳಿದ್ದೀರಿ. ಆದರೆ ಸಾಂಕ್ರಾಮಿಕ ಆರಂಭಕ್ಕೂ ಮೊದಲಿನ 2017/18, 2018/19, 2019/20 ವರ್ಷಗಳಲ್ಲಿನ ಆರ್ಥಿಕ ತಪ್ಪು ನಿರ್ವಹಣೆಗೆ ಕಾರಣರ್ಯಾರು ಎಂದು ವಿವರಿಸುವಿರಾ ದೇವರ ಸಂದೇಶವಾಹಕರೆ? ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
2018/19ರ ಎರಡನೇ ತ್ರೈಮಾಸಿಕದಲ್ಲಿದ್ದ 7.1 ಭಾರತದ ಜಿಡಿಪಿ ಬೆಳವಣಿಗೆಯು 2019/20ರ ನಾಲ್ಕನೇ ತ್ರೈಮಾಸಿಕದ ಹೊತ್ತಿಗೆ 3.1ಕ್ಕೆ ಕುಸಿದಿದೆ. ಈ ಕುಸಿತವು ಸರ್ಕಾರದ ತಪ್ಪು ನಿರ್ವಹಣೆಯನ್ನು ತೋರಿಸುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯಗಳಿಗೆ ಕೊಡಬೇಕಾದ ಜಿಎಸ್ಟಿ ಪಾಲನ್ನು ನೀಡಲು ಕೇಂದ್ರ ಸರ್ಕಾರ ಸತಾಯಿಸುತ್ತಿದೆ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ ಈ ವಿಷದಯಲ್ಲಿ ಕೇಂದ್ರ ರಾಜ್ಯಗಳಿಗೆ ದ್ರೋಹವೆಸಗಿದೆ ಎಂದು ಚಿದಂಬರಂ ಆರೋಪಿಸಿದ್ದಾರೆ.
If the pandemic is an ‘Act of God’, how do we describe the mismanagement of the economy during 2017-18 2018-19 and 2019-20 BEFORE the pandemic struck India? Will the FM as the Messenger of God please answer?
— P. Chidambaram (@PChidambaram_IN) August 29, 2020
2021ರ ವಿತ್ತೀಯ ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕದ ಕಾರಣದಿಂದ 2.35 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ ಕುಸಿತವಾಗಿದೆ ಎಂದು ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೆರು. ನಾವು ದೇವರ ಕಾರ್ಯವನ್ನು ಎದುರಿಸಬೇಕಾಯಿತು ಎಂದು ಹೇಳುವ ಮೂಲಕ ಅದಕ್ಕೆ ಅವರು ದೇವರು ಎಂದಿದ್ದು ಭಾರೀ ಟೀಕೆಗೊಳಗಾಗಿತ್ತು.
ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್, ಸರ್ಕಾರವು ಆರ್ಥಿಕತೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಅದು ಪರಂ-ಆತ್ಮ-ನಿರ್ಭರ್(ದೇವರನ್ನು ಅವಲಂಬಿಸಿದೆ) ಆಗಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ನಿಂದಾಗಿ ಜಿಎಸ್ಟಿ ಸಂಗ್ರಹ ಕುಸಿತ: ರಾಜ್ಯಗಳಿಗೆ ಪಾಲು ನೀಡಲು ಹಣವಿಲ್ಲವೆಂದ ಕೇಂದ್ರ!