ಅಸೋಸಿಯೆಟಡ್ ಮ್ಯಾನೇಜ್ಮೆಂಟ್ ಆಫ್ ಪ್ರೈಮರಿ ಆಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ ಎಂಬ ಖಾಸಗಿ ಶಾಲೆಗಳ ಸಂಘ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು “ಸರ್ಕಾರಿ ಶಾಲೆಯ ಶಿಕ್ಷಕರು ಆಮಿಷವೊಡ್ಡಿ ನಮ್ಮ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದಾರೆ” ಎಂದು ದೂರು ನೀಡಿದೆ.
ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಬರೆದ ಪತ್ರದಲ್ಲಿ “ಸರ್ಕಾರಿ ಶಾಲೆಗಳು ರಾಷ್ಟ್ರೀಯ ವಿಪತ್ತು ಕಾಯಿದೆಯ ಮಾರ್ಗಸೂಚಿಯಂತೆ ಯಾವುದೇ ಶಾಲಾ-ಕಾಲೇಜುಗಳು ಪ್ರಾರಂಭ ಆಗಬಾರದೆಂದು ನಿಯಮವಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ, ನಿಯಮವನ್ನು ಉಲ್ಲಂಘಿಸಿ ರಾಜ್ಯದ ಹಲವಾರು ಕಡೆ ‘ವಿದ್ಯಾಗಮ ಯೋಜನೆ’ ಹಸರಿನಲ್ಲಿ ಶಾಲೆಯ ತರಗತಿಯ ಒಳಗೆ ಹಾಗೂ ಹೊರಗೆ ಪಾಠ ಮಾಡುತ್ತಿದೆ” ಎಂದು ಉಲ್ಲೇಖಿಸಿದೆ.
“ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಸರ್ಕಾರಿ ಶಿಕ್ಷಕರು ಮನೆಮನೆಗೆ ತೆರಳಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಈ ವರ್ಷ ಪ್ರಾರಂಭವಾಗುವುದಿಲ್ಲ. ನಮ್ಮಲ್ಲಿ ಮಾತ್ರ ಶಿಕ್ಷಣ ನೀಡುತ್ತೇವೆ ಹಾಗೂ ಆಹಾರ ಮತ್ತು ಪುಸ್ತಕ ನೀಡುತ್ತೇವೆ ಎಂದು ಆಮಿಷವೊಡ್ಡಿ, ವಾಮಮಾರ್ಗವಾಗಿ ಮಕ್ಕಳನ್ನು ಸೆಳೆಯುತ್ತಿದೆ” ಎಂದು ಪತ್ರ ಆರೋಪಿಸಿದೆ.
“ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಬಿಡದೆ, ಶಿಕ್ಷಣ ಇಲಾಖೆಯ ಈ ಧೋರಣೆ ಮತ್ತು ಕಾನೂನು ಬಾಹಿರವಾಗಿ ಶಾಲೆಗಳ ಒಳಗೆ ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸದೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಶಾಲೆಗಳನ್ನು ನಡೆಸುತ್ತಿದೆ” ಎಂದು ಪತ್ರದಲ್ಲಿ ದೂರಲಾಗಿದೆ.
ಆದರೆ ಖಾಸಗಿ ಶಾಲಾ ಸಂಘಟನೆಯ ಈ ಆರೋಪವನ್ನು ನಿರಾಕರಿಸಿದ ಸರ್ಕಾರಿ ಶಿಕ್ಷಕರೊಬ್ಬರು, “ಅವರು ಯಾವ ಉದ್ದೇಶದಿಂದ ಈ ಆರೋಪ ಮಾಡಿದ್ದಾರೆ ಎಂದು ತಿಳಿದಿಲ್ಲ. ನಾವು ಸರ್ಕಾರದ ನಿಯಮವನ್ನು ಎಲ್ಲಿಯೂ ಉಲ್ಲಂಘಿಸಿಲ್ಲ. ಮಕ್ಕಳಿಗೆ ಶೂನ್ಯ ಕಲಿಕೆ ಆಗಬಾರದು ಎಂಬ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ನಮ್ಮದೆ ಶಾಲೆಯ ಮಕ್ಕಳನ್ನು ಶಾಲೆಯ ಹೊರಗಡೆ ಹಿಂದಿನ ವರ್ಷದ ಪಾಠಗಳನ್ನು ಪುನರ್-ಮನನ ಮಾಡುತ್ತಿದ್ದೇವೆ. ಖಾಸಗಿ ಶಾಲೆಗಳು ಆನ್ಲೈನ್ ಶಿಕ್ಷಣ ಎಂದು ಈಗಾಗಲೆ ಕಲಿಕೆಯನ್ನು ಮುಂದುವರೆಸಿದೆ. ಆದರೆ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಇಂತಹ ವ್ಯವಸ್ಥೆ ಇರುವುದಿಲ್ಲ. ವಿದ್ಯಾಗಮ ಯೋಜನೆ ಉತ್ತಮ ಯೋಜನೆಯಾಗಿದೆ. ಇಷ್ಟೂ ಆಗದಿದ್ದರೆ ಮಕ್ಕಳನ್ನು ಕಲಿಕೆಗೆ ಮರುಹೊಂದಿಸಿಕೊಳ್ಳಲು ಕಷ್ಟಕರವಾಗುತ್ತದೆ ಅಲ್ಲದೆ ಅವರು ಅಕ್ಷರಗಳನ್ನು ಮರೆತು ಬಿಡುವ ಅಪಾಯವಿದೆ” ಎಂದು ಹೇಳಿದ್ದಾರೆ.
ಓದಿ: ಶುಲ್ಕ ಪಾವತಿಸದಿದ್ದರೆ ದಾಖಲಾತಿ ರದ್ದು ಬೆದರಿಕೆ: ಸರ್ಕಾರದ ಆದೇಶಕ್ಕೆ ಕ್ಯಾರೇ ಎನ್ನದ ಖಾಸಗಿ ಶಾಲೆಗಳುರು