ಗುಜರಾತ್ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರಿಗೆ ಜಾಮೀನು ಮಂಜೂರು ಮಾಡುವ ಆದೇಶದಲ್ಲಿ ಅಸ್ಸಾಂ ಪೊಲೀಸರ ಕುರಿತು ಬಾರ್ಪೇಟಾ ನ್ಯಾಯಾಲಯವು ನೀಡಿರುವ ಹೇಳಿಕೆಗಳಿಗೆ ಗುವಾಹಟಿ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಮೋದಿಯವರನ್ನು ಟೀಕಿಸಿದ ಟ್ವೀಟ್ ಆಧರಿಸಿ ಜಿಗ್ನೇಶ್ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ದೊರೆತ ಮರುಗಳಿಗೆಯೇ ಜಿಗ್ನೇಶ್ ಅವರನ್ನು ಮತ್ತೆ ಬಂಧಿಸಲಾಯಿತು. ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪವನ್ನು ಮೇವಾನಿ ಮೇಲೆ ಹೊರಿಸಲಾಗಿತ್ತು. ಎರಡನೇ ಪ್ರಕರಣದ ಜಾಮೀನು ಅರ್ಜಿಯನ್ನು ವಿಚಾರಿಸಿದ್ದ ಬಾರ್ಪೇಟಾ ನ್ಯಾಯಾಲಯ ಪೊಲೀಸ್ ಪಡೆಯನ್ನು ಕಟುವಾಗಿ ಟೀಕಿಸಿತ್ತು. “ನಕಲಿ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ತರಾಟೆಗೆ ತೆಗೆದುಕೊಳ್ಳುವ ಜೊತೆಗೆ ರಾಜ್ಯದ ಪೊಲೀಸ್ ವ್ಯವಸ್ಥೆಯ ಕುರಿತು ಬೇಸರ ವ್ಯಕ್ತಪಡಿಸಿತ್ತು. ಈ ಅಭಿಪ್ರಾಯಗಳಿಗೆ ಈಗ ಹೈಕೋರ್ಟ್ನಿಂದ ತಡೆ ನೀಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಕೆಳ ನ್ಯಾಯಾಲಯವು ತನ್ನ ಮಿತಿಯನ್ನು ಮೀರಿದೆ. ಪೊಲೀಸ್ ಪಡೆ ಮತ್ತು ಅಸ್ಸಾಂ ಸರ್ಕಾರವನ್ನು ನಿರುತ್ಸಾಹಗೊಳಿಸಿದೆ” ಎಂದು ಹೈಕೋರ್ಟ್ ಅಭಿಪ್ರಾಯ ತಾಳಿದೆ.
ಬಾರ್ಪೇಟಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ ಅವರು ಮಾಡಿರುವ ಅವಲೋಕನಗಳನ್ನು ಪ್ರಶ್ನಿಸಿ ಅಸ್ಸಾಂ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೇಬಾಶಿಸ್ ಬರುವಾ, “ದಲಿತ ನಾಯಕ ಮತ್ತು ಸ್ವತಂತ್ರ ಶಾಸಕರಾದ ಮೇವಾನಿ ಅವರಿಗೆ ಜಾಮೀನು ನೀಡಿರುವ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಲಿಲ್ಲ” ಎಂದು ವರದಿ ಹೇಳಿದೆ.
ಜಾಮೀನು ನೀಡುವ ವೇಳೆ ಹೈಕೋರ್ಟ್ಗೆ ಮನವಿ ಮಾಡಿದ್ದ ಬಾರ್ಪೇಟಾ ಜಿಲ್ಲಾ ಕೋರ್ಟ್, “ಆರೋಪಿಯ ವಿರುದ್ಧ ಈ ರೀತಿಯ ಸುಳ್ಳು ಪ್ರಕರಣ ದಾಖಲಿಸುವ ಪ್ರವೃತ್ತಿ ನಿತ್ಯವೂ ನಡೆಯುತ್ತಿದ್ದು, ಇವುಗಳನ್ನು ತಡೆಯಲು ಅಸ್ಸಾಂ ಪೊಲೀಸರಿಗೆ ನಿರ್ದೇಶನವನ್ನು ನೀಡಬೇಕು” ಎಂದು ಕೋರಿತ್ತು.
“ಕಷ್ಟಪಟ್ಟು ಗಳಿಸಿದ ನಮ್ಮ ಪ್ರಜಾಪ್ರಭುತ್ವವನ್ನು ಪೊಲೀಸ್ ರಾಜ್ಯವಾಗಿ ಪರಿವರ್ತಿಸುತ್ತಿರುವುದನ್ನು ಸರಳವಾಗಿ ಯೋಚಿಸಲು ಸಾಧ್ಯವಿಲ್ಲ. ಅಸ್ಸಾಂ ಪೊಲೀಸರು ಕೂಡಾ ಅದೇ ವಿಚಾರದ ಬಗ್ಗೆ ಯೋಚಿಸುತ್ತಿದ್ದರೆ, ಅದು ವಿಕೃತ ಚಿಂತನೆ” ಎಂದು ತಿಳಿಸಿತ್ತು.
ಪ್ರಕರಣದಲ್ಲಿ ಅಸ್ಸಾಂ ಪೊಲೀಸರು ‘ಸುಳ್ಳು ಎಫ್ಐಆರ್’ ದಾಖಲಿಸಿದ್ದು, ‘ನ್ಯಾಯಾಲಯ ಮತ್ತು ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದೆ’ ಎಂದು ರಾಜ್ಯದ ಪೊಲೀಸರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಆದರೆ ಈ ಅಭಿಪ್ರಾಯಗಳು ಕೆಳ ನ್ಯಾಯಾಲಯದ ವ್ಯಾಪ್ತಿಯನ್ನು ಮೀರಿವೆ ಎಂದು ನ್ಯಾಯಮೂರ್ತಿ ಬರುವಾ ತಿಳಿಸಿದ್ದಾರೆ.
ರಜೆಯ ಕಾರಣ ಸೋಮವಾರ ನ್ಯಾಯಾಲಯವನ್ನು ಮುಚ್ಚಿದ್ದರಿಂದ ಅಡ್ವೊಕೇಟ್ ಜನರಲ್ ದೇವಜಿತ್ ಸೈಕಿಯಾ ಅವರು ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ವಿಶೇಷ ಅನುಮತಿ ಪಡೆದರು.
ಇದನ್ನೂ ಓದಿರಿ: ಗೋಡ್ಸೆ ಭಕ್ತರು ಪ್ರಧಾನಿ ಕಾರ್ಯಾಲಯದಲ್ಲಿದ್ದಾರೆ, ಅವರೆ ನನ್ನ ಬಂಧನಕ್ಕೆ ನೇರ ಕಾರಣ: ಜಿಗ್ನೇಶ್ ಮೇವಾನಿ
ಮೇವಾನಿಯನ್ನು ಅಸ್ಸಾಂ ಪೊಲೀಸರು ಮೊದಲು ಏಪ್ರಿಲ್ 19 ರಂದು ಗುಜರಾತ್ನ ಪಾಲನ್ಪುರ್ ಪಟ್ಟಣದಿಂದ ಬಂಧಿಸಿದ್ದು, ಕೊಕ್ರಜಾರ್ನಲ್ಲಿ ಅವರ ವಿರುದ್ಧ ಪ್ರಧಾನಿಯವರ ಟ್ವೀಟ್ಗಾಗಿ ಎಫ್ಐಆರ್ ದಾಖಲಾಗಿತ್ತು. ಏಪ್ರಿಲ್ 21 ರಂದು ಗುವಾಹಟಿ ವಿಮಾನ ನಿಲ್ದಾಣದಿಂದ ಕೊಕ್ರಜಾರ್ಗೆ ಸರ್ಕಾರಿ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ, “ಜಿಗ್ನೇಶ್ ಮೇವಾನಿ ನನ್ನನ್ನು ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ್ದಾರೆ. ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ” ಎಂದು ಮಹಿಳಾ ಪೊಲೀಸ್ ಅಧಿಕಾರಿ ತಮ್ಮ ದೂರಿನಲ್ಲಿ ತಿಳಿಸಿದ್ದರು. ಎಫ್ಐಆರ್ ಪ್ರಕಾರ, “ವಾಹನದಲ್ಲಿ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು”.
ಅದಾಗ್ಯೂ, ಮಹಿಳಾ ಅಧಿಕಾರಿಯ ಹೇಳಿಕೆಯನ್ನು ಎಫ್ಐಆರ್ನಲ್ಲಿ ಸೇರಿಸುವುದಿಲ್ಲ ಎಂದು ನ್ಯಾಯಾಲಯ ಶುಕ್ರವಾರ ಹೇಳಿದೆ. “ಇದು ಆರೋಪಿಯನ್ನು ದೀರ್ಘಕಾಲದವರೆಗೆ ಬಂಧನದಲ್ಲಿಡಲು, ನ್ಯಾಯಾಲಯ ಮತ್ತು ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ರೂಪಿಸಲ್ಪಟ್ಟಿದೆ” ಎಂದು ತಿಳಿಸಿದೆ.
“ಇಬ್ಬರು ಪುರುಷ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಗೌರವಕ್ಕೆ ಧಕ್ಕೆ ತರಲು ಯಾವುದೇ ವಿವೇಕಯುತ ವ್ಯಕ್ತಿ ಎಂದಿಗೂ ಪ್ರಯತ್ನಿಸುವುದಿಲ್ಲ. ಆರೋಪಿಯು ಹುಚ್ಚುತನದ ವ್ಯಕ್ತಿ ಎಂಬ ಯಾವ ದಾಖಲೆ ಕೂಡಾ ಇಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


