ಹಿಜಾಬ್ – ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುಚ್ಚಲಾಗಿದ್ದ 10 ನೇ ತರಗತಿಯವರೆಗಿನ ಪ್ರೌಢಶಾಲೆಗಳು ನಾಳೆ ಪುನಾರಂಭಗೊಳ್ಳಲಿವೆ. ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಶಾಂತಿ ಮತ್ತು ಸಹಜತೆ ನೆಲೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದ್ಯ ಪ್ರೌಢಶಾಲೆಗಳು ಪ್ರಾರಂಭಿಸಲಾಗುತ್ತದೆ. ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ವಿಶ್ವವಿದ್ಯಾಲಯ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.
“ನಾಳೆಯಿಂದ 10ನೇ ತರಗತಿವರೆಗಿನ ಪ್ರೌಢಶಾಲೆಗಳು ಪುನರಾರಂಭಗೊಳ್ಳಲಿವೆ. ಶಾಂತಿ ಸಮಿತಿ ಸಭೆ ನಡೆಸುವಂತೆ ಡಿಸಿಗಳು, ಎಸ್ಪಿಗಳು ಮತ್ತು ಶಾಲಾ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದೇನೆ. ಪರಿಸ್ಥಿತಿ ಅವಲೋಕಿಸಿದ ಕಾಲೇಜುಗಳು ಆರಂಭದ ಬಗ್ಗೆ ರ್ಧಾರ ಕೈಗೊಳ್ಳಲಾಗುತ್ತದೆ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ತಲೆ ಮೇಲೆ ಬಟ್ಟೆ ಇದ್ದರೆ ನಿಮಗೇನು ತೊಂದರೆ?: ದೇವನೂರ ಮಹಾದೇವ
Schools up to 10th standard will re-open from tomorrow. I've instructed the DCs, SPs and school administrations to conduct a peace committee meeting. Schools for higher classes and degree colleges will re-open after reviewing the situation: Karnataka CM Basavraj Bommai in Hubli pic.twitter.com/tpi3r0qc03
— ANI (@ANI) February 13, 2022
ಸೌಹಾರ್ದಯುತ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ಪ್ರಮುಖ ಶಾಲೆಗಳಲ್ಲಿ ಪೋಷಕರು ಮತ್ತು ಶಿಕ್ಷಕರನ್ನು ಒಳಗೊಂಡ ಶಾಂತಿ ಸಭೆಗಳನ್ನು ನಡೆಸಲು ಈಗಾಗಲೇ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಲಾಗಿದೆ. ಶಾಲೆಗಳು ಶಾಂತಿಯುತವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನನ್ನ ಮುಂದಿರುವುದು ಮತ್ತು ನನ್ನ ಮೊದಲ ಕರ್ತವ್ಯವೆಂದರೆ ಶಾಲೆಗಳು ಮತ್ತು ಕಾಲೇಜುಗಳು ಸಾಮಾನ್ಯ ಕಾರ್ಯಚಟುವಟಿಕೆಗೆ ಮರಳಬೇಕು. ವಿದ್ಯಾರ್ಥಿಗಳು ಶಾಂತಿಯುತ ಮತ್ತು ಸೌಹಾರ್ದಯುತ ವಾತಾವರಣದಲ್ಲಿ ಅಧ್ಯಯನ ಮಾಡಬೇಕು ಮತ್ತು ಮಾರ್ಚ್-ಏಪ್ರಿಲ್ ವೇಳೆಗೆ ಪರೀಕ್ಷೆಗಳಿಗೆ ಸಿದ್ಧರಾಗಬೇಕು” ಎಂದು ಹೇಳಿದ್ದಾರೆ.
ಹಿಜಾಬ್ -ಕೇಸರಿ ಶಾಲು ಘರ್ಷಣೆ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸೇರಿದ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ (ಡಿಸಿಟಿಇ) ಅಡಿಯಲ್ಲಿರುವ ಕಾಲೇಜುಗಳಿಗೆ ಘೋಷಿಸಲಾದ ರಜೆಯನ್ನು ಫೆಬ್ರವರಿ 16 ರವರೆಗೆ ವಿಸ್ತರಿಸಲಾಗಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿತ್ತು.
ರಾಜ್ಯದ ವಿವಿಧ ಭಾಗಗಳಲ್ಲಿ ಹಿಜಾಬ್ ಪರ ಮತ್ತು ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿದ್ದರಿಂದ ಮತ್ತು ಕೆಲವೆಡೆ ಹಿಂಸಾಚಾರಕ್ಕೆ ತಿರುಗಿದ್ದರಿಂದ, ಫೆಬ್ರವರಿ 9 ರಿಂದ ಮೂರು ದಿನಗಳ ಕಾಲ ರಾಜ್ಯದ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿತು. ಬಳಿಕ ಇದನ್ನು ವಿಸ್ತರಿಸಲಾಗಿದೆ.
ಹಿಜಾಬ್ ಧರಿಸಿ ಕಾಲೇಜು ಪ್ರವೇಶ ಕೋರಿ ಸಲ್ಲಿಸಿದ್ದ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯರ ಅರ್ಜಿಯನ್ನು ಆಲಿಸುತ್ತಿದ್ದ ವಿಸ್ಕೃತ ಪೀಠ ಸೋಮವಾರ ಮಧ್ಯಾಹ್ನ 2.30ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ: ಹಿಜಾಬ್ – ಕೇಸರಿ ಶಾಲು ವಿವಾದ: ಉಡುಪಿಯ ಪ್ರೌಢಶಾಲಾ ವ್ಯಾಪ್ತಿಯಲ್ಲಿ ಫೆ.14 ರಂದು ನಿಷೇಧಾಜ್ಞೆ ಜಾರಿ