ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಒಂದು ಹಂತದಲ್ಲಿ ನವೆಂಬರ್ 12ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಘೋಷಣೆಯಾಗಲಿದೆ. 1985 ರಿಂದ 2017ರವರೆಗೆ ಹಿಮಾಚಲ ಪ್ರದೇಶದಲ್ಲಿ ಒಮ್ಮೆ ಕಾಂಗ್ರೆಸ್, ಒಮ್ಮೆ ಬಿಜೆಪಿ ಅಧಿಕ್ಕಾರಕ್ಕೇರುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿವೆ. ಕಳೆದ 8 ಚುನಾವಣೆಗಳಲ್ಲಿ ನಾಲ್ಕು ಬಾರಿ ಕಾಂಗ್ರೆಸ್ ಗೆದ್ದರೆ, ನಾಲ್ಕು ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಅಂದರೆ 1977ರಿಂದ ಈ ರಾಜ್ಯದಲ್ಲಿ ಯಾವುದೇ ಪಕ್ಷ ಸತತ ಎರಡು ಬಾರಿಗೆ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಆ ಸಂಪ್ರದಾಯಕ್ಕೆ ಈ ಬಾರಿ ಬ್ರೇಕ್ ಬೀಳಲಿದೆ, ಬಿಜೆಪಿ ಎರಡನೇ ಅವಧಿಗೆ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಬಿಜೆಪಿ 41 ಸ್ಥಾನಗಳಲ್ಲಿ, ಕಾಂಗ್ರೆಸ್ 25 ಸ್ಥಾನಗಳಲ್ಲಿ ಗೆದ್ದರೆ ಆಪ್ ಖಾತೆ ತೆರೆಯವುದು ಕಷ್ಟ ಎಂದಿವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೇರಿತ್ತು. 21 ಸ್ಥಾನ ಪಡೆದ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿ ಕೂತಿತ್ತು. ಈ ಬಾರಿ ಸರಳ ಬಹುಮತಕ್ಕೆ ಬೇಕಾದ 35 ಸ್ಥಾನಗಳನ್ನು ಯಾವ ಪಕ್ಷ ತಲುಪಲಿದೆ ಎಂಬುದು ಸುಲಭಕ್ಕೆ ನಿರ್ಣಯಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಹಲವು ಕಾಂಗ್ರೆಸ್ ಮುಖಂಡರನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದರೆ, ಕಾಂಗ್ರೆಸ್ ಸೇಬು ಬೆಳೆಗಾರರನ್ನು ನಂಬಿ ಕುಳಿತಿದೆ.
ಬಿಜೆಪಿ ವಿರುದ್ಧ ಸಿಡಿಮಿಡಿಗೊಂಡಿರುವ ಸೇಬು ಬೆಳೆಗಾರರು
ಹಿಮಾಚಲ ಪ್ರದೇಶದ ಮುಖ್ಯ ವಾಣಿಜ್ಯ ಬೆಳೆ ಸೇಬು. ಭಾರತದ ಒಟ್ಟು ಸೇಬು ಬೆಳೆಯ ಶೇ.26ರಷ್ಟು ಹಿಮಾಚಲ ಪ್ರದೇಶವೊಂದರಿಂದಲೇ ಬರುತ್ತದೆ. ರಾಜ್ಯ ಸರ್ಕಾರಕ್ಕೆ ವಾರ್ಷಿಕ 5000 ಕೋಟಿ ರೂಗಳಿಗಿಂತ ಅತಿ ಹೆಚ್ಚು ಆದಾಯ ತಂದುಕೊಡುವ ಸೇಬು ಬೆಳೆಗಾರರು ಸದ್ಯಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಸೇಬಿಗೆ ಎಂಎಸ್ಪಿ ನಿಗದಿಗೊಳಿಸಿಲ್ಲ, ಖಾಸಗಿ ಮಧ್ಯವರ್ತಿಗಳನ್ನು ತಡೆಯುತ್ತಿಲ್ಲ ಎಂಬುದು ರೈತರ ಹಳೆಯ ಕೂಗು. ಅದರೊಟ್ಟಿಗೆ ರಸಗೊಬ್ಬರ ಮತ್ತು ಸೇಬು ಪ್ಯಾಕ್ ಮಾಡುವ ರಟ್ಟಿನ ಬೆಲೆ ಹೆಚ್ಚು ಮಾಡಿರುವುದು ಒಂದೆಡೆಯಾದರೆ ಮತ್ತೊಂದೆಡೆ ಪ್ಯಾಕ್ ಮಾಡಿದ ಬೆಳೆಗಳ ಮೇಲಿನ ಜಿಎಸ್ಟಿಯನ್ನು 12%ಇಂದ 18%ಗೆ ಹೆಚ್ಚಿಸಿರುವುದು ಅವರನ್ನು ಕೆರಳಿಸಿದೆ. ಇದೆಲ್ಲವೂ ಈ ಸರ್ಕಾರವನ್ನು ಆಹುತಿ ತೆಗೆದುಕೊಳ್ಳುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮರುಕಳಿಸುವುದೇ 1990ರ ಸೇಬು ಬೆಳೆಗಾರರ ಹೋರಾಟ?
1990ರಲ್ಲಿ ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಶಾಂತಕುಮಾರ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ಸೇಬು ಬೆಳೆಗಾರರು ಎಂಎಸ್ಪಿ ನಿಗದಿ ಮಾಡಬೇಕೆಂದು ಒತ್ತಾಯಿಸಿ ತೀವ್ರ ಪ್ರತಿಭಟನೆ ಆರಂಭಿಸಿದ್ದರು. ಕೋಟ್ಘರ್ನಲ್ಲಿ ತಾರಕಕ್ಕೇರಿದ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಗೋಲಿಬಾರ್ ನಡೆಸಲು ಆದೇಶವಿತ್ತಿತ್ತು. ಇದರಿಂದಾಗಿ ಗೋವಿಂದ್ ಸಿಂಗ್, ತಾರ ಚಂದ್ ಮತ್ತು ಹಿರಾ ಸಿಂಗ್ ಎಂಬ ಸೇಬು ಬೆಳೆಗಾರರು ಗುಂಡಿಗೆ ಬಲಿಯಾದರೆ ನೂರಾರು ಜನರು ಗಾಯಗೊಂಡರು.
ಇದು 1993ರಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ರಾಜಕೀಯ ಬದಲಾವಣೆಗೆ ಕಾರಣವಾಯಿತು. 1990ರ ಚುನಾವಣೆಯಲ್ಲಿ 46 ಸ್ಥಾನ ಗೆದ್ದಿದ್ದ ಬಿಜೆಪಿ ಮೂರೇ ವರ್ಷದಲ್ಲಿ ಕೇವಲ 8 ಸ್ಥಾನಗಳಿಗೆ ಕುಸಿಯಿತು. ಸಿಎಂ ಆಗಿದ್ದ ಶಾಂತಕುಮಾರ್ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದು ಎರಡರಲ್ಲಿಯೂ ಸೋಲು ಕಂಡರು. ಸೇಬು ಬೆಳೆಗಾರರ ಸಂಪೂರ್ಣ ಲಾಭ ಕಾಂಗ್ರೆಸ್ ಪಡೆಯಿತು. 1990ರಲ್ಲಿ ಕೇವಲ 9 ಸ್ಥಾನ ಗೆದ್ದಿದ್ದ ಕಾಂಗ್ರೆಸ್ 1993ರಲ್ಲಿ 52 ಸ್ಥಾನ ಗಳಿಸಿ ಅಧಿಕಾರಕ್ಕೇರಿತು. ಮುಖ್ಯಮಂತ್ರಿಯಾದ ವೀರಭದ್ರ ಸಿಂಗ್ ಸೇಬು ಬೆಳೆಗಾರರಿಗಾಗಿ ಮಂಡಿ ಮಧ್ಯಸ್ಥಿಕೆ ಯೋಜನೆ (ಎಂಐಎಸ್) ಜಾರಿಗೊಳಿಸಿದರು.
ಈಗ ಮತ್ತೆ ಒಂದು ವರ್ಷದಿಂದ ಸೇಬು ಬೆಳೆಗಾರರ ಹೋರಾಟ ಆರಂಭವಾಗಿದೆ. ಕಳೆದ ಒಂದು ತಿಂಗಳಿನಿಂದ ಸೇಬು ಬೆಳೆಗಾರರು ಧರಣಿ ನಡೆಸುತ್ತಿದ್ದಾರೆ. ಎಂಐಎಸ್ ಯೋಜನೆಯಡಿ ಸೇಬು ಖರೀದಿಸಿರುವ ಬಾಕಿ ಹಣ ಪಾವತಿಸಬೇಕು. ರಸಗೊಬ್ಬರ ಮೇಲಿನ ಸಬ್ಸಿಡಿ ಹಿಂತೆಗೆದುಕೊಳ್ಳಲಾಗಿದ್ದು, ಅದನ್ನು ಬದಲಿಸಿ ಸಬ್ಸಿಡಿ ನೀಡಬೇಕು. ಜಿಎಸ್ಟಿ ಕಡಿತಗೊಳಿಸಬೇಕು ಮತ್ತು ಅದಾನಿ ಗ್ರೂಪ್ ನಿಗದಿಪಡಿಸಿದ ಷರತ್ತುಗಳನ್ನು ಸಡಿಲಗೊಳಿಸಬೇಕು ಎಂಬುದು ರೈತರ ಒತ್ತಾಯವಾಗಿದೆ. ಈ ಹೋರಾಟಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ; ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಹಕ್ಕೊತ್ತಾಯಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. 1990ರಲ್ಲಿ ನಡೆದ ರಾಜಕೀಯ ಮತ್ತೆ ಮರುಕಳಿಸುವುದೇ ಎಂದು ಕಾಂಗ್ರೆಸ್ ಆಶಿಸುತ್ತಿದೆ.
ಬಿಜೆಪಿಯ ಸಿಎಂ ಜೈ ರಾಂ ಠಾಕೂರ್ ಸೇಬು ಬೆಳೆಗಾರರಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಸೇಬಿಗೆ ಬೆಲೆ ಹೆಚ್ಚಿಸಿರುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಹಿಮಾಚಲ ಪ್ರದೇಶದ 68 ಕ್ಷೇತ್ರಗಳ ಪೈಕಿ ಸುಮಾರು 20 ಕ್ಷೇತ್ರಗಳಲ್ಲಿ ಸೇಬು ಬೆಳೆಗಾರರು ನಿರ್ಣಾಯಕವಾಗಿದ್ದಾರೆ. ಅವರು ಸರ್ಕಾರದ ಭರವಸೆಗಳನ್ನು ಒಪ್ಪುತ್ತಾರಾ? ಅಥವಾ ಸರ್ಕಾರವನ್ನೇ ಬದಲಿಸುತ್ತಾರಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯನವರು ಬಂದರೆ ಫಲಿತಾಂಶವೇನಾಗಬಹದು?


